(www.vknews. in) ; ಬಡವರು ಕಷ್ಟಪಟ್ಟು ಧನಿಕರ ಕೆಲಸ ಮಾಡಿಕೊಡುತ್ತಾರೆ. ಧನಿಕರ ಮನೆಯ ಆಧುನಿಕ ಸಲಕರಣೆಗಳ ರಿಪೇರಿ, ವಿದ್ಯುತ್ ದೋಷಗಳ ದುರಸ್ತಿ, ವಾಹನಗಳ ದುರಸ್ಥಿ, ಆಹಾರ ಸಾಮಗ್ರಿಗಳ ಸರಬರಾಜು ಮುಂತಾದ ಸರ್ವಿಸ್ ಗಳನ್ನು ಮಾಡುತ್ತಾ ಇರುತ್ತಾರೆ. ಬಡವರಿಗೆ ಇದರಲ್ಲಿರುವ ಧ್ಯೇಯ ಅವರ ಮತ್ತು ಅವರ ಹೆಂಡ್ತಿ ಮಕ್ಕಳ ಹೊಟ್ಟೆಪಾಡಿನ ಪೂರೈಕೆ. ಅವರು ಮಾಡಿಕೊಟ್ಟ ಸರ್ವಿಸ್ ಗೆ ಧನಿಕರು ಕೊಡುವ ದುಡ್ಡು ಅವರಿಗೆ ಮುಖ್ಯವಾಗಿರುತ್ತದೆ. ಅದಕ್ಕೆಂದೇ ಅವರು ಕಷ್ಟಪಟ್ಟು ಈ ಸರ್ವೀಸ್ ಮಾಡುತ್ತಿರುವುದು.
ಆದರೆ ಕೆಲವು ಧನಿಕರು ಬಡವರ ಈ ಅವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸರ್ವಿಸ್ ಮಾಡಿ ಮುಗಿಸಿದ ತಕ್ಷಣ ದುಡ್ಡು ಕೊಡದೆ ಸತಾಯಿಸುತ್ತಾರೆ. ನಿನಗೇನು ಮಾರಾಯ ಅಷ್ಟು ಅರ್ಜೆಂಟು, ಕೊಡೋಣ ಎಂದು ಹೇಳಿ ಸತಾಯಿಸುತ್ತಾರೆ. ಹಾಗೆ ಬರಿಗೈಲಿ ಹೋಗುವ ಬಡವನಿಗೆ ಇಂದಿನ ಮನೆಯವರ ಊಟದ ವ್ಯವಸ್ಥೆ ಆ ದುಡ್ಡಿನಿಂದಲೇ ಆಗಬೇಕಾಗಿರುತ್ತದೆ. ಆ ಪರಿಸ್ಥಿತಿಯಲ್ಲಿ ಅವನು ಬರಿಗೈಯ್ಯಲ್ಲಿ ಹೋಗುವಾಗ ಅವನ ಮನಸ್ಥಿತಿ ಹೇಗಿರಬಹುದೆಂದು ಧನಿಕರು ಯೋಚಿಸುವುದಿಲ್ಲ. ಕೋಟಿಗಳ ಕಾರು, ಬಂಗಲೆ, ಆಸ್ತಿಗಳಲ್ಲಿ ಮುಳುಗಿರುವ ಅವರಿಗೆ ಇವನಿಗೆ ಐನೂರು ರೂ. ದೊಡ್ಡದು ಎಂಬುದನ್ನು ಅವರು ಗಮನಿಸುವುದಿಲ್ಲ. ಅವರಿಗೆ ಐನೂರು ರೂ. ನಗಣ್ಯವಾಗಿರಬಹುದು. ಆದರೆ ಬಡವರಿಗೆ ಅದು ನಗಣ್ಯವಲ್ಲ, ಗಣ್ಯವಾಗಿರುತ್ತದೆ. ಅದರ ಜೊತೆಗೇ ಧನಿಕ ಕೋಟಿಗಳ ಆಸ್ತಿಯೂ ಅವರಿಗೆ ನಗಣ್ಯವಾಗಿರುತ್ತದೆ. ಇವನಿಗೆ ಕೋಟಿಗಳಿರುವುದರಿಂದ ಅವರಿಗೇನು ಪ್ರಯೋಜನ? ಅವರಿಗೆ ಅಂದಂದಿನ ಕೂಲಿಯೇ ಮುಖ್ಯ , ಅದುವೇ ಗಣ್ಯ.
“ಕೆಲಸಗಾರರ ಕೂಲಿಯನ್ನು ಅವರ ಬೆವರು ಆರುವ ಮೊದಲೇ ಕೊಟ್ಟುಬಿಡಿ” ಎಂದು ಪ್ರವಾದಿಯವರು ( ಸ) ಹೇಳಿದ್ದು ಎಷ್ಟೊಂದು ಅರ್ಥ ಪೂರ್ಣ! ಯಾರೇ ಆಗಲಿ, ಯಾವ ಜಾತಿಯವನೇ ಆಗಿರಲಿ, ದುಡಿಮೆಯ ಫಲವನ್ನು ತಕ್ಷಣ ಕೊಟ್ಟುಬಿಡಬೇಕು. ಕೂತಲ್ಲಿಂದ ಎದ್ದು ಹೋಗಿ ತಿಜೋರಿ ತೆರೆದು ತಂದು ಕೊಡಲು ಬರೀ ಉದಾಸೀನದಿಂದ ಮಾತ್ರ ಮತ್ತೆ ಕೊಡೋಣ ಎಂದು ಹೇಳುವ ಧನಿಕರೂ ಕೂಡಾ ಇದ್ದಾರೆ. ಅವರಿಗೆ ಬಡವರ ಕಷ್ಟ ಗೊತ್ತಿರುವುದಿಲ್ಲ. ಇವನು ಎಲ್ಲಾ ಕಡೆ ದುಡಿಯಲು ಹೋಗುತ್ತಾನೆ, ಮತ್ತೆ ಯಾಕೆ ಅವಸರ ಎಂದು ಯೋಚಿಸುವವರೂ ಇದ್ದಾರೆ. ಅವರಿಗೇಕೆ ಆ ವಿಷಯ? ದುಡಿದವನ ದುಡಿಮೆಯ ಫಲವನ್ನು ತಾನು ಕೊಡಬೇಕಾದ ಕರ್ತವ್ಯವನ್ನು ಪೂರೈಸುವದು ಅವರ ಹೊಣೆಯಲ್ಲವಾ?
ಕೆಲವು ವಿಷಯಗಳು ಕೆಲವರಿಗೆ ನಗಣ್ಯವಾದರೂ ಮತ್ತೆ ಕೆಲವರಿಗೆ ಅದು ನಗಣ್ಯವಲ್ಲ. ಐನೂರು, ಸಾವಿರ ರೂಪಾಯಿಯ ವಿಷಯ ತಾನೇ ಎಂದು ಧನಿಕ ನಗಣ್ಯ ಭಾವ ತಳೆಯುವಾಗ ಅದೇ ಐನೂರು, ಸಾವಿರ ರೂ. ದುಡಿಯುವ ಬಡವರಿಗೆ ಗಣ್ಯವಾಗಿರುತ್ತದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.
– ಡಿ. ಐ. ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.