(www.vknews.in) ಮಂಗಳೂರು, -ರಾಜ್ಯದಲ್ಲಿ ಕಾಂಗ್ರೆಸ್,ಜೆಡಿಎಸ್, ಬಿಜೆಪಿಯಂತಹ ಸಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಆಮ್ ಆದ್ಮಿ ಬೆಳೆಯಲಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ಸಿ. ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ಹಾಗೂ ಅಭಿವೃದ್ಧಿ ವಿಚಾರಗಳನ್ನು ಒಪ್ಪಿ ಜನ ನಮ್ಮ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷವು ಕರಾವಳಿ ಜಿಲ್ಲೆಗಳಲ್ಲೂ ಹೊಸ ರಾಜಕೀಯ ಶಕ್ತಿಯಾಗಿ ಬೆಳೆಯಲಳಿದೆ ಎಂದ ಪೃಥ್ವಿರೆಡ್ಡಿಯವರು ಎಎಪಿಯು ಮಂಗಳವಾರ ಮಂಗಳೂರನಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ ಎಂದರು. ಮಂಗಳೂರು ಅಭಿವೃದ್ಧಿ ಆಗಿಲ್ಲ ರಸ್ತೆ ಹೆದ್ದಾರಿ, ಸಮುದ್ರ ಮಾರ್ಗ, ವಿಮಾನ ನಿಲ್ದಾಣ, ಈ ಮೂರು ಮೂಲಭೂತ ಸೌಲಭ್ಯಗಳು ಇರುವ ನಗರ ರಾಜ್ಯದಲ್ಲಿ ಬೇರೊಂದಿಲ್ಲ. ಇದರೊಂದಿಗೆ ಉತ್ತಮ ಶೈಕ್ಷಣಿಕೆ ಸೌಲಭ್ಯ ಇದ್ದರೂ ಯಾವುದೇ ಸರಕಾರಗಳು ಮಂಗಳೂರಿನ ಅಭಿವೃದ್ದಿಗೆ ಆದ್ಯತೆ ನೀಡಿಲ್ಲ. ಎಲ್ಲ ಅಭಿವೃದ್ಧಿಗಳು ಬೆಂಗಳೂರು ಕೇಂದ್ರಿತ ಆಗಿರುವುದು ಸರಿಯಲ್ಲ ಎಂದವರು ಹೇಳಿದರು. ‘ನವದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಶೇ 99ಕ್ಕಿಂತಲೂ ಹೆಚ್ಚು ಫಲಿತಾಂಶ ದಾಖಲಿಸುತ್ತಿವೆ. ಅಲ್ಲಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಐಐಟಿ, ನೀಟ್ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ನಮ್ಮ ರಾಜ್ಯದಲ್ಲಿ ವ್ಯತಿರಿಕ್ತ ಸ್ಥಿತಿ ಇದೆ. ಇಲ್ಲಿ ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದಲೂ ತಿಂಗಳಿಗೆ 100 ರೂಪಾಯಿ ಶುಲ್ಕ ಪಡೆಯಲು ಸರ್ಕಾರ ಮುಂದಾಗಿದೆ’ ಎಂದರು. ‘ನವದೆಹಲಿ ಹಾಗೂ ಪಂಜಾಬ್ ಸರ್ಕಾರಗಳು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ತೋರಿಸುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಸರ್ಕಾರವೇ ಶೇ 40 ಪರ್ಸೆಂಟ್ ಕಮಿಷನ್ ದಂಧೆಯ ಹಿಂದೆ ಬಿದ್ದಿದೆ. ನಮ್ಮಲ್ಲೂ ಸಕಾರಾತ್ಮಕ ಬದಲಾವಣೆಗಳು ಆಗಬೇಕಲ್ಲವೇ’ ಎಂದು ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಆದರೆ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜೂ ಇಲ್ಲ. ಹಣ ಇದ್ದವರಿಗೆ ಮಾತ್ರ ಉನ್ನತ ಶಿಕ್ಷಣ ಎಂಬ ಸ್ಥಿತಿ ಇದೆ ಎಂದರು. ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂದು ಎಲ್ಲರೂ ಒಪ್ಪಿದ್ದಾರೆ. ಹೀಗಿದ್ದರೂ ಅದನ್ನು ಬಿಜೆಪಿ ನೇತೃತ್ವದ ಸರ್ಕಾರ ತೆರವುಗೊಳಿಸಿಲ್ಲ. ಅದರ ಬದಲು, ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅವಧಿಯಲ್ಲಿ ಅದನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಆಳ್ವಿಕೆಯಿಂದ ಬೇಸತ್ತು ಜನರು ಬಿಜೆಪಿಯನ್ನು ಗೆಲ್ಲಿಸಿದ್ದರು ಎಂಬುದು ನಳಿನ್ ಅವರಿಗೆ ಗೊತ್ತಿಲ್ಲವೇ. ಟೋಲ್ ಗೇಟ್ ರದ್ದುಪಡಿಸಲು ವಿಳಂಬ ಯಾಯೆ ಎಂದವರು ಪ್ರಶ್ನಿಸಿದರು. ನಮ್ಮ ಕ್ಲಿನಿಕ್ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ರಾಜ್ಯ ಸರ್ಕಾರವು ಎಎಪಿಯ ಕಾರ್ಯಕ್ರಮಗಳನ್ನು ನಕಲಿ ಮಾಡುತ್ತಿದೆ.ಪ್ರತಿಪಕ್ಷ ಅದನ್ನು ಕಾಪಿ ಮಾಡುತ್ತದೆ ಎಂದರೆ ಅದರ ಅರ್ಥವೇನು. ಚೆನ್ನಾಗಿದೆ ಎಂದಲ್ಲವೇ ಎಂದ ಅವರು ಇದು ನಮ್ಮ ಪಕ್ಷದ ಆಡಳಿತಕ್ಕೆ ಸಿಕ್ಕ ಮನ್ನಣೆಯಾಗಿದೆ ಎಂದರು. ನವದಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೋಟಿನಲ್ಲಿ ಲಕ್ಷ್ಮೀ ಮತ್ತು ಗಣಪತಿಯ ಚಿತ್ರ ಮುದ್ರಿಸಬೇಕು ಎಂದು ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಅವರು, ಜಾತಿ ಧರ್ಮಗಳು ವಾಸ್ತವ. ಅವುಗಳನ್ನು ಬಳಸಿ ವಿಭಜನೆಯ ರಾಜಕೀಯವನ್ನು ನಾವು ಮಾಡುವುದಿಲ್ಲ ಎಂದರು. ಮಂಗಳೂರಿನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪಕ್ಷವು ದೂರದೃಷ್ಟಿ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದು, ಪ್ರವಿಧಾನಸಭಾ ಕ್ಷೇತ್ರಕ್ಕು ಪ್ರತ್ಯೇಕ ಅಭಿವೃದ್ಧಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ತಿಳಿಸಿದರು. ಪಕ್ಷದ ಮಾಧ್ಯಮ ಸಂಚಾಲಕ ವೆಂಕಟೇಶ ಬಾಳಿಗ, ಕರಾವಳಿ ಜಿಲ್ಲೆಗಳ ಸಮನ್ವಯಕಾರ ವಿವೇಕಾನಂದ ಸಾಲಿನ್ಸ್, ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.