ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವುದು ತಪ್ಪು , ಕೆರೆಯನ್ನು ಸರ್ವೇ ಮಾಡಿಸಿ ಕೆರೆಯ ಸುತ್ತ ಒಂದು ಅಡಿ ಆಳ ಮಣ್ಣು ತೆಗೆಯಬೇಕು . ಕೆರೆ ಜಮೀನು ಒತ್ತುವರಿ ಮಾಡಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್. ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು .
ಇಂದು ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ವಪ್ಪಚ್ಚಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ‘ ಗ್ರಾಮವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಹಳ್ಳಿಯಲ್ಲಿ ರಸ್ತೆ , ಚರಂಡಿ ನಿರ್ಮಾಣ ಮಾಡಲು ಅಕ್ಕ – ಪಕ್ಕದವರು ಸ್ಥಳವನ್ನು ಬಿಟ್ಟುಕೊಟ್ಟರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು . ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಪ್ರಗತಿಯಲ್ಲಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿ , ಚರಂಡಿಯಲ್ಲಿ ನೀರು ನಿಲ್ಲದಂತೆ ಸರಾಗವಾಗಿ ಹರಿಯುವಂತೆ ಮಾಡಿ ಹಾಗೂ ರಸ್ತೆಯನ್ನು ಸರ್ವೇ ಮಾಡಿ ಮತ್ತು ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಸರಿಯಾಗಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು .
ಗ್ರಾಮದಲ್ಲಿ ಇರುವ ಪುರಾತನ ದೇವಾಲಯ ಮತ್ತು ಕಲ್ಯಾಣಿಯನ್ನು ಪಂಚಾಯತಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಾಯದಿಂದ ಸ್ವಚ್ಚಗೊಳಿಸಿ ಮತ್ತು ಕೊಳಚೆ ನೀರು ನಿಂತಿರುವ ಗುಂಡಿಗಳನ್ನು ಗ್ರಾಮಸ್ಥರುಮುಚ್ಚಬೇಕು . ಇಲ್ಲವೆಂದರೆ ಸೊಳ್ಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಯಾಗುತ್ತವೆ ಆದ್ದರಿಂದ ರೋಗಗಳು ಹೆಚ್ಚಾಗುತ್ತದೆ ಎಂದು ತಿಳಿಸಿದರು . ಗ್ರಾಮಸ್ಥರು ರುದ್ರಭೂಮಿಗೆ ಜಮೀನು ನೀಡುವಂತೆ , ಕೆ.ಎಸ್.ಆರ್.ಟಿ.ಸಿ. ಬಸ್ ಬೆಳಿಗ್ಗೆ ಒಂದು ಬಾರಿ ಗ್ರಾಮಕ್ಕೆ ಬರುತ್ತಿದೆ . ಇದರಿಂದ ಶಾಲೆಗೆ ಹೋಗುವ ಮಕ್ಕಳು ಗ್ರಾಮಸ್ಥರು ಸಂಜೆ ವೇಳೆಯಲ್ಲಿ ತುಂಬಾ ದೂರದಿಂದ ನಡೆದುಕೊಂಡು ಬರುತ್ತಿದ್ದಾರೆ . ಆದ್ದರಿಂದ ಬಸ್ ಸಂಜೆ ವೇಳೆಯಲ್ಲಿ ಗ್ರಾಮಕ್ಕೆ ಬರಬೇಕು .
ಕೆರೆಯ ಕಟ್ಟೆಯು ಶಿಫಲಗೊಂಡಿದೆ ಹಾಗೂ ಶುದ್ಧ ನೀರಿನ ಘಟಕಗಳನ್ನು ಸರಿಯಾದ ರೀತಿ ನಿರ್ವಹಣೆ ಮಾಡುತ್ತಿಲ್ಲ , ದೇವಾಲಯಕ್ಕೆ ಕಾಂಪೌಂಡ್ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು .
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ರುದ್ರಭೂಮಿಗೆ ಜಮೀನು ಸರ್ವೇ ಮಾಡಿ ನೀಡಲಾಗುವುದು , ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ವ್ಯವಸ್ಥೆ ಮಾಡಲಾಗುವುದು , ಕೆರೆ ಕಟ್ಟೆಯನ್ನು ನರೇಗಾ ಯೋಜನೆಯಡಿಯಲ್ಲಿ ದುರಸ್ಥಿ ಮಾಡಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗುತ್ತಿಗೆದಾರರಿಂದ ಪಂಚಾಯತಿ ವ್ಯಾಪ್ತಿಗೆ ಒಳಪಡಿಸಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ದೇವಾಲಯದ ಕಾಂಪೌಂಡ್ ನಿರ್ಮಿಸಲು ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು . ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ ಅವರು ಉದ್ಘಾಟಿಸಿದರು . ಕಾರ್ಯಕ್ರಮದಲ್ಲಿ ಶ್ರೀಮಂತ ಮತ್ತು ಅನ್ನಪ್ರಸವವನ್ನು ಮಾಡಿದರು .
