(www.vknews.in) : ಹಝ್ರತ್ ಹೂದ್ (ಅ) ರವರಿಗೆ ನಲವತ್ತು ವರ್ಷ ಪ್ರಾಯವಾದಾಗ ಅಲ್ಲಾಹನು ಅವರನ್ನು ಆದ್ (ಪ್ರವಾದಿ ನೂಹ್ರವರ ಮಗ ಸಾಮ್ ರವರ ಮಗನ ಮಗನ ಮಗ ಆದ್ ಎಂಬವರು ಅಂದರೆ ನೂಹ್ರವರ ನಾಲ್ಕನೆಯ ಮರಿಮಗ ) ಜನಾಂಗಕ್ಕೆ ಪ್ರವಾದಿಯನ್ನಾಗಿ ಮಾಡಿದನು. ಈ ಸಂದರ್ಭದಲ್ಲಿ ಅಂದಿನ ಚಕ್ರವರ್ತಿ ಖಲಜಾನ್ ನ ಪ್ರಭಾವದಿಂದ ತೂಫಾನಿನ ಬಳಿಕ ವಿಗ್ರಹಾರಾಧನೆ ಬಹಳಷ್ಟು ಹರಡುತ್ತಾ ಬಂದಿತ್ತು. ಅವರು ಇಂದಿನ ಒಮಾನಿನಿಂದ ಯಮನ್ ತನಕ ಪಸರಿಸಿರುವ ಮರುಭೂಮಿಯಲ್ಲಿ ಮರಳಿನಿಂದ ಮಾಡಿದ ಗೂಡಾರದಲ್ಲಿ ವಾಸವಾಗಿದ್ದರು.
ಹಝ್ರತ್ ಹೂದ್ರವರು ಅವರ ಒಮ್ಮೆ ಒಂದು ಹಬ್ಬದ ದಿನ ಅವರು ಜಮಾಯಿಸಿದ್ದ ಜಾಗಕ್ಕೆ ಹೋದರು. ಅಲ್ಲಿ ಚಕ್ರವರ್ತಿಯು ಒಂದು ದೊಡ್ಡ ಬಂಗಾರದ ಕುರ್ಚಿಯಲ್ಲಿ ಬಹಳ ಆಡಂಭರದ ಉಡುಪು ಧರಿಸಿ ಕಿರೀಟ ಹಾಕಿ ಕುಳಿತಿದ್ದನು. ಅವನ ನಾಲ್ಕು ಬದಿಯಲ್ಲಿ ಆತನ ಇತರ ಮಂತ್ರಿಗಳು, ಸೈನಿಕರು, ಸೇವಕರು ಮತ್ತು ಇತರ ಪ್ರಜೆಗಳು ಕುಳಿತಿದ್ದರು. ಅವರಲ್ಲಿ ಹೆಚ್ಚಿನವರು ವಾದ್ಯ, ಓಲಗ, ವೀಣೆ, ಮದ್ದಳೆ ಮುಂತಾದ ಸಂಗೀತ ಉಪಕರಣಗಳನ್ನು ಬಾರಿಸಿ ನೃತ್ಯ ಮಾಡುತ್ತಿದ್ದರು. ಹಝ್ರತ್ ಹೂದ್ರವರು ಅವರ ಮಧ್ಯೆ ಹೋಗಿ “ಈ ವಿಗ್ರಹಗಳೆಲ್ಲವೂ ಒಮ್ಮೆ ಹಝ್ರತ್ ನೂಹ್ರವರ ತೂಪಾನಿನಲ್ಲಿ ನಾಶವಾಗಿ ಹೋಗಿತ್ತು. ಬಳಿಕ ನೀವು ನಿಮ್ಮ ಊಹೆಗೆ ಅನುಸಾರವಾಗಿ ಇನ್ನು ಕೆಲವು ವಿಗ್ರಹಗಳನ್ನು ಮಾಡಿದಿರಿ. ಅದಕ್ಕೆ ಯಾವುದೇ ಶಕ್ತಿ ಇಲ್ಲ. ನಿಮಗೆ ನಿಮಿಷದಲ್ಲೇ ಅದನ್ನು ಪುಡಿ ಕೂಡ ಮಾಡಬಹುದು” ಎಂದು. ಇದನ್ನು ಕೇಳಿದಾಕ್ಷಣ ಅರಸನ ಮುಖ ಕೆಂಪಾಗಿ ಕೆಂಡವಾಯಿತು. ಆತ ಕೇಳಿದ. “ಏನಿದು ತಮಾಷೆಯಾ? ನಿನ್ನ ಕೊನೆಯ ಮಾತಿದು. ಇದರೊಂದಿಗೆ ನಿನ್ನ ನಾಶ ಖಂಡಿತ” ಎಂದು.
