ಆತೂರು (www.vknews.com) : ಮುಸ್ಲಿಮರು ತಮ್ಮ ಆರಾಧನಾಲಯಗಳಾದ ಮಸೀದಿಗಳನ್ನು ಕೇಂದ್ರವಾಗಿಟ್ಟು ಕೊಂಡು ಮೊಹಲ್ಲಾ ಜಮಾತ್ ಎಂಬ ಬಲಿಷ್ಟ ಮತ್ತು ಪರಿಣಾಮಕಾರಿ ವ್ಯವಸ್ಥೆಯ ಮೂಲಕ ಧಾರ್ಮಿಕ ಮತ್ತು ಸೇವಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ನಮಗೆ ಅರಿವಿಲ್ಲದಂತೆಯೇ ಹಲವಾರು ಮಸೀದಿಗಳಿಂದ ಸಮಾಜದ ಹಲವು ಸಮಸ್ಯೆಗಳಿಗೆ ಪರಿಹಾರ ಉಂಟಾಗುತ್ತದೆ.
ಇದು ನಮಗೆ ಸಾಧ್ಯವಾಗುವಂತೆ ಪೂರ್ವಿಕರು ಮೊಹಲ್ಲಾ ಜಮಾತ್ ಎಂಬ ಪರಿಕಲ್ಪನೆಗೆ ರೂಪುಕೊಟ್ಟದ್ದು ಅದೊಂದು ಅದ್ಭುತ ಕೊಡುಗೆಯಾಗಿದೆ ಎಂದು ಸಮಸ್ತ ಉಲಮಾ ಸಂಘಟನೆಯ ಮುಖಂಡ ಹಾಜಿ ಎಸ್ ಬಿ ದಾರಿಮಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ಉಪ್ಪಿನಂಗಡಿ ಸಮೀಪದ ಆತೂರು ಕುದ್ಲೂರಿನ ಮುಬಾರಕ್ ಮಸೀದಿಯ ವಾರ್ಷಿಕ ಮಾಹಾಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯಾವುದೇ ಧರ್ಮದ ಆರಾಧನಾಲಯಗಳನ್ನು ಕೀಳುಮಟ್ಟದ ರಾಜಕೀಯಕ್ಕಾಗಿ ದುರ್ಭಳಕೆ ಮಾಡಿಕೊಳ್ಳುವುದರಿಂದ ಅದರ ಪಾವಿತ್ರ್ಯತೆ ನಷ್ಟಹೊಂದುತ್ತದೆ. ಅಧಿಕಾರ ಹಿಡಿಯಲು ಧಾರ್ಮಿಕ ಕೇಂದ್ರಗಳನ್ನು ದುರ್ಭಳಕೆ ಮಾಡಿ ಕೊಳ್ಳುತ್ತಿರುವ ಹೀನ ಪ್ರವೃತ್ತಿ ಇಂದು ಹೆಚ್ಚುತ್ತಿದ್ದು, ಭಾರತದಂತಹ ವಿವಿಧ ಜಾತಿ ಜನಾಂಗದವರು ಮತ್ತು ಹಲವು ರಾಜಕೀಯ ಪಾರ್ಟಿಯವರು ವಾಸಿಸುತ್ತಿರುವ ಒಂದು ರಾಷ್ಟ್ರದಲ್ಲಿ ಮಸೀದಿ, ಮಂದಿರಗಳನ್ನು ತಮ್ಮ ರಾಜಕೀಯ ಹಿತಾಸಕ್ತಿಯ ಗುರಾಣಿಯನ್ನಾಗಿ ಮಾಡಲು ಪ್ರಯತ್ನಿಸಿದರೆ ಅದರಿಂದ ಧರ್ಮ ಧರ್ಮಗಳ ಮಧ್ಯೆ ಘರ್ಷಣೆ ಉಂಟಾಗುವ ಮತ್ತು ಆ ಮೂಲಕ ದೇಶವು ನಾಶದ ಗುಂಡಿಗೆ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದ ದಾರಿಮಿ ಉಸ್ತಾದರು ಆರಾಧನಾಲಯದ ಅಧಿಕಾರ ದೇವರಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನುಡಿದರು.
