ಪುತ್ತೂರು (www.vknews.com) ; ದೇಶದಾದ್ಯಂತ ಅಲ್ಪ ಸಂಖ್ಯಾತ,ದಲಿತ,ಶೋಷಿತ ವರ್ಗದ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ ಮತ್ತು ಪ್ರವಾದಿ ನಿಂದನೆಯನ್ನು ವಿರೋಧಿಸಿ ಪುತ್ತೂರಲ್ಲಿ ಎಸ್ ಕೆ ಎಸ್ಸೆಸ್ಸೆಪ್ ಹಮ್ಮಿ ಕೊಂಡ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲು ಆಗಮಿಸಿದ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ ಎಸ್ ಬಿ ದಾರಿಮಿ ಪ್ರಮುಖವಾದ ಹಲವು ವಿಚಾರಗಳನ್ನು ಪ್ರತಿಪಾದಿಸಿದ್ದಾರೆ.
ದೇಶದಲ್ಲೇ ಹುಟ್ಟಿ ಬ್ರಿಟಿಷರ ವಿರುದ್ದ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ಸಂತ ಪುರುಷ ಮಹಾತ್ಮ ಗಾಂದೀಜಿಯನ್ನು ಕೊಂದದ್ದೇ ಅಲ್ಲದೇ ಅದರಲ್ಲಿ ಅಭಿಮಾನ ಪಡುವ ಮಾನಸಿಕತೆ ಹೊಂದಿದ ಒಂದು ವಿಭಾಗ ಸೌದಿಯಲ್ಲಿ ಹುಟ್ಟಿದ ಪೈಗಂಬರನ್ನು ಅವಹೇಳಿಸುವುದರಲ್ಲಿ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.
ಆಧುನಿಕ ನಾಗರಿಕತೆಗೆ ಜಗತ್ತು ತೆರೆದು ಕೊಂಡಿದ್ದರೂ ಒಬ್ಬ ದಲಿತನ ಮಗು ದೇವಸ್ಥಾನ ಪ್ರವೇಶ ಮಾಡಿದ್ದಕ್ಕಾಗಿ ದಂಡ ವಿಧಿಸುವ ಮಾನಸಿಕತೆಯನ್ನು ಕೆಲವರು ಈಗಲೂ ಬೆಳಸಿಕೊಂಡಿದ್ದಾರೆಂದಾದರೆ ಸಾವಿರ ವರ್ಷಗಳ ಹಿಂದೆ ಭಾರತೀಯ ಶೋಷಿತ ವರ್ಗದ ದುಸ್ಥಿತಿ ಹೇಗಿರ ಬೇಕೆಂದು ಪ್ರಶ್ನಿಸಿದ ಅವರು ಇಂತಹ ಕಂದಾಚಾರಗಳಿಂದ ಮುಕ್ತಿ ಪಡೆಯಲು ವಿವಿಧ ಧರ್ಮಗಳಿಗೆ ನಮ್ಮ ಪೂರ್ವಿಕರು ಮತಾಂತರ ಹೊಂದಿ ಸ್ವಾಭಿಮಾನದ ,ಗೌರವದ ಬದುಕನ್ನು ಕಟ್ಟಿಕೊಂಡಿದ್ದರು. ಮುಸ್ಲಿಮರು,ಕ್ರೈಸ್ತರು ಮತ್ತು ದಲಿತರೇ ಇಲ್ಲಿನ ನಿಜವಾದ ಮೂಲ ನಿವಾಸಿಗಳು. ವಿದೇಶದಿಂದ ಬಂದವರು ಯಾರೆಂದು ಇತಿಹಾಸ ಓದಿದದವರಿಗೆಲ್ಲಾ ಗೊತ್ತು. ಎಲ್ಲಾ ನಂಬಿಕೆ ,ಮತ ,ಪಂಥಕ್ಕೆ ಮನ್ನಣೆ ನೀಡಿ ಅದನ್ನು ತನ್ನೊಳಗೆ ಸೇರಿಸಿಕೊಂಡಿರುವ ಸನಾತನ ಭಾರತೀಯ ಧರ್ಮ ಒಂದಿದ್ದರೆ ಅದು ಸರ್ವೇಜನಸುಖಿನೋ ಭವಂತು ಎಂದು ಪ್ರತಿಪಾದಿಸುವ ಸುಂದರ ತತ್ವಾದರ್ಶವಾಗಿದೆ.
