(www.vknews.com) : ಇತ್ತೀಚೆಗೆ 600 ರಷ್ಟು ಡ್ರೋನ್ ತಯಾರಿಸಿದ್ದೇನೆ ಅನ್ನುತ್ತಾ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರತಾಪ್ ಎಂಬ ಹುಡುಗ ಮತ್ತೆ ಚರ್ಚೆಯಾಗುತ್ತಿದ್ದಾನೆ. ಡ್ರೋನ್ ಕಥೆಗಳೆಲ್ಲಾ ಸುಳ್ಳು, ಜನರನ್ನು ಸುಳ್ಳು ದಾಖಲೆ ತೋರಿಸಿ ಯಾಮಾರಿಸಿದ್ದಾನೆ, ಯಾವುದೋ ಪ್ರದರ್ಶನಕ್ಕಿಟ್ಟ ಡ್ರೋನ್ ಗಳ ಪಕ್ಕ ಪೋಟೋ ತೆಗೆಸಿ ಅದನ್ನು ತಾನೇ ನಿರ್ಮಿಸಿದ್ದು ಅನ್ನುತ್ತಾ ಸ್ವಯಂ ವಿಜ್ಞಾನಿಯಾಗಿದ್ದಾನೆಂದು ಹೇಳಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಾದ್ಯಂತ ಟೀಕೆ, ವಿಮರ್ಶೆ, ವ್ಯಂಗ್ಯಕ್ಕೊಳಗಾಗಿ ಚರ್ಚೆಗಳು ವ್ಯಾಪಿಸಿಕೊಂಡಿದೆ. ಅದರಾಚೆಗಿನ ಸತ್ಯ ಏನು ಎನ್ನುವುದು ಅರಿಯೆ. ಆದರೆ, ಒಂದಂತೂ ಅರ್ಥವಾಗಿದ್ದು ಸುಳ್ಳಿಗೆ ಹೆಚ್ಚು ಆಯಸ್ಸು ಇಲ್ಲ ಎಂಬುದು.
ಸುಳ್ಳು ಎನ್ನುವುದು ಸತ್ಯವನ್ನು ಮರೆಮಾಚುವ ಅಡ್ಡ ಪರದೆ. ಮನುಷ್ಯ ಸತ್ಯಕ್ಕಿಂತಲೂ ವೇಗವಾಗಿ ಸುಳ್ಳನ್ನು ನಂಬುತ್ತಾನೆ ಯಾಕೆಂದರೆ ಕೇಳಲು, ನೋಡಲು ಆಕರ್ಷಿತವಾಗಿರುವುದು ಸುಳ್ಳೇ. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಸುಳ್ಳಿನ ಮೇಲಿಟ್ಟ ಸತ್ಯವೂ ಕತ್ತಲೆಯಾಗಿರುತ್ತದೆ. ಒಂದರ್ಥದಲ್ಲಿ ಮನುಷ್ಯ ಇವತ್ತು ಬದುಕುತ್ತಿರುವುದೇ ಸುಳ್ಳಿನಿಂದಲೇ ಅನ್ನಬಹುದು. ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲೂ, ಸಂದಿಗ್ಧ ಪರಿಸ್ಥಿತಿಗಳನ್ನು ಸಲೀಸಾಗಿ ಎದುರಿಸಲು ಸುಳ್ಳನ್ನು ಆಯುಧವಾಗಿ ಬಳಸಲಾಗುತ್ತದೆ. ಅದು ಎಷ್ಟು ಪರಿಣಾಮಕಾರಿಯಾಗಿರುತ್ತದೆಯೆಂದರೆ, ಅದೇ ಸತ್ಯವೆಂದು ಬಗೆದು ಅದರ ಹಿಂದೆ ನಡೆದು ಕೊನೆಗೆ ಸತ್ಯ ಕಣ್ಣು ತೆರೆದಾಗ ವಿಚಲಿತನಾಗಿ ಬದುಕೇ ನಿರಾಸೆಯೆನಿಸುವುದು. ಸುಳ್ಳು ಎಷ್ಟು ಸತ್ಯವೆಂದರೆ, ಒಮ್ಮೊಮ್ಮೆ ಈ ಬದುಕೂ ಸುಳ್ಳು, ನಾವಂದುಕೊಂಡದ್ದೆಲ್ಲಾ ಬರೀ ಕಲ್ಪನೆಗಳು.., ಆಸೆ, ಮೋಹ, ಗುರಿ ಎಲ್ಲವೂ ಬರೀ ಕನಸು ಮಾತ್ರ, ಯಾವುದೂ ನೈಜತೆಗೆ ಹೊಂದಿಕೊಳ್ಳುವುದಿಲ್ಲ ಅನಿಸಿಕೊಳ್ಳುತ್ತದೆ.
