(ವಿಶ್ವ ಕನ್ನಡಿಗ ನ್ಯೂಸ್) : ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂಭ್ರಮ ಸಡಗರದಲ್ಲಿದೆ ನನ್ನ ಭಾರತ. ನನಗೆ ಜನ್ಮ ನೀಡಿದ ಪವಿತ್ರಭೂಮಿ ಸ್ವತಂತ್ರಗೊಂಡು ಇಂದಿಗೆ ಬರೋಬ್ಬರಿ ಏಳೂವರೆ ದಶಕಗಳು ದಾಟಿವೆ.
ಮಸೀದಿ, ಮಂದಿರ, ಚರ್ಚ್, ಬಸದಿಗಳು, ಕಥೆ ಹೇಳುವ ಭವ್ಯ ಅರಮನೆಗಳು, ಕೋಟೆ ಕೊತ್ತಲಗಳು, ಮನಮುದಗೊಳಿಸುವ ಬೆಟ್ಟಗುಡ್ಡಗಳು, ಸಮುದ್ರ ನದಿ ಸರೋವರಗಳು, ಜಲಪಾತಗಳು, ಶ್ರಮಿಕ ರೈತರ ಬೆವರ ಹನಿಗಳಿಂದ ಸಮೃದ್ಧವಾಗಿ ಹರಡಿನಿಂತಿರುವ ವಿಶಾಲವಾದ ತೋಟ ಗದ್ದೆಗಳು, ಹಲವು ಭಾಷೆ, ಧರ್ಮ, ಜಾತಿ, ಪಕ್ಷ ಪಂಥ, ವೇಷಭೂಷಣಗಳು, ಎಲ್ಲಕ್ಕೂ ಮಿಗಿಲಾಗಿ ಪ್ರತಿಭಾನ್ವಿತರಾದ ಯುವಕರು ಬುದ್ಧಿವಂತರಾದ ವಿದ್ಯಾರ್ಥಿಗಳು, ಸೂಫಿ ಸಂತರ- ಹೋರಾಟಗಾರರ- ಕೆಚ್ಚೆದೆಯ ಧೀರರ ಪಾವನ ಶರೀರಗಳಿಂದ ಸಮೃದ್ಧವಾದ ಮಣ್ಣು! ಈ ಹಲವು ವೈವಿಧ್ಯತೆಗಳಿಂದ ನನ್ನ ಭಾರತ ಸಂಪನ್ನವಾಗಿದೆ. ಇಷ್ಟೆಲ್ಲಾ ಬಂಡವಾಳವನ್ನು ಒಡಲಲ್ಲಿಟ್ಟುಕೊಂಡಿರುವ ನನ್ನ ದೇಶ ಎಂದೋ ಎಲ್ಲಿಗೋ ತಲುಪಬೇಕಿತ್ತು.
ಆದರೆ ಭ್ರಷ್ಟ ದುಷ್ಟ ರಾಜಕಾರಣಿಗಳ, ಸ್ವಾರ್ಥಿಗಳಾದ ಕಾರ್ಪೊರೇಟ್ ಕುಳಗಳ, ಕೆಟ್ಟ ಚರಿತ್ರೆಗಾರರ, ಧರ್ಮಾಂಧ ಕಠಿಣ ಹೃದಯಿಗಳ, ವಂಚಕರ ದೇಶದ್ರೋಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ನ್ಯಾಯ ನೀತಿಗಳು ಸತ್ಯ ಸದಾಚಾರಗಳನ್ನು ನಡುರಸ್ತೆಯಲ್ಲೇ ವಿವಸ್ತ್ರಗೊಳಿಸಲಾಗಿದೆ. ಅನಕ್ಷರಸ್ಥ ಅಯೋಗ್ಯ ಧರ್ಮಾಂಧರ ಕೈಯಲ್ಲಿ ನನ್ನ ದೇಶ ನಲುಗಿ ಹೋಗಿದೆ. ಹೆತ್ತಬ್ಬೆಯ ಹೊಟ್ಟೆ ಸೀಳಲೂ ಹೇಸದ, ಒಡಹುಟ್ಟಿದವರ ಮೇಲೆ ಕತ್ತಿ ಹಿಡಿಯುವ, ಸಂಗಾತಿಯನ್ನು ಕೊಂದೆಸೆಯುವ, ಕಂದಮ್ಮಗಳನ್ನು ಕಸದ ತೊಟ್ಟಿಗೆಸೆಯುವ, ಹೆಣ್ಣನ್ನು ಸಾಮೂಹಿಕವಾಗಿ ಅತ್ಯಾಚಾರಗೈದು ಜಜ್ಜಿ ಕೊಂದು ಹಾಕುವ, ಧರ್ಮ ಜಾತಿ ದೇವರುಗಳ ಹೆಸರಲ್ಲಿ ಬೆಂಕಿಹಚ್ಚಿ ಅಮಾಯಕ ಜನರನ್ನು ಜೀವಂತ ದಹನಮಾಡುವ ನರಭಕ್ಷಕ ರಕ್ತಪಿಪಾಸುಗಳ ರೌದ್ರತಾಂಡವಕ್ಕೆ ನನ್ನ ದೇಶ ಅಪ್ಪಚ್ಚಿಯಾಗಿದೆ. ಚೇತರಿಸಲಾಗದ ಪೆಟ್ಟು ತಿಂದು ಒದ್ದಾಡುತ್ತಿದೆ.
