(ವಿಶ್ವ ಕನ್ನಡಿಗ ನ್ಯೂಸ್) : ಸುಳ್ಯದಲ್ಲಿ ನಡೆದ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಸುತ್ತಿರುವ ಬಂಧನ ಕಾರ್ಯಾಚರಣೆಯು ಖಂಡನಾರ್ಹವಾಗಿದೆ. ಬಿಜೆಪಿ ಸರಕಾರದ ಒತ್ತಡದಲ್ಲಿ ಪೋಲೀಸರು ಅಮಾಯಕರ ಬೇಟೆಯಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.
ಸಂಘಪರಿವಾರ ಯಾವುದೇ ಕಾರ್ಯಕರ್ತರ ಹತ್ಯೆಗಳು ನಡೆದಾಗಲೂ ಬಿಜೆಪಿ ಸಂಸದರು, ಸಚಿವರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು, ಪಾಪ್ಯುಲರ್ ಫ್ರಂಟ್ ಮೇಲೆ ಆರೋಪ ಹೊರಿಸುವುದು, ನಂತರ ಜಿಲ್ಲೆಯ ಪೋಲೀಸರು ಅಮಾಯಕ ಮುಸ್ಲಿಮ್ ಯುವಕರನ್ನು ರಾತ್ರೋರಾತ್ರಿ ವಿಚಾರಣೆಯ ನೆಪದಲ್ಲಿ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸುವುದು ವಾಡಿಕೆಯಾಗಿ ಬಿಟ್ಟಿದೆ. ಘಟನೆ ನಡೆದ ಮರುಕ್ಷಣದಲ್ಲಿ, ವಿಶೇಷವಾಗಿ ಪೋಲೀಸರ ಪ್ರಾಥಮಿಕ ತನಿಖೆ ಪೂರ್ಣಗೊಳ್ಳುವ ಮುನ್ನವೇ ಬಿಜೆಪಿ ನಾಯಕರು ದ್ವೇಷದ ಹೇಳಿಕೆ ನೀಡಿ ಪರಿಸ್ಥಿತಿಯನ್ನು ಪ್ರಕ್ಷ್ಯುಬ್ಧಗೊಳಿಸಿಬಿಡುತ್ತಾರೆ. ನಂತರ ಪೋಲೀಸರ ತನಿಖೆಯೂ ರಾಜಕೀಯ ಪ್ರೇರಿತವಾಗಿಯೇ ಸಾಗುತ್ತದೆ. ಸುಳ್ಯದ ಘಟನೆಯಲ್ಲಂತೂ ಸ್ವಪಕ್ಷೀಯ ಕಾರ್ಯಕರ್ತರೇ ಸಂಸದರು, ಸಚಿವರು ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ಕಾಣಲು ಸಾಧ್ಯವಾಯಿತು. ಇದೀಗ ಸರಕಾರದ ಗಂಭೀರ ಆಡಳಿತ ವೈಫಲ್ಯ ಮುಚ್ಚಿಹಾಕಲು ಮತ್ತು ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ಆಕ್ರೋಶವನ್ನು ಹೇಗಾದರೂ ತಣಿಸುವುದು ಬಿಜೆಪಿಗೆ ಅಗತ್ಯವಾಗಿ ಬಿಟ್ಟಿದೆ. ಜೊತೆಗೆ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿಯವರೂ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸುಳ್ಯದಲ್ಲಿ ನಡೆದ ಹತ್ಯೆ ಘಟನೆ ಬಳಿಕ ಬಿಜೆಪಿಯ ಶವ ರಾಜಕೀಯವನ್ನು ಟೀಕಿಸಿ ಹಿಂದುಗಳಿದ ವರ್ಗಗಳ ನಾಯಕರ ಜಾಗೃತಿ ಮೂಡಿಸುವ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದೆಲ್ಲವೂ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಮುಳುವಾಗಿ ಪರಿಣಮಿಸಲಿದೆ ಎಂಬುದು ಮನವರಿಕೆಯಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ನಾಯಕರ ಸೂಚನೆಯ ಮೇರೆಗೆ ತರಾತುರಿಯಲ್ಲಿ ವಿಚಾರಣೆಯ ನೆಪದಲ್ಲಿ ಕೊಂಡೊಯ್ದು ಘಟನೆಯಲ್ಲಿ ಅಮಾಯಕರನ್ನು ಸಿಲುಕಿಸುತ್ತಿರುವುದು ಬಹಳ ಸ್ಪಷ್ಟವಾಗುತ್ತಿದೆ.
ಸಂಘಪರಿವಾರದ ಕಾರ್ಯಕರ್ತರ ಕೊಲೆ ಘಟನೆಗಳು ನಡೆದಾಗ, ಪ್ರತಿಬಾರಿಯೂ ಬಿಜೆಪಿ ನಾಯಕರು ಸ್ವತಂತ್ರ ತನಿಖೆಗೆ ಅವಕಾಶ ಮಾಡಿಕೊಡದೇ ಇತರ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಾ ಬರುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಸಂಘಪರಿವಾರದ ಕಾರ್ಯಕರ್ತರೇ ಅರೋಪಿಗಳಾಗಿರುವುದು ಪೋಲೀಸ್ ತನಿಖೆಯಲ್ಲಿ ಬಹಿರಂಗವಾಗಿತ್ತು. ಸುಳ್ಯದ ಘಟನೆಯಲ್ಲೂ ಅವರು ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ. ಈ ಹಿಂದೆ ಕಾರ್ತಿಕ್ ರಾಜ್, ಹರೀಶ್ ಪೂಜಾರಿ, ನಂದಿತಾ ಮತ್ತಿತರರ ಹತ್ಯೆ ನಡೆದಾಗಲೂ ಬಿಜೆಪಿ ನಾಯಕರು ಘಟನೆ ನಡೆದಾಕ್ಷಣ ಪಿ.ಎಫ್.ಐ ಹೆಸರನ್ನೇ ತೇಲಿಬಿಟ್ಟಿದ್ದರು. ಇದೇ ದಿಕ್ಕಿನಲ್ಲಿ ತನಿಖೆ ನಡೆಸಿದ್ದ ಪೋಲೀಸರು ಪಿ.ಎಫ್.ಐ ಕಾರ್ಯಕರ್ತರನ್ನು ಚಿತ್ರಹಿಂಸೆಗೂ ಗುರಿಪಡಿಸಿದ್ದರು. ಆದರೆ ಪೋಲೀಸರ ತನಿಖೆ ಮುಗಿಯುವ ಹೊತ್ತಿಗೆ ಆ ಘಟನೆಗಳಲ್ಲಿ ಸಂಘಪರಿವಾರದ ಕಾರ್ಯಕರ್ತರ ಹೆಸರು ಬಹಿರಂಗವಾಗಿತ್ತು. ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಾಗಲೂ ಈಶ್ವರಪ್ಪರಂತಹ ನಾಯಕರು ಘಟನೆಯಲ್ಲಿ ಪಿ.ಎಫ್.ಐ ಕೈವಾಡವಿದೆ ಎಂದು ಪ್ರಚೋದಿಸಿದ್ದರು. ಆದರೆ ಪೋಲೀಸರ ತನಿಖೆಯಲ್ಲಿ ಹರ್ಷ ಓರ್ವ ರೌಡಿಶೀಟರ್ ಆಗಿದ್ದ ಎಂಬುದು ತಿಳಿದು ಬಂದಿತ್ತು ಮತ್ತು ಆ ಕೊಲೆ ಪರಸ್ಪರ ವೈಷಮ್ಯದಿಂದ ನಡೆದ ಕೊಲೆಯಾಗಿತ್ತು ಎಂಬುದು ನಂತರ ಬಹಿರಂವಾಗಿತ್ತು.
ಸುಳ್ಯ ಘಟನೆಗೆ ಸಂಬಂಧಿಸಿ ಬಂಧಿತರಾಗಿರುವ ಯುವಕರ ಕುಟುಂಬಸ್ಥರ ಹೇಳಿಕೆಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಪೋಲೀಸರ ತನಿಖೆಯನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಅವರ ಅಮಾಯಕತೆ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ. ಬಂಧಿತ ಇಬ್ಬರು ಯುವಕರೂ ಅಮಾಯಕರಾಗಿದ್ದು, ಪೋಲೀಸರು ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು.