ಡ್ರೋನ್ ಪ್ರತಾಪನಿಗಿಂತಲೂ ಮೊದಲು ಸುಳ್ಳಿನಲ್ಲಿ ಸಾಧನೆ ಮಾಡಿದ್ದು ಚಕ್ರವರ್ತಿ ಸೂಲಿಬೆಲೆ. ಸುಳ್ಳು ತುಂಬಿದ ಭಾಷಣಗಳ ಮೂಲಕ ಮೋದಿಯನ್ನು ಕೊಂಡಾಡುತ್ತಾ ಮಹಾನ್ ಚಿಂತಕನೆಂದು ಸ್ವಯಂ ವಿಶ್ಲೇಷಿಸುತ್ತಿದ್ದಾರೆ. ಈಗೀಗ ಸಾಮಾಜಿಕ ತಾಣಗಳಲ್ಲಿ ಅವರ ಸುಳ್ಳಿನ ಹವಾ, ನೆಟ್ಟಿಗರು ಅದಕ್ಕೂ ಹೆಂಗ್ ಪುಂಗ್ ಲೀ ಅಂತ ಹೆಸರಿಟ್ಟೊದ್ದಾರೆ ಕೂಡ. ಚಾ ಮಾರುತ್ತಿದ್ದವನೊಬ್ಬ ಪ್ರಧಾನಿಯಾದ ಕಥೆಯನ್ನು ದೇಶದ ಪ್ರಖ್ಯಾತ ಸುಳ್ಳುಗಾರನಿಗಿಂತಲೂ ವರ್ಣನಾತ್ಮಕವಾಗಿ ಸೂಲಿಬೆಲೆ ಬಣ್ಣಿಸುತ್ತಾರೆ. ಅದನ್ನು ಸತ್ಯವೆಂದು ಬಗೆದು ಶಿಳ್ಳೆ ಹೊಡೆಯಲು ಒಂದಷ್ಟು ಮಂದಿ ಬೆನ್ನಬದಿ..
ಮನುಷ್ಯ ಯಾಕಿಷ್ಟು ಸುಳ್ಳುಗಳನ್ನು ಹೇಳುತ್ತಾನೆ? ಸುಳ್ಳು ಹೇಳದೇ ಬದುಕಲಾಗದೇ? ಈ ರೀತಿ ಪ್ರಶ್ನೆಗಳು ಕೆಲವೊಮ್ಮೆ ಕಾಡುತ್ತಿರುತ್ತದೆ. ಉತ್ತರ ಹುಡುಕಿ ಹೊರಟಾಗ, ಸತ್ಯ ಹೇಳಿಯೂ ಬದುಕಬಹುದಾದರೂ, ಸುಳ್ಳಿನಷ್ಟು ಐಶಾರಾಮಿಯಾಗಿ ಬದುಕಲು ಸಾಧ್ಯವಿಲ್ಲ. ಸುಳ್ಳಿನಿಂದ ಸುಂದರ ಬದುಕನ್ನು ಕಟ್ಟಬಹುದು. ದೊಡ್ಡ ಬಂಗಲೆ, ಕಾರು, ಹಣ, ಚಿನ್ನ..ಎಲ್ಲವನ್ನೂ ಸಂಪಾದಿಸಬಹುದು. ಆದರೆ, ಹೀಗೆ ಪಡೆದುಕೊಂಡವೆಲ್ಲವೂ ಅಡಿಪಾಯವಿಲ್ಲದೆ ಮನೆ ಕಟ್ಟಿದಂತೆ, ಹೆಚ್ಚು ಬಾಳಿಕೆಯಿರದು. ಸಣ್ಣ ಮಳೆಯೋ, ರಭಸದ ಗಾಳಿಯೋ ಸಾಕು, ಎಲ್ಲವನ್ನೂ ಛಿದ್ರವಾಗಿಸಲು.
