(www.vknews.com) : ದ್ರಾಕ್ಷಿಹಣ್ಣು ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಹಲವಾರು ಆಕೃತಿಗಳಾಗಿ ಬೆಳೆದು ಬರುವ ಒಂದು ಹಣ್ಣಾಗಿದೆ. ಇದರಲ್ಲಿ ಕೆಲವು ಜಾತಿಗಳಲ್ಲಿ ಬೀಜವಿದ್ದರೆ, ಮತ್ತೆ ಕೆಲವು ಬೀಜರಹಿತವಾಗಿರುತ್ತದೆ. ಅತ್ತಿಹಣ್ಣು, ಖರ್ಜೂರ ಮತ್ತು ದ್ರಾಕ್ಷಿಹಣ್ಣು ಹಣ್ಣು ಹಂಪಲು ಸಾಮ್ರಾಜ್ಯದ ರಾಣಿಯಾಗಿರುತ್ತವೆ.
▪ “ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ದ್ರಾಕ್ಷಿಯ ಗೊಂಚಲು ಕೈಯಲ್ಲಿ ಹಿಡಿದು ತಿನ್ನುವುದನ್ನು ನಾನು ಕಂಡಿದ್ದೇನೆ” ಎಂದು ಸ್ವಹಾಬೀಶ್ರೇಷ್ಠ ಹಝ್ರತ್ ಇಬ್ನ್ ಅಬ್ಬಾಸ್ (ರ) ಹೇಳಿದ ಒಂದು ಹದೀಸನ್ನು ಇಮಾಮ್ ಹಬೀಬ್ ಬಿನ್ ಯಸಾರ್ (ರ) ವರದಿ ಮಾಡಿದ್ದಾರೆ.
▪ ಹಣ್ಣು ಹಂಪಲುಗಳಲ್ಲಿ ಕಲ್ಲಂಗಡಿ ಮತ್ತು ದ್ರಾಕ್ಷಿಹಣ್ಣು ಪ್ರವಾದಿಯವರಿಗೆ ತುಂಬಾ ಇಷ್ಟವಾಗಿತ್ತು.
▪ ಪವಿತ್ರ ಖುರ್ಆನಿನಲ್ಲಿ, ಅಲ್ಲಾಹನು ಅವನ ದಾಸರುಗಳಿಗೆ ಇಹಲೋಕ ಮತ್ತು ಸ್ವರ್ಗದಲ್ಲಿ ಕೊಡುವ ಅನುಗ್ರಹಗಳನ್ನು ಪ್ರಸ್ತಾಪಿಸಿದಲ್ಲಿ ಹನ್ನೊಂದು ಕಡೆ ಈ ಹಣ್ಣಿನ ಬಗ್ಗೆ ಉಲ್ಲೇಖಿಸಿದ್ದಾನೆ ಎಂದಾದರೆ ಈ ಹಣ್ಣಿನ ಮಹತ್ವ ಎಷ್ಟಿರಬಹುದೆಂದು ಊಹಿಸಬಹುದಾಗಿದೆ.
▪ ದ್ರಾಕ್ಷಿಯನ್ನು ಸಂಪೂರ್ಣ ಹಣ್ಣಾಗುವ ಮೊದಲೂ, ಹಣ್ಣಾದ ನಂತರವೂ, ಒಣಗಿಸಿಯೂ, ಅಲ್ಲದೆಯೂ ತಿನ್ನಬಹುದು. ಹಣ್ಣಿನ ವರ್ಗದಲ್ಲಿ ಬಹಳ ಶ್ರೇಷ್ಠವಾದ ಈ ಹಣ್ಣು ಹಲವಾರು ಗುಣಗಳಿರುವ ಒಂದು ಪೌಷ್ಟಿಕ ಆಹಾರ ಮತ್ತು ಹಲವಾರು ಕಾಯಿಲೆಗಳಿಗೆ ಔಷಧಿಯಾಗಿದೆಯೆಂದು ವೈದ್ಯಕೀಯ ಕ್ಷೇತ್ರದ ಉಲಮಾಗಳು ಹೇಳಿರುತ್ತಾರೆ.
