ಮಂಡಳಿಯಿಂದ MSS (ಮಾರ್ದನಿ ಸಮಾಜ ಸೇವಾ ಪಕ್ಷ)ಗೆ 27 ಅಂಶಗಳ ಧ್ಯೇಯೋದ್ದೇಶಗಳ ವಿವರ ಬಿಡುಗಡೆ..
(www.vknews.in) : ಪತ್ರಕರ್ತ ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಬೇಲೂರು ಅವರ ಅಧ್ಯಕ್ಷತೆಯ MSS ಪಕ್ಷದ ಪ್ರಣಾಳಿಕೆ ಕರಡು ಪ್ರತಿ ರಚನಾ ಉಸ್ತುವಾರಿ ಮಂಡಳಿ ದಿ. 19-06-2022ರಂದು ಚಾಲನೆಗೊಂಡಿದ್ದು, ಇದರಲ್ಲಿ ದಕ್ಷಿಣ ಭಾರತದ 6 ರಾಜ್ಯಗಳಿಂದ ಅಂದರೆ, ಕರ್ನಾಟಕದ 9 ಮಂದಿ, ಕೇರಳದ ಮೂವರು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡುಗಳಿಂದ ತಲಾ ಒಬ್ಬರು- ಹೀಗೆ ಒಟ್ಟು 16 ಮಂದಿ ಸೆಸ್ಮಾ & ಎಮ್ಮೆಸ್ಸೆಸ್ ನೇತಾರರು ಸ್ಥಾನ ಪಡೆದಿದ್ದಾರೆ. ಖ್ಯಾತ ಬರಹಗಾರ ಬೆಂಗಳೂರಿನ ಹೆಚ್’ಕೆ ವಿವೇಕಾನಂದ ಹಾಗೂ ಅಂಕಣಕಾರ ಧಾರವಾಡ ಮೂಲದ ಡಾ. ರಾಜಶೇಖರ ಮಠಪತಿ ಅವರು ಮಂಡಳಿಯ ಉಪಾಧ್ಯಕ್ಷರಾಗಿರುವರು. ಸೆಸ್ಮಾ ರಾಷ್ಟ್ರೀಯ ಅಧ್ಯಕ್ಷರೂ ಆದ ಎಮ್ಮೆಸ್ಸೆಸ್ ರಾಜ್ಯಾಧ್ಯಕ್ಷ ಹಾಜಿ ಅಬ್ದುಲ್ ರಹಮಾನ್ ಸುನ್ನೀ ಅಲೀಂ ಶಿರಾ, ತುಮಕೂರು, ಎಮ್ಮೆಸ್ಸೆಸ್ ದಕ್ಷಿಣ ಭಾರತ ಘಟಕದ ಕಾರ್ಯಾಧ್ಯಕ್ಷ ಬೆಂಗಳೂರಿನ ಈ. ಬಸವರಾಜು ಹಾಗೂ ಸೆಸ್ಮಾ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಇಂಜಿನಿಯರ್ ಇಮಾಂ ಖಾನ್ ಶಿರಾ, ಮುಂಬೈ ಅವರು ಮಂಡಳಿಯ ನಿರ್ದೇಶಕರು. ಉಳಿದಂತೆ, ತಲಾ 5 ಮಂದಿ ಸಲಹೆಗಾರರು ಹಾಗೂ ಅಷ್ಟೇ ಸಂಖ್ಯೆಯ ಸದಸ್ಯರುಗಳಿದ್ದಾರೆ. 13-06-2022ರಂದು ಹಾಸನದಲ್ಲಿ ಜರುಗಿದ ಸೆಸ್ಮಾ-ಎಮ್ಮೆಸ್ಸೆಸ್ ಮಹಾಸಭೆಯಲ್ಲಿ ರಾಜ್ಯ-ರಾಷ್ಟ್ರೀಯ ನೇತಾರರ ಸಮ್ಮುಖದಲ್ಲಿ ಮಾರ್ದನಿ ಸಮಾಜ ಸೇವಾ ಪಕ್ಷ ಅಸ್ತಿತ್ವಗೊಂಡಿದ್ದವು. ದಿ. 24-02-2014ರಂದು ರೂಪುಗೊಂಡಿದ್ದ ಮಾರ್ದನಿ ಸಾಮಾಜಿಕ & ಸಾಹಿತ್ಯ-ವೇದಿಕೆಯನ್ನು ಸೆಸ್ಮಾದ ರಾಜಕೀಯ ಮುಖವಾಣಿಯಾಗಿ ಅಂದು ಪಕ್ಷದ ರೂಪದಲ್ಲಿ ಮಾರ್ಪಾಡುಗೊಳಿಸಲಾಗಿತ್ತು.
ಪ್ರಥಮ ಹಂತದಲ್ಲಿ ಸಿದ್ದಪಡಿಸಿರುವ ಮಾರ್ದನಿ ಸಮಾಜ ಸೇವಾ ಪಕ್ಷದ 27 ಅಂಶಗಳ ಧ್ಯೇಯೋದ್ದೇಶಗಳ ವಿವರ ಇಂತಿವೆ; ಸಮಾಜಸೇವೆ: 1. ಸರ್ವಧರ್ಮ ಸಮಭಾವ-ಜಾತ್ಯತೀತತೆ, ಸಮಾಜವಾದ, ಸಮಾನತೆ, ಪರೋಪಕಾರ-ಸಮಾಜ ಸೇವೆ, ಮಾನವೀಯತೆ, ಮಾನವ ಪ್ರೇಮ, ವೈವಿಧ್ಯತೆಯಲ್ಲಿ ಏಕತೆಗಳಂಥ ಉದಾತ್ತ ತತ್ವಗಳ ಅನುಸಾರ, MSS (ಮಾರ್ದನಿ ಸಮಾಜ ಸೇವಾ ಪಕ್ಷ) ಮುನ್ನಡೆಯುವುದು ಹಾಗೂ ಆ ರೀತಿಯಲ್ಲಿ ನಡೆದುಕೊಳ್ಳುವಂತೆ ಅದು ಜನರಿಗೆ ಹಾಗೂ ಸರ್ಕಾರಗಳಿಗೆ ಉತ್ತೇಜನ-ಪ್ರೇರಣೆ ನೀಡುವುದು. 2. MSS ಪಕ್ಷದ ತಾರಕ ಮಂತ್ರ (Oar verse): “ಸಮಾಜ ಸೇವೆ-ಜನರ ಸಮಗ್ರ ಶ್ರೇಯೋಭಿವೃದ್ದಿ ಹಾಗೂ ಮಾನವೀಯತೆಗಾಗಿ ರಾಜಕೀಯದತ್ತ MSSನ ಪರಿಶುದ್ಧ-ಆದರ್ಶ ನಡೆ” ಎಂದಾಗಿದೆ. 3. ಪ್ರತಿಯೊಬ್ಬ ನಾಗರಿಕನೂ ಸ್ವಯಂಪ್ರೇರಿತವಾಗಿ ಪರೋಪಕಾರ-ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲು ಮಾರ್ದನಿ ಸಮಾಜ ಸೇವಾ ಪಕ್ಷ ಅಗತ್ಯ ಜಾಗೃತಿ ಮೂಡಿಸುವುದು. 4. ಸಮಾಜದಲ್ಲಿ ಬಡವ-ಬಲ್ಲಿದರ ನಡುವಣ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರ & ಸ್ಥಳೀಯಾಡಳಿತ ಸಂಸ್ಥೆಗಳು ಪೂರಕ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಮಾರ್ದನಿ ಸಮಾಜ ಸೇವಾ ಪಕ್ಷ ಉತ್ತೇಜಿಸುವುದು. 5. ಪ್ರತಿಯೊಬ್ಬ ಶ್ರೀಮಂತರೂ ತಂತಮ್ಮ ಅಪಾರ ಹಣ-ಸಂಪತ್ತುಗಳಲ್ಲಿ ಕನಿಷ್ಠ 2 ಶೇಕಡಾದಷ್ಟನ್ನಾದರೂ ಬಡ-ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ವಿನಿಯೋಗಿಸುವಂಥ ಕಾನೂನು ಜಾರಿಗೊಳಿಸುವಂತೆ MSS ಮಾಡುವುದು.
