ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು
(www.vknews.in) : ರಾಜ್ಯ ,ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಪ್ಪತ್ತು ಹಾಗು ಸವಾಲಾಗಿ ಪರಿಣಮಿಸಿರುವ ಕೋವಿಡ್ ೧೯; ಕೊರೋನ ವೈರಸ್ ನ ಪರಿಣಾಮ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಸಮುದಾಯದ ಮಟ್ಟದಲ್ಲಿ ಈ ವೈರಸ್ ಹರಡದಂತೆ ತಡೆಯಲು ಕೇಂದ್ರ ಹಾಗು ರಾಜ್ಯ ಸರ್ಕಾರ ಎಲ್ಲವನ್ನು ಲಾಕ್ ಡೌನ್ (ಬಂಧ್) ಮಾಡುವ ಮೂಲಕ ಶಾಲಾ -ಕಾಲೇಜುಗಳಿಗೆ ಶಿಕ್ಷಕರಿಗೆ ರಜೆ ನೀಡಿದೆ. ಎಚ್ಚರಿಕೆಯಿಂದ ವೈದ್ಯಕೀಯ ಕಾರಣಗಳಿಗಾಗಿ ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಸೋಂಕು ಮಕ್ಕಳಿಗೆ,ಕುಟುಂಬಕ್ಕೆ ಶಿಕ್ಷಕರಿಗೆ ಹಾಗು ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದು ಸ್ವಾಗತಾರ್ಹ. ಇದು ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಅನಿವಾರ್ಯತೆ ಕೂಡ ಆಗಿತ್ತೆಂಬುದು ವಾಸ್ತವದ ಸಂಗತಿ.
ಕೋವಿಡ್-19 ಜಗತ್ತಿನ ಶೈಕ್ಷಣಿಕ ವ್ಯವಸ್ಥೆಯ ಸುಮಾರು 1.57 (1,575,270,054) ಬಿಲಿಯನ್ ವಿದ್ಯಾರ್ಥಿಗಳ ಅಂದರೆ ಸರಿಸುಮಾರು157 ಕೋಟಿ ದಾಖಲಾಗಿರುವ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮವನ್ನುಂಟುಮಾಡಿದೆ. ಜಗತ್ತಿನಾದ್ಯಂತ ಕೋವಿಡ್-19 ರ ಪರಿಣಾಮಕ್ಕೆ ಒಳಗಾದ ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ 91.3.ಇದರ ಪರಿಣಾಮ 191 ದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಿವೆ.
ನಮ್ಮ ರಾಜ್ಯದಲ್ಲಿ ಸರಿಸುಮಾರು 77,000 ಶಾಲೆಗಳು, 1.03 ಕೋಟಿ ಮಕ್ಕಳು (ಪೂರ್ವ ಪ್ರಾಥಮಿಕದಲ್ಲಿ 5,97,346,ಪ್ರಾಥಮಿಕದಲ್ಲಿ 55,03,960,ಹಿರಿಯ ಪ್ರಾಥಮಿಕದಲ್ಲಿ 30,72,836 ಮತ್ತು ಪ್ರೌಢ ಶಾಲೆಯಲ್ಲಿ 18,00,674) ಮತ್ತು ಸುಮಾರು 3 ಲಕ್ಷ ಶಿಕ್ಷಕರು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ . ಇದರ ಪರಿಣಾಮ ಮಕ್ಕಳ ಮೇಲೆ ಹೆಚ್ಚು ಕಾರಣ ಅವರ ಸಂಖ್ಯೆ ಹೆಚ್ಚು. ಇಂಥಹ ಸವಾಲಿನ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕೈಗೊಳ್ಳಬಹುದಾದ ತೀರ್ಮಾನಗಳ ಬಗ್ಗೆ ಬೆಳಕು ಚೆಲ್ಲುವ ಆಶಯದಿಂದ ಈ ಟಿಪ್ಪಣಿ ಬರೆಯುತ್ತಿದ್ದೇನೆ.
ಲಾಕ್ ಡೌನ್ ಸಂದರ್ಭ /ಲಾಕ್ ಡೌನ್ ಸಡಲಿಕೆಯ ನಂತರದ ತಕ್ಷಣದ ಕ್ರಮಗಳು
ಮುಂಜಾಗ್ರತೆ ದೃಷ್ಟಿಯಿಂದ ಮಕ್ಕಳ ಸುರಕ್ಷತೆಗಾಗಿ ಮಕ್ಕಳ ದೃಷ್ಟಿಕೋನ ಮತ್ತು ಅವರಿಗೆ ಅರ್ಥವಾಗುವ ಪರಿಭಾಷೆಯಲ್ಲಿ ಸಾಮೂಹಿಕ ಜಾಗೃತಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಹಾಗು ಮುಂದಿನ ವಿದ್ಯಾಭ್ಯಾಸದ ಪೂರ್ವ ಸಿದ್ಧತೆಗೆ ನಿರ್ಣಾಯಕ ಸಮಯವೆಂದೇ ಭಾವಿಸಿರುವ ಮಾರ್ಚ್-ಏಪ್ರಿಲ್-ಮೇ ತಿಂಗಳಿನಲ್ಲಿ ಈ ಪರಿಸ್ಥಿತಿ ಎದುರಾಗಿದ್ದು ಸ್ವಾಭಾವಿಕವಾಗಿ ಇಡೀ ಶೈಕ್ಷಣಿಕ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಪಾಲಕರಲ್ಲಿ ಹಲವು ಬಗೆಯ ಆತಂಕ ಮತ್ತು ಅನಿಶ್ಚತೆಯನ್ನು ಉಂಟು ಮಾಡಿತು ಎಂಬುದು ಕಟು ಸತ್ಯ ಹಾಗು ನಿರ್ವಿವಾದ ಸಂಗತಿ. ಇದು ಪಾಲಕರಲ್ಲಿ ಮತ್ತು ಮಕ್ಕಳಲ್ಲಿ ಹಲವು ಬಗೆಯ ಆತಂಕ, ಭಯ ಹಾಗು ಕೌತುಕವನ್ನು ಹುಟ್ಟು ಹಾಕಿದೆ/ಹಾಕುತ್ತಿದೆ. ಇದು ಕೆಲವಾರು ತಿಂಗಳು ಹೀಗೆಯೇ ಮುಂದುವರಿಯಲಿದೆ . ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಾಸ್ತವ ಅಂಶಗಳನ್ನು ಪಾಲಕರಿಗೆ-ಮಕ್ಕಳಿಗೆ ತಿಳಿಸುವ ಮೂಲಕ, ಈ ಸಮಸ್ಯೆ ನಮ್ಮ ರಾಜ್ಯ-ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಎದುರಾಗಿರುವ ಅತಿ ದೊಡ್ಡ ಶೈಕ್ಷಣಿಕ ಬಿಕ್ಕಟ್ಟು ಎಂಬುದನ್ನು ಬಿಡಿಸಿ ಹೇಳುವ ಪ್ರಯತ್ನ ಮಾಡಬೇಕಿದೆ.ಇಲ್ಲಿಯವರೆಗೆ ನಾವು ವಯಸ್ಕರನ್ನು ಆಧಾರವಾಗಿಟ್ಟುಕೊಂಡು ಜಾಗೃತಿ ಮೂಡಿಸಿದ್ದೇವೆ. ಮಕ್ಕಳ ಆರೋಗ್ಯದ ಜೊತೆಗೆ ಅವರ ಮಾನಸಿಕ ಆತಂಕ, ಭಯ ಇತ್ಯಾದಿಗಳನ್ನು ಗಮನದಲ್ಲಿರಿಸಕೊಂಡು ಜಾಗೃತಿ ಮೂಡಿಸಬೇಕಾದ ಕೆಲಸ ಇನ್ನು ಪ್ರಾರಂಭವಾಗಬೇಕಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ಮಕ್ಕಳು ಓಡಾಡಲು ಕೆಲಸ ಇನ್ನು ಪ್ರಾರಂಭವಾಗಬೇಕಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ಮಕ್ಕಳು ಓಡಾಡಲು ಪ್ರಾರಂಭಿಸಿದಾಗ ಈ ಜಾಗೃತಿ ಬಹಳ ಮುಖ್ಯವಾಗುತ್ತದೆಯಲ್ಲದೆ ವೈರಾಣು ಹರಡದಂತೆ ತಡೆಯಲು ನಿರ್ಣಾಯಕವಾಗುತ್ತದೆ.
ಮಕ್ಕಳಿಗೆ ಪೌಷ್ಟಿಕ ಆಹಾರ,ಆರೋಗ್ಯ ಮತ್ತು ಸುರಕ್ಷತೆ ಮೊದಲ ಆದ್ಯತೆ
ಕೋವಿಡ್-19ರ ನಂತರ, ಕೇಂದ್ರೀಯ ವಿದ್ಯಾಲಯಗಳ ಸಂಘಟನೆಯು ತನ್ನ ಎಲ್ಲಾ ಕೇಂದ್ರೀಯ ಶಾಲೆಗಳಲ್ಲಿ 1 ರಿಂದ 8 ನೇತರಗತಿಯ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಸೂಚಿಸಿ ಎಲ್ಲ ರಾಜ್ಯಗಳಿಗೆ ಪತ್ರ ಬರೆಯಿತು. ನಂತರ , ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ , ತಮಿಳುನಾಡು ಮುಂತಾದ ರಾಜ್ಯಗಳು 1 ರಿಂದ 8/9 ನೇತರಗತಿಯ ಎಲ್ಲಾ ಮಕ್ಕಳನ್ನು ಯಾವುದೇ ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ತೇರ್ಗಡೆಗೊಳಿಸುವ ಆದೇಶಗಳನ್ನು ಹೊರಡಿಸಿದವು.ಅದರಲ್ಲೂ ವಿಶೇಷವಾಗಿ ಗುಜರಾತ್ ಸರ್ಕಾರವು 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ತೇರ್ಗಡೆ ಮಾಡಲು ನಿರ್ಧರಿಸಿತು. ಈ ಎಲ್ಲಾ ಅಂಶಗಳನ್ನು ಆಧರಿಸಿ ಎಸ್ ಡಿ ಎಮ ಸಿ ಸಮನ್ವಯ ವೇದಿಕೆ ಹಾಗು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸರ್ಕಾರದ ಮೇಲೆ ಒತ್ತಡ ಹಾಕಿತು . ಇದೆಲ್ಲದರ ಪರಿಣಾಮ , ಶಿಕ್ಷಣ ಇಲಾಖೆ 6,7,8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವ ನಿರ್ಧಾರ ಪ್ರಕಟಿಸಿದೆ. ಇದು ಸ್ವಾಗತಾರ್ಹ.
ಪೂರ್ವ-ಪ್ರಾಥಮಿಕದಿಂದ (ಅಂಗನವಾಡಿ) 9ನೇ ತರಗತಿಯವರೆಗಿನ ಮಕ್ಕಳು ಮೇ 31ರವರೆಗೆ ಮನೆಯಲ್ಲಿಯೇ ಇರುತ್ತಾರೆ.ಶಾಲೆಯಲ್ಲಿದ್ದಾಗ ಈ ಎಲ್ಲಾ ಮಕ್ಕಳಿಗೆ ಒಂದು ಹೊತ್ತಿನ ಮಧ್ಯಾಹ್ನದ ಊಟ ಶಾಲೆಯಲ್ಲಿ ದೊರಕುತಿತ್ತು . ಈಗ ಅದೇ ಮಕ್ಕಳಿಗೆ ಮೂರು ಹೊತ್ತಿನ ಊಟದ ವ್ಯವಸ್ಥೆಯಾಗಬೇಕಿದೆ. ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಹೆಚ್ಚಿನ ಮಕ್ಕಳು ಅನಾನುಕೂಲ ಹಾಗು ಅವಕಾಶ ವಂಚಿತ ಸಮುದಾಯಗಳಿಂದ ಬಂದವರಾಗಿರುವುದರಿಂದ, ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬೇಕಿದೆ . ವಿಶೇಷವಾಗಿ ಬಡ ಕುಟುಂಬದ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು .
ಆದ್ದರಿಂದ, ಏಪ್ರಿಲ್ 11 ,2020 ರ ಮೇ 31 ರವರೆಗೆ ( ವಿಸ್ತರಣೆಯಾದರೆ ಜೂನ್ 30 ರವರೆಗೆ) ಮಧ್ಯ್ನಾದ ಬಿಸಿಯೂಟದ ಕಾರ್ಯಕ್ರಮದ ಭಾಗವಾಗಿ ಎಲ್ಲಾ ಮಕ್ಕಳಿಗೆ ಪಡಿತರ ವಿತರಿಸಬೇಕು .ಮಕ್ಕಳು ಈಗ ಮೂರು ಹೊತ್ತು ಊಟ ಮನೆಯಲ್ಲಿಯೇ ಊಟ ಮಾಡುವುದರಿಂದ ಬಿಸಿಯೂಟದ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಮಗುವಿಗೆ ಒದಗಿಸುತ್ತಿದ್ದ ಮೂರು ಪಟ್ಟು ದಿನಸಿಯನ್ನು ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಆಹಾರ , ಸುರಕ್ಷತೆ ಆಶ್ರಯ ಮತ್ತು ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು .ಈ ಮಕ್ಕಳ ತಂದೆ –ತಾಯಂದಿರು ಈಗ ಕೆಲಸಗಳನ್ನು /ಬೆಳೆದ ಬೆಳೆಯನ್ನು ಕಳೆದುಕೊಂಡು ಪರಿತಪಿಸುತ್ತಿರುವುದರಿಂದ ಈ ಕೆಲಸ ಆದ್ಯತೆಯ ಮೇಲೆ ನಡೆಯಬೇಕು .
ಶೈಕ್ಷಣಿಕ ಕ್ಯಾಲೆಂಡರ್ನ ಪ್ರಕಾರ ಸಾಮಾನ್ಯವಾಗಿ ಶಾಲೆಗಳು ಮೇ ಅಂತ್ಯ ಅಥವಾ ಜೂನ್ ಮೊದಲ ರದವರೆಗೆ ಮುಚ್ಚಲ್ಪಟ್ಟಿರುವುದರಿಂದ ಆನ್ಲೈನ್ ತರಗತಿಗಳ, ಕಲಿಕೆ ಮತ್ತು ಕಲಿಯುವುದರ ಬಗ್ಗೆ ಚಿಂತಿಸುವುದನ್ನು ಕಡಿಮೆ ಮಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು . ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು.ವಿಶೇಷವಾಗಿ ಬಡ ಕುಟುಂಬದಲ್ಲಿ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು .
10ನೇತರಗತಿ ಪರೀಕ್ಷೆ ಹಾಗು ಪಿಯುಸಿಯಲ್ಲಿ ಬಾಕಿ ಇರುವ ಒಂದು ವಿಷಯಕ್ಕೆ ಶಾಲಾ/ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ನಮ್ಮ ಮುಂದೆ ಇರುವ ಅತ್ಯಂತ ಸವಾಲಿನ ಮತ್ತು ನಿರ್ಣಾಯಕ ವಿಷಯವೆಂದರೆ 10ನೇತರಗತಿ (ಎಸ್ಎಸ್ಎಲ್ ಸಿ) ಹಾಗು ದ್ವಿತೀಯ ಪಿಯುಸಿ (ಒಂದು ವಿಷಯ) ಮಕ್ಕಳ ಪಬ್ಲಿಕ್ ಪರೀಕ್ಷೆಗಳು. ಈಗಾಗಲೇ ತಿಳಿಸಿದಂತೆ, ಮಾರ್ಚ್-ಏಪ್ರಿಲ್-ಮೇ ತಿಂಗಳು ಶೈಕ್ಷಣಿಕ ವರ್ಷದ ಸಿದ್ಧತಾ ಸಮಯ.ಮಕ್ಕಳ ಮುಂದಿನ ವಿದ್ಯಾಭ್ಯಾಸ , ಸೇರಬೇಕಾದ ವಿದ್ಯಾಸಂಸ್ಥೆಗಳ ಬಗ್ಗೆ ಮಕ್ಕಳಿಗೆ ಪಾಲಕರಿಗೆ ಆತಂಕ ಸಹಜ. ಕೊರೋನಾದ ರಕ್ಷಣೆ ಮತ್ತು ಸುರಕ್ಷತೆಯನ್ನು ಆಧರಿಸಿ ಸರ್ಕಾರವು ಲಾಕ್ ಡೌನ್ ಜಾರಿಯಾದಾಗಿನಿಂದ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಆತ೦ಕ ಮನೆಮಾಡಿದೆ ಎಂಬುದು ಸತ್ಯಸಂಗತಿ.ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆಲೋಚನೆ ಮತ್ತು ಅಭಿಪ್ರಾಯಗಳನ್ನು ಆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ತಜ್ಞರು ,ಇಲಾಖೆಯ ಅಧಿಕಾರಿಗಳು ಹಾಗು ಪಾಲಕರು ಆಗಿಂದ್ದಾಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಶಿಕ್ಷಣ ಶಾಸ್ತ್ರದ ಅನ್ವಯ ಮಕ್ಕಳು ಎಷ್ಟು ಬೇಗ ಕಲಿಯುತ್ತಾರೆಯೋ ,ಅಷ್ಟೇ ಬೇಗ ಮರೆಯುವ ಸ್ವಭಾವವನ್ನೂ ಹೊಂದಿರುತ್ತಾರೆ. ಇದು ನಮ್ಮ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ರೂಢಿಗತವಾಗಿದೆ . ಕಾರಣ ನಾವು ಅನ್ವಯಕ್ಕಿಂತ ಕಂಟಪಾಠ ಹಾಗು ಸ್ಮರಣೆಗೆ ಹೆಚ್ಚು ಒತ್ತು ನೀಡುತ್ತೇವೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿನ ದೌರ್ಬಲ್ಯ.ಮಕ್ಕಳ ಕಲಿಕಾವಾತಾವರಣ ಬಹು ಆಯಾಮದಲ್ಲಿ ನಡೆಯುವ ಸಹಜ ಕ್ರಿಯೆ. ಹೀಗಿರುವಾಗ ಸಹಪಾಠಿಗಳಿಲ್ಲದೆ, ಶಿಕ್ಷಕರ ಮಾರ್ಗದರ್ಶನವಿಲ್ಲದೆ,ಆರೋಗ್ಯಕರ ಚರ್ಚೆ -ಬಾಹ್ಯ ಪ್ರೇರಣೆ ಇಲ್ಲದೆ ಕಲಿಕೆಗೆ ತೊಡಗುವುದು ಮಗುವಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ .ಕಲಿತ ಮಗು ಪರೀಕ್ಷೆಯನ್ನು ಒಂದು ಸವಾಲಾಗಿ ಸ್ವೀಕರಿಸಿ ಬರೆಯಲು ಮಾನಸಿಕವಾಗಿ ಸಿದ್ಧವಿದ್ದಾಗ ಅದನ್ನು ಮತ್ತೆ ಮತ್ತೆ ಮುಂದೂಡಿದರೆ ಆಗುವ ನಿರಾಸೆ ಮತ್ತು ಆತಂಕದ ಜೊತೆಗೆ ತಾನು ಕಲಿತಿರುವುದನ್ನು ಕಾಯ್ದುಕೊಳ್ಳಲು ಪಡುವ ಆತಂಕ ಸದಾ ಇದ್ದೇ ಇರುತ್ತದೆ.ಈ ಹಿಂದೆ ಹಲವು ಸಂದರ್ಭಗಳಲ್ಲಿ ಪರೀಕ್ಷೆ ಮುಂದೂಡಿದಾಗ ಮಕ್ಕಳಿ ಖಿನ್ನತೆ ಹಾಗು ಆತಂಕಕ್ಕೆ ಒಳಗಾಗಿದ್ದನ್ನು ನಾವು ನೋಡಿದ್ದೇವೆ . ವಿಶೇಷವಾಗಿ , ಮಾರಕ ಕೊರೋನಾದಂತ ಸಂದರ್ಭದಲ್ಲಿ ಈ ಬಗೆಯ ಆತಂಕ ಎರಡು ಬಗೆಯದು; ಒಂದು, ಕೊರೋನಾದಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳುವುದು ಮತ್ತು ಎರಡನೆಯದು, ಬರೆಯಬೇಕಾದ ಪರೀಕ್ಷೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು. ಈ ಆತಂಕಕಾರಿ ಮನೋಸ್ಥಿತಿ ಮಗುವನ್ನು ದುರ್ಬಲಗೊಳಿಸುತ್ತದೆ.
