ಚಿಕ್ಕಬಳ್ಳಾಪುರ (www.vknews.com) : ಜಿಲ್ಲೆಯಾದ್ಯಂತ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾ ಮೆದುಳು ಜ್ವರ ರೋಗಗಳ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಪ್ರತಿಯೊಂದು ಗ್ರಾಮದಲ್ಲಿ ಕ್ಷೇತ್ರ ಆರೋಗ್ಯ ಸಿಬ್ಬಂದಿ (ಕಿರಿಯ ಮತ್ತು ಹಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆ)ಯರಿಂದ ಪಾಕ್ಷಿಕ ಮನೆ ಮನೆ ಭೇಟಿ ಮಾಡಿ ಈಡೀಸ್ ಲಾರ್ವ ಸಮೀಕ್ಷೆ ಮತ್ತು ಲಾರ್ವ ನಾಶಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಕಂಡುಬರುವ ಲಾರ್ವ ಉತ್ಪತ್ತಿ ತಾಣಗಳಾದ ಸಿಮೆಂಟ್ ತೊಟ್ಟಿ, ಡ್ರಮ್, ಮಡಿಕೆ ಹಾಗೂ ಇತರೆ ನೀರಿನ ಸಂಗ್ರಹಕಗಳನ್ನು ಗುರುತಿಸಿ ನೀರನ್ನು ಖಾಲಿ ಮಾಡಿಸಿ 3-4 ಗಂಟೆ ಒಣಗಿಸಿ ನಂತರ ನೀರನ್ನು ತುಂಬಲು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ವಾರಕ್ಕೊಮ್ಮೆ ವಾರದ ಒಣಗಲು ದಿನ ಆಚರಿಸಲು ತಿಳುವಳಿಕೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅತ್ಯಂತ ಪ್ರಶಂಸನೀಯವಾಗಿದೆ.
ಸೊಳ್ಳೆ ನಿಯಂತ್ರಣಕ್ಕಾಗಿ ರಾಸಾಯನಿಕ ಕ್ರಮಗಳಾದ ಲಾರ್ವ ನಾಶಕ ದ್ರಾವಣ ಸಿಂಪಡಣೆ, ಅಗತ್ಯ ಸಂದರ್ಭದಲ್ಲಿ ಒಳಾಂಗಣ ಮತ್ತು ಹೊರಾಂಗಣ ಧೂಮೀಕರಣ ಕಾರ್ಯವನ್ನು ನಡೆಸಬಹುದಾಗಿದ್ದು, ಸೊಳ್ಳೆ ನಿಯಂತ್ರಣಕ್ಕಾಗಿ ಪರಿಸರ ಸ್ನೇಹ ವಿಧಾನ(ಜೈವಿಕ ನಿಯಂತ್ರಣಾ) ದಡಿಯಲ್ಲಿ ಬೇವಿನ ಸೊಪ್ಪು ಹೊಗೆ ಹಾಕುವುದು, ಸೊಳ್ಳೆ ಪರದೆ ಬಳಸುವುದು, ನೀರಿನ ತಾಣಗಳಿಗೆ ಗಪ್ಪಿ ಮತ್ತು ಗಾಂಬೂಸಿಯ ಲಾರ್ವ ಹಾರಿ ಮೀನುಗಳನ್ನು ಬಿಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆ ಸುತ್ತಾ ಮುತ್ತಾ ಬಿಸಾಡಿರುವ ತೆಂಗಿನ ಚಿಪ್ಪು, ಹಳೆ ಟೈರು, ಪ್ಲಾಸ್ಟಿಕ್ ವಸ್ತುಗಳು, ಇತರೆ ನೀರು ನಿಲ್ಲುವಂತಹ ಘನ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಈ ಸೂಳ್ಳೆ ಕಡಿತದಿಂದ ಪಾರಾಗಬಹುದು.
ಡೆಂಗ್ಯೂ ಜ್ವರ, ವೈರಸ್ಸಿನಿಂದ ಉಂಟಾಗುವ ಕಾಯಿಲೆ ಇದು ಸೋಂಕಿತ ಈಡೀಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮೊತ್ತೊಬ್ಬರಿಗೆ ಹರುಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಶುದ್ದವಾದ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸ ಖಂಡಗಳ ಸೆಳೆತ ಈ ರೋಗದ ಲಕ್ಷಣಗಳು ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತ ಸ್ರಾವ ಹಾಗೂ ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು ಕಾಣ ಸಿಕೊಳ್ಳುತ್ತವೆ. ಡೆಂಗ್ಯೂ ಜ್ವರಕ್ಕೆ ನಿಖರವಾರ ಚಿಕಿತ್ಸೆ ಇರುವುದಿಲ್ಲ ರೋಗ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು, ಪ್ರಮುಖವಾಗಿ ವಿಶ್ರಾಂತಿ ಪಡೆಯುವುದು ಮತ್ತು ದ್ರವರೂಪದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗದಿಂದ ಗುಣಮುಖವಾಗಬಹುದು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೂ ಒಟ್ಟು 19 ಡೆಂಗ್ಯೂ, 30 ಚಿಕುನ್ಗುನ್ಯಾ 2 ಮಲೇರಿಯಾ ಪ್ರಕರಣಗಳು ವರದಿಯಾಗಿರುತ್ತವೆ. “ಡೆಂಗ್ಯೂ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಪ್ರಮುಖ” ಎಂಬ ದ್ಯೇಯ ವಾಕ್ಯದೊಂದಿಗೆ ಡೆಂಗ್ಯೂ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಶುಲ್ಕ ರಹಿತ ಸಹಾಯವಾಣ ಸಂಖ್ಯೆ 104ಕ್ಕೆ ಸಂಪರ್ಕಿಸಿ ಎಂದು ತಿಳಿಸಿದರು.
ವಿ. ಅರ್ಪಿತ್ ಕುಮಾರ್ ,ವರದಿಗಾರರು ಚಿಕ್ಕಬಳ್ಳಾಪುರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.