(www.vknews.in) : ಜನರ ಬಳಿ ಆಸ್ಪತ್ರೆಯ ಬಿಲ್ಲುಗಳನ್ನು ಕಟ್ಟಲು ದುಡ್ಡಿಲ್ಲ. ಔಷಧಿಗಳನ್ನು ಖರೀದಿಸಲು ಸಹ ಆಗುತ್ತಿಲ್ಲ. ಶಾಲೆಯ ಫೀಸ್ ಕಟ್ಟಲು ಜನರು ಸಾಲ ಮಾಡುತ್ತಿದ್ದಾರೆ. ಸಾಲ ತೀರಿಸಲಾಗದೆ ಪರದಾಡುತ್ತಿದ್ದಾರೆ. ಮದುವೆ ಭಾಗ್ಯ ಕೂಡಿ ಬಂದರೂ ಮದುವೆ ಖರ್ಚಿನ ಬಗ್ಗೆ ಯೋಚಿಸಿ ಮದುವೆಗಳನ್ನು ಮುಂದೂಡಲಾಗುತ್ತಿದೆ. ಎಷ್ಟೋ ಹೆಣ್ಣು ಮಕ್ಕಳು ಅಡ್ಡದಾರಿಗಳನ್ನು ತುಳಿಯುತ್ತಿದ್ದಾರೆ. ವಿದ್ಯಾವಂತರಿಗೆ ಹುದ್ದೆಗಳು ಖಾಲಿ ಇವೆ ಬನ್ನಿ ಎಂದು ಕರೆಯುವ ಕಾಲ ಎಂದೋ ಹೊರಟುಹೋಯಿತು. ಮಾಲೀಕರು ಕಾರ್ಮಿಕರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕರೆಂಟು ಬಿಲ್ಲು, ನೀರು ಬಿಲ್ಲು ಕಟ್ಟಲು ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ.
ಏನಾದರೂ ವ್ಯಾಪಾರ ಕುದುರಿಸೋಣವೆಂದರೆ ಜನರ ಬಳಿ ಬಂಡವಾಳ ಇಲ್ಲ. ಮಧ್ಯಮವರ್ಗದ ವ್ಯಾಪಾರವೆಲ್ಲ, ಮಾಲುಗಳ ಹಾವಳಿ ಮತ್ತು ಆನ್ಲೈನ್ ವ್ಯಾಪಾರ ಬಂದಾಗಿನಿಂದ ಕುಂಠಿತಗೊಳ್ಳುತ್ತಿದೆ. ರೈತರ ಬಳಿ ಜಮೀನಿದ್ದರೂ ಬೆಳೆ ಇಲ್ಲ. ಹತ್ತಾರು ಸಮಸ್ಯೆಗಳು. ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ. ಶ್ರೀಮಂತರೇ ಪೆಟ್ರೋಲ್ ಬೆಲೆ ಬಗ್ಗೆ ಯೋಚಿಸಿ ಕಾರುಗಳನ್ನು ಶೋಕಿಗಾಗಿ ಓಡಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇಂತಹ ಕಾಲದಲ್ಲಿ ಬಡವರು ವಾಹನ ಮಾಲೀಕರಾಗಲು ಭಯಪಡುವುದಿಲ್ಲವೇ ? ಹಳೆ ಸ್ಕೂಟರ್ ಖರೀದಿಸಲು ಸಹ ಆಗುವುದಿಲ್ಲ. ಸಂಪಾದನೆ ಕಡಿಮೆ, ವಸ್ತುಗಳ ಬೆಲೆ ಹೆಚ್ಚು. ಸಂಸಾರ ನಡೆಸಲು ಜನರು ಹಗಲು ರಾತ್ರಿ ಒದ್ದಾಡುತ್ತಿದ್ದಾರೆ. ಹಣದ ಕೊರತೆ ಉಂಟಾದಂತೆ ಜನರು ಹೇಗಾದರೂ ಮಾಡಿ ಅದನ್ನು ಗಳಿಸಲು ಹಾತೊರೆಯುತ್ತಿದ್ದಾರೆ.
