ಕೋಲಾರ (ವಿಶ್ವಕನ್ನಡಿಗ ನ್ಯೂಸ್) : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಸುಸ್ಥಿರವಾಗಿರಬೇಕು . ಕುಟುಂಬಗಳಲ್ಲಿ ವ್ಯಾಜ್ಯಗಳಿದ್ದರೆ ಅದು ಅನೇಕ ತೊಡುಕುಗಳಿಗೆ ಕಾರಣವಾಗುತ್ತದೆ . ಅದನ್ನು ಮಾತುಕತೆಯ ಮೂಲಕ ಬಗೆಹರಿಸಲು ಲೋಕ್ ಆದಾಲತ್ನ್ನು ನಡೆಸಲಾಗುತ್ತಿದೆ . ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಡಿಸೆಂಬರ್ 18 ರಂದು ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಆರ್.ನಾಗರಾಜ ಅವರು ತಿಳಿಸಿದರು .
ಇಂದು ಜಿಲ್ಲಾ ನ್ಯಾಯಾಲಯ ಸಂಕೀರಣ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ನ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು , ಸಮಾಜ ಸುವ್ಯವಸ್ಥೆಯಾಗಿರಬೇಕಾದರೆ ವ್ಯಾಜ್ಯಗಳು ಕಡಿಮೆಯಾಗಬೇಕು , ಸಾರ್ವಜನಿಕರು ನೆಮ್ಮದಿಯಾಗಿ ಜೀವನ ನಡೆಸಬೇಕು . ಮನೆ , ಗ್ರಾಮ , ಜಿಲ್ಲೆ ಹಾಗೂ ರಾಜ್ಯ ವ್ಯಾಜ್ಯಗಳು ಕಡಿಮೆಯಾದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ತಿಳಿಸಿದರು .
ಲೋಕ್ ಅದಾಲತ್ನಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿ ಆಗಬಹುದಾದ ಪ್ರಕರಣಗಳನ್ನು , ಚೆಕ್ ಅಮಾನ್ಯ ಪ್ರಕರಣಗಳು , ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು , ಮೋಟರ್ ವಾಹನ ಅಪಘಾತ ಪ್ರಕರಣಗಳು , ಕಾರ್ಮಿಕರ ಪ್ರಕರಣಗಳು , ವಿದ್ಯುತ್ ಕಳ್ಳತನ ಪ್ರಕರಣಗಳು , ಮರಳು ಕಳ್ಳತನ ಪ್ರಕರಣಗಳು , ವೈವಾಹಿಕ ಪ್ರಕರಣಗಳು , ಸಿವಿಲ್ ದಾವೆ , ಜನನ ಮತ್ತು ಮರಣ ನೊಂದಣಿ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳಾದ ವಿದ್ಯುತ್ , ನೀರು , ಬಿಎಸ್ಎನ್ಎಲ್ ಬಿಲ್ ಪಾವತಿ ಪ್ರಕರಣಗಳನ್ನು ರಾಜಿ ಮಾಡಲಾಗುವುದು ಎಂದು ಅವರು ತಿಳಿಸಿದರು .
ಕೋಲಾರ ಜಿಲ್ಲೆಯಲ್ಲಿ 30 ನ್ಯಾಯಾಲಯಗಳಿದ್ದು ಒಟ್ಟು 40,886 ಪ್ರಕರಣಗಳಿವೆ . ಅವುಗಳಲ್ಲಿ ಒಟ್ಟು 9387 ಪ್ರಕರಣಗಳು ರಾಜಿ ಮಾಡಲು ತೆಗೆದುಕೊಳ್ಳಲಾಗಿದೆ . ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿಯಾಗಬಹುದಾದ ಒಟ್ಟು 360 ಪ್ರಕರಣಗಳು , 1492 ಚೆಕ್ ಅಮಾನ್ಯ ಪ್ರಕರಣಗಳು , 381 ಮೋಟರ್ ವಾಹನ ಅಪಘಾತ ಪ್ರಕರಣಗಳು ಮತ್ತು 1696 ವಿಭಾಗದ ದಾವೆ ಪ್ರಕರಣಗಳನ್ನು ಇತರೆ ಪ್ರಕರಣಗಳನ್ನು ರಾಜಿ ಮಾಡಲು ಲೋಕ್ ಆದಾಲತ್ನಲ್ಲಿ ತೆಗೆದುಕೊಳ್ಳಲಾಗಿದೆ . ಅವುಗಳಲ್ಲಿ ಇಲ್ಲಿಯವರೆಗೆ ಸುಮಾರು 2500 ಪ್ರಕರಣಗಳನ್ನು ರಾಜಿ ಮಾಡಲಾಗಿದೆ ಎಂದು ಅವರು ತಿಳಿಸಿದರು .
ಲೋಕ್ ಅದಾಲತ್ನಲ್ಲಿ ರಾಜಿಯಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ . ಎರಡು ಪಕ್ಷಗಾರರು ನೆಮ್ಮದಿಯಿಂದ ಜೀವನ ಮಾಡಬಹುದು . ನ್ಯಾಯಾಲಯದ ಶುಲ್ಕವನ್ನು ಸಹ ಪಕ್ಷಗಾರರಿಗೆ ವಾಪಸ್ ನೀಡಲಾಗುವುದು ಆದ್ದರಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ನ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್ . ಗಂಗಾಧರ , 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್.ಡಿ , 2 ನೇ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹೇಶ್ ಬಾಬು , ಕೌಟಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕನುಮಯ್ಯ , ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀಧರ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.