(www.vknews.in) : ಒಬ್ಬ ಸತ್ಯವಿಶ್ವಾಸಿಗೆ ಮರಣಕ್ಕಿಂತ ಶ್ರೇಷ್ಟವಾದ ಉಪದೇಶ ಇನ್ನೊಂದಿಲ್ಲ. ಮನೆಗೆ ಆಸರೆಯಾಗಬೇಕಿದ್ದ, ಸಮಾಜಕ್ಕೆ ಮಾದರಿಯಾಗಿ ಬೆಳಯಬೇಕಿದ್ದ ಅದೆಷ್ಟೋ ಯುವಕರು ತಮ್ಮ ಅಮೂಲ್ಯವಾದ ಜೀವವನ್ನು ರಸ್ತೆಯ ಮಧ್ಯೆ ದಾರುಣವಾಗಿ ಕೊನೆಗೊಳಿಸುತ್ತಲೇ ಇದ್ದಾರೆ. ಪ್ರತಿಯೊಂದು ಅಪಘಾತ ನಡೆದಾಗಲೂ ಆ ಸಾವನ್ನು ನೋಡಿ ಕಣ್ಣೀರಾಗುತ್ತಲೇ ಇದ್ದೇವೆ, ಆದರೆ ಅದ್ಯಾವುದೂ ನಮಗೆ ಪಾಠಗಳಾಗಿ ಉಳಿಯುತ್ತಿಲ್ಲ ಎಂಬುವುದು ಮಾತ್ರ ಖೇದಕರ.
ಕಳೆದ ಕೆಲ ವರ್ಷಗಳಿಂದೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕರ ಸಂಖ್ಯೆಯಂತೂ ಬಹಳಷ್ಟಿದೆ. ಅದರಲ್ಲೂ ಬಹುತೇಕ ಅಪಘಾತಗಳಲ್ಲಿ ಮೃತಪಟ್ಟ ಯುವಕರು ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ!, ಕೈಯಲ್ಲೊಂದು ಮೊಬೈಲ್, ಸಂಚರಿಸಲೊಂದು ಬೈಕ್ ಇಲ್ಲದಿದ್ದಲ್ಲಿ ಜೀವಿಸುವುದೇ ವೇಸ್ಟು ಎಂಬಂತಹ ತೀರ್ಮಾನಕ್ಕೆ ಬಿದ್ದಂತಹ ಯುವ ಸಮೂಹಕ್ಕೆ ಉಪದೇಶಗಳು ಖಂಡಿತ ಪಥ್ಯವಾಗಲ್ಲ, ಹಾಗಂತ ಹೆತ್ತವರೂ ತಮ್ಮ ಮಕ್ಕಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬಾರದು.
ಆಯುಷ್ಯ ಮುಗಿದಾಗ ಮರಣ ಸಹಜ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನಿಯಂತ್ರಣ ಕಳೆದುಕೊಳ್ಳುವ ನಮ್ಮ ವರ್ತನೆಗಳು, ಬೇಜವಾಬ್ದಾರಿ ಚಾಲನೆಗಳಿಗೆ ಕಡಿವಾಣ ಹಾಕಬೇಕಾಗಿದೆ. Mom is waiting @ home ಎಂದು ತನ್ನ ಹೊಸ ಬೈಕಿನಲ್ಲಿ ಬರೆಸಿಕೊಂಡಿದ್ದ ಗಟ್ಟಮನೆಯ ಬಿಲಾಲ್ ಬೆಂಗಳೂರು ಸಮೀಪ ರಸ್ತೆ ಅಪಘಾತದಲ್ಲಿ ಮರಣಹೊಂದುತ್ತಾನೆ. ಮನೆಯಲ್ಲಿ ಮಗನ ಬರುವಿಕೆಗಾಗಿ ಕಾದುಕುಳಿತಿದ್ದ ತಾಯಿಗೆ ಕಾಣಲು ಸಾಧ್ಯವಾದದ್ದು ತನ್ನ ಮಗನ ಮಯ್ಯತ್ತಾಗಿತ್ತು!
