ಮಂಗಳೂರು(www.vknews.in): ಪ್ರಪಂಚದಾದ್ಯಂತ ಕೊರೋನ ಸೋಂಕಿನ ಮಹಾ ವಿಪತ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಭಾರತದಲ್ಲಿ ಈಗಾಗಲೇ ಸುಮಾರು 11 ಲಕ್ಷ ಧೃಡೀಕೃತ ಪ್ರಕರಣಗಳು ದಾಖಲಾಗಿ ಸುಮಾರು 27000 ಮಂದಿ ಮೃತಪಟ್ಟಿದ್ದಾರೆ.ಅದೇ ರೀತಿ ಕರ್ನಾಟಕದಲ್ಲಿ ಸುಮಾರು 55000 ಧೃಡೀಕೃತ ಪ್ರಕರಣಗಳು ದಾಖಲಾಗಿ 1500 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. Covid 19 ಇಷ್ಟೊಂದು ಭೀಕರತೆಯನ್ನು ತಾಳುತ್ತಿರುವ ಈ ಸಂದರ್ಭದಲ್ಲಿ ಇದನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸತತವಾಗಿ ವಿಫಲರಾಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ.
ಕೋರೋನ ವಿರುದ್ಧದ ಹೋರಾಟದಲ್ಲಿ ತನ್ನ ಆರೋಗ್ಯ ಹಾಗೂ ಜೀವವನ್ನೂ ಲೆಕ್ಕಿಸದೆ ರಾತ್ರಿ ಹಗಲು ರೋಗಿಗಳ ಸೇವೆ ಮಾಡುತ್ತಿರುವ ವೈದ್ಯಕೀಯ ತಂಡ ಮತ್ತು ಕೊರೋನ ವಾರಿಯರ್ಸ್ ತಂಡಗಳ ನಿರಂತರವಾದ ನೈಜ ಸೇವೆಯನ್ನು ಶ್ಲಾಘಿಸುತ್ತಾ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಖಾಸಗಿ ಮತ್ತು ಸರ್ಕಾರಿ ವೈದ್ಯರುಗಳ ಕೆಲವೊಂದು ಯಮ ಸ್ವರೂಪಿ ನಿಲುವುಗಳು ಬಹಳ ಖೇದಕರವಾಗಿದೆಯಲ್ಲದೇ ಕೆಲವೊಂದು ಸಂದರ್ಭದಲ್ಲಿ ಚಿಕಿತ್ಸೆಗಾಗಿ ತೆರಳಿದ ರೋಗಿಯ ಪ್ರಾಣಕ್ಕೇ ಕಂಠಕವನ್ನುಂಟುಮಾಡುತ್ತಿದೆ.
ಕೊರೋನ ಹಾವಳಿ ಆರಂಭಗೊಂಡ ನಂತರ ನಡೆದಿರುವ ಸಣ್ಣ ಸಣ್ಣ ಅಪಘಾತ ಪ್ರಕರಣಗಳಲ್ಲಿ ಕೈ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಪ್ರತಿಯೊಬ್ಬ ರೋಗಿಯನ್ನು ಕೊರೋನದ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಅವರನ್ನು ಕೊರೋನ ಪರೀಕ್ಷೆಗೆ ಒಳಪಡಿಸಿ ಯಾವುದೋ ಅಚಾತುರ್ಯದಿಂದ ಅವರಿಗೆ ಕೊರೋನ ಪಾಸಿಟಿವ್ ಬಂದರೆ ಅಂತಹವರನ್ನು ಕೊರೋನ ಚಿಕಿತ್ಸೆಯ (ಕೇವಲ ಐಸೋಲೇಸನ್ ) ನೆಪದಲ್ಲಿ ಪ್ರತ್ಯೇಕವಾಗಿರಿಸಿ ಲಕ್ಷಾಂತರ ರೂಪಾಯಿ ಬಿಲ್ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ ಆ ರೋಗಿಯು ಯಾವ ಉದ್ದೇಶಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದನೋ ಆ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ನಡೆಸದೆ ಸತಾಯಿಸಲಾಗುತ್ತದೆ. ಡಾಕ್ಟರ್ ಬಳಿ ಮಾತನಾಡಿದರೆ ಸರ್ಕಾರದ ಮಾರ್ಗಸೂಚಿ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮುಂಜಾಗೃತೆಯ ನೆಪವೊಡ್ಡಿ ನುಣುಚಿಕೊಳ್ಳುತ್ತಾರೆ. ಆಸ್ಪತ್ರೆಯ ಮುಖ್ಯಸ್ಥರ ಜೊತೆ ಮಾತನಾಡಿದರೆ ನಾವು ಸರಿಪಡಿಸುತ್ತೇವೆ ಎಂಬ ಉತ್ತರ ಮಾತ್ರ ಬರುತ್ತದೆ. ಕೊನೆಗೆ ರೋಗಿಯನ್ನು ಅವಸರ ಅವಸರವಾಗಿ ಡಿಸ್ಚಾರ್ಜ್ ಮಾಡಿ ಒಂದು ತಿಂಗಳ ನಂತರ ಮತ್ತೆ ಕೊರೋನ ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಶಸ್ತ್ರಚಿಕಿತ್ಸೆ ನಡೆಸುತ್ತೇವೆ ಎಂಬ ಪುಕ್ಸಟೆ ಸಲಹೆ ನೀಡಿ ಮನೆಗೆ ಕಳುಹಿಸಲಾಗುತ್ತದೆ. ಕೈ ಅಥವಾ ಕಾಲು ಮುರಿತಕ್ಕೊಳಗಾದ ರೋಗಿ ಮಾತ್ರ ನೋವಿನಿಂದ ಚೀರಾಡುತ್ತಲೇ ಮನೆಯ ಕಡೆಗೆ ಹೆಜ್ಜೆ ಇಡುವ ಪರಿಸ್ಥಿತಿ ಮಂಗಳೂರಿನಲ್ಲಿ ನಡೆಯುತ್ತಿದೆ. ಇದು ಕೇವಲ ಕೈ ಕಾಲು ಮುರಿತದ ಪ್ರಕರಣಗಳಲ್ಲದೆ ಇತರ ಶಸ್ತ್ರಚಿಕಿತ್ಸೆ, ಹೆರಿಗೆ ಶಸ್ತ್ರಚಿಕಿತ್ಸೆ ಮುಂತಾದ ಪ್ರಕರಣಗಳಲ್ಲೂ ರೋಗಿಗಳಿಗೆ ಇದೇ ಅನುಭವವಾಗಿದೆ. ಇಂತಹ 50 ಕ್ಕೂ ಅಧಿಕ ಪ್ರಕರಣಗಳು ಗಮನಕ್ಕೆ ಬಂದಿದ್ದರು ಕೂಡ ಸಾಮಾಜಿಕ ಮುಖಂಡರು ಅಥವಾ ಸಂಘಟನೆಗಳ ನಾಯಕರು ಪ್ರಶ್ನಿಸಿದರೆ ಕೊರೋನ ಮುಂಜಾಗೃತೆಯ ಬಗ್ಗೆ ಸರ್ಕಾರದ ಮಾರ್ಗಸೂಚಿ ಎಂಬ ಕಾರಣ ನೀಡಿ ವೈದ್ಯರು ಸೇಫ್ ಆಗುತ್ತಾರೆ.
ಈ ಎಲ್ಲಾ ಸಂಭವಗಳಿಗೆ ಮೂಲ ಕಾರಣ ಸಮಾಜದಲ್ಲಿ ಕೊರೋನದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾದ ವೈದ್ಯರಲ್ಲಿಯೇ ಕೊರೋನ ಸೋಂಕಿನ ಭಯ ಕಾಡುತ್ತಿದೆ. ನನ್ನ ಅನುಭವ ಪ್ರಕಾರ ಸೋಂಕಿತ ವ್ಯಕ್ತಿಯ ಕೊರೋನ ಚಿಕಿತ್ಸೆ ಅವರದೇ ಆಸ್ಪತ್ರೆಯಲ್ಲಿ ಸಂಪೂರ್ಣಗೊಂಡ ನಂತರವೂ ನಿಗದಿ ಪಡಿಸಿದ ವೈದ್ಯರು ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದ ಕಾರಣ ರೋಗಿಗಳು ಪಡುತ್ತಿರುವ ಪಾಡು ನೋಡಿದರೆ ಕಣ್ಣೀರು ಬರುತ್ತದೆ ಹಾಗೂ ಈ ಕೆಳಗಿನ ಸಮಸ್ಯೆಗಳನ್ನು ರೋಗಿಗಳು ಅನುಭವಿಸಬೇಕಾಗುತ್ತದೆ.
1) ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಕಡ್ಡಾಯದ ಕಾರಣದಿಂದ ಕೊರೋನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ. 2) ಕೈ, ಕಾಲು ಮುರಿತಕ್ಕೊಳಗಾದ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಕೈ ಕಾಲು ಊನ ಅಥವಾ ಶಾಶ್ವತ ಅಂಗ ವಿಕಲತೆಯ ಸಾಧ್ಯತೆ. 3) ಸಾಮಾನ್ಯ ಜ್ವರಕ್ಕೂ ಚಿಕಿತ್ಸೆ ನಿರಾಕರಿಸಿ ಕೊರೋನ ಪರೀಕ್ಷೆಗೆ ಸಲಹೆ ನೀಡುತ್ತಿರುವ ವೈದ್ಯರಿಂದಾಗಿ ಆ ಕುಟುಂಬದ ನೆಮ್ಮದಿ ಹಾಳು. 4) ಗರ್ಭಿಣಿ ಮಹಿಳೆಯರ ಪ್ರಸವ ಸಂದರ್ಭದಲ್ಲಿ ಅನಗತ್ಯ ಕಿರುಕುಳ ನೀಡಿ ಕೊರೋನ ಭಯ ಹುಟ್ಟಿಸುತ್ತಿರುವುದರಿಂದ ಗರ್ಭಪಾತ ಮತ್ತು ಪ್ರಾಣಾಪಾಯದ ಸಾಧ್ಯತೆ. 5) ಡಯಾಲಿಸಿಸ್, ಹೃದಯ ಚಿಕಿತ್ಸೆ ಮುಂತಾದ ನಿರಂತರ ಚಿಕಿತ್ಸೆಯ ಸಂಧರ್ಭದಲ್ಲೂ ಕೊರೋನ ಪರೀಕ್ಷೆಯ ಒತ್ತಡ ಹೇರಿಕೆಯಿಂದಾಗಿ ಭಯದಿಂದ ಚಿಕಿತ್ಸೆಗೆ ತೆರಳದೆ ಹೃದಯಾಘಾತ ಅಥವಾ ರೋಗ ಉಲ್ಭಣಿಸುವ ಸಾಧ್ಯತೆ.
ಈ ಎಲ್ಲಾ ವಿಚಾರಗಳು ನನಗಿಂತ ಹೆಚ್ಚಾಗಿ ವೈದರಿಗೆ ತಿಳಿದಿದ್ದರೂ ಕೂಡ ಮತ್ತು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ರೋಗಿಯ ಚಿಕಿತ್ಸೆ ಮತ್ತು ಜೀವ ರಕ್ಷಣೆಯೇ ನಮ್ಮ ಪ್ರಥಮ ಆದ್ಯತೆ ಎಂದು ಪ್ರತಿಜ್ಞೆಗೈದಿರುವ ವೈದ್ಯರು ಕೊರೋನದ ನೆಪದಲ್ಲಿ ಚಿಕಿತ್ಸೆಯನ್ನು ನಿರಾಕರಿಸುವ ಮೂಲಕ ಯಮ ರೂಪ ತಾಳುತ್ತಿರುವುದು ನಿಜಕ್ಕೂ ಖಂಡನೀಯ !! ಆದ್ದರಿಂದ ಎಲ್ಲಾ ವೈದ್ಯರುಗಳು ಎಲ್ಲಾ ವಿಧದ ಮುನ್ನೆಚ್ಚರಿಕಾ ಕ್ರಮ ಹಾಗೂ ಸರ್ಕಾರದ ನಿರ್ದೇಶಗಳನ್ನು ಪಾಲಿಸುವುದರೊಂದಿಗೆ ರೋಗಿಯ ಆರೋಗ್ಯ ಮತ್ತು ಜೀವ ರಕ್ಷಣೆಗೆ ಸ್ವಯಂಪ್ರೇರಿತವಾಗಿ ಮುಂದೆ ಬರಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಇದೇ ಸಂದರ್ಭದಲ್ಲಿ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿರುವ ವೈದ್ಯರು ಮತ್ತು ಆಸ್ಪತ್ರೆಗಳ ಪರವಾನಿಗೆಯನ್ನು ಸರ್ಕಾರವು ಯಾವುದೇ ಮುಲಾಜಿಲ್ಲದೆ ರದ್ದು ಪಡಿಸಿ ಆದೇಶ ಹೊರಡಿಸಿದಾಗ ಮಾತ್ರ ರೋಗಿಗಳ ಪಾಲಿಗೆ ಯಮರಾಗುತ್ತಿರುವ ವೈದ್ಯರು ಮತ್ತು ಆಸ್ಪತ್ರೆಗಳು ಸರಿ ದಾರಿಗೆ ಬರಲು ಸಾಧ್ಯ. ಆದ್ದರಿಂದ ಜಿಲ್ಲಾಡಳಿತವು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಸರಕಾರಕ್ಕೆ ವರದಿ ಒಪ್ಪಿಸಬೇಕೆಂದು ಈ ಆಗ್ರಹಿಸುತ್ತಿದ್ದೇನೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.