ಈ ಸಂದರ್ಭದಲ್ಲಿ ಸೋಂಕಿತರು, ಭಾದಿತರು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದವರು ಹಾಗು ಕ್ವಾರಂಟೈನ್ನಲ್ಲಿರುವವರು ,ಮುನ್ನೆಚ್ಚರಿಕೆಯಿಂದ ವೈದ್ಯಕೀಯ ಕಾರಣಕ್ಕಾಗಿ ದೈಹಿಕ ಅಂತರ ಕಾಯ್ದುಕೊಂಡವರು ಹೀಗೆ ಎಲ್ಲರೂ ಆತಂಕದಲ್ಲಿದ್ದಾರೆ.ಜೊತೆಗೆ, ಲಾಕ್ ಡೌನ್ ನನ್ನು ಮೇ 17 ರವರೆಗೆ ವಿಸ್ತರಿಸಲಾಗಿದೆ. ಮೇ 17 ರ ನಂತರ ಏನು ಎಂಬುದು ಇನ್ನೂ ಅನಿಶ್ಚಿತವಾಗಿದೆ .ಹೀಗಿರುವಾಗ , ಎಸ್ ಎಸ್ ಎಲ್ ಸಿ ಮಕ್ಕಳಿಗೆ, ಪಬ್ಲಿಕ್ ಪರೀಕ್ಷೆ ನಡೆಸುವುದು ನಾವಾಗಿ ನಾವೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ಮನುಷ್ಯನ ಜೀವಕ್ಕಿಂತ ಅಮೂಲ್ಯವಾದದ್ದು ಬೇರೊಂದಿಲ್ಲ. ಆದ್ದರಿಂದ ಪರ್ಯಾಯ ವ್ಯವಸ್ಥೆಯನ್ನು ಯೋಚಿಸಬೇಕಿದೆ . ಇಲ್ಲಿ ಎರಡು ಆಯ್ಕೆಗಳಿವೆ:
ಒಂದು, 10ನೇತರಗತಿ ಪರೀಕ್ಷೆ ಹಾಗು ಪಿಯುಸಿಯಲ್ಲಿ ಬಾಕಿ ಇರುವ ಒಂದು ವಿಷಯಕ್ಕೆ ಈ ಬಾರಿ ಪರೀಕ್ಷೆಯಿಂದ ಮಕ್ಕಳಿಗೆ ವಿನಾಯಿತಿ ನೀಡಿ ಆಂತರಿಕ ಅಂಕಗಳ ಆಧಾರದ ಮೇಲೆ ಎಲ್ಲಾ ಮಕ್ಕಳನ್ನು ತೇರ್ಗಡೆಗೊಳಿಸಲು ಕ್ರಮ ಕೈಗೊಳ್ಳುವುದು . ಇದು ಸಾಧ್ಯವಾಗದಿದ್ದಲ್ಲಿ ಪರೀಕ್ಷೆ ನಡೆಸಲು ಪರ್ಯಾಯ ಮಾರ್ಗವನ್ನು ಯೋಚಿಸುವುದು ಮುಖ್ಯವಾಗುತ್ತದೆ.ಈಗಾಗಲೇ ಹೆಚ್ಚುತ್ತಿರುವ ಕೋರೋನ ಭೀತಿಯ ಹಿನ್ನೆಲೆಯಲ್ಲಿ ೨೦೧೯-೨೦ರ ಶೈಕ್ಷಣಿಕ ಸಾಲಿನ 10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲು ಪಂಜಾಬ್ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಸಕಾಲಿಕ ತೀರ್ಮಾನವಾಗಿದೆ.ಈ ನಿರ್ಧಾರವನ್ನು ಅಲ್ಲಿನ ಮುಖ್ಯಮಂತ್ರಿಯವರು ಪ್ರಕಟಿಸಿದ್ದಾರೆ.ಈ ಹಿನ್ನೆಲೆಯಲ್ಲಿ, ನಮ್ಮ ರಾಜ್ಯದಲ್ಲಿಯೂ ಮಕ್ಕಳ ಸುರಕ್ಷತೆ ಹಿತದೃಷ್ಟಿ ಹಾಗು ಮಕ್ಕಳನ್ನು ಮಾನಸಿಕ ಒತ್ತಡದಿಂದ ಬಿಡುಗಡೆ ಮಾಡಲು , ಈ ಹಿಂದೆ ಒತ್ತಾಯಿಸಿದ್ದಂತೆ ಶಾಲಾ ಹಂತದಲ್ಲಿ ನಡೆದಿರುವ ಸಿದ್ಧತಾ ಪರೀಕ್ಷೆ (Preparatory exam) ಹಾಗು ಆಂತರಿಕ ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯನ್ನು ಆಧರಿಸಿ ಮಕ್ಕಳನ್ನು ತೇರ್ಗಡೆ ಮಾಡುವ ಮೂಲಕ ೧೦ ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ರದ್ದುಗೊಳಿಸುವುದು ಸೂಕ್ತ.
ಎರಡು, ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಿ ಮುಗಿಸುವುದು. ಈ ಬಾರಿ ಸುಮಾರು ಎಂಟು ಲಕ್ಷ ಮಕ್ಕಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಂದೊಂದು ಪರೀಕ್ಷಾ ಕೇಂದ್ರದಲ್ಲಿ 250-300 ಮಕ್ಕಳು ಎಂದರೂ, ಅವರನ್ನು ಬಿಡಲು ಬರುವ ಅಷ್ಟೇ ಸಂಖ್ಯೆಯ ಪೋಷಕರು,25-30 ಸಿಬ್ಬಂದಿ ಸುಲಭವಾಗಿ ಒಂದು ಕೇಂದ್ರದಲ್ಲಿ ಸೇರುತ್ತಾರೆ. ಇಷ್ಟು ದೊಡ್ಡ ಸಂಖ್ಯೆ ಬಹಳ ಸುಲಭವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಎಲ್ಲಡೆ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆ ಬರೆಯುವುದಾದರೆ, ಇದು ಎಂಥಹ ಆತಂಕವನ್ನು ಸೃಷ್ಟಿಸಬಲ್ಲದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಇಷ್ಟೆಲ್ಲ ಮುಂಜಾಗರೂಕತೆ ಇದ್ದರೂ ನಾವು ಪ್ರತೀ ವಿದ್ಯಾರ್ಥಿಯನ್ನು ಪರೀಕ್ಷೆಗೆ ಒಳಪಡಿಸದ ಕಾರಣ ಸೋಂಕು ತಗುಲಿದರೂ ಅದನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಿದ್ದು ಸೋಂಕು ಕಣ್ಣಿಗೆ ಕಾಣದ ರೀತಿಯಲ್ಲಿ ಹರಡುವ ಸಂಭವನೀಯತೆ ಹೆಚ್ಚಿರುತ್ತದೆ. ಇದು ಅತ್ಯಂತ ಅಪಾಯಕಾರಿ .