ಸೆಸ್ಮಾದ ಕಾರ್ಯಸೂಚಿ ಅನುಸಾರ, ವರದಕ್ಷಿಣೆ ಸಹಿತವಾದ ಅದ್ದೂರಿ ವಿವಾಹಗಳನ್ನು ತಡೆಗಟ್ಟಲು & ವರದಕ್ಷಿಣೆ ರಹಿತ ಸರಳ ವಿವಾಹಕ್ಕೆ ಉತ್ತೇಜನ ನೀಡಲು ಕೆಳಕಂಡಂತೆ ಪೂರಕ ಯೋಜನೆ-ಶಾಸನಗಳ ಜಾರಿ: 6. ಸೆಸ್ಮಾ (ವರದಕ್ಷಿಣೆ ವಿರೋಧಿ & ಸರಳ ವಿವಾಹ ಉತ್ತೇಜನ ಸಂಸ್ಥೆ) ದ ಎಲ್ಲಾ ಕಾರ್ಯಸೂಚಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಹಾಗೂ ಆಡಳಿತಶಾಹಿಗಳ ಮೂಲಕ MSS ಪ್ರಯತ್ನಿಸುವುದು. 7. ದೇಶದಲ್ಲಿ ಜಾರಿಯಲ್ಲಿರುವ ವರದಕ್ಷಿಣೆ ಸಂಬಂಧಿತ ಕಾನೂನು-ಶಾಸನಗಳನ್ನು ಪರಿಣಾಮಕಾರಿಯಾಗಿ MSS ಅನುಷ್ಠಾನಗೊಳಿಸುವುದು. 8. ವರದಕ್ಷಿಣೆ ಪಡೆದು ವಿವಾಹವಾಗುವ ಯುವಕರಿಗೆ ಯಾವುದೇ ಸರ್ಕಾರಿ ಹುದ್ದೆಗಳನ್ನು ಹೊಂದಲಾಗದಂತೆ ಹಾಗೂ ಅಂಥವರ ಕುಟುಂಬಗಳು ಸರ್ಕಾರದ ಪ್ರಮುಖ ಸೌಲಭ್ಯಗಳನ್ನು ಪಡೆಯಲಾಗದಂತೆ ಸರ್ಕಾರವು ಶಾಸನ ಜಾರಿಗೊಳಿಸಲು ಮಾರ್ದನಿ ಸಮಾಜ ಸೇವಾ ಪಕ್ಷ ಒತ್ತಾಯಿಸುವುದು. 9. ಮಹಿಳೆಯರಿಗೆ ವರದಕ್ಷಿಣೆ ಕಿರುಕುಳ ನೀಡುವವರಿಗೆ ಹಾಗೂ ವರದಕ್ಷಿಣೆ ಸಂಬಂಧಿತ ಹತ್ಯೆ-ಆತ್ಮಹತ್ಯೆಗೆ ಕಾರಣರಾಗುವವರಿಗೆ ಕನಿಷ್ಠ 10 ವರ್ಷಗಳ ಕಠಿಣ ಸಜೆ ವಿಧಿಸುವುದು ಹಾಗೂ ಅವರ ಆಸ್ತಿಯನ್ನು ಸರ್ಕಾರ ಹರಾಜು ಹಾಕಿ, ಸಂದಾಯವಾಗುವ ಹಣವನ್ನು ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನೀಡುವಂತೆ MSS ಕ್ರಿಯಾಶೀಲಗೊಳ್ಳುವುದು. 10. ನಾಡಿನ ಎಲ್ಲಾ ಕಲ್ಯಾಣ ಮಂಟಪಗಳ ಮಾಲೀಕರು ತಮ್ಮ ಮದುವೆ ಛತ್ರಗಳನ್ನು ವರದಕ್ಷಿಣೆ ರಹಿತ ಸರಳ ವಿವಾಹವಾಗುವವರಿಗೆ ಅತ್ಯಂತ ಕಡಿಮೆ ದರದಲ್ಲಿ ಒದಗಿಸಿಕೊಡುವುದು ಹಾಗೂ ಮಧ್ಯಮ ವರ್ಗದವರ ವಿವಾಹಕ್ಕೆ ವೈಜ್ಞಾನಿಕ ದರ ನಿಗದಿಪಡಿಸುವಂತೆ ಎಮ್ಮೆಸ್ಸೆಸ್ ಸರ್ಕಾರವನ್ನು ಆಗ್ರಹಿಸುವುದು. ಅನಗತ್ಯವಾಗಿ ದುಬಾರಿ ದರ ವಿಧಿಸುವುದಕ್ಕೆ ಕಡಿವಾಣ ಹಾಕುವುದು. 