(www.vknews.com) : ಪ್ರಕೃತಿಯಲ್ಲಿ ಪ್ರತಿ ಜೀವ ಮತ್ತು ನಿರ್ಜೀವ ರಾಶಿಗೂ ನಾವು ಒಂದಲ್ಲ ಒಂದು ಹೆಸರಿನಿಂದ ಕರೆಯುತ್ತೇವೆ. ಪೋಷಕರಿಗೆ ಅವರ ಮಕ್ಕಳ ಹೆಸರು ಬಹಳ ಇಷ್ಟ. ಸಮಾಜದಲ್ಲಿ ಆ ಹೆಸರು ಪ್ರಖ್ಯಾತಿ ಪಡೆದರೆ ಅವರ ಸಂತೋಷಕ್ಕೆ ಪಾರವೇ ಇಲ್ಲ. ಮೊದಲಿನಿಂದಲು ಪ್ರಖ್ಯಾತಿಯುಳ್ಳ ವ್ಯಕ್ತಿಗಳ ಹೆಸರುಗಳನ್ನು ರಸ್ತೆಗಳಿಗೆ, ಸರ್ಕಲ್ಲುಗಳಿಗೆ, ಭವನಗಳಿಗೆ, ಸವಾರಿಗಳಿಗೆ ಇನ್ನು ಮುಂತಾದವುಗಳಿಗೆ ಇಡುವುದು ವಾಡಿಕೆಯಲ್ಲಿದೆ. ಮಹತ್ತರ ಸಾಧನೆಗಳನ್ನು ಮಾಡಿದವರನ್ನು ಅದರ ಮೂಲಕ ನೆನಪಿಸಿಕೊಳ್ಳುವುದು ತಪ್ಪೇನಲ್ಲ. ಆದರೆ ಇಂದಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳು ತಮ್ಮ ಹೆಸರುಗಳು ಸಹ ಚರಿತ್ರೆಯ ಪುಟಗಳಲ್ಲಿ ಉಳಿದುಕೊಳ್ಳಬೇಕೆಂದು, ಎಲ್ಲೆಂದರೆ ಅಲ್ಲಿ ತಮ್ಮ ಹೆಸರುಗಳನ್ನು ಕೆತ್ತಿಸಿಕೊಳ್ಳುವುದರಲ್ಲಿ ಹಿಂದೇಟು ಹಾಕುತ್ತಿಲ್ಲ. ನಿಮಗೊಂದು ನೈಜ ಉದಾಹರಣೆ ಹೇಳ ಬಯಸುತ್ತೇನೆ. ಬಿಡಿಎ ಸುಮಾರು ವರ್ಷಗಳಿಂದ ಬೆಂಗಳೂರು ನಗರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿತ್ತು. ರಸ್ತೆಗಳನ್ನು , ಉದ್ಯಾನವನಗಳನ್ನು ಅಂದಚಂದವಾಗಿ ಮಾಡಿಕೊಂಡು ಬರುತಿತ್ತು. ಅವರು ಸಹ ರಸ್ತೆಗಳಿಗೆ, ಪಾರ್ಕುಗಳಿಗೆ ನಾಮಕರಣಗಳನ್ನು ಮಾಡಿದ್ದಾರೆ. ಆದರೆ ಆ ನಾಮಕರಣ ಮಾಡಿದಂತಹ ವ್ಯಕ್ತಿಗಳು ಸಮಾಜಕ್ಕೆ ಏನಾದರು ಕೊಡುಗೆಗಳನ್ನು ಕೊಡುವಂಥವರಾಗಿದ್ದರು. ನಮ್ಮ ಹತ್ತಿರದ ಏರಿಯಾದಲ್ಲಿ ಬಿಡಿಎ ವತಿಯಿಂದ ಒಂದು ಸುಂದರ ಪಾರ್ಕನ್ನು ನಿರ್ಮಿಸಿದ್ದಾರೆ. ಒಬ್ಬ ರಾಜಕೀಯ ವ್ಯಕ್ತಿ ತನ್ನ ಅಧಿಕಾರದ ದುರುಪಯೋಗ ಪಡಿಸಿಕೊಂಡು ಆ ಪಾರ್ಕಿಗೆ ತನ್ನ ಹೆಸರನ್ನು ಇಟ್ಟುಕೊಂಡರು. ಅವರ ವ್ಯಕ್ತಿತ್ವ ನಮಗೆಲ್ಲರಿಗು ಗೊತ್ತಿತ್ತು, ಆದರೆ ಏನು ಮಾಡುವುದು, ನಾವೆಲ್ಲ ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದೇವೆ. ನ್ಯಾಯಕ್ಕಾಗಿ ಹೋರಾಟ ಮಾಡುವ ಕಿಚ್ಚು ಸತ್ತು ಹೋಗಿದೆ.