ಪರೀಕ್ಷಾ ನಂತರದಲ್ಲಿ ಮೌಲ್ಯ ಮಾಪನ ಕೇಂದ್ರಕ್ಕೆ ಉತ್ತರ ಪತ್ರಿಕೆಯ ಸಾಗಾಟ ನಂತರ ಮೌಲ್ಯ ಮಾಪನಕೇಂದ್ರದಲ್ಲಿ ಸುಮಾರು 400 ರಿಂದ 500 ಶಿಕ್ಷಕರು ಗುಂಪು ಸೇರಿದಾಗ ಶಿಕ್ಷಕರ ಸುರಕ್ಷತೆ ಮತ್ತು ಮುಂಜಾಗ್ರತೆಯ ಕ್ರಮಗಳು ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದಕ್ಕೆ ಬದಲಾಗಿ, ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಈಗಾಗಲೇ ಸಿದ್ದವಾಗಿರುವ ಪ್ರಶ್ನೆಪತ್ರಿಕೆಗಳನ್ನು ಬಳಸಿ ಆಯಾ ಶಾಲಾ ಮಟ್ಟದಲ್ಲಿಯೇ ನಡೆಸಲು ತೀರ್ಮಾನಿಸುವುದು ಸಾಂದರ್ಭಿಕ ಮತ್ತು ಸಕಾಲಿಕ ತೀರ್ಮಾನವಾಗುತ್ತದೆ. ಪರೀಕ್ಷೆ ನಂತರ ಆಯಾ ವಿಷಯದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಮೌಲ್ಯ ಮಾಪನ ಮಾಡಿ ಅಂಕಗಳನ್ನು ಮಂಡಳಿಗೆ ಕಳಿಸುವುದು ಅತ್ಯಂತ ಪ್ರಾಯೋಗಿಕ ಮತ್ತು ಮುಂಜಾಗರೂಕತೆಯತೀರ್ಮಾನವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಮಕ್ಕಳ-ಶಿಕ್ಷಕರ ಜೀವಗಳನ್ನು ರಕ್ಷಿಸುವ ಕಾಪಾಡುವ ದೃಷ್ಟಿಯಿಂದ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸುವುದುಸೂಕ್ತ ಎಂಬ ಕೂಗು ದಟ್ಟವಾಗಿದೆ.ಈ ಹಿನ್ನೆಲೆಯಲ್ಲಿ, ಎಲ್ಲಾ ರೀತಿಯಿಂದ ಈ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಿ ಮಕ್ಕಳ ಮತ್ತು ಪಾಲಕ ಪೋಷಕರ ಆತಂಕ ಮತ್ತು ಭಯವನ್ನು ಹೋಗಲಾಡಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ .
ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ
ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ ನಿಲ್ಲುವುದು ಒಂದು ದೊಡ್ಡ ಸವಾಲು ಮತ್ತು ಮಹತ್ವದ ವಿಷಯ. ಈ ಕೆಲಸದ ಭಾಗವಾಗಿ ಪಾಲಕರ ಅಥವಾ ಮಕ್ಕಳ ಸ್ಮಾರ್ಟ್ ಪೋನ್ ಗಳನ್ನು ಬಳಸಿ ಆಯಾ ಶಾಲಾ ವ್ಯಾಪ್ತಿಯ (ಶಾಲಾ ನೆರೆಹೊರೆ) ಮಕ್ಕಳ-ಶಿಕ್ಷಕರ ವಾಟ್ಸ್ಆಫ್ ಗುಂಪುಗಳನ್ನು ರಚಿಸುವುದು .ಈ ಗುಂಪಿನಲ್ಲಿ ಮಕ್ಕಳಿಗೇನಾದರು ಆತಂಕ –ತೊಂದರೆ;ವೈಯುಕ್ತಿಕವಾಗಲಿ ಅಥವಾ ಕಲಿಕೆಯಲ್ಲಾಗಲಿ, ಸಂಶಯಗಳಿದ್ದರೆ ಬಗೆಹರಿಸುವುದು ಮತ್ತು ಪೂರಕ ಬೆಂಬಲವನ್ನು ಒದಗಿಸುವುದು. ಅದೇ ರೀತಿಯಲ್ಲಿ ,ಶಿಕ್ಷಕರು ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ಆತ್ಮಸ್ಥೈರ್ಯ ಹಾಗು ವಿಷಯ ಪುನಾರಾವರ್ತನೆಗೆ ಸಹಾಯ ಮಾಡುವುದು. ಶಿಕ್ಷಕರು ತಾವು ಕಲಿಸುವ ವಿಷಯದಲ್ಲಿ ಮಕ್ಕಳಿಗೆ ಅನುಕೂಲವಗುವಂತೆ ಚಿಕ್ಕ ಚಿಕ್ಕ ವಿಡಿಯೋಗಳನ್ನು ಮಾಡಿ ಗುಂಪಿನಲ್ಲಿ ಹಂಚಿಕೊಳ್ಳಬಹುದು. ಇದು ಮಕ್ಕಳು ನಿರಂತರ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವುದಲ್ಲದೆ ಅವರ ಆತಂಕವನ್ನು ದೂರಮಾಡಿ ಸಿಕ್ಕಿರುವ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ.
ಸ್ಮಾರ್ಟ್ ಪೋನ್ ಸೌಲಭ್ಯಗಳಿಲ್ಲದ ಗ್ರಾಮೀಣ ಮಕ್ಕಳ ಅದರಲ್ಲೂ ವಿಶೇಷವಾಗಿ ಬಡ ಕೂಲಿ ಕಾರ್ಮಿಕರ ಮತ್ತು ಅವಕಾಶ ವಂಚಿತ ಮಕ್ಕಳ ಸಹಾಯಕ್ಕಾಗಿ ಕನಿಷ್ಠ ಆ ಮಕ್ಕಳು ಊರಿನ ಶಾಲೆಗೆ ಎರಡು ದಿನಕ್ಕೊಮ್ಮೆ ಭೇಟಿನೀಡಲು ಅವಕಾಶ ಕಲ್ಪಿಸಿ ಅಂದು ಕನಿಷ್ಠ ಒಬ್ಬರು ಶಿಕ್ಷಕರು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳುವುದು. ಈ ಸಂದರ್ಭದಲ್ಲಿ ದೈಹಿಕ/ವೈದ್ಯಕೀಯ ಅಂತರ ಕಾಯ್ದುಕೊಂಡು ಮಕ್ಕಳು ತಮಗಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಕ್ರಮ ವಹಿಸುವುದು. ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಗತ್ಯವಾದ ಮಾಸ್ಕ್ ಹಾಗು ಸ್ಯಾನಿಟೈಜರ್ ನ್ನು ಶಾಲೆಯಲ್ಲಿ ಒದಗಿಸುವುದು ಎಸ್ಎಸ್ಎಲ್ ಸಿ/ಪಿಯುಸಿ ನಂತರ ಮಕ್ಕಳಿಗಿರುವ ಅವಕಾಶ ಹಾಗು ಅವರು ಬರೆಯಬೇಕಾದ ಅರ್ಹತಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಕೃತ ನಿಖರ ಮಾಹಿತಿ ಮಕ್ಕಳಿಗೆ ಆತಂಕವಿರುವ ಸಂದರ್ಭದಲ್ಲಿ , ಎಸ್ಎಸ್ಎಲ್ ಸಿ/ಪಿಯುಸಿ ನಂತರ ಮಕ್ಕಳಿಗಿರುವ ಅವಕಾಶ ಹಾಗು ಅವರು ಬರೆಯಬೇಕಾದ ಅರ್ಹತಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಕೃತ ನಿಖರ ಮಾಹಿತಿಯನ್ನು ಶಿಕ್ಷಕರು ಅವರ ವಾಟ್ಸ್ಆಫ್ ಗುಂಪುಗಳಲ್ಲಿ ರವಾನಿಸುವುದು ಸೂಕ್ತ . ಅಂಥಹ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳು ಸಂದೇಹಗಳು ಏನಾದರು ಇದ್ದಲ್ಲಿ ಮಕ್ಕಳು ಅವರನ್ನು ಸಂಪರ್ಕಿಸಿ ತಿಳಿದುಕೊಳ್ಳಲು ಸಹಾಯವಾಗುತ್ತದೆ
ಮೇ 31 ರವರೆಗೆ (ಅಗತ್ಯವಿದ್ದಲ್ಲಿ ನಂತರ) ಮನೆಯಲ್ಲಿ ಮಕ್ಕಳು ನೆಮ್ಮದಿಯಿಂದ ಸೃಜನಾತ್ಮಕವಾಗಿ ತೊಡಗಿಸಕೊಳ್ಳಲು ಹೊಸಬಗೆಯ ಕಾರ್ಯಕ್ರಮ ಲಾಕ್ಡೌನ್ ಸಮಯದಲ್ಲಿ ಮನೆಗಳೊಳಗೆ ಸಕ್ರಿಯವಾಗಿರಲು ಹೊಸ ಬಗೆಯ ಸೃಜನಶೀಲ ಮನರಂಜನೆಯ ಮೂಲಕ ಕಲಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ರೇಡಿಯೋ ಮತ್ತು ದೂರದರ್ಶನದಂತಹ ಉಚಿತ ಮತ್ತು ಸುಲಭವಾಗಿ ಲಭ್ಯವಿರು ಸಂವಹನ ಮಾಧ್ಯಮವನ್ನು ಬಳಸಿ ಪ್ರಸಾರ ಮಾಡುವುದು.
ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಕ್ರಮ
ಕೋವಿಡ್ -19 ಬಡವರ ಅದರಲ್ಲೂ ದಿನಗೂಲಿ ನೌಕರರು, ಅಂದು ದುಡಿದು ಅಂದೇ ತಿನ್ನುವ ಲಕ್ಷಾಂತರ ಶ್ರಮ ಜೀವಿಗಳ,ರೈತರ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಜನರ ಜೀವನವನ್ನು ಮೂರಾಬಟ್ಟೆಯಾಗಿಸಿದೆ. ಅವರು ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದಾರೆ. ಜೀವನ ನಿರ್ವಹಣೆಯೇ ಅತಿ ದೊಡ್ಡ ಸವಾಲಾಗಿ ಪರಿಣಮಿಸದೆ . ಈ ಸಂದರ್ಭದಲ್ಲಿ ಲಕ್ಷಾಂತರ ಪಾಲಕರು ಖಾಸಗಿ ಶಾಲೆಗಳಲ್ಲಿ ಹಣ ತುಂಬಿ ಓದಿಸುವುದು ಅತ್ಯಂತ ಕಷ್ಟವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಮಾನವೀಯತೆಯಿಂದ ವರ್ತಿಸಿ ಮಕ್ಕಳ-ಪಾಲಕರ ಮೇಲೆ ಯಾವುದೇ ಬಗೆಯ ಒತ್ತಡ ಹಾಕದಂತೆ ಕ್ರಮವಹಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಜೊತೆಗೆ ಈ ಕೆಳಕಂಡ ಕ್ರಮಗಳನ್ನು ಖಾಸಗಿ ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ಒಮ್ಮತದಿಂದ ಕೈಗೊಳ್ಳಬೇಕಿದೆ .
ಮಕ್ಕಳು –ಪಾಲಕರು-ಶಿಕ್ಷಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅನುವಾಗುವಂತೆ ಉಚಿತ ದೂರವಾಣಿಯನ್ನು ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸುವುದು. ಜೊತೆಗೆ ಸಾರ್ವಜನಿಕರಿಗೆ ಎಲ್ಲಾ ಬಿಇಒ ಗಳ ಮೊಬೈಲ್ ಮತ್ತು ಕಛೇರಿ ದೂರವಾಣಿ ಒದಗಿಸುವುದು
2019-20ರಲ್ಲಿ ನಿಗದಿಪಡಿಸಿದ ಟ್ಯೂಷನ್ ಶುಲ್ಕ ವನ್ನು ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಶಾಲೆಗಳು ವಸೂಲಿ ಮಾಡಬಾರದು .ಈ ಶುಲ್ಕವನ್ನು ಶಿಕ್ಷಕರ ಸಂಬಳಕ್ಕೆ ಮಾತ್ರ ಬಳಸಬೇಕು
ಶಾಲೆಗಳು ತೆಗೆದುಕೊಳ್ಳಬಹುದಾದ ನಿರ್ವಹಣಾ ಶುಲ್ಕ ಹಾಗು ಸಾರಿಗೆ ಶುಲ್ಕವನ್ನು ಇಲಾಖೆ ವೈಜ್ಞಾನಿಕವಾಗಿ ಪಾಲಕರಿಗೆ ಹೊರೆಯಾಗದಂತೆ ಸರ್ಕಾರಿ ಶಾಲೆಗಳಿಗೆ ಈ ಅನುದಾನವನ್ನು ನೀಡುವ ಮಾದರಿಯಲ್ಲಿ ತೀರ್ಮಾನಿಸ ಬೇಕು. ಆರ್ ಟಿ ಒ (ಸಾರಿಗೆ) ಸಹಾಯದಿಂದ ಬಸ್ ಶುಲ್ಕವನ್ನು ನಿಗದಿಪಡಿಸಬೇಕು ಈ ಬಾರಿ ಯಾವುದೇ ಅಭಿವೃದ್ಧಿ ಶುಲ್ಕ ವಸೂಲಿಗೆ ಅವಕಾಶ ನೀಡಬಾರದು ಬದಲಿಗೆ ಸಶಕ್ತವಾಗಿರುವ ಶಾಲೆಗಳು ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು
ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬರಬಹುದಾದ ಮಕ್ಕಳನ್ನು ಸ್ವಾಗತಿಸಲು ಇಲಾಖೆ ವಿಶೇಷ ಯೋಜನೆ ತಯಾರಿಸಬೇಕು ಮೇಲಿನ ಎಲ್ಲಾ ಕಠಿಣ ಕ್ರಮಗಳ ಹೊರತಾಗಿಯು , ಕೋವಿಡ್-19 ರ ಆರ್ಥಿಕ ದಿವಾಳಿಯಿಂದ ತತ್ತರಿಸಿರುವ ಲಕ್ಷಾಂತರ ಶ್ರಮ ಜೀವಿಗಳ,ರೈತರು ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಮುಂದುವರಿಸುವುದು ಕಷ್ಟಸಾಧ್ಯವಾಗಿ ಸರ್ಕಾರಿ ಶಾಲೆಗಳಿಗೆ ಮರಳುವ ಸಂಭವನೀಯತೆ –ಸಾಧ್ಯತೆ ದಟ್ಟವಾಗಿದೆ. ಈ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರಮಾಡಿಕೊಳ್ಳಲು ಇಲಾಖೆ ವಿಶೇಷ ಯೋಜನೆ ತಯಾರಿಸಬೇಕು
ಲಾಕ್ ಡೌನ್ ಸಂಪೂರ್ಣ ಮುಗಿದು ಸಹಜ ಸ್ಥಿತಿಗೆ ಮರಳಿ ಶಾಲೆಗಳು ಪ್ರಾರಂಭವಾಗಬಹುದು ಎನ್ನುವ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು ಶಾಲೆಯನ್ನು ಸಂಪೂರ್ಣ ಸ್ಚಚ್ಛಗೊಳಿಸಿ ಶಾಲೆಯನ್ನು ಪುನರಾರಂಭಿಸಲು ಸಿದ್ಧತೆ ಮಾಡುವುದು
ಸುರಕ್ಷತೆಯ ಭಾಗವಾಗಿ ಶಾಲೆಗಳನ್ನು ಸಂಪೂರ್ಣವಾಗಿ ಸೋಂಕು ನಿವಾರಣೆಗೊಳಿಸುವುದು (Disinfection). ಈ ಕೆಲಸವನ್ನು ಸ್ಥಳೀಯ ಪಂಚಾಯತಿ/ನಗರ ಪಾಲಿಕೆ ಶಾಲಾ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್ಡಿಎಂಸಿ ) ನೆರೆವಿನೊಂದಿಗೆ ಕೈಗೊಳ್ಳುವುದು ಸೂಕ್ತ.ನಂತರ, ತರಗತಿವಾರು ಸ್ಯಾನಿಟೈಸರ್ ಹಾಗು ಎಲ್ಲಾ ಮಕ್ಕಳಿಗೆ ,ಶಿಕ್ಷಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ ಮಾಸ್ಕ್ ಒದಗಿಸುವುದು. ಶಾಲಾ ಹಂತದಲ್ಲಿ ಅಗತ್ಯ ಸಿದ್ಧತೆಗಳು;ಶಾಲೆಗಳನ್ನು ಸೋಂಕು ನಿವಾರಣೆಗೊಳಿಸುವುದು (Disinfection), ತರಗತಿವಾರು ಸ್ಯಾನಿಟೈಸರ್ ಒದಗಿಸುವುದು, ಎಲ್ಲಾ ಮಕ್ಕಳಿಗೆ ,ಶಿಕ್ಷಕರಿಗೆ ಬೋಧಕೇತರ ಸಿಬ್ಬಂದಿಗೆ ಮಾಸ್ಕ್ ವಿತರಣೆ ಇತ್ಯಾದಿಗಳು ಆಗದಿದ್ದಲ್ಲಿ ಜೂನ್ ಅಂತ್ಯದವರೆಗೆ ರಜೆಯನ್ನು ಮುಂದೂಡಬಹುದು. ದೈಹಿಕ ಅಂತರ ಕಾಪಾಡಿಕೊಳ್ಳಲು ತರಗತಿ ಕೋಣೆಗಳನ್ನು ಪುನರ್ ಸಂಘಟಿಸುವುದು
ಕೋವಿಡ್ 19 ಕ್ಕೆ ಲಸಿಕೆ ಕಂಡುಹಿಡಿದು ನಂತರ ಎಲ್ಲರಿಗೂ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕುವವರೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೋನ ವೈರಸ್ ನಿಂದ ರಕ್ಷಣೆ ಪಡೆಯುವುದು ಅತೀ ಮುಖ್ಯವಾದ ಕಾರ್ಯತಂತ್ರವಾಗಿದೆ. ಈ ಕಾರಣದಿಂದ ಈಗಾಗಲೇ ವೈದ್ಯಕೀಯ ಸಮುದಾಯ ನಿಗದಿಪಡಿಸಿರುವಂತೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ಅಗತ್ಯ ಸಿದ್ಧತೆಯನ್ನು ಶಿಕ್ಷಕರು ಹಾಗು ಎಸ್ಡಿಎಂಸಿಯವರು ಜೊತೆಗೂಡಿ ತರಗತಿ ಕೋಣೆಗಳನ್ನು ಪುನರ್ ಸಂಘಟಿಸಿಕೊಳ್ಳಬೇಕು. ಮಕ್ಕಳ ಮಧ್ಯೆ ದೈಹಿಕ ಅಂತರ ಕಾಪಾಡಿಕೊಳ್ಳಲು ತರಗತಿ ಕೋಣೆಗಳು ಸಾಲದಿದ್ದಲ್ಲಿ , ಲಭ್ಯವಿರುವ ಕಡೆ ಹೊರಾಂಡ, ತೆರೆದ ಜಾಗದಲ್ಲಿ ಮರದ ಕೆಳಗೆ ಇತ್ಯಾದಿಗಳನ್ನು ಬಳಸಿಕೊಳ್ಳಬಹುದು
ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ ಮಾನದಂಡ ಹಾಗು ಚೌಕಟ್ಟನ್ನು ಬಳಸಬೇಕು.