11. ಸಮಾವೇಶಗಳ, ಮನಪರಿವರ್ತನಾ ಶಿಬಿರಗಳ ಮೂಲಕ ವರದಕ್ಷಿಣೆ ವಿರೋಧಿ ಜಾಗೃತಿ ಮೂಡಿಸುವಂತಾಗಲು ಸೆಸ್ಮಾದಂಥ ಸರ್ಕಾರೇತರ ಸಾಮಾಜಿಕ ಸಂಘ-ಸಂಸ್ಥೆಗಳಿಗೆ ಸರ್ಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಅಗತ್ಯ ಪ್ರಾಯೋಜಕತ್ವ ವಹಿಸುವಂತೆ MSS ಕಾರ್ಯೋನ್ಮುಖಗೊಳ್ಳುವುದು. 12. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಬಡಬಗ್ಗರ ಕಲ್ಯಾಣಕ್ಕಾಗಿ ಕನಿಷ್ಠ ಪ್ರತೀ ಆರು ತಿಂಗಳಿಗೊಮ್ಮೆ ವರದಕ್ಷಿಣೆ ರಹಿತ ಸರಳ-ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಸರ್ಕಾರ ಕಾನೂನು ರಚಿಸುವಂತೆ MSS ಪ್ರಯತ್ನಿಸುವುದು. 13. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 3 ತಿಂಗಳಿಗೊಮ್ಮೆ ಸರ್ವಧರ್ಮೀಯ-ಜಾತಿಯವರಿಗಾಗಿ ಉಚಿತ ವಧು-ವರ ಅನ್ವೇಷಣಾ ಕೂಟ ಏರ್ಪಡಿಸುವಂತೆ ಸರ್ಕಾರದ ವತಿಯಿಂದ ಸುತ್ತೋಲೆ ಹೊರಡಿಸುವಂತೆ ಎಮ್ಮೆಸ್ಸೆಸ್ ಕ್ರಿಯಾಶೀಲಗೊಳ್ಳುವುದು . 14. ಸರ್ಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಮಾತ್ರವಲ್ಲದೆ, ಶಾಸಕರು ವರ್ಷದಲ್ಲಿ ಕನಿಷ್ಠ 2 ಸಲ ವರದಕ್ಷಿಣೆ ವಿರೋಧಿ ಜಾಗೃತಿ ಸಮಾವೇಶಗಳನ್ನು ಏರ್ಪಡಿಸುವುದು. ತನ್ಮೂಲಕ ವಧೂವರರಿಂದ ಅಥವಾ ಅವರ ಪೋಷಕರಿಂದ ವರದಕ್ಷಿಣೆ ರಹಿತ ವಿವಾಹವಾಗುವ ನಿಟ್ಟಿನಲ್ಲಿ ದೇವನ ಹೆಸರಿನಲ್ಲಿ ಪ್ರತಿಜ್ಞೆ ಪಡೆದುಕೊಳ್ಳುವುದು. ಆವರು ನುಡಿದಂತೆ ನಡೆಯುವಂತಾಗಲು ಆಕರ್ಷಕ ಪ್ರೋತ್ಸಾಹದಾಯಕ ಯೋಜನೆಗಳನ್ನು ಸರ್ಕಾರ ಪ್ರಕಟಿಸುವಂತಾಗಲು ಮಾರ್ದನಿ ಸಮಾಜ ಸೇವಾ ಪಕ್ಷ ಪುರಕ ಹೆಜ್ಜೆಯಿಡುವುದು. 