(www.vknews.com) : ಬಹುತೇಕ ಸಹೋದರರು ಈದ್ ನ ವಿಷಯದಲ್ಲಿ ತುಂಬಾ ದುಃಖಿತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಕೃರ್ತಿದತ್ತ ಅಥವಾ ಮಾನವನಿರ್ಮಿತ ಕೊರೋನಾ ವೈರಸ್ನ ಬಗ್ಗೆ ನಿರಂತರವಾಗಿ ಅಳಲನ್ನು ತೋಡುತ್ತಿದ್ದಾರೆ. ಇದರಿಂದಾಗಿ ರಮಝಾನ್ ತಿಂಗಳ ಖುಷಿಯಾಗಲಿ ಹಬ್ಬದ ಸಡಗರವಾಗಲೀ ನಮಗೆ ಲಭಿಸಲಿಲ್ಲ. ಈದ್ ನಮಾಝನ್ನು ಒಂದೋ ಬಂದ್ ಕೋಣೆಗಳಲ್ಲಿ ಅಥವಾ ಮನೆಗಳಲ್ಲೇ ಅರಿವಿಗೆ ಬಾರದಂತೆ ನಿರ್ವಹಿಸಿದೆವು. ಕೆಲವರಿಗಂತೂ ವೈಯ್ಯಕ್ತಿಕವಾಗಿ ಏನಾದರೂ ಸಮಸ್ಯೆಗಳಿರಲಿಕ್ಕೂ ಸಾಕು. ಆದರೆ ಈ ಬಾರಿಯ ರಮಝಾನಿನಲ್ಲಿ ಉಪವಾಸವಿದ್ದೂ, ಈದ್ ನಲ್ಲೂ ವೈರಸ್ ಭಾಧೆ ಇದ್ದೂ ಒಂದು ತರಹದ ಮಾನಸಿಕ ದೌರ್ಬಲ್ಯಕ್ಕೆ ಜನರು ಒಳಗಾಗಿದ್ದರು. ಇದರ ನಡುವೆಯೂ ಒಳಿತುಗಳನ್ನು ನಿರಂತರವಾಗಿ ನಾವು ಕಂಡಿರುವುದಂತೂ ಸತ್ಯ.
1) ಮೂರು ತರಹ ಖೈರ್ (ಒಳಿತು)ಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈದ್ ನ ನಮಾಝ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿಲ್ಲ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರೂ ಈದ್ ನ ನಮಾಝನ್ನು ಸುಲಭವಾಗಿ ಕಲಿತು ನಮಾಝ್ ಗೆ ನೇತೃತ್ವವನ್ನು ನೀಡಿದರು. ಮನೆಯ ಸದಸ್ಯರೊಂದಿಗೆ ಜೊತೆಗೂಡಿ ನಮಾಝನ್ನು ನಿರ್ವಹಿಸಿದರು. ಜನರು ಈದ್ ನಮಾಝ್ ಮಾಡಿಸುವ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡರು. ನಮಾಝ್ ಮಾಡಿಸುವುದಕ್ಕೆ ಒಂದು ವಿಶೇಷವಾದ ಸ್ಥಾನಮಾನವುಳ್ಳ ವ್ಯಕ್ತಿಯೇ ಬೇಕು ಎಂಬ ತಪ್ಪು ಕಲ್ಪನೆಯು ಜನಸಾಮಾನ್ಯರಲ್ಲಿತ್ತು. ಈ ಮೂಲಕ, ಇಸ್ಲಾಮ್ ಬ್ರಾಹ್ಮಣ್ಯವಾದವನ್ನು ತಿರಸ್ಕರಿಸುತ್ತದೆ. ಹಾಗೂ ಸಾಮಾನ್ಯ ವ್ಯಕ್ತಿಯೂ ಮುಂದೆ ಬಂದು ನಮಾಝ್ ಗೆ ನೇತೃತ್ವವನ್ನು ನೀಡಲು ಅರ್ಹ ಎಂಬ ಸಂದೇಶವು ದೇಶಭಾಂಧವರಿಗೆ ತಲುಪಿತು. ಮಹಿಳೆಯರಿಗೂ ಸಾಮಾನ್ಯವಾಗಿ ಈದ್ ನಮಾಝ್ ಮಾಡಲು ಅವಕಾಶ ಸಿಗುವುದಿಲ್ಲ. ಈ ಬಾರಿ ಕೊರೋನದಿಂದಾಗಿ ಜಮಾಅತ್ ನೊಂದಿಗೆ ಈದ್ ನಮಾಝ್ ಮಾಡುವ ಅವಕಾಶ ಅವರಿಗೂ ಲಭಿಸಿತು.
2)ಲಾಕ್ ಡೌನ್ ನ ನಡುವೆ ರಮಝಾನ್ ನ ಪುಣ್ಯ ಮಾಸದಲ್ಲಿ ದೇಶಭಾಂಧವರಿಗಾಗಿ ಮಾಡಿದ ನಾನಾ ತರಹದ ಸೇವೆಯು ದೇಶವಾಸಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಉತ್ತಮ ಪ್ರಭಾವವನ್ನು ಬೀರಿದೆ.