ಆದರೆ ಜಲಪ್ರಳಯ, ಕೊರೋನದಂತಹ ರಾಷ್ಟ್ರೀಯ ವಿಪತ್ತುಗಳಲ್ಲಿ ತತ್ತರಿಸಿದ ವೇಳೆಗಳಲ್ಲಿ ತುತ್ತು ಅನ್ನದೊಂದಿಗೆ ಅನ್ಯಧರ್ಮೀಯ ಮಿತ್ರನ ಬಳಿ ಮಂಡಿಯೂರಿ ನಿಂತ ಹೃದಯವಂತರು, ಮಂದಿರಗಳಲ್ಲಿ ಮುಸ್ಲಿಮರಿಗೂ ಮದ್ರಸದಲ್ಲಿ ಅಯ್ಯಪ್ಪ ಭಕ್ತರಿಗೂ ಆಶ್ರಯ ಕೊಟ್ಟ ನೈಜಭಕ್ತರು, ಆಶ್ರಮದಲ್ಲಿ ನೂರಾರು ವೃದ್ಧರನ್ನು ಮಕ್ಕಳ ಸ್ಥಾನದಲ್ಲಿ ನಿಂತು, ಮಕ್ಕಳನ್ನು ತಂದೆತಾಯಿ ಸ್ಥಾನದಲ್ಲಿ ನಿಂತು ನೋಡಿಕೊಳ್ಳುವ ನಿರ್ಮಲಹೃದಯಿಗಳು, ದೇಶದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೇರಿಸಿದ ಹೆಮ್ಮೆಯ ಪುತ್ರರು, ಪ್ರತಿಭಾನ್ವಿತ ಪ್ರಬುದ್ಧ ವಿಜ್ಞಾನಿಗಳು, ವೈದ್ಯರು, ಅಧ್ಯಾಪಕರು, ಸುಶಿಕ್ಷಿತ ಸಮಾಜ ಸುಧಾರಕರು, ಭವಿಷ್ಯದ ಭರವಸೆಯ ಬೆಳಕಾಗಿ ಬೆಳೆದು ಬರುತ್ತಿರುವ ನನ್ನ ದೇಶದ ಮಕ್ಕಳು ಈ ದೇಶದ ಬಗ್ಗೆ ಇನ್ನೂ ನಿರೀಕ್ಷೆ ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ನಿರಾಸೆ ತಂದ ಕ್ಷಣಗಳು ಮಾಯವಾಗಿ ನಿರೀಕ್ಷೆ ಹುಟ್ಟಿಸಿದ ನಿಮಿಷಗಳು ನಿತ್ಯವಾಗಿ ಭವಿಷ್ಯದ ಭಾರತ ಬೆಳಗಲಿ. ನನ್ನ ಭಾರತದ ಹಿರಿಮೆ ಗರಿಮೆ ಜಗದಗಲ ಪಸರಿಸಲಿ. ಸ್ವಾತಂತ್ರ್ಯೋತ್ಸವದ ಸುವರ್ಣ ಶುಭಾಶಯಗಳು.
✍️ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಕೋಶಾಧಿಕಾರಿ : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.