▪ ಇತರ ಹಣ್ಣುಗಳಂತೆ ದ್ರಾಕ್ಷಿಯನ್ನು ಯಾವಾಗಲೂ ಕಟಾಯಿಸಿದ ಅಥವಾ ಕೊಯ್ದ ಕೂಡಲೇ ತಿನ್ನಬಾರದು. ಹಾಗೆ ತಿನ್ನುವುದರಿಂದ ಹೊಟ್ಟೆಯಲ್ಲಿ ವಾಯು ತುಂಬಿ ವಾಯು ಸಂಬಂಧವಾದ ಕಾಯಿಲೆಗಳಿಗೆ ಮತ್ತು ಅತಿಸಾರವಾಗುವುದಕ್ಕೆ ಹೇತುವಾಗುತ್ತದೆ. ಕನಿಷ್ಠ ಕೊಯ್ದ ನಂತರ ಎರಡು-ಮೂರು ದಿನಗಳ ನಂತರ ತಿನ್ನುವುದಾಗಿದೆ ಉತ್ತಮ ರೂಪ.
▪ ಅಜ್ವಾ ಖರ್ಜೂರ ಮತ್ತು ದ್ರಾಕ್ಷಿ ಸ್ವರ್ಗದ ಮರಗಳೆಂದು ಒಂದು ಹದೀಸಿನಲ್ಲಿದೆ.
▪ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಹೊಟ್ಟೆಯು ಸಡಿಲವಾಗಿ ಚೆನ್ನಾಗಿ ಭೇದಿಯಾಗುತ್ತದೆಯಾದರೂ, ಅದರ ಬೀಜವನ್ನು ಬೇರ್ಪಡಿಸಿ ತಿನ್ನುವುದರಿಂದ ಮತ್ತೂ ಸಡಿಲವಾಗುತ್ತದೆ. ಆದರೆ ಅದರ ಸಿಪ್ಪೆಯನ್ನು ತೆಗೆದು ತಿನ್ನುವುದು ಉತ್ತಮವಲ್ಲ.
▪ ಬಹಳ ಜಾಸ್ತಿಯಾಗಿ ದ್ರಾಕ್ಷಿಹಣ್ಣು ತಿನ್ನುವುದರಿಂದ ಕೆಲವರಿಗೆ ತಲೆನೋವು ಬರುವುದುಂಟು. ಹಾಗಿದ್ದರೆ ಹುಳಿಯಾದ ದಾಳಿಂಬೆಯನ್ನು ತಿನ್ನುವುದರಿಂದ ಆ ಸಮಸ್ಯೆ ನಿವಾರಣೆಯಾಗುತ್ತದೆ. ಯಾವತ್ತೂ ಹಣ್ಣು ಹಂಪಲುಗಳನ್ನು ತಿಂದ ಕೂಡಲೇ ನೀರು ಕುಡಿಯಬಾರದಾದರೂ, ದ್ರಾಕ್ಷಿಹಣ್ಣು ತಿಂದ ಬಳಿಕ ನೀರು ಕುಡಿಯುವುದನ್ನು ಖಂಡನೀಯವಾಗಿ ವೈದ್ಯಲೋಕದ ಮಹಾಪಿತ ಬಿನ್ ಸೀನರಂತಹಾ ಉಲಮಾಗಳು ವಿರೋಧಿಸಿದ್ದಾರೆ. ದ್ರಾಕ್ಷಿ ತಿಂದು ನೀರು ಕುಡಿಯುವುದರಿಂದ, ಜಲೋದರ ಕಾಯಿಲೆ (Dropsy) ಮತ್ತು ಜ್ವರ (Fever) ಬರುವುದು ಖಾತ್ರಿಯಾಗಿದೆ.
▪ ದ್ರಾಕ್ಷಿಹಣ್ಣು ಹಣ್ಣುಗಳ ಪೈಕಿ ಬಹಳ ರುಚಿಯಾದ ಮತ್ತು ಪೌಷ್ಟಿಕವಾದ ಒಂದು ಹಣ್ಣಾಗಿದೆ. ಇದನ್ನು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ. ಶರೀರದಲ್ಲಿರುವ ಮಲಿನಗಳು ಹೊರಹೋಗುತ್ತವೆ. ಮೂತ್ರಜನಕಾಂಗವನ್ನು ಬಲಿಷ್ಠಗೊಳಿಸುತ್ತದೆ. ಪಿತ್ತರಸದ ತೊಂದರೆ ಮತ್ತು ಹೊಟ್ಟೆ ಉರಿತವನ್ನು ಸದೆಬಡಿಯುತ್ತದೆ. ಸಣಕಲು ಶರೀರವಿರುವವರು ದಿನಾಲೂ ದ್ರಾಕ್ಷಿಹಣ್ಣು ತಿನ್ನುವ ಅಭ್ಯಾಸ ಮಾಡಿದರೆ ಶರೀರವು ದಪ್ಪವಾಗಿ ಬಲಿಷ್ಠವಾಗುತ್ತದೆ.
