ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಮಾಡಲು ವಿಶೇಷ ತಂಡ ರಚಿಸುವಂತೆ ಆಗ್ರಹಿಸಿ ರೈತ ಸಂಘದಿಂದ ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ರೈತ ಸ೦ಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮನವಿ ಸಲ್ಲಿಸಿ ಮಾತನಾಡಿ , ಮಾಜಿ ವಿಧಾನ ಸಭಾಧ್ಯಕ್ಷ ಹಾಗೂ ಶಾಸಕರಾದ ಕೆ.ಆರ್.ರಮೇಶ್ ಕುಮಾರ್ರ ತವರಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ ಎಂದು ಆರೋಪಿಸಿದರು.
ಕುಡಿಯುವವನು ಕೇವಲ ಮದ್ಯವನ್ನು ಕುಡಿಯವುದಿಲ್ಲ. ತಾಯಿಯ ಸುಖ ಹೆಂಡತಿಯ ನೆಮ್ಮದಿ ಮಕ್ಕಳ ಕನಸುಗಳು , ತಂದೆಯ ಪ್ರತಿಷ್ಠೆ ಎಲ್ಲವನ್ನು ಒಂದೇ ಗುಟಕಿನಲ್ಲಿ ಕುಡಿದು ಇಡೀ ಸಂಸಾರದ ಮಾನ ಸಾರ್ವಜನಿಕವಾಗಿ ಹರಾಜು ಹಾಕಿ ಕುಟುಂಬಗಳೇ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇದ್ದರೂ ಈ ದುರಂತಗಳ ತಡೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಟೀಕಿಸಿದರು. ಸಾಂಕ್ರಾಮಿಕ ರೋಗಗಳು ಅತಿವೃಷ್ಟಿಯಿಂದ ತತ್ತರಿಸಿ ದುಡಿಯುವ ಕೈಗೆ ಕೆಲಸ ವಿಲ್ಲದೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ತತ್ತರಿಸಿರುವ ಜನ ಸಾಮಾನ್ಯರು ಬುದುಕು ಕಟ್ಟಿಕೊಳ್ಳುತ್ತಿರುವ ಸಮಯದಲ್ಲಿ ಗ್ರಾಮೀಣ ಪ್ರದೇಶಗಳ ಅಕ್ರಮ ಮದ್ಯ ಮಾರಾಟ ಬಡವರ ಅನ್ನವನ್ನು ಕಸಿದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತೆರಹಳ್ಳಿ ಆಂಜಿನಪ್ಪ ಮಾತನಾಡಿ , ಸರ್ಕಾರ ನಿಂತಿರುವುದು ಬಡ ರೈತ ಕೂಲಿಕಾರ್ಮಿಕರ ಕುಟುಂಬಗಳನ್ನು ಹಾಳು ಮಾಡುವ ಮದ್ಯ ಮಾರಾಟದ ಆದಾಯದಿಂದ ಎಂಬ ಹೇಳಿಕೆಗಳು ಖಂಡನೀಯವಾಗಿದ್ದು , ಅಕ್ರಮ ಮದ್ಯ ಮಾರಾಟ ತಡೆಯದಿದ್ದರೆ ಬಡವರು ಹಾಗೂ ಮಹಿಳೆಯರ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.
ಲಕ್ಷಾಂತರ ಕುಟುಂಬಗಳ ಸ್ವಾಭಿಮಾನ ಬುದುಕು ಕಟ್ಟಿಕೊಟ್ಟಿರುವ ಹಾಲಿನ ದರ 25 ರೂಪಾಯಿ ಅದೇ ಕುಟುಂಬಗಳನ್ನು ನಾಶ ಮಾಡುವ ಮದ್ಯದ ಬೆಲೆ 150 ರಿಂದ 1000 ರೂಪಾಯಿಯವರೆಗೆ ಮಾರಾಟ ಮಾಡುತ್ತಿರುವ ಸರ್ಕಾರಕ್ಕೆ ಬಡವನ ಬದುಕಿನ ಬೆಲೆ ಗೊತ್ತಿಲ್ಲ ಎಂದರು.
24 ಗಂಟೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮದ್ಯ ಮಾರಾಟ ಮಾಡುವ ದಂಧೆ ಕೋರರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಸಾವಿರಾರು ಮಹಿಳೆಯರೊಂದಿಗೆ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ , ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ , ಕೋಟೆ ಶ್ರೀನಿವಾಸ್ , ಶೇಷಾದ್ರಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ , ಮಂಗಸಂದ್ರ ತಿಮ್ಮಣ್ಣ , ರಾಮಕ್ಕ , ವೆಂಕಟಮ್ಮ , ಕೊಲ್ಲೂರು ವೆಂಕಟ್ , ರಾಜೇಂದ್ರಣ್ಣ , ಶೇಕ್ಷ ಪಿವುಲ್ಲಾ , ಕುಡುವನ ಹಳ್ಳಿ ಸುರೇಶ್ , ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ , ವಕ್ಕಲೇರಿ ಹನುಮಯ್ಯ , ಸಂದೀಪ್ರೆಡ್ಡಿ , ಸಂದೀಪ್ಗೌಡ , ವೇಣು , ಮುದುವಾಡಿ ಗಂಗಪ್ಪ , ಲೋಕೇಶ್ , ಸಹದೇವಣ್ಣ , ಗಂಗಾಧರ್ , ಆಲವಾಟಿ ಶಿವ ಮುಂತಾದವರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.