ಮೇ 31ರವರೆಗೆ ಶಾಲೆಗಳು ರಜೆಯಲ್ಲಿವೆ. ಶಾಲೆಗಳನ್ನು ಜೂನ್ ನಲ್ಲಿ ಪ್ರಾರಂಭಿಸಿದ್ದರೂ ಕನಿಷ್ಠ ಜೂನ್ ಅಂತ್ಯದವರೆಗೆ ನಾವೂ ದಾಖಲಾತಿ, ಪ್ರಭಾತ್ ಪೇರಿ, ಸೇತುಬಂಧ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆದ್ದರಿಂದ ಕೋವಿಡ್-19 ಪ್ಯಾಂಡೆಮಿಕ್ ಬಂದು ಎಲ್ಲವೂ ಕಳೆದು ಹೋಗಿದೆ ಎಂಬ ಆತಂಕ ಅವಸರ ಬೇಡ . ಎಲ್ಲಾ ವಿಷಯದಲ್ಲಿ ನಾವು ನಮ್ಮನ್ನು ಖಾಸಗಿ ಶಾಲೆಗಳ ಜೊತೆ ಹೋಲಿಸಿಕೊಂಡು ಸ್ಪರ್ಧೆಗೆ ಇಳಿಯುವ ಅವಶ್ಯಕತೆ ಇಲ್ಲ .ಶಾಲೆ ಯಾವಾಗ ಪ್ರಾರಂಭವಾಗಬೇಕು, ಸಿದ್ಧತೆ ಏನಿರಬೇಕು, ಹೇಗೆ ನಡೆಯಬೇಕು ,ಬದಲಾದ ನನ್ನಿವೇಶದಲ್ಲಿ ಕಲಿಕೆ ಹೇಗಿರಬೇಕು, ಪಠ್ಯವಸ್ತು ಹೇಗಿರಬೇಕು , ಕಲಿಕಾ ದಿನಗಳೆಷ್ಟು, ಕಲಿಕಾ ಅವಧಿ ಎಷ್ಟು ಇತ್ಯಾದಿಗಳನ್ನು ನಾವು ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ ಚೌಕಟ್ಟಿನಲ್ಲಿ ನೋಡಬೇಕು.ಅದರಲ್ಲಿ ಕೆಲವು ಮೂಲಭೂತವಾದ ಅಂಶಗಳು ಈ ಕೆಳಗಿನಂತಿವೆ.
ಆನ್ಲೈನ್ ಶಿಕ್ಷಣಕ್ಕೆ ಅನಗತ್ಯಒತ್ತು ಬೇಡ
ಮೇ 17 ಕ್ಕೆ ‘ಲಾಕ್ಡೌನ್’ನಿಂದ ಸ್ವಲ್ಪ ಮಟ್ಟಿನ ರಿಯಾತಿಗಳು ಸಿಗಬಹುದಾದ ಮುನ್ಸೂಚನೆ ಸಿಕ್ಕಿದೆ. ಲಾಕ್ಡೌನ್’ ಪರೋಕ್ಷವಾಗಿ ಮುಂದುವರಿಯಲಿದ್ದು ದೈಹಿಕ ಅಂತರವನ್ನು ಕಾಪಾಡಿಕೊಂಡೇ 2020-21 ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಬೇಕಿದೆ. ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು ಚರ್ಚೆಯ ಕೇಂದ್ರ ಬಿಂದು ‘ಆನ್ಲೈನ್’ ಶಿಕ್ಷಣ. ಬಹುತೇಕ ಈ ಚರ್ಚೆಗಳ ಮುಂಚೂಣಿಯಲ್ಲಿರುವವರು ಖಾಸಗೀ ಶಿಕ್ಷಣ ವಲಯದ ಅದರಲ್ಲೂ ಕಾರ್ಪೋರೇಟ್ ಶಿಕ್ಷಣ ಹಾಗು ಶಿಕ್ಷಣ-ತಂತ್ರಜ್ಞಾನದ ವ್ಯಾಪಾರಿಗಳು. ತಮ್ಮ ಶಿಕ್ಷಣ ವ್ಯಾಪಾರಕ್ಕೆ ಉಂಟಾಗಬಹುದಾದ ನಷ್ಟದ ಬಗ್ಗೆ ಗಾಬರಿಗೊಂಡಿರುವ ಖಾಸಗಿ ಶಿಕ್ಷಣ ವಲಯ ಮತ್ತು ಮೈತ್ರಿ ಸಂಸ್ಥೆಗಳು ಆನ್ಲೈನ್ ಶಿಕ್ಷಣ ಪ್ರಾರಂಭಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಹೊಸ ಕಾರ್ಯ ತಂತ್ರದ ಮೂಲಕ ತಮ್ಮ ಸಂಸ್ಥೆಯ ಮಕ್ಕಳು ಎಲ್ಲೂ ವಲಸೆ ಹೋಗದಂತೆ ಕಾಪಾಡಿಕೊಳ್ಳುವುದು ಅವರ ಮುಖ್ಯ ಉದ್ದೇಶ. ಇಂದಿಗೂ ಸೇವಾವಲಯವಾಗಿಯೇ ಉಳಿದಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಈ ಬಗ್ಗೆ ಹೆಚ್ಚಿನ ಗೊಂದಲ ಅಥವಾ ಆತಂಕ ಇಲ್ಲವಾದರು ಮೇಲಿನ ಅಧಿಕಾರಿಗಳು ತಮ್ಮ ಅಸ್ತಿತ್ವವನ್ನು ರುಜುವಾತುಗೊಳಿಸುವ ಸಲುವಾಗಿ ತಮ್ಮಲ್ಲೂ ಆನ್ಲೈನ್ ಶಿಕ್ಷಣ ಪ್ರಾರಂಭಿಸುವುದಾಗಿ ಬೊಬ್ಬೆ ಹಾಕುತ್ತಿರುವುದು ವಿಶೇಷವಾಗಿ ಗಮನಿಸಬೇಕಾದ ಸಂಗತಿ.
ಆನ್ಲೈನ್ ಸೇವೆಗಳು ಮತ್ತು ಸಂಪನ್ಮೂಲಗಳು ಖಂಡಿತವಾಗಿಯೂ ಕಲಿಯಬೇಕಾದ ವಿಷಯ ಮತ್ತು ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ಸಹಾಯವಾಗಬಹುದು ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಅನುಭವವನ್ನು ಕಟ್ಟಿಕೊಡುವ ಮೂಲಕ ಕಲಿಕೆಯನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಆದರೆ, ಇದು ಎಂದಿಗೂ ತರಗತಿ ಕೋಣೆಯ ಜೀವಂತ ಕಲಿಕಾ ಪ್ರಕ್ರಿಯೆಗೆ ಪರ್ಯಾಯವಾಗಲು ಸಾಧ್ಯವಿಲ್ಲ.ಪ್ರಜಾಸತ್ತೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಅದು ಆಗಲೂಬಾರದು. ಮಕ್ಕಳು-ವಿದ್ಯಾರ್ಥಿಗಳು ಒಟ್ಟಿಗೆ ಬಂದು , ಬೆರೆತು,ಸಂಭಾಷಿಸಿ, ಚರ್ಚಿಸಿ, ಪರಸ್ಪರ ಅನುಭವ- ಒಳವುಗಳನ್ನು ಹಂಚಿಕೊಂಡು ಕಲಿತಾಗ ಮಾತ್ರ ಸಾಮಾಜೀಕರಣ ಸಾಧ್ಯ. ಅಂಥಹ ಕಲಿಕಾ ಪ್ರಕ್ರಿಯೆ ಮಾತ್ರ ಮಾನವೀಯ ಸಂಬಂಧಗಳನ್ನು ಬೆಸೆದು ಮಾನವೀಯತೆ ಕಟ್ಟಿಕೊಡಲಬಲ್ಲದು. ಶ್ರೇಷ್ಠ ತತ್ವಜ್ಞಾನಿ ನೋಮ್ ಚೋಮ್ಸ್ಕಿಯ ಪ್ರಕಾರ ಅಧಿಕಾರವನ್ನು ಪ್ರಶ್ನಿಸುವ, ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಸವಕಲಾಗಿ ಗತಿಸಿರುವ ಮಾದರಿಗಳಿಗೆ ಹೊಸ ಪರ್ಯಾಯಗಳನ್ನು ರಚಿಸಲು ಪ್ರಚೋದನೆಯನ್ನು ಹುಟ್ಟುಹಾಕುವುದೇ ಸರಿಯಾದ ಶಿಕ್ಷಣಶಾಸ್ತ್ರ. ಶ್ರೇಷ್ಟ ಚಿಂತಕ ಪಾಲೋ ಫ್ರೈರೆಯವರ ಪ್ರಕಾರ , ಶಿಕ್ಷಣಶಾಸ್ತ್ರವು ಕಲಿಯುವವರ ಮನಸ್ಸನ್ನು ಸ್ವತಂತ್ರಗೊಳಿಸಬೇಕು ಮತ್ತು ವಿಮರ್ಶಾತ್ಮಕವಾಗಿ ಯೋಚಿಸಲು ಅನುವು ಮಾಡಿಕೊಡುವ ಮೂಲಕ ಸ್ವಂತಿಕೆಯ ಒಳನೋಟಗಳನ್ನು ಪ್ರತಿಬಿಂಬಿಸಬೇಕು.