▪ ಕಪ್ಪು, ಬಿಳಿ ಮತ್ತು ಕೆಂಪು ಈ ಮೂರು ದ್ರಾಕ್ಷಿಹಣ್ಣುಗಳನ್ನು ಅದರ ಮೇಲಿನ ಸಿಪ್ಪೆಯನ್ನು ಕಳಚಿ ಎಲ್ಲವೂ ಪರಸ್ಪರ ಮುಟ್ಟುವಂತೆ ಕಟ್ಟಿ ಒಂದೇ ಕಡೆ ಬಿತ್ತಿದರೆ, ಅಥವಾ ಈ ಮೂರು ಜಾತಿಯ ದ್ರಾಕ್ಷಿಯ ಬಳ್ಳಿಯನ್ನು ತುಂಡುಮಾಡಿ ಆ ತುಂಡು ಮಾಡಿದ ಬುಡವನ್ನು ಪರಸ್ಪರ ಜೋಡಿಸಿ ಕಟ್ಟಿ ನಂತರ ನೆಟ್ಟರೆ ಅದರಲ್ಲಿ ಸಸಿಯಾಗಿ ಬರುವ ಸಸ್ಯದಲ್ಲಿ ಮೂರು ಬಣ್ಣದ ದ್ರಾಕ್ಷಿಹಣ್ಣುಗಳಾಗುತ್ತವೆ. ಬಿಳಿ ದ್ರಾಕ್ಷಿಹಣ್ಣನ್ನು ಕಪ್ಪು ಮಾಡಬೇಕಾದರೆ, ಬಿಳಿ ದ್ರಾಕ್ಷಿಯ ಗಿಡವು ಚಿಗುರಿ ಬರುವಾಗ ಅದರ ಬುಡಕ್ಕೆ ಹಳೆಯ ತೈಲವನ್ನು (ಮಡ್ ವಾಯಲ್, ಪೆಟ್ರೋಲ್) ಸುರಿಯಬೇಕು. ಹಣ್ಣುಗಳು ಕಪ್ಪಾಗಿರುತ್ತವೆ. ದನದ ಸೆಗಣಿಯನ್ನು ಸುಟ್ಟು ದ್ರಾಕ್ಷಿ ತೋಟದಲ್ಲಿ ಹೊಗೆ ಹಾಕಿದರೆ, ಚಳಿಯ ಸಮಯದ ಲ್ಲಿ ಹಣ್ಣುಗಳಿಗೆ ಬರುವ ಹುಳಗಳ ತೊಂದರೆ ಇರಲಾರದು.
▪ ದ್ರಾಕ್ಷಿಹಣ್ಣು ಕಿತ್ತ ನಂತರ ಅದರ ಗೊಂಚಲನ್ನು ತುಂಡು ಮಾಡಿದ ಬುಡದಿಂದ ಹನಿ ಹನಿಯಾಗಿ ಬರುವ ನೀರನ್ನು ಕ್ರೋಡೀಕರಿಸಿ, ಶರಾಬು ಕುಡಿತದ ಚಟಕ್ಕೆ ಬಲಿಯಾದವನಿಗೆ ಶರಾಬೆಂದು ಹೇಳಿ ಕುಡಿಸಿದರೆ ನಂತರ ಅವನ ಜೀವಮಾನದಲ್ಲಿ ಒಮ್ಮೆಯೂ ಶರಾಬು ಕುಡಿಯಲಾರ. ಈ ಹೇಳಿದ ನೀರನ್ನು ಕಜ್ಜಿ, ಹುಣ್ಣು ಗುಳಿಗೆ ಸವರಿದರೆ ಅವುಗಳು ಬೇಗನೆ ಒಣಗುತ್ತವೆ.
▪ ದ್ರಾಕ್ಷಿ ಗಿಡದ ಎಲೆಯನ್ನು ಜಗಿಯುವುದರಿಂದ ತುಟಿ ಮತ್ತು ಒಸಡುಗಳು ಬಲಿಷ್ಠವಾಗುತ್ತವೆ. ಅದನ್ನು ಚೆನ್ನಾಗಿ ಜಜ್ಜಿ ಹಣೆಗೆ ಕಟ್ಟಿದರೆ ತಲೆನೋವು ಗುಣವಾಗುತ್ತದೆ. ಇದರ ಬಳ್ಳಿಯನ್ನು ಜ್ಯೂಸ್ ಮಾಡಿ ಕುಡಿದರೆ ವಾಂತಿಯಾಗುವುದು ಕೂಡಲೇ ನಿಲ್ಲುತ್ತದೆ. ಮಾತ್ರವಲ್ಲ ಇದರ ಬೇರನ್ನು ಜಗಿಯುವುದರಿಂದ ಅಂತೆಯೇ ಇದರ ಎಲೆಯನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಹೊಟ್ಟೆ ಹುಣ್ಣುಗಳು ಗುಣವಾಗುತ್ತವೆ. ಹೊಟ್ಟೆಯ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.