ಈ ಜಗತ್ತಿನಲ್ಲಿ ಎಲ್ಲವೂ ನಡೆಯುತ್ತಿರುವುದು ಸುಳ್ಳಿನಿಂದಲೇ. ರಾಜಕಾರಣವಂತೂ ಸುಳ್ಳುಗಳ ತವರೂರು ಅನ್ನಬಹುದು. ಹಣ ಮತ್ತು ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗಿ ಸುಳ್ಳು ಮಾತುಗಳ ಮೂಲಕ, ಅಪಪ್ರಚಾರಗಳಿಂದ, ನಾಟಕೀಯ ಭರವಸೆಗಳಿಂದ ಜನರನ್ನು ವಂಚಿಸಿ ತನ್ನ ಕುರ್ಚಿ ಗಟ್ಟಿಗೊಳಿಸುವ ಕಲೆ ರಾಜಕಾರಣಿಗಳಿಗಿದೆ. ಈಗ ಸುಳ್ಳಿನಲ್ಲಿ ಪರಿಣತಿ ಹೊಂದದವನು ಅಧಿಕಾರ ಪಟ್ಟಕ್ಕೇರಲು ಸಾಧ್ಯವೇ ಇಲ್ಲ. ನಕಲಿ ದಾಖಲೆಗಳು, ಸುಳ್ಳು ಪ್ರಚಾರಗಳಿಂದ ಅವರು ಮುನ್ನೆಲೆಗೆ ಬರುತ್ತಾರೆ. ಇವೆಲ್ಲವನ್ನೂ ನಂಬಿಕೊಂಡು ಅಂತವರ ಹಿಂದೆ ಹೋಗಿ ಸಮಯ ವ್ಯರ್ಥ ಮಾಡುವ ಜನರೂ ಈ ಸುಳ್ಳಿಗೆ ಪುಷ್ಠಿ. ಭಾಷಣ ಕೇಳಲು ಮತ್ತು ಬೊಗಳೆ ಮಾತಿಗೆ ಕೈತಟ್ಟಿ ಸೀಟಿ ಹೊಡೆಯಲು ಜನರಿಲ್ಲದಿದ್ದರೆ ಆತ ಸುಳ್ಳು ಹೇಳುತ್ತಿರಲಿಲ್ಲ. ಮಾತಿನ ಮೋಡಿಗೆ ಮಾರು ಹೋಗಿ ರಾಜಕಾರಣಿಗಳ ಬಾಲವಾಗಲು ಸಾಕಷ್ಟು ಮಂದಿ ಇರುವುದರಿಂದಲೇ ಇಂದು ರಾಜಕೀಯ ಇಷ್ಟೊಂದು ಕೊಳಕು ತುಂಬಿರುವುದು.
