(www.vknews.in): ಮದುವೆ ವಿಷಯ ಬಂದಾಗ ಮೊದಲ ಪ್ರಶ್ನೆ ಕೇಳುವುದು – ಹುಡುಗ ಏನು ಮಾಡುತ್ತಿದ್ದಾನೆ? ಸ್ವಂತ ಮನೆ ಇದೆಯೇ? ಹಳ್ಳಿಗಳಲ್ಲಿ ಎಲ್ಲರಿಗು ಸ್ವಂತ ಮನೆ ಇರುತ್ತದೆ. ಬಾಡಿಗೆಗೆ ಬೆರಳೆಣಿಕೆಯಷ್ಟು ಜನರು ಮಾತ್ರ ಇರುತ್ತಾರೆ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಇಂದಿಗೂ ಸ್ವಂತ ಮನೆ ಕನಸಿನ ಮಾತಾಗಿದೆ. ಬೆಂಗಳೂರಿನ ೧೩೨ ಲಕ್ಷ ಜನಸಂಖ್ಯೆಯಲ್ಲಿ ಹೊರಗಿನಿಂದ ಬಂದವರೇ ಹೆಚ್ಚು. ಕೆಲವರು ಬರಿಗೈಯಲ್ಲಿ ಬಂದು ಕೋಟ್ಯಧಿಪತಿಗಳು ಆಗಿರುವುದು ಉಂಟು. ಬೆಂಗಳೂರು ಬಡವರ, ಮಧ್ಯಮ ವರ್ಗದವರ, ಶ್ರೀಮಂತರ ಮತ್ತು ಅತೀ ಶ್ರೀಮಂತರ ಮಿಶ್ರಣ ಸ್ವರ್ಗ ಇದ್ದಂತೆ. ಎಲ್ಲಾ ರೀತಿಯ ಕಷ್ಟಗಳು, ಸವಲತ್ತುಗಳು ಕಾಣ ಸಿಗುತ್ತವೆ. ಸ್ಲಮ್ ಗಳೂ ಇವೆ, ಗಗನದೆತ್ತರ ಬೆಳೆದು ನಿಂತಿರುವ ಐಷಾರಾಮಿ ಅಪಾರ್ಟ್ಮೆಂಟುಗಳೂ ಇವೆ. ಕುಡಿಯುವ ನೀರಿಗಾಗಿ ಪರದಾಡುವ ಜನರೂ ಇದ್ದಾರೆ. ಮನೆಯಲ್ಲಿಯೇ ಈಜುಕೊಳದ ಸೌಕರ್ಯ ಹೊಂದಿರುವವರೂ ಇದ್ದಾರೆ. ಒಂದು ಚದರದ ಮನೆಗಳೂ ಉಂಟು. ಒಂದು ಎಕರೆಯಲ್ಲಿ ನಿರ್ಮಾಣಗೊಂಡಿರುವ ಮನೆಗಳೂ ಇವೆ. ಸೈಕಲ್ಲುಗಳಲ್ಲಿ ಕೆಲಸಕ್ಕೆ ಹೋಗುವವರೂ ಇದ್ದಾರೆ. ಹೆಸರಾಂತ ಕಾರುಗಳಲ್ಲಿ ಹೋಗುವವರೂ ಇದ್ದಾರೆ. ಸಾಲ ತೀರಿಸುವ ಸಲುವಾಗಿ ಭಾನುವಾರವೂ ದುಡಿಯುವವರಿದ್ದಾರೆ. ಕೆಲವರು ಹಣ ಖರ್ಚು ಮಾಡಲು ಶನಿವಾರ ಮತ್ತು ಭಾನುವಾರವನ್ನು ಕಾಯುತ್ತಿರುತ್ತಾರೆ.