ಮನೆಯಿಂದ ಹೊರಡುವಾಗ ಒಂದು ದಿನವೂ ತಾಯಿಗೆ ಸಲಾಂ ಹೇಳದೆ ಹೊರಡುತ್ತಿದ್ದ ಹಾಶಿರ್ ಪೆರ್ನಾಳ್ ನ ಮಾರನೇ ದಿನ ಹೋದವ ಮರಳಿ ಬಂದದ್ದು ನಿಶ್ಚಲವಾಗಿ ಮಲಗಿ ಮಯ್ಯತ್ ನ ರೂಪದಲ್ಲಾಗಿತ್ತು!, ಇಂತಹ ಅದೆಷ್ಟು ಮರಣಗಳಾಗಿದೆ ಕಳೆದೊಂದು ವರ್ಷಗಳಲ್ಲಿ ನಾವು ಕೇಳುತ್ತಾ, ನೋಡುತ್ತಾ ಇರುವುದು, ಎಲ್ಲರೂ ಹದಿಹರೆಯದ ಪ್ರಾಯದ ಯುವಕರೇ..!
ಕಾಲೇಜ್ ಗೆ ತೆರಳುತ್ತಿದ್ದ ಶಫೀಕ್ ದಾರಿ ಮಧ್ಯೆ ವಿಧಿಯ ಕರೆಗೆ ಓಗೊಟ್ಟು ಯಾತ್ರೆಯಾದ ಸುದ್ಧಿ ತಿಳಿದು, ಅತ್ತ ಕಡೆ ಹೊರಟ ಸಫ್ವಾನ್ ಕೂಡ ಶಫೀಕ್ ನ ಅದೇ ದಾರಿಯನ್ನು ಹಿಡಿಯಬೇಕಾಯಿತು. ಗಂಟೆಯೊಳಗಡೆ ಒಂದೇ ಕುಟುಂಬದ ಇಬ್ಬರು ಯುವಕರ ಮರಣದ ವಾರ್ತೆ!, ಆ ಮನೆಯವರ, ಕುಟುಂಬದವರ ಪರಿಸ್ಥಿತಿ ಹೇಗಾಗಿರಬಹುದು?, ಕೇವಲ ಆ ಕುಟುಂಬದವರ ಮಾತ್ರ ಅಲ್ಲ, ಪ್ರತಿಯೊಂದು ಹೆತ್ತವರಿಗೂ ಆತಂಕ, ಭಯ ಸದಾ ಕಾಡುತ್ತಿರುತ್ತದೆ. ಮನೆಯಿಂದ ಹೊರಟ ಮಗ ಸ್ವಲ್ಪ ತಡವಾದರೂ ಫೋನ್ ಮಾಡಿ ವಿಚಾರಿಸುವ ಆ ತಾಯಿಯ ಫೋನ್ ಕರೆಗಳು ಅದೆಷ್ಟೋ ಬಾರಿ ಕಿರಿಕಿರಿಯಾಗಿ ಅಂದುಕೊಂಡವರೂ ಇರಬಹುದು. ಹೆತ್ತ ಜೀವದ ಆ ಭಯ ಇಂತಹ ಮರಣದ ವಾರ್ತೆಗಳು ಕೇಳುವಾಗ ಹೆಚ್ಚಾಗುತ್ತಲೇ ಹೋಗುತ್ತದೆ.
ವಿಧಿ ನಮ್ಮನ್ನು ಅರಸಿಕೊಂಡು ಬರುವ ಮುನ್ನ ನಾವಾಗಿ ವಿಧಿಯನ್ನು ಅರಸಿಕೊಂಡು ಹೋಗದೆ, ವಾಹನದಲ್ಲಿ ಸಂಚಾರಿಸುವಾಗಲೂ, ಹದಿಹರೆಯದವರ ಕೈಗೆ ವಾಹನ ನೀಡುವಾಗಲೂ ಜಾಗರೂಕರಾಗೋಣ. ಅಪಘಾತ ಮರಣಗಳಿಂದ ನಮ್ಮೆಲ್ಲರನ್ನೂ ಸಂರಕ್ಷಿಸಲಿ, ಇಂದು ಮಡಿದ ಸಹೋದರರ ಕುಟುಂಬಕ್ಕೆ ಸರ್ವಶಕ್ತನು ಸಹನೆಯನ್ನು ನೀಡಿ ಅನುಗ್ರಹಿಸಲಿ – ಆಮೀನ್.
#ಸ್ನೇಹಜೀವಿ ಅಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.