ಇನ್ನು ಮಾಧ್ಯಮ ಜಗತ್ತಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ಅಲ್ಲಿ ಸುಳ್ಳೇ ಬಂಡವಾಳ. ಸುಳ್ಳು ಇಲ್ಲದಿದ್ದರೆ ಸುದ್ದಿಯಿಲ್ಲ, ಸುದ್ದಿಯಿಲ್ಲದೆ ಅವರಿಗೆ ಆದಾಯವಿಲ್ಲ. ಯಾವುದೇ ಒಂದು ವಿಚಾರವನ್ನು ಮಸಾಲೆ-ಒಗ್ಗರಣೆ ಎಲ್ಲಾ ಸೇರಿಸಿ, ಜನರನ್ನು ಆಕರ್ಷಿಸುವುದಕ್ಕಾಗಿ, ತನ್ನ ಟಿಆರ್ ಪಿ ಯ ಕನಸಿನಲ್ಲಿ ನೈಜತೆಗೆ ದೂರವಾಗದ ಸುದ್ದಿಗಳನ್ನು ಬೆಂಡೆಕಾಯಿ ಅಕ್ಷರದಲ್ಲಿ ಮತ್ತೆಮತ್ತೆ ಬರೆದು ತೋರಿಸಿ ಜನರನ್ನು ಮೂರ್ಖರನ್ನಾಗಿ ಮಾಡುವುದರಲ್ಲಿ ನಿಪುಣರು. ಸುಳ್ಳು ಎನ್ನುವ ಕಾನ್ಸೆಪ್ಟ್ ಇಲ್ಲದಿದ್ದರೆ ಅವರಿಗೆ ಬದುಕಿಲ್ಲ. ಸುದ್ದಿಗಳನ್ನು ತಿರುಚಿ, ವಾಸ್ತವತೆಯನ್ನು ಬಚ್ಚಿಟ್ಟು ಸುಂದರವಾಗಿ ಸ್ಕ್ರಿಪ್ಟ್ ರಚಿಸಿ ಜನರನ್ನು ತನ್ನೆದುರು ಕೂರುವಂತೆ ಮಾಡುವ ಮಾಧ್ಯಮಗಳ ಮೋಸದಾಟ ಮುಂದುವರಿಯುತ್ತಲೇ ಇದೆ.
‘ಸತ್ಯ ಹೇಳುವ ಸಮಯದಲ್ಲಿ ಮೌನವಾಗಿದ್ದರೆ, ಆ ಮೌನವೂ ಸುಳ್ಳೇ..’ ಎಲ್ಲೋ ಓದಿದ ನೆನಪು. ಕೆಲವೊಮ್ಮೆ ಸುಳ್ಳು ಹೇಳಿ ಸಿಕ್ಕಾಕೊಂಡಾಗ ಸತ್ಯ ಬಯಲಾಗುವ ಹೊತ್ತಲ್ಲಿ ನಾವು ಮೌನವಾಗಿರುವುದು ಹೆಚ್ಚು. ಒಂದರ್ಥದಲ್ಲಿ ನಮಗೆ ಆ ಸತ್ಯವನ್ನೂ ಒಪ್ಪಿಕೊಳ್ಳಲು ಮನಸ್ಸಿರುವುದಿಲ್ಲ. ತನ್ನ ಸುಳ್ಳು ಮಾನ್ಯತೆ ಪಡೆದು ಅದನ್ನೇ ಜನರು ನಂಬಿಕೊಂಡಿರಬೇಕೆಂಬ ಅತಿಮೋಹ ನಮ್ಮನ್ನು ಮೌನಕ್ಕೆ ದೂಡುತ್ತದೆ. ಆ ಮೌನವೇ ನಮ್ಮನ್ನು ಮತ್ತೆ ಮತ್ತೆ ಸುಳ್ಳುಗಾರನನ್ನಾಗಿಸುತ್ತದೆ. ಒಂದು ಸುಳ್ಳನ್ನು ಸತ್ಯವೆಂದು ಸಾಕ್ಷೀಕರಿಸಲು ನೂರಾರು ಸುಳ್ಳುಗಳನ್ನು ಹೇಳಬೇಕಾಗುತ್ತದೆ. ಹೀಗೆ ಹೇಳುತ್ತಲೇ ಸುಳ್ಳು ಅಭ್ಯಾಸವಾಗುವುದು. ಕೆಲವರು ಅದನ್ನೇ ಖಾಯಂಗೊಳಿಸಿ, ಅದರಿಂದಲೇ ಬದುಕುವವರು. ಒಮ್ಮೆ ಸುಳ್ಳು ಬಾಯಿಂದ ಹೊರಬಿದ್ದರೆ ಅದನ್ನು ಸತ್ಯವೆಂದು ಬಿಂಬಿಸಲಾಗುತ್ತದೆಯೇ ಹೊರತು ಸುಳ್ಳನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಡುವವರಿಲ್ಲ. ಜಗತ್ತು ಇಷ್ಟು ಕತ್ತಲಾವರಿಸಿದ್ದೂ ಈ ಸುಳ್ಳಿನ ಮೋಡಗಳಿಂದಲೇ. ಸತ್ಯದ ಬೆಳಕು ಚೆಲ್ಲುವುದನ್ನು ತಡೆದು ಸುಳ್ಳು ಅಡ್ಡನಿಂತಾದ ಇರುಳು ತುಂಬಿದೆ.