ಬಳಿಕ ಅವರನ್ನು ರಾಜ ಸನ್ನಿಧಿಗೆ ಹಾಜರುಪಡಿಸಲಾಯಿತು. ರಾಜನ ಎದುರಲ್ಲಿ ನಿಂತ ಪ್ರವಾದಿ ಹೂದ್ರವರು ಅವನನ್ನು ಒಂದು ಗದರಿಸಿ ನೋಡಿ ಏರುದನಿಯಲ್ಲಿ ಮಾತನಾಡಿದರು. ಪ್ರವಾದಿಯವರ ಪವಾಡದ ಅಟ್ಟಹಾಸದಲ್ಲಿ ಅರಸನು ನಿಬ್ಬೆರಗಾದನು. ಅವರ ಶಬ್ದ ಕೇಳಿ ಹತ್ತಿರದ ಕಾಡುಗಳಿಂದ ಕಾಡು ಪ್ರಾಣಿಗಳು ಕೂಡ ಆ ಕಡೆ ಬಂದು ಹೇಳಿದವು. “ಹಝತ್ ಹೂದ್ರವರೇ, ನೀವು ಬೋಧನೆ ಮಾಡಿರಿ. ಹೆದರಬೇಡಿ” ಎಂದು. ಒಟ್ಟಿನಲ್ಲಿ ಇದೆನ್ನೆಲ್ಲಾ ನೋಡುತ್ತಿದ್ದ ಆ ಜನಾಂಗದ ಹೃದಯದಲ್ಲಿ ಏನೋ ಒಂತರ ಭಯ ಉಂಟಾಯಿತು. ಆಗ ನೆರದವರಲ್ಲಿ ಕೆಲವು ಗಣ್ಯರು ಹೇಳಿದರು. “ಹಾಗಾದರೆ ಹೂದ್ರವರೇ, ನಿಮ್ಮ ಅಲ್ಲಾಹನ ಬಗ್ಗೆ ನಮಗೊಂದು ವಿವರಿಸಿ ಹೇಳುವಿರಾ?” ಆಗ ಹೂದ್ರವರು ಹೇಳಿದರು. “ಅವನು ಒಬ್ಬನೇ, ಅವನಿಗೆ ಸಮಾನವಾದುದು ಬೇರೆ ಒಂದೂ ಇಲ್ಲ.” ಎಂದು. ಬಳಿಕ ಜುನಾದ ಬಿನ್ ಅಲ್ ಅಸಮ್ಮ್ ಎಂಬವರು ಇಸ್ಲಾಂ ಸ್ವೀಕರಿಸಿದರು. ಅಲ್ಲದೆ ಹಝ್ರತ್ ಹೂದ್ರವರ ಚಿಕ್ಜಪ್ಪನ ಮಕ್ಕಳು ಮತ್ತು ಮರಿಮಕ್ಕಳಾಗಿ ಇತರ ನಲವತ್ತು ಮಂದಿ ಇಸ್ಲಾಂ ಧರ್ಮ ಸ್ವೀಕರಿಸಿದರು.