ಆದರೆ ಇಂದು ಅಧಿಕಾರಕ್ಕಾಗಿ ಇಂತಹ ಅಮೂಲ್ಯ ತತ್ವಗಳನ್ನು ಗಾಳಿಗೆ ತೂರಿ ಸನಾತನ ಮೌಲ್ಯಗಳನ್ನು ಅಪಹಾಸ್ಯಕೊಳಪಡಿಸುವವವರಿಂದ ಹಿಂದೂ ಧರ್ಮವನ್ನು ರಕ್ಷಿಸ ಬೇಕಾದ ಕರ್ತವ್ಯ ಪ್ರತಿಯೊಬ್ಬ ಭಾರತೀಯ ಪ್ರಜೆಗಳಿಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮ ದಬ್ಬಾಳಿಕೆಗೆ ಕೇವಲ ಮೂಕಪ್ರೇಕ್ಷಕರಾದರೆ ಅದು ದೇಶದ ಅವನತಿಯ ಆರಂಭ ಎಂದು ಅವರು ಎಚ್ಚರಿಸಿದರು.
ಅಪ್ಪಿ ತಪ್ಪಿಯೂ ಅನ್ಯಧರ್ಮೀಯರನ್ನು ಲವ್ ಮಾಡಬೇಡಿ,ಹಿಂದೂ ಮುಸ್ಲಿಂ ಯುವಕ ಯುವತಿಯರಿಗೆ ಕಿವಿ ಮಾತು
ಲವ್ ಜಿಹಾದ್ ಗೊಂದಲಕ್ಕೆ ತೆರೆಎಳೆದ ದಾರಿಮಿಯವರು, ಆಧುನಿಕ ಸಾಮಾಜಿಕ ಮೀಡಿಯಾದ ದೆಸೆಯಿಂದಾಗಿ ಎಲ್ಲಾ ಜಾತಿ ಧರ್ಮದ ಹದಿಹರೆಯದ ಯುವಕ ಯುವತಿಯರು ಪ್ರೇಮಪಾಶಕ್ಕೆ ಸಿಲುಕಿ ಹೆತ್ತವರ ಕಣ್ಣೀರಿಗೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಕೆಲ ಸ್ಥಾಪಿತ ಹಿತಾಸಕ್ತಿಗಳು ಲವ್ ಜಿಹಾದ್ ಎಂಬ ಹೊಸ ನಾಮಕರಣ ಮಾಡಿ ದೇಶವಾಸಿಗಳೆಡೆಯಲ್ಲಿ ಗೊಂದಲ ಸೃಷ್ಟಿಸಿ ತಮ್ಮ ಬೇಳೆ ಬೇಯಿಸುತ್ತಿದ್ದಾರೆ. ಆದ್ದರಿಂದ ಅಪ್ಪ ತಪ್ಪಿ ಕೂಡಾ ಹಿಂದೂ ಮುಸ್ಲಿಂ ಯುವಕ ಯುವತಿಯರು ಅನ್ಯ ಧರ್ಮೀಯರನ್ನು ಲವ್ ಮಾಡುವ ಗೋಜಿಗೆ ಹೋಗ ಬೇಡಿ ಎಂದು ಕರೆನೀಡಿದ್ದಾರಲ್ಲದೇ, ಸೌಂದರ್ಯವತಿಯರಾದ ಸ್ವಧರ್ಮೀಯ ಯುವತಿಯರು ಮದುವೆಯಾಗದೇ ಮನೆಯಲ್ಲಿ ಕೊರಗುತ್ತಿರುವಾಗ ಅನ್ಯ ಧರ್ಮದವರನ್ನು ಪ್ರೀತಿಸಿ ಮದುವೆಯಾಗುವುದು ಅಕ್ಷಮ್ಯ ಮತ್ತು ಸಮಾಜ ದ್ರೋಹದ ಕೆಲಸ ಎಂದು ಅವರು ಪ್ರತಿಪಾದಿಸಿದರು.