15. ಗ್ರಾಮ, ಹೋಬಳಿ, ಪಟ್ಠಣ-ನಗರ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ವರದಕ್ಷಿಣೆ ವಿರೋಧಿ ಜಾಗೃತಿ ಸಮಿತಿ, ಕಾವಲು ಸಮಿತಿ, ವರದಕ್ಷಿಣೆ ತಡೆ ಸಮಿತಿ ಹಾಗೂ ಆಂದೋಲನ ಸಮಿತಿಗಳನ್ನು ಒಂದೋ ಖುದ್ದು ಸರ್ಕಾರವೇ ರಚಿಸುವುದು ಅಥವಾ ಆ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳುವ ಸೆಸ್ಮಾದಂಥ ಸಂಘ-ಸಂಸ್ದೆಗಳೊಂದಿಗೆ ಸರ್ಕಾರ ಸಹಭಾಗಿತ್ವ ವಹಿಸಿಕೊಳ್ಳುವಂತೆ ಎಮ್ಮೆಸ್ಸೆಸ್ ಕಟಿಬದ್ದಗೊಳ್ಳುವುದು.
ನೈತಿಕ & ಸ್ವಾಸ್ಥ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಒತ್ತು: 16. ಶಾಲಾ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣವನ್ನು ಒಂದು ವಿಷಯದ (Subject) ರೂಪದಲ್ಲಿ ಕಡ್ಡಾಯಗೊಳಿಸುವ ಮೂಲಕ ಬಾಲ್ಯದಿಂದಲೇ ಮಕ್ಕಳು ನೈತಿಕ ಪ್ರಜ್ಞೆ ಹೊಂದುವ ನಿಟ್ಟಿನಲ್ಲಿ ಅಗತ್ಯ ಭೂಮಿಕೆ ಹಾಕುವುದು. 17. ಮೆಟ್ರಿಕ್ ನಂತರ ಕಾಲೇಜುಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪ್ರೀತಿ-ಪ್ರೇಮವೆಂಬ ಆಕರ್ಷಕ ಲೇಬಲ್’ನಲ್ಲಿ ಅನೈತಿಕತೆಯತ್ತ ದಾಪುಗಾಲಿಡದಿರಲು ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಕಾಲೇಜುಗಳನ್ನು ತೆರೆಯುವ ಮೂಲಕ ಮಕ್ಕಳು ಕಲಿಕೆಯತ್ತಲೇ ಹೆಚ್ಚು ಶೃದ್ದೆ ವಹಿಸುವಂತೆ ಮಾಡುವುದು. 