ರಸ್ತೆಗಳ, ಊರುಗಳ, ನಿಲ್ದಾಣಗಳ, ಸೇತುವೆಗಳ, ಕಾಲೇಜುಗಳ ಮತ್ತು ಅನೇಕ ಕಟ್ಟಡಗಳ ಹೆಸರು ಬದಲಿಸಿ ತಮಗೆ ಬೇಕಾದಂತಹವರ ಹೆಸರುಗಳನ್ನು ಇಡುವುದು ಮಾಮೂಲಾಗಿ ಹೋಗಿದೆ. ಇಷ್ಟೇ ಅಲ್ಲ, ಅದರ ಹಿಂದೆ ಜಾತಿ, ಧರ್ಮ, ಪಂಗಡ, ಕೋಮುವಾದ ಇತ್ಯಾದಿಗಳ ತುಚ್ಛ ರಾಜಕೀಯದ ಬಣ್ಣ ಮುಚ್ಚು ಮರೆಯಿಲ್ಲದೆ ಹಚ್ಚಲಾಗುತ್ತಿದೆ.
ಸರ್ಕಾರದವರು ಏನೇ ಯೋಜನೆಗಳನ್ನು ತಂದರೂ ಅದಕ್ಕೆ ತಮ್ಮ ಭಾವಚಿತ್ರಗಳನ್ನು ಸಹ ಅಂಟಿಸಿಬಿಡುತ್ತಿದ್ದಾರೆ. ಅದೇನು ಫೋಝು, ಏನು ಹೋಲ್ಡಿಂಗ್ಸುಗಳು. ನೀರಿನ ಬಾಟಲಿ ಮೇಲೆ ಅವರ ಭಾವ ಚಿತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಟ್ಟರೆ ಅದರ ಮೇಲೆ ಅವರ ಭಾವ ಚಿತ್ರ. ಬಸ್ಸುಗಳ ಹಿಂದೆ ಅವರ ಭಾವ ಚಿತ್ರ. ಅವಕಾಶ ಸಿಕ್ಕಿದರೆ ಅದೆಲ್ಲೆಲ್ಲಿ ಭಾವ ಚಿತ್ರಗಳನ್ನು ಅಂಟಿಸಿಬಿಡುತ್ತಾರೋ…! ಯಾವ ರಂಗದಲ್ಲೂ ಅವರ ಜಾಹಿರಾತು ಕಾಣದೆ ಇರದು. ಅದಕ್ಕೆ ಕೋಟ್ಯಂತರ ರೂಗಳನ್ನು ಖರ್ಚು ಮಾಡಲಾಗುತ್ತದೆ.
ಎಲ್ಲರಿಗು ಹೆಸರು ಮಾಡಿಕೊಳ್ಳುವ ಆಸೆ. ಜನರಿಂದ ಹೊಗಳಿಸಿಕೊಳ್ಳುವ ಆಸೆ. ಏನು ಆಸೆ ಪಟ್ಟರು ಚುನಾವಣೆಯಾಗಿ ಬೇರೆ ಸರ್ಕಾರ ಬಂದರೆ ಅವರು ಪ್ರತಿಪಕ್ಷಗಳ ಆಸೆಗಳನ್ನು ತುಳಿದು ಅವರ ಆಸೆಗಳ ಬಾವುಟಗಳನ್ನು ನೆಡಲು ಪ್ರಯತಿನಿಸುತ್ತಾರೆ. ನಿಸ್ವಾರ್ಥ ಸಮಾಜಸೇವೆ ಮಾಡಿದವರ ಹೆಸರು ಶತಮಾನಗಳು ಕಳೆದು ಹೋದರು ಶಾಶ್ವತವಾಗಿ ಉಳಿದಿರುತ್ತದೆ. ತೋರಿಕೆಗಾಗಿ ಮಾಡಿದ ಟೊಳ್ಳು ಪ್ರಚಾರ, ಹೆಸರು ಬಹಳ ಬೇಗ ನಶಿಸಿ ಹೋಗುತ್ತದೆ.
ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ರೈತರ ಹೆಸರಲ್ಲಿ ಯಾವುದಾರೂ ಭವನದ ಹೆಸರಾಗಲಿ, ರಸ್ತೆಯ ಹೆಸರಾಗಲಿ, ಸರ್ಕಾರಿ ಯೋಜನೆಗಳ ಹೆಸರಾಗಲಿ, ಪ್ರತಿಷ್ಠಿತ ಪ್ರಶಸ್ತಿಗಳ ಹೆಸರಾಗಲಿ ನೋಡಿದ್ದೀರೋ? ಕೇಳಿದ್ದೀರೋ ? ಖಂಡಿತ ಇಲ್ಲ. ಹಾಗಾದರೆ ಸಮಾನತೆ ಎಲ್ಲಿದೆ. ಯಾರಾದರೂ ಈ ಬಗ್ಗೆ ಮಾತನಾಡಿದ್ದಾರೆಯೇ. ಮಾತನಾಡಿದರೆ ಫಲ ಉಂಟೇ? ಕಾಲವೇ ಉತ್ತರ ಕೊಡಲಿದೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.