ನ್ಯಾಯಪೀಠದಲ್ಲೂ ಈಗೀಗ ಸುಳ್ಳು ಮಾನ್ಯತೆ ಪಡೆಯುತ್ತಿದೆ ಅನ್ನುವಾಗ ಸುಳ್ಳಿನ ಮೌಲ್ಯ ಎಷ್ಟು ದೊಡ್ಡದಾಗೇರಿದೆ ಎಂದು ಅರ್ಥಮಾಡಿಕೊಳ್ಳಬೇಕು. ಹಣ ಮತ್ತು ಸುಳ್ಳು ಸಾಕ್ಷಿಗಳಿಂದಾಗಿ ಕುರುಡು ನ್ಯಾಯದ ಮುಂದೆ ಸುಳ್ಳು ಗೆಲ್ಲುವಾಗ ಸತ್ಯ ಗಹಗಹಿಸಿ ನಗುತ್ತಿರುವುದು ಮಾತ್ರ ಯಾರೂ ಕಾಣುವುದಿಲ್ಲ. ಆ ಗೆಲುವು ದೊಡ್ಡ ಸೋಲಿಗೆ ಮುನ್ನುಡಿ ಎಂಬ ಸತ್ಯವನ್ನು ಯಾರೂ ಮನಗಾಣುವುದಿಲ್ಲ, ಎಲ್ಲರೂ ಸುಳ್ಳಿನ ಹಿಂದೆ ಓಡುತ್ತಾರಷ್ಟೇ. ಸುಳ್ಳು ಎಷ್ಟು ಸುಂದರವಾಗಿರುತ್ತದೆಯೆಂದರೆ, ನಾವರಿಯದೇ ಕೆಲವೊಮ್ಮೆ ಅದರೊಳಗೆ ಲೀನವಾಗಿಬಿಡುತ್ತೇವೆ. ಅದೇ ವಾಸ್ತವವೆಂದು ನಂಬಿಕೊಂಡು ಒಮ್ಮೊಮ್ಮೆ ನಮ್ಮವರೊಳಗೇ ದ್ವೇಷದ ವಿಷ ತುಂಬುವುದಕ್ಕೂ ಕಾರಣವಾಗುವುದುಂಟು. ಕೊನೆಗೊಂದು ದಿನ ಸತ್ಯ ಮಾತನಾಡಿದಾಗ ನಮ್ಮ ನಾಲಗೆ ನಿಶ್ಚಲವಾಗುತ್ತದೆ. ಬಾಲ್ಯದಲ್ಲಿ ನಾವು ತಪ್ಪು ಮಾಡಿದಾಗ ಮನೆಯವರಿಂದ ಸಿಗುವ ಪ್ರಸಾದಕ್ಕೆ ಬೆದರಿ ಸುಳ್ಳನ್ನು ಆಯುಧವನ್ನಾಗಿಸಿ ಅಮ್ಮನ ಬೆತ್ತಡೇಟಿನಿಂದ ಪಾರಾಗುವಷ್ಟು ದೊಡ್ಡ ಸಾಧನೆ ಬೇರೆ ಇರಲಿಲ್ಲ. ಸಣ್ಣದೊಂದು ಏಟಿನ ಭಯಕ್ಕೆ ಸುಳ್ಳು ಕಲಿತವನು ಮತ್ತೆ ಮುಂದಕ್ಕೆ ಜೀವನದ ಯಾವುದೇ ಸಮಸ್ಯೆಗಳಿಗೆ ಸುಳ್ಳಿನಿಂದ ಪರಿಹಾರ ಹುಡುಕಲು ಬಯಸುತ್ತಾನೆ. ಹೆಚ್ಚಾಗಿ ಸುಳ್ಳು ದಾರಿಗಳು ಬೇಗ ಗುರಿಮುಟ್ಟಿಸುವುದೂ ಇದೆ. ಆದ್ದರಿಂದಲೇ ಜನರು ಸುಳ್ಳನ್ನು ಲಹರಿಯಾಗಿಸಿರುವುದು.