ಮಾರನೆಯ ದಿನ ಆ ಇಸ್ಲಾಂ ಸ್ವೀಕಾರ ಮಾಡಿದ ನಲವತ್ತ ಒಂದು ಮಂದಿ ಊರಿನ ಹಿರಿಯರನ್ನು ಸಮೀಪಿಸಿ ಹೇಳಿದರು. “ಸತ್ಯದ ಕಹಿ ಮತ್ತು ಅಸತ್ಯದ ಸಿಹಿಯಾಗಿರುತ್ತದೆ ನಿಮ್ಮನ್ನು ತಡೆಯುವುದು. ಯಾವೊಬ್ಬನಿಗೂ ಸತ್ಯ ತಿಳಿಯಲು ನಿನ್ನೆಯ ಘಟನೆ ಮಾತ್ರ ಸಾಕು. ಆದರೆ ನಿಮಗೆ ಇನ್ನೂ ತಿಳಿಯಲಿಲ್ಲ. ಏನಿದ್ದರೂ ಕೂಡಲೇ ಇಸ್ಲಾಮ್ ಸ್ವೀಕಾರ ಮಾಡಿ. ಇಲ್ಲವಾದರೆ ಘೋರವಾದ ದುರಂತ ಬರುವುದು” ಎಂದು.
ಆದರೆ ಅವರಿಗೆ ಆ ಉಪದೇಶದಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅವರು ಎಂದಿನಂತೆ ಹೂದ್ರವರನ್ನು ಕಲ್ಲೆಸೆದು ತೊಂದರೆ ಮಾಡುತ್ತಲೇ ಇದ್ದರು. ಒಂದೆರಡು ದಿನಗಳ ಬಳಿಕ ಹಝ್ರತ್ ಹೂದ್ ರವರು ಅವರ ಬಳಿ ಹೋಗಿ ಹೇಳಿದರು. “ನೀವು ಈ ರೀತಿ ಮಾಡಿ ಮುಂದುವರಿದರೆ ನಿಮಗೆ ಅಲ್ಲಾಹನಿಂದ ಘೋರ ಶಿಕ್ಷೆ ಬರಲಿದೆ” ಎಂದು. ಆದರೆ ಅವರಿಗೆ ಅದೊಂದು ವಿಷಯವೇ ಆಗಿರಲಿಲ್ಲ. ನಾಯಿ ಬಾಲದಂತೆ ಅವರ ಸ್ವಭಾವದಲ್ಲಿ ಯಾವುದೇ ಬದಲಾವಣೆ ಕೂಡ ಆಗಲಿಲ್ಲ. ಒಟ್ಟಿನಲ್ಲಿ ಹೀಗೆಯೇ ವರ್ಷಗಳು ಕಳೆಯಿತು. ನಂತರ ಅಲ್ಲಾಹನು ಪ್ರತಿಕ್ರಿಯೆ ನೀಡಿದನು. ಅವರ ಹೆಂಗಸರೆಲ್ಲರೂ ಗರ್ಭಿಣಿಗಳಾಗದೆ ಬಂಜೆಗಳಾದರು. ಈ ವೇಳೆ ಪ್ರಜೆಗಳು ಅರಸನಲ್ಲಿ ಇದಕ್ಕೆ ಪರಿಹಾರ ಕೇಳಿದಾಗ ಆತ ಹೇಳಿದ. “ನೀವು ನಿಮ್ಮ ಆರಾಧನಾ ವಿಗ್ರಹಗಳಿಗೆ ಖುರ್ಬಾನಿ ಕೊಡಬೇಕು. ಆಗ ಸರಿಯಾಗುತ್ತದೆ” ಎಂದು. ಅದನ್ನು ಕೂಡ ಮಾಡಿ ನೋಡಿದರು. ಅದರಿಂದಲೂ ಯಾವುದೇ ಪ್ರಯೋಜನ ಆಗಲಿಲ್ಲ.