ಬೆಂಗಳೂರಿಗೆ ಅಥವಾ ಯಾವುದೇ ಪಟ್ಟಣಕ್ಕೆ ಹೆಚ್ಚಾಗಿ ಜನರು ಬರುವ ಉದ್ದೇಶವೇ ಹೊಟ್ಟೆಪಾಡಿಗಾಗಿ ಅಥವಾ ಅಲ್ಲಿ ಸಿಗುವ ಸೌಕರ್ಯಗಳಿಗಾಗಿ. ಅದು ಉದ್ಯೋಗ, ಆಸ್ಪತ್ರೆ ಅಥವಾ ಶಾಲೆಗಳಾಗಿರಬಹುದು. ಜೀವನ ಬಾಡಿಗೆ ಮನೆಯಿಂದ ಪ್ರಾರಂಭವಾಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಾಲೆಯ ಹುಡುಕಾಟ ಪ್ರಾರಂಭವಾಗುತ್ತದೆ. ಸ್ವಲ್ಪ ಸಂಪಾದನೆ ಹೆಚ್ಚಾದಂತೆ ಸ್ವಂತ ಮನೆ ಮಾಡುವ ಕನಸು ಚಿಗುರುತ್ತದೆ. ಪಟ್ಟಣಗಳ ಹೃದಯಭಾಗದಲ್ಲಿ ಸೈಟು ಖರೀದಿಸಿ ಕನಸಿನ ಮನೆಗಳನ್ನು ಕಟ್ಟುವುದು ಕಷ್ಟ. ಆದುದರಿಂದ ಸಿಟಿಯಿಂದ ಸ್ವಲ್ಪ ದೂರದಲ್ಲಿ ಮನೆ ಮಾಡುತ್ತಾರೆ. ಪಟ್ಟಣಗಳು ಬೆಳೆಯುತ್ತಾ ಹೋಗುತ್ತವೆ. ಕೆಲವರು ಅಪಾರ್ಟ್ಮೆಂಟುಗಳೇ ಸರಿ ಎನ್ನುತ್ತಾರೆ. ಪ್ರತಿ ದಿನ ಹೆಚ್ಚು ಪ್ರಯಾಣ ಮಾಡಲು ಆಗುವುದಿಲ್ಲ, ಕೆಲಸಗಳಿಗೆ ಮತ್ತು ಮಕ್ಕಳ ಶಾಲೆಗಳಿಗೆ ಹೋಗಲು ಕಷ್ಟಕರವಾಗುತ್ತದೆ ಎನ್ನುತ್ತಾರೆ.
ಕನಸಿನ ಮನೆ ಮಾಡುವ ಮುನ್ನ ಹತ್ತು ಸಲ ಯೋಚಿಸಿ ಮುಂದುವರೆಯಿರಿ. ಸಾಲ ಮಾಡಿ ಮನೆಗಳನ್ನು ಖರೀದಿಸಿ, ಸಾಲ ತೀರಿಸಲಾಗದೆ, ಮಾನಸಿಕ ಒತ್ತಡಕ್ಕೆ ಒಳಗಾಗಿ ಬೀದಿಪಾಲಾಗಿರುವವರನ್ನು ಕಂಡಿದ್ದೇವೆ. ವೃತ್ತಿಯನ್ನು ನಂಬಿಕೊಂಡು ಅತಿ ಹೆಚ್ಚು ಸಾಲ ಮಾಡಿಕೊಳ್ಳಬೇಡಿ. ತಗ್ಗು ಪ್ರದೇಶಗಳಲ್ಲಿ ಮನೆಗಳನ್ನು ಖರೀದಿಸಿ ಮಳೆರಾಯನ ಆರ್ಭಟಕ್ಕೆ ಸಿಲುಕಿ ಪರದಾಡಬೇಡಿ. ಕಳಪೆ ಕಾಮಗಾರಿ ಮಾಡಿರುವಂತಹ ಅಪಾರ್ಟ್ಮೆಂಟುಗಳನ್ನು ಖರೀದಿಸಿಕೊಳ್ಳಬೇಡಿ. ನಮ್ಮ ಕನಸಿನ ಮನೆ ಅತಿ ಸುಂದರವಾಗಿ ಕಾಣಬೇಕು ಎಂದು ವಿಪರೀತ ಹಣ ಸುರಿಯಬೇಡಿ. ಅವರಿಗಿಂತ ನಮ್ಮ ಮನೆ ಚೆನ್ನಾಗಿ ಕಾಣಬೇಕು ಅಂತ ಅಸೂಯೆ ಪಡಬೇಡಿ. ಸಿನೆಮಾ ಸೆಟ್ಟುಗಳಂತೆ ಕಟ್ಟಿರುವ ಮನೆಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇರಲ್ಲ. ಸಂಸಾರದಲ್ಲಿ ಶಾಂತಿ ಇಲ್ಲದೆ ನಾಲ್ಕು ಗೋಡೆಗಳ ಮಧ್ಯೆ ಬಿಕನಾಸಿ ಜೀವನ ನಡೆಸುತ್ತಿರುತ್ತಾರೆ. ನಿದ್ದೆ ಮಾತ್ರೆ ತಿಂದರೂ ಅವರಿಗೆ ನಿದ್ದೆ ಬರಲ್ಲ. ಮನೆ ಮುಂದೆ “ಸ್ವರ್ಗ” ಅಂತ ಬೋರ್ಡ್ ಹಾಕಿಕೊಂಡಿರುತ್ತಾರೆ ಅಷ್ಟೆ. ಒಳಗಡೆಯ ನರಕ ಆ ದೇವರೇ ಬಲ್ಲ. ತೋರಿಕೆಗೆ ಜಾರಿ ಹೋಗಬೇಡಿ.