ಮನಸ್ಸಿಗೆ ಹೆಚ್ಚು ಮುದ ನೀಡಿದ ಸುಳ್ಳಿನ ಬಗ್ಗೆ ಯೋಚಿಸಿದ್ದೀರಾ? ಊಟ ಮಾಡದಿದ್ದಾಗ, ನಿದ್ದೆಯಿಲ್ಲದೆ ಅಳುತ್ತಿದ್ದಾಗ ಮಕ್ಕಳನ್ನು ಹಿಡಿಯುವವರು ಬರುತ್ತಾರೆ ಅನ್ನುವ ಅಮ್ಮನ ಮುಗ್ಧ ಸುಳ್ಳಿಗೆ ನಾವು ಹೆದರಿದ್ದೆವು. ಶಾಲೆಯಲ್ಲಿ ಪ್ರವಾಸಕ್ಕೆಂದು ಹಣ ಕೇಳಿದಾಗ ಬೀಡಿ ಸೂಪಿನಡಿಯನ್ನು ಇಣುಕಿ ಖಾಲಿಯೆಂದು ಅರಿತಾಗ ಏನಾದರೂ ಸುಳ್ಳು ನೆಪ ಹೇಳಿ ನಮ್ಮ ಮನಸ್ಸು ಬದಲಾಯಿಸಿದ್ದು ನೆನೆದಾಗ ಅವತ್ತು ಮನೆಯ ಒಲೆ ಉರಿಯಲು ತಾಯಿ ಹರಿಸಿದ ಕಣ್ಣೀರಿನ ಬೆಲೆ ತಿಳಿಯುತ್ತದೆ. ಸಂಜೆ ಮನೆಗೆ ಬಂದಾಗ ಇದ್ದ ನಾಲ್ಕು ರೊಟ್ಟಿಯನ್ನೂ ನನ್ನ ತಟ್ಟೆಗೆ ಹಾಕಿ, ನಾನು ಈಗಷ್ಟೇ ತಿಂದೆ ಮಗಾ ಅನ್ನುವ ಸುಳ್ಳಿಗೆ ಅಮ್ಮ ನಮಗಾಗಿ ಉಪವಾಸ ಮಲಗಿದ ರಾತ್ರಿಗಳಿಗೆ ಸಾಕ್ಷಿ ಹೇಳುತ್ತದೆ. ಹೀಗೆ ತಾಯಿ ನಮ್ಮ ಮನನೋಯಿಸದಿರಲು, ಮನೆಯ ಕಷ್ಟಗಳನ್ನು ತೋರ್ಪಡಿಸದಿರಲು ಸುಳ್ಳು ಹೇಳುತ್ತಲೇ ಇದ್ದಳು. ನನಗೆ ಅದರಲ್ಲಿ ತಪ್ಪು ಕಾಣುವುದಿಲ್ಲ, ನೆನೆಯುವಾಗ ಈ ಕಣ್ಣಂಚು ತುಂಬುತ್ತದೆಯಷ್ಟೇ. ಆದರೆ, ಇವತ್ತು ಸುಳ್ಳು ರಾಜಾರೋಷವಾಗಿ ಅಲೆಯುತ್ತಿರುವಾಗ ತಾಯಿಯ ಸುಳ್ಳಿಗೊಂದು ಮೌಲ್ಯವಿತ್ತು ಎನ್ನುವುದು ಅರಿವಾಗಿ ಬರುತ್ತಿದೆ.