ಬೇರೆಯವರ ಜೀವನ ಹಾಳಾಗಿ ಹೋಗಲಿ ನಾನು ಚನ್ನಾಗಿರಬೇಕು. ಕಷ್ಟಪಟ್ಟು ದುಡಿಯಿರಿ ಎಂದು ಹಿರಿಯರೇನೋ ಹೇಳಿದ್ದಾರೆ. ಆದರೆ ಕಷ್ಟಪಟ್ಟರೆ ಅರ್ಧರೊಟ್ಟಿಯೂ ಸಿಗುತ್ತಿಲ್ಲವಲ್ಲ. ಏನು ಮಾಡೋಣ ಹೇಳಿ ? ನಾವು ಮೋಸ ಮಾಡಿ ಹಣ ಸಂಪಾದಿಸಬೇಕು ಅಥವಾ ದಂಗೆ ಏಳಬೇಕು ಎಂಬ ಮನಃಸ್ಥಿತಿ ತೀವ್ರವಾಗಿ ನಿರ್ಮಾಣಗೊಳ್ಳುತ್ತಿದೆ. ಜೀವನದ ಎಲ್ಲಾ ರಂಗಗಳಲ್ಲೂ ಸುಳ್ಳು, ಮೋಸ, ದರೋಡೆ, ಲಂಚ, ವೇಶ್ಯಾವಾಟಿಕೆ ಇತ್ಯಾದಿ ಕಾನೂನುಬಾಹಿರ ಎಲ್ಲಾ ಚಟುವಟಿಗೆಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಸಮಾಜದ ಬಗ್ಗೆ ಕಾಳಜಿ ಮನಸ್ಸುಗಳಿಂದ ದೂರವಾಗುತ್ತಿದೆ. ನಮ್ಮ ಸಂಸಾರವೇ ಕಷ್ಟದಲ್ಲಿರುವಾಗ ಸಮಾಜದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ ಹೇಳಿ…!
೧೫೦ ಕೋಟಿ ದೇಶದ ಜನರಲ್ಲಿ ಕೇವಲ ಶೇ ೫ ರಷ್ಟು ಜನರ ಬಳಿ ಮಾತ್ರ ಹಣದ ಮತ್ತು ಅಧಿಕಾರದ ಕೋಡಿ ಹರಿಯುತ್ತಿರುವುದು. ಉಳಿದವರ ಗತಿ ಏನು? ಗುಲಾಮಗಿರಿಯಲ್ಲಿ ಮುಳುಗಿರುವ ಬಡವರ ಮನಸ್ಸುಗಳು ಇನ್ನೂ ಎಚ್ಚೆತ್ತಿಲ್ಲ. ಸಮಾನತೆ ಬಗ್ಗೆ ಪ್ರಶ್ನೆ ಮಾಡುವ ಗೋಜಿಗೇ ಹೋಗುತ್ತಿಲ್ಲ. ಜನರು ಜಾಗೃತರಾದ ದಿನ ದಂಗೆ ನಿಶ್ಚಿತ. ಸದ್ಯಕ್ಕೆ ಕ್ರಾಂತಿಯ ಕನಸು ಭ್ರಮೆ. ಸಮಾಜ ಹೀಗೆ ಉರುಳುತ್ತಿರುತ್ತದೆ. ಇದರ ನಡುವೆ ಕೋಮು ಗಲಭೆಗಳು, ಯುದ್ಧಗಳು, ಪ್ರಕೃತಿವಿಕೋಪಗಳು, ಮಹಾಮಾರಿ ಖಾಯಿಲೆಗಳು ಜನರ ಭಯವನ್ನು ದ್ವಿಗುಣಗೊಳಿಸುತ್ತವೆ.
