(ವಿಶ್ವ ಕನ್ನಡಿಗ ನ್ಯೂಸ್) : ಎಲ್ಲ ಪಕ್ಷದವರೊಂದಿಗೆ ಚೆನ್ನಾಗಿದ್ದಾರೆ, ಸಮಾಜದಲ್ಲಿ ಜನಪ್ರಿಯ ನಾಯಕರು, ಬೆಂಬಲಿಗರ ಪಡೆಯೂ ಇದೆ. ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಅವರು ಯಾವ ಪಕ್ಷದಿಂದ ಸ್ಪರ್ಧಿಸುವುದು ಎಂದು ಬರೆಯುವುದೇ ಪತ್ರಕರ್ತನಿಗೆ ದೊಡ್ಡ ಸವಾಲು !, ಈ ಜನಪ್ರಿಯ ಬಂಟ ನಾಯಕರಿಗೆ ಯಾವ ಪಕ್ಷದಿಂದ ಟಿಕೆಟ್ ಸಿಗುವುದೋ ಎನ್ನುವುದೇ ಗೊಂದಲ..!
ಎರಡೂ ಕಡೆ ಕಾಲಿಟ್ಟವರ ಪಟ್ಟಿ ಹೀಗಿದೆ ನೋಡಿ…
ಅಶೋಕ್ ಕುಮಾರ್ ರೈ ಕೋಡಿಂಬಾಡಿ ಕಟ್ಟಾ ಬಿಜೆಪಿಗ. ಡಿವಿ ಸದಾನಂದ ಗೌಡರ ಆತ್ಮೀಯ ಬಂಟ. ಕಳೆದ ಬಾರಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿ ! ಸತ್ತರೂ ಬಿಜೆಪಿಯಲ್ಲಿಯೇ ಎಂದು ಹೇಳಿಕೆ ನೀಡಿ ಇನ್ನೂ 4 ವರ್ಷ ಆಗಿಲ್ಲ. ಈಗ ಕಾಂಗ್ರೆಸಿನ ಪಡಸಾಲೆಯೊಳಗೆ ಕಾಲಿಟ್ಟಿದ್ದಾರೆ. ಮಾತ್ರವಲ್ಲ ಪುತ್ತೂರಿಂದ ಕೈ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿ !
ಅರ್ಜಿ ಸಲ್ಲಿಸದೇ ಇದ್ದರೂ ಟಿಕೆಟ್ ನೀಡುವಾಗ ಪರಿಗಣಿಸಲಾಗುವುದು ಎಂಬ ಅಧ್ಯಕ್ಷರ ಹೇಳಿಕೆ ಹೊರಬಂದಿದ್ದೇ ತಡ ಅನೇಕರು ಜಾಗೃತರಾಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಇದೆ. ಕಾರ್ಕಳದಿಂದ ಸ್ಪರ್ಧೆಯಂತೆ! ಆದರೆ ಅವರು ಈಗ ಇರುವುದು ಬಿಜೆಪಿಯಲ್ಲಿ, ಬಿಜೆಪಿ ಸರಕಾರದ ಯಾವುದೋ ಹಿಂದುಳಿದ ಆಯೋಗದ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಾರೆ. ಹೆಗ್ಡೆ ಅವರು ಕಾರ್ಕಳ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ. ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರಂತೆ ! ಬಂಟರ ನಾಯಕತ್ವ ಸಿಕ್ಕಿದರೆ ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರನ್ನು ಮಣಿಸುವ ಪ್ರಯತ್ನಕ್ಕೆ ಸ್ವಲ್ಪ ಮಟ್ಟಿನ ಯಶಸ್ಸು ಸಿಗಬಹುದು ಎನ್ನುವ ಲೆಕ್ಕಾಚಾರ.! ಮತ್ತೊಂದು ಈ ಹೆಗ್ಡೆಯವರಿಗೆ ಬೈಂದೂರಿಂದ ಬಿಜೆಪಿಯಿಂದಲೇ ಟಿಕೆಟ್ ಅಂಥ ಗುಸು ಗುಸು ಇದೆ… ಪುಣ್ಯಾತ್ಮರು…