ಎಲ್ಲಕ್ಕಿಂತ ಮಿಗಿಲಾಗಿ, ಬಡತನ, ಅಸಮಾನತೆ,ತಾರತಮ್ಯ ಶ್ರೇಣೀಕೃತ ಸಾಮಾಜಿಕ-ಶಿಕ್ಷಣ ವ್ಯವಸ್ಥೆ ಹಾಗು ಉಳ್ಳವರು –ಉಳ್ಳದಿರುವವರು ಎಂಬ ಎರಡು ಸಮಾನಾಂತರ ವರ್ಗಗಳಿರುವ ಭಾರತದಲ್ಲಿ ಆನ್ ಲೈನ್ ಶಿಕ್ಷಣ ಈ ಕಂದರವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆಯೇ ಹೊರತು ತೊಡೆದು ಹಾಕಲಾರದು. ಕೋವಿಡ್ ಸಂದರ್ಭದಲ್ಲಿ ಈ ಕಂದರ ಮತ್ತಷ್ಟು ಕಣ್ಣಿಗೆ ರಾಚುವಂತೆ ತೆರೆದುಕೊಂಡಿದ್ದು ಹಿಂದಿನ ಅನೇಕ ಸಾಮಾಜಿಕ-ಆರ್ಥಿಕ ಸಂಶೋಧನೆಗಳನ್ನು ಸಾಕ್ಷೀಕರಿಸಿದೆ.
ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಶೇಕಡ 16 ರಷ್ಟು ಕುಟುಂಬಗಳು 1-8 ಗಂಟೆ,ಶೇಕಡ 33 ರಷ್ಟು ಕುಟುಂಬಗಳು 9-12 ಗಂಟೆ ಮತ್ತು ಶೇಕಡ 47 ರಷ್ಟು ಕುಟುಂಬಗಳು 12 ಕ್ಕಿಂತ ಹೆಚ್ಚು ಗಂಟೆಗಳ ವಿದ್ಯುಚ್ಛಕ್ತಿ ಸರಬರಾಜನ್ನು ಹೊಂದಿವೆ. ಶೇಕಡ 11 ರಷ್ಟು ಕುಟುಂಬಗಳು ಕಂಪ್ಯೂಟರ್ ಸೌಲಭ್ಯ ಶೇಕಡ 24 ರಷ್ಟು ಕುಟುಂಬಗಳು ಸ್ಮಾರ್ಟ್ ಪೋನ್ ಹಾಗು ಶೇಕಡ 24 ರಷ್ಟು ಕುಟುಂಬಗಳು ಇಂಟರ್ನೆಟ್ ಸಂಪರ್ಕ ಹೊಂದಿವೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಕೇವಲ ಶೇಕಡಾ 15. ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ತಾರತಮ್ಯ ನೋಡುವುದಾದರೆ , ಶೇಕಡ 8 ರಷ್ಟು ಕುಟುಂಬಗಳಲ್ಲಿ 5-14 ವರ್ಷದ ಮಕ್ಕಳಿಗೆ ಕಂಪ್ಯೂಟರ್ ಹಾಗು ಇಂಟರ್ನೆಟ್ ಸೇವೆಯ ಸೌಲಭ್ಯವಿದೆ. ಮತ್ತೊಂದು ವಿಶೇಷ ಸಂಗತಿಯೆಂದರೆ , 2019ರ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ವರದಿಯ ಪ್ರಕಾರ ಭಾರತದಲ್ಲಿ , ಶೇಕಡ 67 ಪುರುಷರು ಇಂಟರ್ನೆಟ್ ಸೌಲಭ್ಯ ಹೊಂದಿದ್ದರೆ ಕೇವಲ ಶೇಕಡ 33 ರಷ್ಡು ಮಹಿಳೆಯರು ಮಾತ್ರ ಈ ಸೌಲಭ್ಯ ಹೊಂದಿದ್ದಾರೆ.
ಆನ್ ಲೈನ್ ಶಿಕ್ಷಣದ ಬಗ್ಗೆ ಸಾಕಷ್ಟು ಸದ್ದು ಮಾತನಾಡುತ್ತಿರುವ ಕೇಂದ್ರ ಸರ್ಕಾರವು ತನ್ನ 2020-21ರ ಆಯವ್ಯಯದಲ್ಲಿ ಮಾನವ ಅಭಿವೃದ್ಧಿ ಸಂಪನ್ಮೂಲ ಮಂತ್ರಾಲಯದ ಮೂಲಕ ಡಿಜಿಟಲ್ ಕಲಿಕೆಗೆ ಮೀಸಲಿರಿಸಿದ ಹಣ 604 ಕೋಟಿಯಿಂದ 469 ಕೋಟಿಗೆ ಇಳಿದಿದೆ. ಅಂದರೆ ಹಿಂದಿನ ಆಯವ್ಯಕ್ಕಿಂತ ಶೇಕಡ 29 ರಷ್ಟು ಕಡಿಮೆಯಾಗಿದೆ.ನಮ್ಮ ರಾಜ್ಯದಲ್ಲಿ ಸುಮಾರು 2,37,893 ಕೋಟಿ ಗಾತ್ರದ DAiÀĪÀåAiÀÄದಲ್ಲಿ ಶಿಕ್ಷಣದ ತಂತ್ರಜ್ಞಾನ ಅಭಿವೃದ್ಧಿಗೆ ಮೀಸಲಿಟ್ಟಿದ್ದು 7 ಕೋಟಿ; ತಂತ್ರಜ್ಞಾನದ ನೆರೆವಿನಿಂದ ರಾಜ್ಯದ ವಿಶ್ವವಿದ್ಯಾಲಯಗಳನ್ನು ಸಮರ್ಥ ನಿರ್ವಹಣೆಗೆ ಅಣಿಗೊಳಿಸಲು ಒಂದು ಕೋಟಿ; ಇಂಟರಾಕ್ಟೀವ್ ಆನ್ಲೈನ್ ಕೋರ್ಸ್ ಪ್ರಾರಂಭ ಹಾಗು ಗುಣಾತ್ಮಕ ಇ-ಕಂಟೆಂಟ್ ಅಭಿವೃದ್ಧಿಗೆ ಒಂದು ಕೋಟಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಜಿಯೋಸ್ಪೇಶಿಯಲ್ ತಂತ್ರಜ್ಞಾನ ಸ್ಥಾಪನೆಗೆ ಐದು ಕೋಟಿ .ಇದನ್ನು ಬಳಸಿ ಯಾವ ಬಗೆಯ ಆನ್ಲೈನ್ ಶಿಕ್ಷಣ ನೀಡುತ್ತಾರೆಂಬುದನ್ನು ಆನ್ಲೈನ್ ಶಿಕ್ಷಣದ ಬಗ್ಗೆ ದೊಡ್ಡ ಗುಲ್ಲನ್ನೇ ಹಬ್ಬಿಸುತ್ತಿರುವ ಕಾರ್ಪೋರೇಟ್ ಸಂಸ್ಥೆಗಳು ಮತ್ತು ಸರ್ಕಾರಗಳು ಯೋಚಿಸಬೇಕು.
ಆನ್ಲೈನ್ ಶಿಕ್ಷಣದ ಸಾಧಕ –ಬಾಧಕಗಳ ಬಗ್ಗೆ ಚರ್ಚಿಸುವ ಮುನ್ನ ಶಿಕ್ಷಣ ಪ್ರಕ್ರಿಯೆ ಸ್ವರೂಪ ಮತ್ತು ಉದ್ದೇಶದ ಬಗ್ಗೆ ಗಮನ ಹರಿಸೋಣ. ಶಿಕ್ಷಣ –ಶಿಕ್ಷಣ ವ್ಯವಸ್ಥೆಯೆಂದರೆ ಪೂರ್ವನಿರ್ಧಾರಿತ ಪಠ್ಯವಸ್ತುವಿನ ಮೂಲಕ ಮಾಹಿತಿಯನ್ನು ರವಾನಿಸುವ ಯಾಂತ್ರಿಕ ಪ್ರಕ್ರಿಯೆ ಮಾತ್ರವಲ್ಲ . ಮನುಷ್ಯ ಒಂದು ಸಾಮಾಜಿಕ ಪ್ರಾಣಿಯಾಗಿದ್ದು ಶಿಕ್ಷಣ ಅವಳ/ಅವನ ಸಾಮಾಜಿಕ ಚಲನ-ವಲನ ಹಾಗು ಸಮಾಜದಲ್ಲಿನ ಎಲ್ಲ ವರ್ಗದ ಜನರ ಸಾಮಾಜಿಕ ಒಳಿತಿಗಾಗಿ ಸಾಮಾಜೀಕರಣಗೊಳಿಸುವ ಒಂದು ಸಾಧನ. ಜಾತಿ,ಧರ್ಮ,ಲಿಂಗ,ಬಣ್ಣ,ಸಾಮಾಜಿಕ-ಆರ್ಥಿಕ ಸ್ಥಾನಮಾನ ಇತ್ಯಾದಿಗಳ ಆಚೆಗೆ ನಿಂತು ಸಮಾನತೆ , ಸಾಮಾಜಿಕ ನ್ಯಾಯ ಮತ್ತು ಭಾತೃತ್ವದ ಮೂಲಕ ಮಾನವೀಯತೆ ನೆಲೆಯಲ್ಲಿ ಹೊಸ ಸಮಾಜವನ್ನು ಕಟ್ಟಿಕೊಳ್ಳಲು ಎಲ್ಲರನ್ನು ಅಣಿಗೊಳಿಸುವುದು ಶಿಕ್ಷಣದ ಮೂಲ ಉದ್ದೇಶ. ಈ ಕಾರಣಕ್ಕಾಗಿಯೇ ಜಾಗತಿಕ ಮಟ್ಟದಲ್ಲಿ ಯುನೆಸ್ಕೊ ಒಳಗೊಂಡಂತೆ ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ಸಂಸ್ಥೆಗಳು ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ಸಾಧನವನ್ನಾಗಿ ಪರಿಗಣಿಸಿವೆ.
