/
• ದಿನಕ್ಕೆ 550 ಊಟದಂತೆ 40,000 ಕ್ಕಿಂತಲೂ ಹೆಚ್ಚು ಊಟ ವಿತರಣೆ. • ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ 600 ಪೊಟ್ಟಣಕ್ಕಿಂತಲೂ ಹೆಚ್ಚು ಹಣ್ಣು ಹಂಪಲು ವಿತರಣೆ. • ಎಲ್ಲಾ ಜಾತಿಯ ಅರ್ಹರಿಗೆ 475 ಕ್ಕಿಂತಲೂ ಹೆಚ್ಚು ಕೋವಿಡ್ ರೇಷನ್ ಕಿಟ್ ವಿತರಣೆ. • 335 ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ಕೊರೋನ ಲಸಿಕೆ ನೀಡಿಕೆ. • 90 ಕ್ಕಿಂತಲೂ ಹೆಚ್ಚು ಕೊರೋನ ರೋಗಿಗಳಿಗೆ ಉಚಿತ ಆಕ್ಸಿಜನ್ ಸಿಲಿಂಡರ್, 20 ಕ್ಕಿಂತಲೂ ಹೆಚ್ಚು ಉಚಿತ ಆಕ್ಸಿಜನ್ ಕಾನ್ಸೆನ್ಟ್ರೇಟರ್ಗಳ ವಿತರಣೆ. • 43 ಕ್ಕಿಂತಲೂ ಹೆಚ್ಚು ಕೊರೋನದಿಂದ ಮೃತಪಟ್ಟವರ ಅಂತಿಮ ವಿಧಿ ವಿಧಾನ ಕಾರ್ಯ. • ಉಚಿತ 135 PPE ಕಿಟ್ ಗಳು, 12,500 ಮಾಸ್ಕ್ ವಿತರಣೆ. • 125 ಕುಟುಂಬಗಳಿಗೆ ಆಸ್ಪತ್ರೆ ನೆರವು. • 3 ಅಪಾರ್ಟ್ಮೆಂಟ್, 11 ಮನೆಗಳು ಹಾಗೂ 8 ಮಸೀದಿಗಳ ಸಾನಿಟೈಝ್ (ಶುಧ್ದಿಗೊಳಿಸುವಿಕೆ) • ಸುಸಜ್ಜಿತ ಆಕ್ಸಿಜನ್ ಸಹಿತ 7 ಆಂಬುಲೆನ್ಸ್ ಗಳ 24X7 ಸೇವೆ. • ದಿನಕ್ಕೆ 150 ಕಿಟ್ ನಂತೆ ರಂಜಾನ್ ನಲ್ಲಿ ಸಹರಿ, ಇಫ್ತಾರ್ ಕಿಟ್ ವಿತರಣೆ. ಪಟ್ಟಿ ಹೀಗೆ ಮುಂದುವರಿಯುತ್ತದೆ……
(www.vknews.com) : ಇದ್ಯಾವುದೋ ಜಿಲ್ಲಾಡಳಿತದ ಅಂಕಿಅಂಶವಲ್ಲ, ಬದಲಾಗಿ ಅಣ್ಣ ತಮ್ಮಂದಿರಿಬ್ಬರು ತನ್ನ ಊರಿನ ಜನರಿಗೋಸ್ಕರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿರುವಂತಹ ಕಾರುಣ್ಯಪ್ರವೃತ್ತಿಯಾಗಿದೆ. ಕೊರೋನ ಎರಡನೇ ಅಲೆಯು ಪ್ರಬಲವಾಗಿ ಇಡೀ ದೇಶವನ್ನೇ ತಲ್ಲಣ ವಾಗಿಸಿದ್ದಂತಹ ಸಮಯದಲ್ಲಿ ಜಿಲ್ಲೆಯ ಜನರು ತಮ್ಮಮನೆಯಿಂದ ಹೊರಬರಲು ಹೆದರುತ್ತಿರಬೇಕಾದರೆ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಜಿಲ್ಲೆಯ ಜನತೆಯ ಪಾಲಿಗೆ ಆಶಾಕಿರಣವಾಗಿ ಹಾಗೂ ಆಪದ್ಬಾಂಧವರಾಗಿ, ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಒಬ್ಬ ಕೊರೋನಾ ಸೂಪರ್ ವಾರಿಯರ್ ಆಗಿ ತಮ್ಮನ್ನೇ ತಾವು ಮುಡಿಪಾಗಿಟ್ಟುಕೊಂಡಂತಹ ಅಪರೂಪದ ವ್ಯಕ್ತಿತ್ವ ಬೇರೆ ಯಾರು ಅಲ್ಲ, ಬಿ-ಹ್ಯೂಮನ್ ಎಂಬ ಸಮಾಜಸೇವಾ ಸಂಸ್ಥೆಯನ್ನು ಕಟ್ಟಿ, ಅದರ ಮೂಲಕ ನೂರಾರು ಜನರ ಪಾಲಿಗೆ ಆಸರೆಯಾದ ಆಸಿಫ್ ಕೆ.ಎಂ ಅಥವಾ ಜನರು ಅವರನ್ನು ಪ್ರೀತಿಯಿಂದ ಅವರ ವ್ಯಾವಹಾರಿಕ ಸಂಸ್ಥೆಯ ಹೆಸರಿನಿಂದ ಕರೆಯುವ ಆಸಿಫ್ ಡೀಲ್ಸ್, ಹಾಗೂ ಇವರ ತಮ್ಮ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ . ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬರಿಗೂ ಈ ಇಬ್ಬರ ಹೆಸರು ಚಿರಪರಿಚಿತ.
ಕೊರೋನಾ ಅಲೆಯು ತೀವ್ರತರ ಹರಡುತ್ತಿರುವಾಗ ಶಾಸಕೋಶದ ಅತೀವ ಸಮಸ್ಯೆಯಿಂದ ಬಳಲುತ್ತಿರುವ ಅನೇಕರ ಮನೆಗೆ ಆಕ್ಸಿಜನ್ ಸಿಲಿಂಡರ್ ಅನ್ನು ಉಚಿತವಾಗಿ ಸ್ವತಃ ತಲುಪಿಸಿ ಅವರ ಜೀವವನ್ನು ಕಾಪಾಡಿದ ಮಂಗಳೂರಿನ ಈ ಆಕ್ಸಿಜನ್ ಮ್ಯಾನ್ ಗಳ ಕಾರ್ಯಪ್ರವೃತ್ತಿ ಬಹು ರೋಚಕ. ಇವರು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರುವುದು ರಾತ್ರಿ 2 ಗಂಟೆಯ ನಂತರವೇ, ಕೆಲವೊಮ್ಮೆ ಅದೂ ಇಲ್ಲ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ನೀವೇನಾದರೂ ಮಂಗಳೂರಿನ ಆಸ್ಪತ್ರೆಗಳ ಮುಂದಿನಿಂದ ಹಾದುಹೋದರೆ ಯಾವುದಾದರೊಂದು ಆಸ್ಪತ್ರೆಯ ಮುಂದೆ ರೋಗಿಗಳ ಸೇವೆಯಲ್ಲಿ ಸರ್ವೇಸಾಮಾನ್ಯವಾಗಿ ನೀವಿವರನ್ನು ಕಾಣಬಹುದು. ಇಲ್ಲಿ ಯಾವುದೇ ಜಾತಿ ಮತ ಧರ್ಮವೆಂಬ ಬೇಧವಿಲ್ಲ. ರೋಗಿಗಳ ಸೇವೆಯೊಂದೇ ಇವರ ಪರಮ ಗುರಿ. ಪ್ರತಿಯೊಬ್ಬರು ಈ ಕೊರೋನಾದ ಸಂಕಷ್ಟದಿಂದ ಆರ್ಥಿಕವಾಗಿ ತೀವ್ರ ಮುಗ್ಗಟ್ಟು ಅನುಭವಿಸುತ್ತಿರುವ ಬೇಕಾದರೆ, ತಮ್ಮ ಸ್ವಂತ ವ್ಯವಹಾರ, ಕೆಲಸಗಳನ್ನಾವುದನ್ನೂ ಲೆಕ್ಕಿಸದೆ ಬಡಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಂತಹ ಈ ಮನುಷ್ಯರ ಕಾರುಣ್ಯ ಪ್ರವೃತ್ತಿಗೆ ನಾವು ತಲೆಬಾಗಲೇಬೇಕು.ಒಬ್ಬರು ಒಂದು ದಿನ, ಒಂದು ಹೊತ್ತಿನ ಊಟವನ್ನು ಇನ್ನೊಬ್ಬರಿಗೆ ನೀಡಲು ನಾಲ್ಕು ಬಾರಿ ಆಲೋಚನೆ ಮಾಡುವಂತಹ ಈ ಸಮಯದಲ್ಲಿ ಕಳೆದ 69 ದಿನಗಳಿಂದ 40,000 ಕ್ಕಿಂತಲೂ ಮಿಗಿಲಾದ ಆಹಾರ ಪೊಟ್ಟಣವನ್ನು ಸಂಕಷ್ಟದಲ್ಲಿರುವವರಿಗೆ ಸ್ವತಃ ತಮ್ಮ ತಂಡದ ಮೂಲಕ ತಲುಪಿಸಿ ಅವರ ಹಸಿವೆ ನೀಗಿಸಿರುವುದು ನಿಜಕ್ಕೂ ಶ್ಲಾಘನೀಯ. ಅದೇರೀತಿ ಬಡವರು ಮಧ್ಯಮ ವರ್ಗದವರು ಕೊರೊನಾದಿಂದ ತತ್ತರಿಸಿ ಆಸ್ಪತ್ರೆಗಳಲ್ಲಿ ಬಿಲ್ ಗಳನ್ನು ಕಟ್ಟಲಾಗದೆ ಪರಿತಪಿಸುತ್ತಿರುವಂತಹ ಸಂದರ್ಭದಲ್ಲಿ ಆಸ್ಪತ್ರೆಯವರ ಮನವೊಲಿಸಿ ಚಿಕಿತ್ಸಾ ವೆಚ್ಚವನ್ನು ಬಹುವಾಗಿ ಕಡಿತಗೊಳಿಸುತ್ತಿರುವುದು ಕಣ್ಣಾರೆ ಕಂಡ ಸತ್ಯ.
ಕೊರೋನದಿಂದ ಮರಣ ಹೊಂದಿದ ವ್ಯಕ್ತಿಗಳ ಮೃತಶರೀರವನ್ನು ಸ್ವಂತ ಬಂಧುಗಳು ಮುಟ್ಟಲೂ ಹೆದರಿದ ಸಂಧರ್ಬಗಳಲ್ಲಿ ಯಾವುದೇ ಜಾತಿ, ಧರ್ಮ ಎಂದು ನೋಡದೆ ಅವರವರ ಧಾರ್ಮಿಕ ವಿಧಿವಿಧಾನದಂತೆ ಅಂತಿಮಕಾರ್ಯ ನಡೆಸಿಕೊಟ್ಟದ್ದು ನಿಜಕ್ಕೂ ಶ್ಲಾಘನೀಯ.