18. ಜನರು ಕೊಲೆ, ಸುಲಿಗೆ, ಅಪಹರಣ, ಅತ್ಯಾಚಾರ, ಕಳ್ಳತನ, ಮೋಸಗಳಂಥ ಕುಕೃತ್ಯಗಳನ್ನು ಮಾಡದಿರಲು ಸರ್ಕಾರದ ವತಿಯಿಂದ ಆಗಾಗ್ಗೆ ನೈತಿಕ ಜಾಗೃತಿ ಶಿಬಿರ ಏರ್ಪಡಿಸುವುದು. 19. ದಂಪತಿಗಳು ಅನೈತಿಕತೆ ಅಥವಾ ಇತರೆ ಕಾರಣಗಳಿಂದಾಗಿ ವಿರಸ-ವಿಚ್ಛೇದನ ಹೊಂದದಿರಲು ಸರ್ಕಾರದ ವತಿಯಿಂದ ಆಗಾಗ್ಗೆ ಅಗತ್ಯ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ಏರ್ಪಡಿಸುವ ಮುಖೇನ ದಾಂಪತ್ಯ ಜೀವನವು ಸುಗಮ ಹಾದಿಯಲ್ಲಿ ಮುನ್ನಡೆಯುವಂತೆ ಮಾಡುವುದು. 20. ನಾಡಿನಲ್ಲಿ ಸ್ವಾಸ್ಥ್ಯ-ಆರೋಗ್ಯಕರ ಸಾಮಾಜಿಕ-ಕೌಟುಂಬಿಕ ವಾತಾವರಣ ನಿರ್ಮಿಸಲು ಹಾಗೂ ಜನರು ಏಡ್ಸ್’ನಂಥ ಮಾರಕ ವ್ಯಾಧಿಗೆ ಈಡಾಗದಿರಲು ವಿಭಿನ್ನ ಲಿಂಗಿಗಳ ನಡುವಣ ಅನೈತಿಕ ಚಟುವಟಿಕೆಗಳನ್ನು ಹಾಗೂ ಸಲಿಂಗಿಗಳ ನಡುವಣ ಅನೈಸರ್ಗಿಕ, ಅಮಾನವೀಯ ಲೈಂಗಿಕ ಕುಕೃತ್ಯಗಳನ್ನು ಹೋಗಲಾಡಿಸಲು ಕಠಿಣ ಕಟ್ಟಳೆಗಳನ್ನು ಜಾರಿಗೊಳಿಸುವುದು. 21. ಸಲಿಂಗಿ ವಿವಾಹವಾಗಲು ಮುಂದಾಗುವಂಥ ಹುಚ್ಚು ಧೋರಣೆಯುಳ್ಳ ಪುರುಷ ಅಥವಾ ಮಹಿಳೆಯರಿಗೆ ಅಗತ್ಯ ಕೌನ್ಸೆಲಿಂಗ್ ಏರ್ಪಡಿಸುವ ಮೂಲಕ ಅವರು ಅದರಿಂದ ಹಿಂದೆ ಸರಿಯುವಂತೆ ಮಾಡುವುದು. ಅಂಥವರು ಪ್ರಕೃತಿದತ್ತ ರೂಪದಲ್ಲಿ ವಿರುದ್ದ ಲಿಂಗಿಗಳೊಂದಿಗೆ ಅಂದರೆ ಹೆಣ್ಣು ಗಂಡಿನೊಂದಿಗೆ ಅಥವಾ ಗಂಡು ಹೆಣ್ಣಿನೊಂದಿಗೆ ವಿವಾಹದ ನಂಟು ಹೊಂದುವಂತೆ ಮಾಡಲು ಪೂರಕ ವ್ಯವಸ್ಥೆ ಕಲ್ಪಿಸುವುದು. 22. ಹೆಣ್ಣು ಹಾಗೂ ಗಂಡು ಪರಸ್ಪರ ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದಕ್ಕೆ ಅಡ್ಡಿಯಿಲ್ಲ ಎಂಬಂಥ ಸಮ್ಮತಿ ಸೆಕ್ಸ್ ಕಾನೂನನ್ನು ರದ್ದುಗೊಳಿಸುವುದು ಹಾಗೂ ವಿವಾಹೇತರ ಎಲ್ಲಾ ಅಕ್ರಮ ಸಂಬಂಧಗಳನ್ನು ಶಿಕ್ಷಾರ್ಹ ಅಪರಾಧವಾಗಿಸುವುದು.