ಆತ್ಮಶಾಂತಿ ದೊರಕಲು ಜನರು ಪವಿತ್ರ ಜಾಗಗಳಿಗೆ ಬೇಟಿ ನೀಡುತ್ತಿರುವಾಗ ಆ ಜಾಗವನ್ನು ತಮ್ಮ ರಾಜಕೀಯ ಅಧಿಕಾರದ ಮೆಟ್ಟಿಳುಗಳಾಗಿ ದುರ್ಭಳಕೆ ಮಾಡಲು ಪ್ರಯತ್ನಿಸುವುದು ಭಕ್ತಜನರಿಗೆ ಮಾಡುವ ಅನ್ಯಾಯವಾಗಿದೆ ಎಂದ ಉಸ್ತಾದರು, ಧಾರ್ಮಿಕ ಆಚಾರ ಮತ್ತು ಸೇವಾ ಕಾರ್ಯಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಿ ಮಸೀದಿ ಮಂದಿರಗಳ ಗೌರವವನ್ನು ಉಳಿಸಿ ಬೆಳೆಸ ಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ ಎಂದು ಅವರು ನುಡಿದರು.
ಮುಂದುವರೆದು ಮಾತನಾಡಿದ ಅವರು ಜಮಾತ್ ಪಧಾಧಿಕಾರಿಗಳೆಂದರೆ ಸರ್ವಾಧಿಕಾರಿಗಳಲ್ಲ. ಜಮಾತನ್ನು ಸುಸೂತ್ರವಾಗಿ ನಡೆಸಲು ಜವಾಬ್ಧಾರಿ ಹೊತ್ತ ಸೇವಕರಾಗಿದ್ದಾರೆ. ಮೊಹಲ್ಲಾದಲ್ಲಿರುವವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವ ಸಮಿತಿ ಫಧಾದಿಕಾರಿಗಳಿಗೆ ಇರ ಬೇಕಾಗುತ್ತದೆ. ಶಿಕ್ಷಣ, ಆರೋಗ್ಯ, ವೈವಾಹಿಕ, ಮನೆ ನಿರ್ಮಾಣ ಮೊದಲಾದ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಿರ್ವಹಿಸಲು ಬೇರೆ ಬೇರೆ ತಂಡಕ್ಕೆ ರೂಪು ನೀಡಿ ಅವರಿಗೆ ಮಾರ್ಗದರ್ಶನ ನೀಡಲು ಪ್ರತಿ ಜಮಾತ್ ಸಮಿತಿಗಳು ಮುಂದೆ ಬಂದರೆ ಬಡವರಿಗೆ ಬಿಕ್ಷೆ ಬೇಡಲು ಅನುಮತಿ ಪತ್ರ ನೀಡಿ ಕೈ ತೊಳೆಯುವ ಪರಿಪಾಠ ನಿಲ್ಲುತ್ತದೆ ಎಂದು ಹೇಳಿದರು.
ಇಂದು ಧಾರ್ಮಿಕ ಕ್ಷೇತ್ರಕೂಡಾ ರಾಜಕೀಯದ ಮಟ್ಟಕ್ಕೆ ಇಳಿದಿದ್ದು ಅಲ್ಲಿಯೂ ಅಧಿಕಾರ ಹಿಡಿಯಲು ಲಾಭಿ ,ಷಡ್ಯಂತ್ರ,ಕುತಂತ್ರ,ಕಾಲೆಳೆತ ಮಾಮೂಲಿಯಾಗಿದೆ. ನಾಯಕೆರನಿಸಿದವರೇ ಸ್ಥಾನಮಾನದ ಹಿಂದೆ ಬಿದ್ದು ಹೆಸರಿಗಾಗಿ ಪರಸ್ಪರ ಅರೋಪ ಪ್ರತ್ಯಾರೋಪ ನಡೆಸಿ ಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸುವ ಪರಿಪಾಠ ಬೆಳೆದು ಬಂದಿದ್ದು ಸಜ್ಜನರು ಧಾರ್ಮಿಕ ಸಂಘಟನೆಗಳ ಅಧಿಕಾರ ವಹಿಸಿಕೊಳ್ಳಲು ಹಿಂಜರಿಯುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.