▪ ದ್ರಾಕ್ಷಿಯನ್ನು ಆವಿಯಲ್ಲಿ ಬೇಯಿಸಿ ವಿಷಕಡಿದಲ್ಲಿಗೆ ಇಟ್ಟರೆ ವಿಷವು ನಿಯಂತ್ರಣವಾಗುತ್ತದೆ. ಆವಿಯಲ್ಲಿ ಬೇಯಿಸಿದ ದ್ರಾಕ್ಷಿಯೊಂದಿಗೆ ಸುರ್ಕ ಮಿಶ್ರಣ ಮಾಡಿ ಮೂಲವ್ಯಾಧಿ ಮತ್ತು ಸರ್ಪಸುತ್ತು (Herpes) ಕಾಯಿಲೆಗಳಿಗೆ ಹಚ್ಚಿದರೆ ವಾಸಿಯಾಗುತ್ತವೆ.
▪ ದ್ರಾಕ್ಷಿಯ ಸುರ್ಕ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಬಹಳ ಇಷ್ಟವಾಗಿತ್ತು. ಪದಾರ್ಥವಿಲ್ಲದಿದ್ದರೆ ಅದರ ಬದಲಿಗೆ ಸುರ್ಕವನ್ನು ಬಳಸುತಿದ್ದರು. ಯಾವುದೇ ಗಾಯವಾಗಿ ರಕ್ತ ಬರುವಲ್ಲಿಗೆ ದ್ರಾಕ್ಷಿಯ ಸುರ್ಕ ಸುರಿದರೆ ರಕ್ತ ಹರಿಯುವುದು ನಿಲ್ಲುತ್ತದೆ. ಬೆಂಕಿ ತಗಲಿದ ಜಾಗಕ್ಕೆ ಸವರಿದರೆ ಉರಿತ ಕಡಿಮೆ ಸಾಗುತ್ತದೆ.
▪ ಬಿಳಿ ಮತ್ತು ಕಪ್ಪು ದ್ರಾಕ್ಷಿಗಳ ಕೆಲವು ತಳಿಗಳನ್ನು ಸಾಮಾನ್ಯವಾಗಿ ತಿನ್ನಲಾಗುವುದಿಲ್ಲ. ಅಂತಹಾ ತಳಿಗಳಿಗೆ ಅರಬಿಯಲ್ಲಿ زبيب (ಒಣದ್ರಾಕ್ಷಿ) ಎನ್ನಲಾಗುತ್ತದೆ. ಈ ತಳಿಯ ದ್ರಾಕ್ಷಿಗಳನ್ನು ಕೊಯ್ದ ನಂತರ ಒಣಗಿಸಿ ನಂತರ ನೇರವಾಗಿ ತಿನ್ನಲು ಮತ್ತು ಇತರ ಆಹಾರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ತಿನ್ನಲು ಬಳಸಲಾಗುತ್ತದೆ.
▪ ಸಣಕಲು ಶರೀರವಿರುವವರು ದಿನಾಲೂ ಝಅತರ್ನೊಂದಿಗೆ ಒಣದ್ರಾಕ್ಷಿ ತಿನ್ನಲು ಅಭ್ಯಾಸ ಮಾಡಿದರೆ ಶರೀರವು ಪುಷ್ಟಿ ಮತ್ತು ದಪ್ಪವಾಗುತ್ತದೆ. ಹೆರಿಗೆಯಾದ ವೇಳೆಯಲ್ಲಿ ಮಹಿಳೆಯರಿಗೆ ಒಣದ್ರಾಕ್ಷಿ ತಿನ್ನುವುದು ಬಹಳ ಉತ್ತಮವಾಗಿದೆ. ಮೂತ್ರಕೋಶದ ಮತ್ತು ಮೂತ್ರಚೀಲದ ತೊಂದರೆ ಇರುವವರು ಯಾವಾಗಲೂ ತಿನ್ನುವುದರಿಂದ ಅದರ ತೊಂದರೆಗಳು ನಿವಾರಣೆಯಾಗುತ್ತವೆ. ಜಠರವು ಬಲಿಷ್ಠವಾಗಿ ಸಲೀಸಾಗುತ್ತದೆ. ಕಫವನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ.