ಮಾಲೂರು ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಪ್ಪ ಅವರು ಮಾತನಾಡಿ ಕೃಷಿ ಇಲಾಖೆಯಿಂದ ರೈತರಿಗೆ ರಾಗಿ , ಅಲಸಂದೆ , ತೊಗರಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ . 2021-22 ನೇ ಸಾಲಿನಲ್ಲಿ ರೈತರು ಬೆಳೆದ ಬೆಳೆಯನ್ನು ತಾವೇ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಬಹುದು . ರಾಗಿ , ತೊಗರಿ ಬೆಳೆಗಳನ್ನು ಬೆಳೆ ಸಮೀಕ್ಷೆ ಮೂಲಕ ಆಗಸ್ಟ್ 2022 ರೊಳಗೆ ನೋಂದಾಯಿಸಿಕೊಂಡರೆ ಬರ ಅಥವಾ ಪ್ರಕೃತಿ ವಿಕೋಪಗಳಿಂದ ಸಂಭವಿಸುವ ನಷ್ಟವನ್ನು ತುಂಬಬಹುದು .
ಆತ್ಮ ನಿರ್ಭಾರ್ ಭಾರತ ಯೋಜನೆಯಡಿ ಒಂದು ಜಿಲ್ಲೆ ಒಂದು ಬೆಳೆ ಎಂಬ ಕಾರ್ಯಕ್ರಮದಲ್ಲಿ ಯಾವುದೇ ಒಂದು ಬೆಳೆ ಬೆಳೆಯಲು , ಸಾಗಾಣಿಕೆ ಮತ್ತು ಮಾರಾಟ ಮಾಡಲು ತಗಲುವ ವೆಚ್ಚವನ್ನು ಯೋಜನಾ ವರದಿ ತಯಾರಿಸಿ ಆನ್ಲೈನ್ ಮೂಲಕ ನೋಂದಾಯಿಸಿಕೊಂಡರೆ ಸಹಾಯಧನ 30 ಲಕ್ಷದವರೆಗೆ ನೀಡಲಾಗುವುದು . ಸಬ್ಸಿಡಿ 10 ಲಕ್ಷದವರೆಗೆ ನೀಡಲಾಗುವುದು . ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳನ್ನು ಮತ್ತು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು .
ಮಾಲೂರಿನ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಶಿಲ್ಪಶ್ರೀ ಅವರು ಮಾತನಾಡಿ 2021-22 ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚನಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು , ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ವತಿಯಿಂದ 46 ಹನಿ ನೀರಾವರಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ . ಹನಿ ನೀರಾವರಿಯನ್ನು ಬಳಸಿಕೊಳ್ಳಲು ಇಚ್ಛೆಯುಳ್ಳ ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬೇಕು . ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪಾಲಿಹೌಸ್ ನಿರ್ಮಾಣ ಮಾಡುವ ರೈತರಿಗೆ ಶೇಕಡ 50 ರಷ್ಟು ಸಮುದಾಯ ಕೃಷಿ ಹೊಂಡಗಳಿಗೆ 4 ಲಕ್ಷ ಮತ್ತು ಸಣ್ಣ ಕೃಷಿ ಹೊಂಡಗಳಿಗೆ 70 ಸಾವಿರ ಸಹಾಯಧನ ನೀಡಲಾಗುತ್ತದೆ . ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಯಾವುದೇ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಮಾವು , ಸೀಬೆ , ಸಪೋಟ ಹಾಗೂ ಡ್ರಾಗನ್ ಫ್ರಟ್ ಬೆಳೆಯುವುದಕ್ಕೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುವುದು .
ಲಕ್ಕೂರು ಹೋಬಳಿಯಲ್ಲಿ ಹೆಚ್ಚಾಗಿ ರೈತರು ಗುಲಾಬಿ ಹೂವನ್ನು ಬೆಳೆಯುತ್ತಿದ್ದಾರೆ ಎಂದು ಅವರು ತಿಳಿಸಿದರು . ಕಾರ್ಯಕ್ರಮದಲ್ಲಿ ಸಹಾಯಕ ಉಪವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ || ಜಗದೀಶ್ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ , ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರೂಪದೇವಿ , ಮಾಲೂರು ತಹಶೀಲ್ದಾರ್ ಕೆ.ರಮೇಶ್ , ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕೇಶ್ , ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.