‘ಸುಳ್ಳು ಬೇಗ ಸಾಯುತ್ತದೆ; ಸತ್ಯ ತಡವಾಗಿ ಹುಟ್ಟುತ್ತದೆ..’ ಸುಳ್ಳಿನ ಸಾವಾದಾಗ ಸತ್ಯ ಜನಿಸಿಕೊಳ್ಳುತ್ತದೆ. ವಿಪರ್ಯಾಸವೇನೆಂದರೆ ಸತ್ಯದ ಜನನವನ್ನು ಸಾಕ್ಷೀಕರಿಸಲು ಸುಳ್ಳಿನಷ್ಟು ಸುಲಭವಿಲ್ಲ ಎನ್ನುವುದು. ಜನ ಸುಳ್ಳನ್ನು ನಂಬುವಷ್ಟು ಸಲೀಸಾಗಿ ಸತ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸತ್ಯ ಹೇಳಿದವನೂ ಕೆಲವೊಮ್ಮೆ ಸುಳ್ಳುಗಾರನೆಂದು ಗುರುತಿಸಲ್ಪಡುತ್ತಾನೆ. ಜನ ಸುಳ್ಳನ್ನು ಸತ್ಯವೆಂದು ಭಾವಿಸಿ ಸತ್ಯದ ವಿರುದ್ಧವೇ ಯುದ್ಧಕ್ಕಿಳಿದಾಗ ಜಗತ್ತು ತಲ್ಲಣಗೊಳ್ಳುವುದು. ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವಷ್ಟು, ನೈಜತೆಯನ್ನು ಅರಿಯುವಷ್ಟು ತಾಳ್ಮೆ ಜನರಲ್ಲಿರುತ್ತಿದ್ದರೆ ಇಂದು ಅದೆಷ್ಟೋ ದುರಂತಗಳು ತಪ್ಪುತ್ತಿತ್ತು. ಆದರೇನು, ಜನ ಅಂದದ ಹಿಂದೆ ಓಡುತ್ತಾರೇ ವಿನಃ ಕುರೂಪಿಯಂತಿರುವ ಸತ್ಯದ ಹಿಂದೆಯಲ್ಲ. ಆದರೆ ಒಂದಂತೂ ತಿಳಿಯಬೇಕು. ಸತ್ಯವನ್ನು ಮರೆಮಾಚಿ ಬದುಕಿದವ ಈ ತನಕ ಯಶಸ್ಸು ಸಾಧಿಸಿದ್ದಿಲ್ಲ, ಹಾಗೇನಾದರೂ ಸಾಧಿಸಿದ್ದರೆ, ಅಷ್ಟೇ ವೇಗದಲ್ಲಿ ಆತ ನೆಲಕ್ಕಪ್ಪಳಿಸಿದ್ದಾನೆ, ಅದಕ್ಕೆ ಡ್ರೋನ್ ಪ್ರತಾಪ ಉತ್ತಮ ನಿದರ್ಶನ. ಸುಳ್ಳು ಹೆಚ್ಚು ಕಾಲ ಬದುಕಿದ್ದಿಲ್ಲ. ಸತ್ಯದ ಮುಂದೆ ಒಂದಲ್ಲ ಒಂದುದಿನ ಸುಳ್ಳು ತಲೆಬಾಗುತ್ತದೆ. ಅದನ್ನು ಅರ್ಥಮಾಡಿಕೊಂಡವರಷ್ಟೇ ಜಾಗೃತರಾಗುತ್ತಾರೆ, ಉಳಿದವರೆಲ್ಲಾ ಮೂರ್ಖರಾಗಿದ್ದುಕೊಂಡು ನಾವು ಬುದ್ಧಿವಂತರೆಂದು ಡಂಗುರ ಸಾರುತ್ತಿರುತ್ತಾರೆ.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.