▪ ಉಗುರುಸುತ್ತು ತೊಂದರೆಯಿಂದ ಬಳಲುವವರು ಒಣದ್ರಾಕ್ಷಿಯನ್ನು ಜಜ್ಜಿ ಅಲ್ಲಿಗೆ ಕಟ್ಟಿದರೆ ನೋವು ಕಡಿಮೆಯಾಗುವುದಲ್ಲದೆ ಉಗುರು ಉದುರಿ ಹೋಗುತ್ತದೆ. ಕಂಠಪಾಠ ಶಕ್ತಿ ಕಡಿಮೆ ಇರುವವನು ಯಾವಾಗಲೂ ಒಣ ಬಿಳಿದ್ರಾಕ್ಷಿ ತಿನ್ನುವುವುದಾದರೆ ಅವನಿಗೆ ಕಂಠಪಾಠ ಶಕ್ತಿ ಜಾಸ್ತಿಯಾಗುತ್ತದೆಯೆಂದು ಕೆಲವು ವೈದ್ಯಕೀಯ ಉಲಮಾಗಳು ಹೇಳಿದ್ದಾರೆ.
▪ ದ್ರಾಕ್ಷಿಯನ್ನು ಕನಸಿನಲ್ಲಿ ಕಾಣುವುದು ಶುಭ ಲಕ್ಷಣವಾಗಿದೆ. ಅದು ಅವನ ಮುಂದಿನ ಬದುಕಿನಲ್ಲಿ ಮತ್ತು ಜೀವನೋಪಾಯದಲ್ಲಿ ಆರಾಮ ಮತ್ತು ಸುಖ ಬರುವುದರ ಸಂಕೇತವಾಗಿದೆ.
▪ ಒಬ್ಬನಿಗೆ ಊರಿನ ಅಥವಾ ದೇಶದ ಆಡಳಿತಾಧಿಕಾರಿಯ ಮನೆಬಾಗಿಲಿನಿಂದ ದ್ರಾಕ್ಷಿಹಣ್ಣು ಕಿತ್ತು ತೆಗೆದ ಕನಸು ಬಿದ್ದರೆ ಈತನು ಆಡಳಿತ ವರ್ಗದಿಂದ ಶಿಕ್ಷೆಗೆ ಒಳಗಾಗುವುದರ ನಿಶಾನೆಯಾಗಿರುತ್ತದೆ.
▪ ಒಬ್ಬನ ತಲೆಯ ಮೇಲೆ ದ್ರಾಕ್ಷಿಬಳ್ಳಿಗಳು ಚಿಗುರಿದ ಕನಸು ಕಂಡರೆ ತಲೆಯಲ್ಲಿ ಹುಣ್ಣು ಆಗುವುದರ ಲಕ್ಷಣವಾಗಿರುವುದು.
▪ ದ್ರಾಕ್ಷಿಯನ್ನು ತಿಂದ ಕನಸು ಒಬ್ಬನಿಗೆ ಬಿದ್ದರೆ ಆತನು ಶರಾಬು ಕುಡಿತಕ್ಕೆ ಬಲಿಯಾಗುವುದರ ಲಕ್ಷಣವಾಗಿದೆ.
▪ ಒಬ್ಬನಿಗೆ ದ್ರಾಕ್ಷಿಹಣ್ಣು ಹಣ್ಣನ್ನು ಕಿತ್ತು ಅದರ ಬೀಜ ವನ್ನು ತಿಂದು ದ್ರಾಕ್ಷಿಯನ್ನು ಎಸೆಯುವ ಕನಸು ಕಂಡರೆ ಅವನ ಪತ್ನಿಯ ಜತೆ ಜಟಾಪಟಿಯಾಗುವುದರ ನಿಶಾನೆಯಾಗಿದೆ.
ಸಂಗ್ರಹ : ಇಮಾಮ್ ಖಝ್ವೀನಿಯ ಅಜಾಯಿಬುಲ್ ಮಖ್ಲೂಖಾತ್, ಇಮಾಮ್ ಇಬ್ನ್ ಅಲ್ ಖಯ್ಯಿಮ್ ಅಲ್ ಜವ್ಝಿಯ ಅತ್ತಿಬ್ಬುನ್ನಬವೀ, ಇಮಾಮ್ ನಾಬುಲ್ಸಿಯ ತಅ್ಬೀರುಲ್ ಮನಾಮ್ ಮತ್ತು ಇಮಾಮ್ ಇಬ್ನ್ ಸೀರೀನರ ತಫ್ಸೀರಿಲ್ ಅಹ್ಲಾಮ್ ಎಂಬ ಗ್ರಂಥಗಳು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.