ವಾಸ್ತು ಪ್ರಕಾರ ಕಟ್ಟಿದ್ದೇವೆ. ಹೋಮ ಮಾಡಿಸಿದ್ದೇವೆ. ಭೂತಪಿಚಾಚಿಗಳ ಕಾಟವಾಗಬಾರದು ಅಂತ ತಾಯತ ಕಟ್ಟಿಸಿದ್ದೇವೆ. ಆದರೂ ನಮ್ಮ ಮನೆಯಲ್ಲಿ ಶಾಂತಿ ಇಲ್ಲವಲ್ಲ ಏಕೆ ಎಂದು ಕೊರಗುವುದುಂಟು. ಏಕೆಂದರೆ ಸಂಬಂಧಗಳಲ್ಲಿ ಬಿರುಕು, ಸಾಲದ ಹೊರೆ, ಆರೋಗ್ಯದ ಸಮಸ್ಯೆ, ತೋರಿಕೆಯ ಬದುಕು. ಗೃಹ ಪ್ರವೇಶದ ಹಿಂದಿರುವ ಆಂತರಿಕ ಮರ್ಮವೇ ಬೇರೆಯಾಗಿರುತ್ತದೆ. ನೆಂಟರು ನಮ್ಮ ಮನೆ ನೋಡಬೇಕು, ಹೊಗಳಬೇಕು, ಹೊಟ್ಟೆ ಉರಿಸಿಕೊಳ್ಳಬೇಕು, ಅವರಲ್ಲಿ ಕೀಳರಿಮೆ ಉಂಟಾಗಬೇಕು, ಕೊರಗಬೇಕು ಅಂತ ಸುಪ್ತ ಆಸೆ ಇರುತ್ತದೆ. ಕೆಲವರ ಮನಸ್ಸುಗಳು ಮಾತ್ರ ನಿರ್ಮಲವಾಗಿರುತ್ತದೆ.
ಇಡೀ ನಮ್ಮ ಜೀವನದ ಶೇ ೯೦ ಭಾಗ ಬೇರೆಯವರನ್ನು ತೃಪ್ತಿ ಪಡಿಸುವುದರಲ್ಲಿ ಹೊರಟುಹೋಗುತ್ತದೆ. ನಮಗಾಗಿ ನಾವು ಬದುಕುವುದನ್ನೇ ಬಿಟ್ಟುಬಿಟ್ಟಿದ್ದೇವೆ. ಸ್ಟೇಟಸ್ ಕಾಪಾಡಿಕೊಳ್ಳಲು ಪರದಾಡುತ್ತೇವೆ. ಇಷ್ಟೆಲ್ಲಾ ಮಾನಸಿಕ ಗುಲಾಮಗಿರಿಯನ್ನು ಅಂಟಿಸಿಕೊಂಡು ನಿಜವಾದ ಕನಸಿನ ಮನೆ ಕಟ್ಟಲು ಸಾಧ್ಯವೇ? ನಾವೆಲ್ಲ ಮನುಷ್ಯರು. ತಪ್ಪು ಮಾಡುವುದು ಸಹಜ. ಎಲ್ಲರ ಜೀವನದಲ್ಲಿ ಅಂಕುಡೊಂಕುಗಳಿರುತ್ತವೆ. ಸಿಹಿಕಹಿ ಅನುಭವಗಳ ತಿರುಳೇ ಬದುಕು. ಆತ್ಮಾವಲೋಕನ ಮಾಡಿಕೊಂಡು ನಮಗಾಗಿ ಬದುಕಲು ಕಲಿತುಕೊಳ್ಳೋಣ. ಪ್ರಯತ್ನಿಸೋಣ. ಹುಟ್ಟು ನಮ್ಮ ಕೈಯಲ್ಲಿಲ್ಲ. ಸಾವು ಸಹ ನಮ್ಮ ಕೈಯಲ್ಲಿಲ್ಲ. ಹುಟ್ಟು-ಸಾವು ನಡುವಿನ ಬದುಕು ನಮ್ಮ ಕೈಯಲ್ಲಿದೆ. ಮನಸ್ಸುಗಳಲ್ಲಿ ಶಾಂತಿ ಇದ್ದರೆ ಮನೆಗಳಲ್ಲೂ ಶಾಂತಿ ಇರುತ್ತದೆ. ನಿಮ್ಮ ಕನಸಿನ ಮನೆಗಳನ್ನು ಕೊಚ್ಚಿ ಹೋಗಲು ಬಿಡಬೇಡಿ.
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.