ಮಾನವೀಯತೆ ಹಾಗೂ ಹಸಿದವರ ಹೊಟ್ಟೆ ತಣಿಸುವುದು ಪ್ರವಾದಿ (ಸ.ಅ) ರವರ ಜೀವನದ ಪ್ರಧಾನ ಅಂಗವಾಗಿದೆ. “ ನರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ವಚನವೇ ಮುಸ್ಲಿಮರಿಗೆ ಪ್ರೇರಣೆಯಾಗಿತ್ತು. ನೂರು ರೂಪಾಯಿಯನ್ನು ಸಂಪಾದಿಸಿ ಅಲ್ಲಾಹನ ದಾರಿಯಲ್ಲಿ ನೂರಹತ್ತು ರೂಪಾಯನ್ನು ಖರ್ಚು ಮಾಡುವ ಉತ್ಸಾಹವು ಈ ಸಮುದಾಯಕ್ಕಿದೆ ಎಂಬುವುದನ್ನು ಸಾಬೀತುಪಡಿಸಿದೆ. ವಿಶೇಷವಾಗಿ ಈ ಬಾರಿ ಪ್ರತೀ ಮನೆಯಲ್ಲೂ ಅತೀ ಹೆಚ್ಚು ಕುರ್ ಆನ್ ನ ಪಾರಾಯಣ ಮಾಡಿ ಇದರೊಂದಿಗಿನ ಗಾಢ ಸಂಭಂಧವನ್ನು ತೋರಿಸಿದ್ದಾರೆ. ಚಿಕ್ಕ ಚಿಕ್ಕ ಪ್ರದೇಶಗಳಲ್ಲಿ ಕೆಲವೊಂದು ಯುವಕರು ಸೇರಿ ಲಕ್ಷಾಂತರ ರೂಪಾಯಿಗಳ ಕಿಟ್ ಗಳನ್ನೂ ಊಟದ ಪೊಟ್ಟಣಗಳನ್ನೂ ವಿತರಿಸಿದ್ದಾರೆ. ಹೆದ್ದಾರಿಗಳಲ್ಲಿ ಟೋಪಿದಾರಿಗಳಾಗಿ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಿ ಅದೆಷ್ಟೋ ಬಡ ದೇಶವಾಸಿಗಳ ಜೀವರಕ್ಷಣೆ ಮಾಡಿದ್ದಾರೆ. ಹಲವು ಮುಸ್ಲಿಮೇತರರು ವೈರಸ್ ನಿಂದ ಸಾವಿಗೀಡಾಗಿ ಸ್ವಂತ ಪರಿವಾರದವರೇ ಅಂತಿಮ ಸಂಸ್ಕಾರಕ್ಕೆ ಮುಂದೆ ಬಾರದಿದ್ದಾಗ ಹೆಗಲಿಗೆ ಹೆಗಲು ಕೊಟ್ಟು ಎಲ್ಲಾ ಅಂತಿಮ ವಿಧಾನಗಳನ್ನು ಸುಸೂತ್ರವಾಗಿ ನಡೆಸಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ನಿಜವಾಗಿಯೂ ಕರುಣೆಯಿಂದ ತುಂಬಿದಂತಹ ಈ ಹೃದಯಗಳನ್ನು ಮೀರಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನೂ ಈ ಸೇವೆಯು ದೇಶಕ್ಕೆ ಸಾರಿ ಸಾರಿ ಹೇಳಿದೆ. ಇದರೊಂದಿಗೆ ನಮ್ಮ ಯುವಕರಲ್ಲಿ ಸೇವೆಯನ್ನು ಮಾಡುವಂತಹ ಚೈತನ್ಯವು ಇಮ್ಮಡಿಗೊಂಡಿತು. ಯಾವುದೇ ತರಬೇತಿ ಇಲ್ಲದೇ ಕೆಲವೇ ಕೆಲವೇ ಯುವಕರು ಅದೆಷ್ಟೋ ಜನರ ರುಚಿಕರವಾದ ಆಹಾರವನ್ನು ತಯಾರು ಮಾಡುವ ವಿಧಾನವನ್ನು ಕಲಿತರು. ಇದಕ್ಕಾಗಿ ಅವರು ಯಾವುದೇ ತರಹದ ಮ್ಯಾನೇಜ್ ಮೆಂಟ್ ಕೋರ್ಸ್ ಗಳನ್ನು ಮಾಡಿರಲಿಲ್ಲ. ಬರೇ ಅಲ್ಲಾಹನ ವಿಶೇಷವಾದ ಕರುಣೆ ಇವರ ಕೈ ಹಿಡಿದಿತ್ತು.