ಶವ ರಾಜಕೀಯದ ಭಾಗವಾಗಿ ಬಿಜೆಪಿ ನಾಯಕರು ಶವ ಮೆರವಣಿಗೆ ನಡೆಸುವುದು, ಮೆರವಣಿಗೆ ಉದ್ದಕ್ಕೂ ಗಲಭೆ ಎಬ್ಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ಶಿವಮೊಗ್ಗದಲ್ಲಿ ರೌಡಿಶೀಟರ್ ಹರ್ಷನ ಹತ್ಯೆ ನಡೆದಾಗಲೂ ಶಿವಮೊಗ್ಗದ ಕೆಲವು ಕಡೆಗಳಲ್ಲಿ ಬೆಂಕಿ ಹಚ್ಚಲಾಯಿತು. ನಿನ್ನೆ ಸುಳ್ಯದಲ್ಲೂ ಕುಟುಂಬಸ್ಥರ ವಿರೋಧದ ಹೊರತಾಗಿಯೂ ಶವ ಮೆರವಣಿಗೆ ನಡೆಸಲಾಯಿತು. ರಸ್ತೆ ಉದ್ದಕ್ಕೂ ಭೀತಿಯ ವಾತಾವರಣ ಸೃಷ್ಟಿಸಲಾಯಿತು. ಅಂಗಡಿ, ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಸಾರ್ವಜನಿಕ ಸಂಪತ್ತಿಗೂ ಹಾನಿ ಉಂಟು ಮಾಡಲಾಯಿತು. ಪೆÇಲೀಸರನ್ನೂ ಅವಾಚ್ಯವಾಗಿ ನಿಂದಿಸಲಾಯಿತು. ಆದರೆ ಇದರ ವಿರುದ್ಧ ಪ್ರಕರಣ ದಾಖಲಾದ ಬಗ್ಗೆ ಯಾವುದೇ ವರದಿ ಇಲ್ಲ. ಗಲಭೆ ನಡೆಸುವ ಇಂತಹ ಘಟನೆಗಳ ಬಗ್ಗೆ ಪೋಲೀಸರು ಕ್ರಮ ಕೈಗೊಳ್ಳದಿರುವುದು ಕಳವಳಕಾರಿಯಾಗಿದೆ.
ಜಿಲ್ಲೆಯ ಪೋಲೀಸ್ ಇಲಾಖೆ ಬಿಜೆಪಿಯ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಅಮಾಯಕ ಮುಸ್ಲಿಮರನ್ನು ಗುರಿಪಡಿಸದೇ, ನೈಜ ಆರೋಪಿಗಳನ್ನು ಬಂಧಿಸಬೇಕು. ಹತ್ಯೆಗೊಳಗಾದ ಪ್ರವೀಣ್ ತಂದೆಯೂ ಕೆಲವೊಂದು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪೋಲೀಸರು ಅವರ ಹೇಳಿಕೆಯ ಆಯಾಮದಲ್ಲಿಯೂ ತನಿಖೆ ನಡೆಸಬೇಕಾಗಿದೆ. ಜೊತೆಗೆ ಶವಯಾತ್ರೆಯ ಹೆಸರಿನಲ್ಲಿ ಸಾರ್ವಜನಿಕ ಸೊತ್ತಿಗೆ ಹಾನಿ ಉಂಟು ಮಾಡಿದ ಮತ್ತು ಗಲಭೆ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ಕಿಡಿಗೇಡಿಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಅದೇ ರೀತಿ ಹತ್ಯೆ ಘಟನೆಗಳಲ್ಲಿ ಪ್ರತಿಬಾರಿಯೂ ಪೂರ್ವಾಗ್ರಹಪೀಡಿತ ತನಿಖೆಗಳೇ ಎದ್ದು ಕಾಣುತ್ತಿದ್ದು, ಈ ನಿಟ್ಟನಲ್ಲಿ ಸುಳ್ಯದಲ್ಲಿ ನಡೆದ ಹತ್ಯೆ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ.
ನಿರ್ದೇಶಕರು, ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದ.ಕ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.