ಇನ್ನೊಬ್ಬರು ಮುನಿಯಾಲು ಉದಯಕುಮಾರ್ ಶೆಟ್ಟಿ ! ಇವರೂ ಕೂಡಾ 2018ರಲ್ಲಿ ಕಾಂಗ್ರೆಸಿಂದ ಕಾರ್ಕಳದಲ್ಲಿ ಟಿಕೆಟ್ ಗಾಗಿ ಪ್ರಬಲ ದಾವೆದಾರ್ ಆಗಿದ್ದವರು. ಕಳೆದ ಬಾರಿ ಒಂದುವೇಳೆ ಕಾಂಗ್ರೆಸಿಂದ ಸ್ಪರ್ಧಿಸಿದ್ದರೆ ಸೋಲು ಖಚಿತವಾಗಿದ್ದರೂ ಈ ಬಾರಿ ಖಂಡಿತ ಗೆಲುವಿನ ಆಸೆಯಂತೂ ಇದ್ದೇ ಇರುತ್ತಿತ್ತು. ಮೊಯ್ಲಿ ಹೈಕಮಾಂಡ್ ಕೈವಾಡದಿಂದಾಗಿ ಟಿಕೆಟ್ ಕೈ ತಪ್ಪಿ ಹೋಯಿತು. ಜತೆಗೆ ಬಿಜೆಪಿ ಸರಕಾರ ಬಂದ ಮೇಲೆ ಅವರ ಕಾಂಟ್ರಾಕ್ಟ್ಗಳೂ ಕೈ ತಪ್ಪಿ ಹೋಗತೊಡಗಿದವು. ಅವರು ಇತ್ತೀಚೆಗೆ ಬಿಜೆಪಿ ಸೇರಿಕೊಂಡಿದ್ದಾರೆ. ಈಗ ಅವರ ಹೆಸರು ಮತ್ತೆ ಪುನಃ ಕಾಂಗ್ರೆಸಿಂದ ಕೇಳಿ ಬರುತ್ತಿದೆ.
ಇದಕ್ಕೆ ಕಾರಣವೂ ಇದೆ ಶ್ರೀರಾಮಸೇನೆಯ ಮುತಾಲಿಕ್ ಆಗಮನದಿಂದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಪಕ್ಷದೊಳಗಿನ ಅಸಮಾಧಾನ, ಹಿಂದೂ ಕಾರ್ಯಕರ್ತರ ಆಕ್ರೋಶಗಳು ಒಂದೊಂದಾಗಿಯೇ ಹೊರಬರತೊಡಗಿದೆ. ಸಣ್ಣಗೆ ಕಂಡುಬರುತ್ತಿರದ್ದ ಈ ಅಲೆ ಬರಬರುತ್ತಾ ದೊಡ್ಡದಾಗುತ್ತಿರುವುದನ್ನು ನೋಡಿ ಕಾರ್ಕಳದ ಕಾಂಗ್ರೆಸ್ ಟಿಕೆಟ್ಗೂ ಡಿಮ್ಯಾಂಡ್ ಬರುತ್ತಿದೆ.*
ಒಂದು ಹಂತದಲ್ಲಿ ಕಾರ್ಕಳ ಮತ್ತು ಕುಂದಾಪುರದಲ್ಲಿ ಕೈ ಟಿಕೆಟ್ ಮಾರುಕಟ್ಟೆ ಬಾಜಿಯಲ್ಲಿ ಡಿಮಾಂಡೇ ಇರಲಿಲ್ಲ. 2:8 ಬಾಜಿ ಇತ್ತು. ಈಗ ಮುತಾಲಿಕ್ ಪ್ರವೇಶ ಮತ್ತು ಸ್ಥಳೀಯರ ಅಸಮಾಧಾನ-ಆಕ್ರೋಶಗಳಿಂದಾಗಿ ಕೈ ಟಿಕೆಟ್ಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಇದರಿಂದಾಗಿ ನ್ಯಾಯವಾಗಿ ಟಿಕೆಟ್ ಕಟ್ಟಾ ಕಾಂಗ್ರೆಸಿಗ, ನಿಷ್ಠೂರವಾದಿ ಮತ್ತು ಪ್ರಾಮಾಣಿಕ ರಾಜಕಾರಣಿ ಹಾಗೂ ನಿಜವಾದ ಬಿಲ್ಲವ ಮುಖಂಡರೂ ಆಗಿರುವ ಮುದ್ರಾಡಿಯ ಮಂಜುನಾಥ ಪೂಜಾರಿಗೆ ಸಿಗಬೇಕಿತ್ತು.