ಬ್ಯಾಂಕಿಂಗ್ ಸೇವೆಯಲ್ಲಿ ಸುಧಾರಣೆ: 23. ದೇಶದಲ್ಲಿ ಬಡ್ಡಿಯಾಧಾರಿತ ಬ್ಯಾಂಕಿಂಗ್ ವ್ಯವಸ್ಥೆ ಕೊನೆಗಾಣಿಸುವುದು. 24. ಪ್ರತಿಯೊಂದಕ್ಕೂ ಬ್ಯಾಂಕ್ ದಂಡ ವಿಧಿಸುವ ಆತಂಕವನ್ನು ಕೊನೆಗಾಣಿಸುವುದು. ಉದಾಹರಣೆಗೆ; ಬ್ಯಾಂಕ್ ಖಾತೆದಾರರ ಖಾತೆಯಲ್ಲಿ Minimum Deposit (ಕನಿಷ್ಠ ಠೇವಣಿ) ಇಲ್ಲದಿದ್ದರೂ ಯಾವುದೇ ದಂಡ ವಿಧಿಸುವಂತಿಲ್ಲ. 25. ಎಟಿಎಂ, ಡಿಜಿಟಲ್ & ಆನ್ಲೈನ್ ವ್ಯವಹಾರ-ಸೇವೆಗಳನ್ನು ಸಂಪೂರ್ಣ ಉಚಿತಗೊಳಿಸುವುದು. 26. ಬಡ-ದೀನ ದಲಿತರ, ಅಶಕ್ತರ, ವೃದ್ದರ, ವಿಧವೆಯರ ಕುಟುಂಬಗಳಿಗೆ ತುರ್ತು, ಕ್ಲಿಷ್ಟಕರ, ಅನಿವಾರ್ಯ ಸಂದರ್ಭಗಳಲ್ಲಿ ಸಬ್ಸಿಡಿ ಸಹಿತ ಸಾಲ ಸೌಲಭ್ಯಗಳನ್ನು ಎಲ್ಲಾ ಬ್ಯಾಂಕ್’ಗಳು ಒದಗಿಸಿಕೊಡುವುದು. 27. ಬಡಬಗ್ಗರು ಸಾಲ ಮರುಪಾವತಿಸಲು ಸಾಧ್ಯವಾಗದೆ ನಿಧನ ಹೊಂದಿದರೆ, ಅಂಥವರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಹಾಗೂ ಅದನ್ನು ಸರ್ಕಾರವೇ ಬ್ಯಾಂಕ್’ಗೆ ಭರಿಸಿಕೊಡುವುದು.
MSS ಪಕ್ಷದ ಪ್ರಣಾಳಿಕೆಯ ಕರಡು ಪ್ರತಿ ರಚನಾ ಉಸ್ತುವಾರಿ ಮಂಡಳಿ ಅಧ್ಯಕ್ಷರು ಬೇಲೂರಿನ ಎಕೆ ಉಮರುಲ್ ಫಾರೂಖ್ ಬಿಕ್ಕೋಡು ಅವರು MSS ದಕ್ಷಿಣ ಭಾರತ ಘಟಕದ ಮಹಾಪ್ರಧಾನ ಕಾರ್ಯದರ್ಶಿ, ಸೆಸ್ಮಾದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ & ಮಾರ್ದನಿ ಸಾಮಾಜಿಕ ಧ್ವನಿ ಮಾಸಿಕದ ಪ್ರಧಾನ ಸಂಪಾದಕರೂ ಆಗಿದ್ದಾರೆ. ಇವರಿಂದ ಪ್ರಸ್ತಾಪಗೊಂಡ ಮೇಲ್ಕಂಡ 27 ಧ್ಯೇಯೋದ್ದೇಶಗಳುಳ್ಳ ಅಂಶಗಳು ಮಂಡಳಿಯ ಸರ್ವ ಸದಸ್ಯರುಗಳಿಂದ ಸರ್ವಾನುಮತದಿಂದ ದಿ. 20-06-2022ರಂದು ಆನ್’ಲೈನ್ ಮೂಲಕ ಅನುಮೋದನೆಗೊಂಡವು. ಪ್ರಸ್ತುತ ಮಂಡಳಿಯಲ್ಲಿ ಇಬ್ಬರು ಉಪಾಧ್ಯಕ್ಷರು, ಮೂವರು ನಿರ್ದೇಶಕರು ಹಾಗೂ ತಲಾ 5-5 ಮಂದಿ ಸಲಹೆಗಾರರು ಹಾಗೂ ಸದಸ್ಯರು- ಹೀಗೆ ಒಟ್ಟು 16 ಮಂದಿ ಇದ್ದಾರೆ. ಮಂಡಳಿಯಲ್ಲಿ ಪಕ್ಷದ & ಅದರ ಜಾಗತಿಕ ಮಟ್ಟದ ಸಾಮಾಜಿಕ ಸಂಸ್ಥೆಯಾದ ಸೆಸ್ಮಾದ ರಾಜ್ಯ & ರಾಷ್ಟ್ರೀಯ ನೇತಾರರಿಗೆ ಸ್ಥಾನ ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.