ಒಂದು ದಿನ ಒಬ್ಬ ವ್ಯಕ್ತಿ ಹಝ್ರತ್ ಹೂದ್ರವರ ಬಳಿ ಬಂದು ಹೇಳಿದನು. “ನಾನು ಇವತ್ತು ನಿಮ್ಮ ಬಳಿ ಬಂದ ವಿಷಯದ ಬಗ್ಗೆ ನೀವು ನನಗೆ ನಿಖರವಾಗಿ ಹೇಳುವುದಾದರೆ, ನಾನು ಇಸ್ಲಾಂ ಸ್ವೀಕಾರ ಮಾಡುತ್ತೇನೆ” ಎಂದು. ಆಗ ಹಝ್ರತ್ ಹೂದ್ರವರು ಹೇಳಿದರು. “ನೀವು ನಿನ್ನೆ ರಾತ್ರಿ ನಿಮ್ಮ ಸಂಗಾತಿಯಾಗಿ ಲೈಂಗಿಕ ಸಂಪರ್ಕ ಮಾಡಿದ್ದೀರಿ. ಬೆಳಿಗ್ಗೆ ನಿಮ್ಮ ಪತ್ನಿ ಹೇಳಿದಳು. “ಈ ನಮ್ಮ ಇವತ್ತಿನ ಸಂಪರ್ಕದಲ್ಲಿ ಗರ್ಭ ನಿಲ್ಲಬಹುದಾ?” ಆಗ ನೀವು ಹೇಳಿದಿರಿ. “ನಾಳೆ ನಾನು ಹೂದ್ರವರ ಹತ್ತಿರ ಹೋಗುತ್ತೇನೆ. ಅವರು ನಮ್ಮ ಈ ಸಂಬಾಷಣೆಯ ಬಗ್ಗೆ ನಿಖರವಾಗಿ ಹೇಳುವುದಾದರೆ ನಾನು ಇಸ್ಲಾಂ ಸ್ವೀಕಾರ ಮಾಡುತ್ತೇನೆ” ಎಂದು. ಈ ವಿಷಯವನ್ನು ಹಝ್ರತ್ ಹೂದ್ರವರು ಬಹಳ ಸ್ಪಷ್ಟವಾಗಿ ಹೇಳಿದಾಕ್ಷಣ ಅವರು ಇಸ್ಲಾಮ್ ಸ್ವೀಕಾರ ಮಾಡಿ ಕೇಳಿದರು. “ನನ್ನ ಪತ್ನಿ ಗರ್ಭಿಣಿ ಆಗಿದ್ದಾಳಾ?” ಎಂದು. ಅದಕ್ಕೆ ಅವರು “ಹೌದು ಆಗಿದ್ದಾಳೆ. ಎರಡು ಅವಳಿ ಜವಳಿ ಗಂಡು ಮಕ್ಜಳಿಗೆ ಜನ್ಮ ನೀಡಲಿದ್ದಾಳೆ. ಅದಲ್ಲದೇ ಮುಂದಕ್ಕೆ ಇತರ ಒಂಬತ್ತು ಹೆರಿಗೆ ಮಾಡಲಿದ್ದಾಳೆ. ಮಕ್ಕಳೆಲ್ಲರೂ ತೌಹೀದಿನಲ್ಲಾಗಿರುತ್ತಾರೆ” ಇದನ್ನು ಕೇಳಿದಾಕ್ಷಣ ಆ ವ್ಯಕ್ತಿ ಹಝ್ರತ್ ಹೂದ್ರವರ ಹೊಣೆಯನ್ನು ಚುಂಬಿಸಿದರು. ಬಳಿಕ ಅವರು ತನ್ನ ಜೀವನದುದ್ದಕ್ಕೂ ಹಝ್ರತ್ ಹೂದ್ರವರ ಆತ್ಮೀಯ ಸಹಪಾಠಿ ಆದರು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
✍🏻ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.