ಆನ್ಲೈನ್ ಕಲಿಕೆ ಮೇಲೆ ಚರ್ಚಿಸಿದ ಶಿಕ್ಷಣಶಾಸ್ತ್ರವನ್ನು ಅನ್ವಯಿಸುವ ಯಾವ ಮೌಲ್ಯಗಳನ್ನು ಒಳಮಾಡಿಕೊಳ್ಳುವುದಿಲ್ಲ.ಆನ್ ಲೈನ್ ಶಿಕ್ಷಣದ ಬಗ್ಗೆ ಸಾಕಷ್ಟು ಶಬ್ದ ಮಾಡುತ್ತಿರುವ ನವ –ಉದಾರವಾದಿ ಖಾಸಗಿ ಸಂಸ್ಥೆಗಳ ಆಲೋಚನೆಗಳು ಮಾರುಕಟ್ಟೆ-ಚಾಲಿತ ಮೌಲ್ಯಗಳಾದ ‘ಸಮಯವು ಹಣ’, ‘ಹಣಕ್ಕೆ ಮೌಲ್ಯ’, ‘ಸಂಸ್ಥೆಗೆ ವೆಚ್ಚ’, ‘ಸ್ಮಾರ್ಟ್ ಸೇವೆಗಳು’ ಇತ್ಯಾದಿಗಳ ಮೂಲಕ ಎಲ್ಲವನ್ನೂ ನೋಡುತ್ತದೆ. ‘ಸಮಯವೇ ಹಣ’ ಆಗಿರುವುದರಿಂದ, ಇಂಥಹ ಕಠಿಣ ಸಾಂಕ್ರಾಮಿಕ ಅವಧಿಯಲ್ಲಿಯೂ ಸಹ ಶೈಕ್ಷಣಿಕ ವರ್ಷವನ್ನು ಎರಡು ತಿಂಗಳು ವಿಸ್ತರಿಸಲಾಗುವುದಿಲ್ಲ ಕಾರಣ ಸಮಯವನ್ನು ಹಾಳು ಮಾಡುವ ಮೂಲಕ ಹಣ/ಲಾಭವನ್ನು ಕಳೆದುಕೊಂಡರೆ ಸಂಸ್ಥೆಗಾಗುವ ‘ವೆಚ್ಚ’ ಯಾರು ಭರಿಸುತ್ತಾರೆ ಎಂಬುದು ಜೀವಗಳಿಗಿಂತ ದೊಡ್ಡ ವಿಷಯವಾಗುತ್ತದೆ.
ಚೋಮ್ಸ್ಕಿಯ ಪ್ರಕಾರ ವರ್ಚುವಲ್ ತಂತ್ರಜ್ಞಾನವು ಯಾವಾಗಲೂ ತಟಸ್ಥವಾಗಿರುತ್ತದೆ. ಅದು ಹಾನಿಕಾರಕವಾಗಬಹುದು ಅಥವಾ ಉಪಯುಕ್ತವಾಗಬಹುದು. ಆದರೆ ಅದರ ಯಶಸ್ಸು ಅದನ್ನು ಬಳಸುವ ಚೌಕಟ್ಟು ಹಾಗು ಬಳಸುವವರನ್ನು ಅವಲಂಬಿಸಿರುತ್ತದೆ. ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಹಲವಾರು ಆನ್ಲೈನ್ ಸೇವಾ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು / ಸೇವೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಮಾರುಕಟ್ಟೆಯನ್ನು ಪ್ರಾರಂಭಿಸಲು ಕಾಯುತ್ತಿದ್ದಾರೆ. ಭಾರತವು 2005 ರಲ್ಲಿಯೇ ಡಬ್ಲ್ಯುಟಿಒ-ಗ್ಯಾಟ್ಸ್ನ ಒಪ್ಪಂದದ ಭಾಗವಾಗಿ ಉನ್ನತ ಶಿಕ್ಷಣವನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡುವುದು ಆ ಒಪ್ಪಂದದ ಬದ್ಧತೆಗಳಲ್ಲಿ ಒಂದಾಗಿದೆ. ಡಬ್ಲ್ಯುಟಿಒ-ಗ್ಯಾಟ್ಸ್ನ ಒಪ್ಪಂದದ ಒಂದು ಅತ್ಯಂಯ ಪ್ರಮುಖ ಅಂಶವೆಂದರೆ ಶಿಕ್ಷಣದ ವ್ಯಾಪಾರವನ್ನು ಜಗತ್ತಿನಾದ್ಯಂತ ಆನ್ಲೈನ್ ವ್ಯವಸ್ಥೆ ಮೂಲಕ ಮುಕ್ತ ಮಾರುಕಟ್ಟೆಗೆ ತೆರೆದಿಡುವುದು. ಡಬ್ಲ್ಯುಟಿಒ-ಗ್ಯಾಟ್ಸ್ ಒಪ್ಪಂದ ಶಿಕ್ಷಣವನ್ನು ಈಗಾಗಲೇ ಸೇವೆಯ ಬದಲಾಗಿ ವ್ಯಾಪಾರದ ಅಡಿಯಲ್ಲಿ ಒಂದು ಸರಕನ್ನಾಗಿ ಮಾರ್ಪಡಿಸಿರುವುದರಿಂದ, ಈ ಒಪ್ಪಂದ ಜಾರಿಯಾದ ಬಳಿಕ ಶಿಕ್ಷಣ ಒಂದು ಜಾಗತಿಕ ವ್ಯಾಪಾರವಾಗುತ್ತದೆ.
ಇದಾವುದರ ಪೂರ್ಣ ಅರಿವು ಮತ್ತು ಪರಿಣಾಮವನ್ನು ಮನಗಾಣದ ನೀತಿ ನಿರೂಪಕರು,ಅಕ್ಯಾಡೆಮಿಸಿಯನ್ಸ್ ಹಾಗು ಸಂಪ್ರದಾಯವಾದಿ ಶಿಕ್ಷಣ ತಜ್ಞರು ಆನ್ಲೈನ್ ಕಲಿಕೆಗೆ ಸಂಭ್ರಮಿಸಿದ್ದಾರೆ. ಕೆಲವರಂತು ಸ್ಪರ್ಧೆಗೆ ಬಿದ್ದು ತಮ್ಮ ಕ್ಯಾಂಪಸ್ಗಳಲ್ಲಿ ಆನ್ಲೈನ್ ಕಲಿಕಾ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದಕ್ಕಾಗಿ ತುಂಬಾ ರೋಮಾಂಚನಗೊಂಡು ಪುಳಕಿತರಾಗಿದ್ದಾರೆ. ಇಂಥಹ ಕೇಳರಿಯದ ಬಿಕ್ಕಟ್ಟಿನ ಸಂದರ್ಭದಲ್ಲು ಕಲಿಕೆಯನ್ನು ಮುಂದುವರಿಸುವ ಮೂಲಕ ತಮ್ಮ ಸಂಸ್ಥೆಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಕಲಿಕೆ ನಿರಂತರವಾಗಿ ಸಾಗಿರುವ ಬಗ್ಗೆ ಯಶೋಗಾಥೆಗಳನ್ನು ಹಂಚಿಕೊಂಡು ಬಿರುದು ಸನ್ಮಾನಗಳಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಬೇಕಿದೆ. ಕೋಣ ಕರು ಹಾಕಿದೆ ಎಂದರೆ ಕೊಟ್ಟಿಗೆಗೆ ಕಟ್ಟಿ ಎಂಬ ಮನಸ್ಥಿತಿ ಹೊಂದಿರುವ ನಾವು ಈ ಸಂಕಷ್ಟದ ಸಂದರ್ಭದಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ಚರ್ಚಿಸಬೇಕೆ ಹೊರತು ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ವಿರಾಮ ಹೇಳಬೇಕು .
ನಿರಂಜನಾರಾಧ್ಯ ವಿ ಪಿ
ಒಟ್ಟಾರೆ, ಇಡೀ ದೇಶ-ರಾಜ್ಯವೇ ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಬಂಧಾಗಿರುವ ಇಂಥಹ ಸಂದರ್ಭದಲ್ಲಿ ಇಂಥಹ ಕೆಲವು ರಚನಾತ್ಮಕ ಕೆಲಸಗಳು ಮನೆಯಲ್ಲಿದ್ದುಕೊಂಡೇ ನೆಮ್ಮದಿಯಿಂದ ಆತಂಕವಿಲ್ಲದೆ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಇಂದಿನ ಕಠಿಣ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಮನೋಸ್ಥೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸಕ್ಕೆ ಈ ರೀತಿಯ ಸಣ್ಣ ಸಣ್ಣ ಉಪಕ್ರಮಗಳು ದೊಡ್ಡರೀತಿಯಲ್ಲಿ ನೆರವಾಗುತ್ತವೆ .
ನಿರಂಜನಾರಾಧ್ಯ ವಿ ಪಿ ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.