ಈಗ ಕಾರ್ಕಳದಲ್ಲಿ ಬಂಟನಾಯಕರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯವರು ಪಕ್ಷದ ಆಯಕಟ್ಟಿನ ಜಾಗದಲ್ಲಿ ಪ್ರದರ್ಶನ ಮೂರ್ತಿಗಳಂತೆ ಬಂಟರ ಮುಖಗಳನ್ನು ತೋರಿಸಿ ಪ್ಯಾಚ್ ಅಪ್ ಸರ್ಕಸ್ ಮಾಡಿದ್ದಾರೆ. ಆದರೂ ಪ್ರಬಲ ಬಂಟ ನಾಯಕ ಸ್ಪರ್ಧಿಸಿದರೆ….
ಬಂಟ- ಬಿಲ್ಲವ ರಾಜಕೀಯ: ಜಾತಿ ರಾಜಕೀಯ ಖಂಡಿತಾ ತಪ್ಪು. ಆದರೆ ಸಮಾಜದಲ್ಲಿ ಆ ರೀತಿಯ ಟ್ರೆಂಡ್ ಇದೆ. ಬೇರೆ ಕಡೆ ಒಕ್ಕಲಿಗರು, ಲಿಂಗಾಯತರು ಸ್ಪರ್ಧೆ ಮಾಡಿದರೆ ಪಕ್ಷ ಪಾತ ಮಾಡದೆ ಸಮುದಾಯದವರಿಗೆ ಓಟು ಹಾಕುವ ದೊಡ್ಡ ಸಂಖ್ಯೆಯ ಮತದಾರರಿದ್ದಾರೆ. ಕರಾವಳಿಯಲ್ಲಿ ಸಣ್ಣ ಮಟ್ಟದಲ್ಲಿತ್ತು. ದೊಡ್ಡ ಮಟ್ಟಕ್ಕೆ ಹೋದರೆ ಫಲಿತಾಂಶಗಳು ಬುಡಮೇಲಾಗಬಹುದು, ಇದರ ಹಿಂದೆ ಅಭ್ಯರ್ಥಿಗಳ ಬದಲಾವಣೆಯೂ ಸೇರಿದರೆ…. ನೀರಿಗಿಂತ ಕೆಸರೇ ಹೆಚ್ಚಾಗಿ ಕಮಲಕ್ಕೆ ಉಸಿರಾಟ ಕಷ್ಟವಾಗುವುದು…
ವಿ.ಸೂ ; ಪ್ರಮೋದ್ ಮಧ್ವರಾಜ್ ಹೆಸರು ಬಿಜೆಪಿಗೆ ಸೇರುವ ಮುನ್ನ ಬಿಜೆಪಿ ಮತ್ತು ಕಾಂಗ್ರೆಸಿಂದ ಕೇಳಿ ಬರ್ತಾ ಇತ್ತು. ಈ ಬಾರಿ ಬಿಜೆಪಿಯಲ್ಲೂ ಹೆಸರು ಕ್ಷೀಣವಾಗಿದೆ. ಮೊನ್ನೆ ನಮ್ಮ ಪತ್ರಿಕೆಗಾಗಿ ಒಂದು ವಿಶ್ಲೇಷಣೆ ಬರೆದಿದ್ದೆ. ಕೆಲವು ಅಪ್ಡೇಟ್ ಆಗಬೇಕಿತ್ತು ಎನ್ನುವುದು ಕೆಲವರ ಅಭಿಪ್ರಾಯ. ಒಂದು ಕ್ಷೇತ್ರಕ್ಕೆ ಎರಡು ಪ್ಯಾರ ವಿಶ್ಲೇಷಣೆ ಇರುವಾಗ ಇಂಥ ದೊಡ್ಡವರ ಹೆಸರು ಬರೆಯುವಾಗ ದೊಡ್ಡ ವಿಶ್ಲೇಷಣೆಯೂ ಬೇಕಾಗುತ್ತದೆ.. ಅಲ್ವಾ…ನೀವೇ ಹೇಳಿ… ಅಂದ ಹಾಗೆ ಬೊಮ್ಮಾಯಿಗೆ ಟಿಕೆಟ್…!!!
— ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.