ಇಲ್ಲಿ ವಿಧಿಯಾಟಕ್ಕಿಂತ ಬಲಿಷ್ಠ ಸರಕಾರಗಳ ಆಟಗಳೇ ಹೆಚ್ಚು ಗೋಚರಗೊಳ್ಳುತ್ತಿವೆ. ಈ ಪ್ರಪಂಚ ಸಾವಿರಾರು ವರ್ಷಗಳಿಂದ ಅನೇಕ ತಿರುವುಗಳನ್ನು ಕಂಡಿದೆ. ಮುಂದಿನ ತಿರುವುಗಳಲ್ಲಿ ಮನಃಶಾಂತಿ ಒಂದು ಬಿಟ್ಟು ಎಲ್ಲವೂ ಕಾಣಬಹುದು. ಚಲನಚಿತ್ರ ರಂಗ, ಆಟದ ಕ್ಷೇತ್ರ, ಪ್ರಾರ್ಥನೆಯ ಸ್ಥಳಗಳು, ರಾಜಕೀಯ ರಂಗ, ವಿದ್ಯಾಮಂದಿರಗಳು, ಅರೋಗ್ಯ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ಕಾರ್ಖಾನೆಗಳು – ಎಲ್ಲಾ ಕ್ಷೇತ್ರಗಳು ಕಲ್ಮಶಗೊಂಡಿವೆ. ಆದರೂ ಮನುಷ್ಯ ಭರವಸೆಯ ಛತ್ರಿ ಹಿಡಿದು ಒಳ್ಳೆಯ ದಿನಗಳು ಬರುತ್ತವೆ ಎಂದು ಕಾದು ಕುಳಿತಿದ್ದಾನೆ. ಪಾಪ …! ಅವನನ್ನು ನಿದ್ದೆಯಿಂದ ಎಬ್ಬಿಸಬೇಡಿ. ಕನಸು ಮುರಿದು ಹೋಗುತ್ತದೆ. ಆದರೆ ಒಂದಿನ ಸತ್ಯವೇ ಗೆಲ್ಲುವುದು. ಅಧರ್ಮವೇ ಸೋಲುವುದು.
ಸತ್ಯಮೇವ ಜಯತೆ – ಸತ್ಯಮೇವ ಜಯತೆ ದೇಶದ ಸೂತ್ರ. ಆದರೆ ಪ್ರತಿಕ್ಷಣ ಸಾಯುತಿದೆ ಕಾನೂನಿನ ಕುಲ ಗೋತ್ರ. ದುರಾಡಳಿತ ಅನ್ಯಾಯ ಗುಂಡಾಗಿರಿ ಹೆಡೆ ಎತ್ತಿವೆ. ದಕ್ಷತೆ ನ್ಯಾಯ ನೀತಿ ಬದುಕಿದ್ದು ಸತ್ತಿವೆ. ಮೋಸ ವಂಚನೆ ಕೊಲೆ ದರೋಡೆ ಭುಗಿಲೆದ್ದಿವೆ. ಮನುಷ್ಯತ್ವ ಮಾನವೀಯತೆ ಸಹನೆ ನೆಲ ಕಚ್ಚಿವೆ. ಆಸ್ಪತ್ರೆ, ಶಾಲೆ, ಅನ್ನ – ದುಬಾರಿ. ಜನಸಾಮಾನ್ಯರ ಗೋಳು ಕೇಳುವರಾರಿಲ್ಲಿ. ಮನೆ ಮನ ವ್ಯಾಪಾರ ನೌಕರಿಯಲಿ ಅಶಾಂತಿ. ಬದುಕಿಗಿಂತ ಸಾವು ಮೇಲು ಆದರೆ ಅದೂ ದುಬಾರಿ. ಧೈರ್ಯದಿಂದ ದೇವನು ನೀಡಿರುವ ವರಗಳನು ಬಾಚಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ, ಸೋಲನೊಪ್ಪದೆ, ವಿಧಿಬರಹ ಎನ್ನದೆ, ಸಮಯದ ಚಕ್ಯವ್ಯೂಹ ಸೀಳಿ ಮುನ್ನಡೆ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.