ಇದನ್ನೆಲ್ಲ ಗಮನಿಸಿದ ನಾನು ಒಮ್ಮೆ ಆಸಿಫ್ ಡೀಲ್ಸ್ ಅವರಲ್ಲಿ ಕೇಳಿಯೇ ಬಿಟ್ಟೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇಷ್ಟೆಲ್ಲಾ ಸಾಧನೆ ಮಾಡಲು ನಿಮಗಿರುವ ಸ್ಪೂರ್ತಿಯಾದರೂ ಏನು? ಅದಕ್ಕೆ ಅವರು ನೀಡಿದ ಉತ್ತರದಿಂದ ನಿಜಕ್ಕೂ ಆಶ್ಚರ್ಯಚಕಿತನಾದೆ. ಅವರು ಹೇಳಿದ್ದಿಷ್ಟು, ಇದರಲ್ಲಿ ನನ್ನದೇನೂ ಇಲ್ಲ, ಇಷ್ಟೆಲ್ಲಾ ಸಾಧನೆ ಸಾಧ್ಯವಾದದ್ದು ನಮ್ಮ ಬಿ-ಹ್ಯೂಮನ್ ಗೆ ತನು-ಮನ-ಧನಗಳಿಂದ ಸಹಕರಿಸಿದ ಹಿತೈಷಿಗಳ ಸಹಕಾರದಿಂದ ಮಾತ್ರ. ಹಾಗೂ ತಮ್ಮೊಟ್ಟಿಗೆ 24X7 ದಣಿವರಿಯದೆ ಕೆಲಸ ಮಾಡುವ ಬಿ-ಹ್ಯೂಮನ್ ತಂಡದ ಸದಸ್ಯರ ಸಂಪೂರ್ಣ ಬೆಂಬಲದಿಂದ. ಎಲ್ಲೂ ಈ ಮನುಷ್ಯ ತನ್ನನ್ನು ತಾನು ಹೊಗಳಿಕೊಳ್ಳಲಿಲ್ಲ. ಇಷ್ಟೆಲ್ಲಾ ಮಾಡುತ್ತಿರಬೇಕಾದರೆ ಇವರ ಮುಖದಲ್ಲಿ ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದಿರುವುದು ನಿಜಕ್ಕೂ ಒಂದು ಅದ್ಭುತವೇ ಸರಿ. ಎಲ್ಲಾ ಸೇವೆಗಳಿಗೂ ಅಲ್ಲಾಹನು ನೀಡುವ ಪ್ರತಿಫಲವೇ ಸಾಕು ಎನ್ನುವುದು ಇವರ ಬಹು ದೊಡ್ಡ ಗುಣ.ಹಾಗೆ ಇನ್ನೊಬ್ಬರು ಇದರಿಂದ ಪ್ರೇರಿತರಾಗಿ ಸಮಾಜಸೇವೆಯಲ್ಲಿ ತೊಡಗಿದರೆ ಅದೇ ತಮಗೆ ತೃಪ್ತಿ ಎಂದು ಹೆಮ್ಮೆಪಡುತ್ತಾರೆ.
ಸರ್ವಶಕ್ತನಾದ ಅಲ್ಲಾಹನು ಇವರ ಸೇವಾಕಾರ್ಯಕ್ಕೆ ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ. ಇನ್ನಷ್ಟು ಅಶಕ್ತರ, ರೋಗಿಗಳ ಸೇವೆ ಮಾಡಲು ಉತ್ತಮ ಆರೋಗ್ಯ, ಶಕ್ತಿಯನ್ನು ಕರುಣಿಸಲಿ. ನಾವೆಲ್ಲರೂ ಇವರ ಈ ಕಾರುಣ್ಯ ಪ್ರವೃತ್ತಿಯಲ್ಲಿ ಕೈ ಜೋಡಿಸೋಣ. ನಿಮ್ಮ ಎಲ್ಲಾ ಕಾರ್ಯಕ್ಕೂ ನಮ್ಮದೊಂದು ‘ಹ್ಯಾಟ್ಸಾಫ್ ಸರ್’
✒️ ನಾಸಿರ್ ಉಚ್ಚಿಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.