ಮತಾಂತರಿಸುವ ಅಗತ್ಯ ಮುಸ್ಲಿಮರಿಗಿಲ್ಲ
ಮತಾಂತರದ ವಿಷ್ಯವನ್ನು ಪ್ರತಿಪಾದಿಸಿದ ಅವರು ಮುಸ್ಲಿಮರಿಗೆ ಬೇರೆಯವರನ್ನು ಬಲಾತ್ಕರಿಸಿ ಸಂಖ್ಯೆ ಹೆಚ್ವಿಸುವ ಅಗತ್ಯ ಇಲ್ಲ. ಬಲಾತ್ಕಾರದ ಮತಾಂತರ ಇಸ್ಲಾಮಿನಲ್ಲಿ ಸ್ವೀಕಾರಾರ್ಹವಲ್ಲ ಎಂದು ಕುರಾನಿನಲ್ಲೇ ಪ್ರತಿಪಾದಿಸಿದೆ. ಆದರೆ ಸ್ವ ಇಚ್ಚೆ ಪ್ರಕಾರ ಅವನವನಿಗೆ ಇಷ್ಟ ಇರುವ ವಿಚಾರಗಳನ್ನು ಅಪ್ಪಿಕೊಳ್ಳಲು ಜಾಗತಿಕ ಮಟ್ಟದಲ್ಲೇ ಅನುಮತಿಸಲಾಗಿದೆ. ಇದು ಮಾನವ ಹಕ್ಕಿನ ವ್ಯಾಪ್ತಿಗೆ ಒಳಪಟ್ಟಿದೆ ಎಂದರು. ಸ್ವ ಧರ್ಮದಲ್ಲಿರುವ ಕಂದಾಚಾರಗಳಿಂದ ಮನನೊಂದು ಇನ್ನೊಂದು ಧರ್ಮಕ್ಕೆ ಮತಾಂತರ ಆಗುವ ಅನಾಹುತವನ್ನು ತಪ್ಪಿಸಲು ಆಯಾ ಧರ್ಮದ ವಾಕ್ತಾರರು ಅವರ ಧರ್ಮಗಳನ್ನು ಮಾನವೀಯತೆಯ ಮತ್ತು ವೈಜ್ಞಾನಿಕತೆಯ ಆಧಾರದಲ್ಲಿ ನವೀಕರಿಸುವುದೇ ಉಳಿದ ದಾರಿ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಪಿ ದಾರಿಮಿ ಅಜ್ಜಾವರ ಪ್ರಾರ್ಥಿಸಿದರು. ರಹ್ಮಾನಿ ಪರ್ಲಡ್ಕ ಖತೀಬರು ಪ್ರಸ್ತಾವಿಕವಾಗಿ ಮಾತನಾಡಿದರು. ಬನಾರಿ ಪೈಝಿ ನಿರ್ವಹಿಸಿದರು. ಮುಂಡೋಳೆ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿದರು.ಎಲ್ ಟಿ ರಝಾಕ್ ಹಾಜಿ ಮಾತನಾಡಿದರು. ಆಶ್ರಪ್ ಮುಖ್ವೆ ಸಹಕರಿಸಿದರು. ಮುಲಾರ್ ಅಬೂಬಕರ್,ನೌಶಾದ್ ಹಾಜಿ ಬೊಳುವಾರು,ಮಜೀದ್ ದಾರಿಮಿ ಮಿತ್ತೂರು ಮೊದಲಾದ ಹಲವಾರು ಗಣ್ಯರು ಹಾಜರಿದ್ದರು. ಇಬ್ರಾಹಿಂ ಬಾತಿಷಾ ಅಂಚಿನಡ್ಕ ವಂದಿಸಿದರು. ಬಳಿಕ ಏಸಿ ಯವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.