(www.vknews. in)ಧಾರವಾಡ : ತಮ್ಮ ೮೯ ವರ್ಷಗಳ ಸುದೀರ್ಘ ಸನ್ಯಾಸದ ಬದುಕಿಗೆ ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದೇ ತಮ್ಮೊಳಗಿನ ತಪೋಬಲದಿಂದ ಸದಾಕಾಲವೂ ಭಕ್ತರ ಒಳಿತನ್ನೇ ಬಯಸಿರುವ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು ಓರ್ವ ಆದರ್ಶ ಮಠಾಧೀಶರೆನಿಸಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ೮೯ನೆಯ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ ಜಾಗೃತಿಗೆ ಮತ್ತು ಸಂಸ್ಕೃತಿ-ಸಂಸ್ಕಾರದ ಉಳಿವಿಗಾಗಿ ಶ್ರೀಗಳವರು ನಿರಂತರ ಶ್ರಮಿಸಿದ್ದಾರೆ ಎಂದರು.
ಅಧ್ಯಕ್ಷತೆವಹಿಸಿದ್ದ ನವಲಗುಂದ ತಾಲೂಕು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣವು ಬದುಕಿನಿಂದ ಬಿಡುಗಡೆ ಹೊಂದಲು ಆತ್ಮಜ್ಞಾನದ ಕಲೆಯನ್ನು ಬೋಧಿಸುತ್ತದೆ. ಭಕ್ತ ಸಂಕುಲದಲ್ಲಿ ಆಧ್ಯಾತ್ಮದ ಶಿಕ್ಷಣವು ಅಧಿಕಗೊಳ್ಳಲು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶಕ್ತಿಮೀರಿ ಶ್ರಮಿಸಿದ್ದಾರೆ ಎಂದರು.
*ಇಷ್ಟಲಿಂಗ ಪೂಜೆ* : ಗುರುಗಳಾದ ಶಾಂತಲಿಂಗ ಶಿವಾಚಾರ್ಯರು ಇಷ್ಟಲಿಂಗ ಪೂಜಾ ನಿಷ್ಠರು. ಅವರ ಪ್ರೀತಿಗೆ ಪಾತ್ರವಾಗಿರುವ ಇಷ್ಟಲಿಂಗ ಮಹಾಪೂಜೆಯನ್ನು ಪ್ರಸ್ತುತ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ನಿತ್ಯವೂ ತಾವು ನಡೆಸುತ್ತಿರುವುದಾಗಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಇತರರು ಇದ್ದರು. *ತುಲಾಭಾರ ಸೇವೆ* : ಶೋಭಾ ಯರಗಂಬಳಿಮಠ, ಶಿವಪ್ಪ ರುದ್ರಾಪೂರ, ಬಿ.ಸಿ.ಕೊಳ್ಳಿ, ಅಶೋಕ ಗುಡಿ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಪವನಕುಮಾರ ಕುಸೂಗಲ್ಲ, ನ್ಯಾಯವಾದಿ ಸುನೀಲ ಗುಡಿ, ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಗುರುಬಸವರಾಜ ಮತ್ತೂರಮಠ, ಬಸವರಾಜ ಉಗರಗೋಳ, ಗೋವಾದ ದೀಪಕ ಗೊಡಚಿ ಅವರು ಸಕ್ಕರೆ, ಬೆಲ್ಲ, ಅಕ್ಕಿ, ಗೋಧಿರವೆ ಹಾಗೂ ತೆಂಗಿನಕಾಯಿಗಳಿಂದ ಒಟ್ಟು ೧೦ ವಿಧದ ತುಲಾಭಾರ ಸೇವೆಗಳನ್ನು ಶ್ರೀಗಳಿಗೆ ಸಲ್ಲಿಸಿದರು. ಸಮಾರಂಭದ ಅಂಗವಾಗಿ ಅಬಕಾರಿ ಇಲಾಖೆಯ ಸಿ.ಪಿ.ಐ. ಅಮೃತ ಬಸಯ್ಯ ಗುಡಿ ಅವರು ನಡೆಸಿದ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು. ಶಾಂತಲಿಂಗ ಶ್ರೀಗಳ ವರ್ಧಂತಿ ಅಂಗವಾಗಿ ಶೋಭಾ ಯರಗಂಬಳಿಮಠ ಅವರು ೧೦೮ ಮುತ್ತೈದೆಯರಿಗೆ ಅಮ್ಮಿನಬಾವಿ ಗ್ರಾಮದೇವತೆಯ ಭಕ್ತಿಯ ಸ್ಮರಣೆಯಲ್ಲಿ ಉಡಿ ತುಂಬಿದರು.
ಪ್ರಶಸ್ತಿ ಪ್ರದಾನ : ಧಾರವಾಡ ನಗರದ ಖ್ಯಾತ ಕಾಮಣಿ ರೋಗ ತಜ್ಞ ಡಾ. ನಿತಿನಚಂದ್ರ ಹತ್ತಿಕಾಳ ಹಾಗೂ ಖ್ಯಾತ ಹೃದಯ ರೋಗ ತಜ್ಞ ಡಾ.ಸುಧೀರ ಜಂಬಗಿ ಅವರಿಗೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ವತಿಯಿಂದ *ವೈದ್ಯ ಸೇವಾ ರತ್ನ ಪ್ರಶಸ್ತಿ* ಪ್ರದಾನ ಮಾಡಿ ಗೌರವಿಸಲಾಯಿತು. ಆಕಾಶವಾಣಿ ಕಲಾವಿದೆ ಸುಜಾತಾ ಆರಾಧ್ಯಮಠ ಅವರು ವಚನ ಸಂಗೀತ ಪ್ರಸ್ತುತ ಪಡಿಸಿದರು. ————————————————————————-
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.