3) ಈ ಸಂಧರ್ಭದಲ್ಲಿ ಮುಸ್ಲಿಮರಲ್ಲಿ ಅತೀ ಹೆಚ್ಚು ಸಾಮಾಜಿಕ ಕಾಳಜಿ ಕಂಡು ಬಂದಿರುವುದು ಬಹು ಮುಖ್ಯ ವಿಚಾರ. ಅಲ್ಲಲ್ಲಿ ಕೆಲವೊಂದು ಚಿಕ್ಕ ಪುಟ್ಟ ಸಂಭವಗಳು ಸಂಭವಿಸಿರಲೂಬಹುದು. ಅದನ್ನು ಗಣನೆಗೆ ತಗೆದುಕೊಳ್ಳಲು ಸಾಧ್ಯವಿಲ್ಲ. ಚಿಕ್ಕ ಚಿಕ್ಕ ಅಂಗಡಿಗಳನ್ನು ಇಟ್ಟುಕೊಂಡವರೂ ತನ್ನ ಆದಾಯದ ಗಣನೀಯ ಪ್ರಮಾಣವನ್ನು ಬಡವರಿಗೆ ಮೀಸಲಿರಿಸಿದ್ದು ನೋಡಿದರೆ ಆಶ್ಚರ್ಯವಾಗುತ್ತದೆ. ಇವರು ಬಡವರ ಪಾಲಿನ ಆಶಾಕಿರಣವಾಗಿ ತನ್ನನ್ನು ಮುಡಿಪಾಗಿರಿಸಿದ್ದರು.
ಆದ್ದರಿಂದ ಸಮುದಾಯ ಭಾಂಧವರೇ, ರಮಝಾನ್ ತಿಂಗಳಲ್ಲಿ ಏನೂ ಮಾಡಲಿಕ್ಕಾಗಲಿಲ್ಲ ಎಂಬ ಕೊರಗಿನಿಂದ ಹೊರಬನ್ನಿ. ಈ ರಮಝಾನ್ ನಾನಾ ತರಹದ ಖೈರ್ (ಒಳಿತು) ಗಳುಳ್ಳ ಪವಿತ್ರ ಮಾಸವಾಗಿತ್ತು. ಈ ಬಾರಿಯ ಈದುಲ್ ಫಿತ್ರ್ (ರಮಝಾನ್ ಹಬ್ಬ) ವೂ ತುಂಬಾ ಬರ್ಕತ್ ಗಳಿಂದ ಕೂಡಿದ ಹಬ್ಬವಾಗಿತ್ತು. ಅದಾಗಲೇ ಇದು ಖೈರ್ (ಒಳಿತು) ಗಳ ಪ್ರಾರಂಭ ಮಾತ್ರ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚು ಅಲ್ಲಾಹನ ಕರುಣೆಗಳನ್ನು ನಾವು ನೋಡಲಿದ್ದೇವೆ. ( ಇನ್ ಶಾ ಅಲ್ಲಾಹ್). ಇಂತಹ ಸನ್ನಿವೇಶಗಳಲ್ಲೇ ಸಮುದಾಯಗಳ ತರಬೇತಿಯಾಗುತ್ತದೆ. ಕಷ್ಟ ಕಾರ್ಪಣ್ಯಗಳನ್ನು ಎಷ್ಟರವರೇಗೆ ಸಹಿಸುವುದಿಲ್ಲವೋ ಅಷ್ಟರವರೇಗೆ ತರಬೇತುಗೊಳ್ಳುವುದು ಅಸಾಧ್ಯ. ಈ ಮೂಲಕ ಅಲ್ಲಾಹನು ಮುಂದಿನ ದಿನಗಳ ಖೈರ್ ಗಾಗಿ ಅತಿ ಶೀಘ್ರವಾಗಿ ತರಬೇತುಗೊಳಿಸುತ್ತಿದ್ದಾನೆ. ಅಷ್ಟೇ ವೇಗವಾಗಿ ಕೆಡುಕುಗಳು ಈ ನೆಲದಿಂದ ಮಾಯವಾಗಲಿವೆ. ಇನ್ ಶಾ ಅಲ್ಲಾಹ್ .
ಈ ಸುಸಂಧರ್ಭದಲ್ಲಿ ಈದ್ ಮುಬಾರಕನ್ನು ಸ್ವೀಕರಿಸಿರಿ. ಅಲ್ಲಾಹನಲ್ಲಿ ಒಳಿತು ಹಾಗೂ ವಿಜಯಗಳಿಗಾಗಿ ಪ್ರಾರ್ಥಿಸಿರಿ. “ ತಕಬ್ಬಲಲ್ಲಾಹು ಮಿನ್ನಾ ವ ಮಿನ್ ಕ” (ಅಲ್ಲಾಹು ನಮ್ಮ ಹಾಗೂ ನಿಮ್ಮ ಸತ್ಕರ್ಮಗಳನ್ನು ಸ್ವೀಕರಿಸಲಿ). ಆಮೀನ್.
ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ, ಕಾರ್ಕಳ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.