ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಹೆಣ್ಣನ್ನು ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಒಂದು ಜವಾಬ್ದಾರಿ. ಹೆಣ್ಣು ಹೆಣ್ಣೆಂದು ಹೀಗಳಿಯದಿರಿ ನಿಮ್ಮನ್ನು ಹೆತ್ತವಳು ಹೆಣ್ಣಲ್ಲವೇ ಹೆಣ್ಣನ್ನು ಗೌರವಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್. ಹೊಸಮನಿ ಅವರು ಹೇಳಿದರು.
ಇಂದು ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಹೆಣ್ಣು ತಾಯಿಯಾಗಿ, ಅಕ್ಕ-ತಂಗಿಯಾಗಿ, ಪ್ರಜೆಯಾಗಿ, ಅತ್ತೆಯಾಗಿ ಎಲ್ಲಾ ರೀತಿಯಾದಂತಹ ಒಂದು ಶ್ರೇಷ್ಠವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ರಾಜಕೀಯವಾಗಿ, ಸಾಮಾಜಿಕವಾಗಿ, ನ್ಯಾಯಾಂಗ ಇಲಾಖೆ, ಇವುಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರು ಎಲ್ಲಾ ರೀತಿಯಿಂದ ಮುಂದೆ ಬರಬೇಕು ಒಳ್ಳೆಯ ಸಮಾಜ ನಿರ್ಮಾಣ ಮಾಡೋಣ ಭವಿಷ್ಯದ ಸಾಧನೆಗಳಿಗಾಗಿ ಅವರನ್ನು ಪ್ರೇರೇಪಿಸೋಣ. ಯಾವ ಸಮಾಜದಲ್ಲಿ ಮಹಿಳೆಯನ್ನು ಗೌರವಿಸಲಾಗುತ್ತದೆಯೋ ಅದು ಉತ್ತಮ ಸಮಾಜವಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿಚಂದ್ರನ್ ಅವರು ಮಾತನಾಡಿ ಈಗಿನ ವ್ಯವಸ್ಥೆಯನ್ನು ನೋಡಿದಾಗ ಮಹಿಳೆಯರು ಪುರುಷರಿಗೆ ಸಮಾನರಾಗಿದ್ದಾರೆ ಯಾವುದೇ ರೀತಿಯ ಹಂತದಲ್ಲೂ ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದಾರೆ. ಶಿಕ್ಷಣದಲ್ಲಿ ಸಹ ಹೆಣ್ಣು ಮಕ್ಕಳೇ ಮೊದಲ ಸ್ಥಾನವನ್ನು ಪಡೆದಿರುತ್ತಾರೆ. ಎಲ್ಲಾ ರೀತಿಯ ಸಾಧನೆಯನ್ನು ಮಾಡಿದ್ದಾರೆ. ಮುಂದೆ ಬರುವಂತಹ ಲೋಕಸಭಾ ಚುನಾವಣೆಗೆ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಮತ ಹಾಕಬೇಕು ಎಂದು ಹೇಳಿದರು. ಎಲ್ಲರೂ ಸಹ ನಿರ್ಭೀತಿಯಿಂದ ನಿರ್ಭಯದಿಂದ ಮತವನ್ನು ಹಾಕಬೇಕು. ಮತವನ್ನು ಹಣಕ್ಕೆ ಮಾರಾಟ ಮಾಡಬಾರದು ನಾವುಗಳು ಆಯ್ಕೆ ಮಾಡಿ ಮತವನ್ನು ಚಲಾಯಿಸಬೇಕು. ಚುನಾವಣೆಯ ಪೂರಕವಾಗಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸ್ವೀಪ್ ವತಿಯಿಂದ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ ಅವರು ಮಾತನಾಡಿ, ನಗರದ ಹಲವು ಮತಗಟ್ಟೆಗಳಲ್ಲಿ ಕನಿಷ್ಠ ಪ್ರಮಾಣದ ಮತದಾನವನ್ನು ಹೊಂದಿದ್ದು, ಅಲ್ಲಿನ ಸ್ವಯಂ ಸೇವಕರನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಡಾ. ಚೈತ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಮ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ, ನಿರೂಪಣಾಧಿಕಾರಿ ವಂಶಿಕೃಷ್ಣ, ಎಲ್ಲಾ ತಾಲ್ಲೂಕುಗಳ ಸಿ.ಡಿ.ಪಿ.ಒ ಗಳು, ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.