ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :- ಪತ್ರಕರ್ತರು ತಮ್ಮ ವೃತ್ತಿ ಘನತೆ ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪತ್ರಕರ್ತರೆಂದು ಹೇಳಿಕೊಳ್ಳಲು ಅಂಜಿಕೆ ಪಡುವ ಪರಿಸ್ಥಿತಿ ನಿರ್ಮಾಣವಾದೀತು , ದಂಧೆ ಮಾಡುವಂತಿದ್ದರೆ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾದಿನಾಚರಣೆ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೋವಿಡ್ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಸಂಘದಿಂದ ೧೦ ಸಾವಿರ ರೂ ಚೆಕ್ ವಿತರಿಸಿ ಮಾತನಾಡಿದ ಅವರು , ಕಾಡಿಸಿ , ಪೀಡಿಸುವ ಮತ್ತು ದಂಧೆ ನಡೆಸುವವರು ಈ ಕ್ಷೇತ್ರಕ್ಕೆ ಬರಬೇಡಿ ಎಂದು ತಿಳಿಸಿದರು.
ಜನ ನಮ್ಮನ್ನು ಪ್ರೀತಿ ಮಾಡುವಂತಹ ನಡವಳಿಕೆ ನಮ್ಮದಾಗಿರಬೇಕು , ಸಮಾಜದಲ್ಲಿನ ಅಸಮಾನತೆ ವಿರುದ್ದ , ಅಶಕ್ತರ ಪರವಾಗಿ ಮಾನವೀಯ ತುಡಿತ ಇರುವಂತಹವರು ಮಾತ್ರ ಪತ್ರಕರ್ತರಾಗಲು ಸಾಧ್ಯ ಎಂದರು.
ಬರವಣಿಗೆ ಇಲ್ಲದ ಅನೇಕರು ಇಂದು ಪತ್ರಿಕಾರಂಗಕ್ಕೆ ಬಂದಿದ್ದಾರೆ ಎಂದು ವಿಷಾದಿಸಿದ ಅವರು , ಸ್ವಾತಂತ್ರ್ಯ ಪೂರ್ವದಲ್ಲಿ ನಮಗೆ ಗಾಂಧೀಜಿ , ಅಂಬೇಡ್ಕರ್ ಸ್ವತಃ ಪತ್ರಕರ್ತರಾಗಿ ನಮಗೆ ಆದರ್ಶವಾಗಿದ್ದಾರೆ . ಅವರಿಗೆ ಅಗೌರವ ತರುವ ಕೆಲಸ ನಮ್ಮಿಂದಾಗಬಾರದು ಎಂದರು .
ಕೋಲಾರದ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿದೆ . ಪ್ರತಿಭಾ ಪುರಸ್ಕಾರ , ನವೀಕೃತ ಸಭಾಂಗಣ ಉದ್ಘಾಟನೆ , ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮೂರು ಕಾರ್ಯಕ್ರಮಗಳನ್ನು ಒಂದೇ ದಿನ ಮಾಡುತ್ತಿದ್ದೀರಿ , ನಿಮಗೆ ರಾಜ್ಯ ಸಂಘದ ಪರವಾಗಿ ಅಭಿನಂದನ ಎಂದು ತಿಳಿಸಿದರು.
೧೯೩೨ ರಲ್ಲಿ ಈ ಜಿಲ್ಲೆಯವರೇ ಆದ ಡಿವಿಜಿ ಅವರುಹುಟ್ಟು ಹಾಕಿದ ಸಂಘಟನೆ ನಮ್ಮದು , ಇಂತಹ ಸಂಘಟನೆಯಲ್ಲಿ ನಾವು ವೃತ್ತಿ ಘನತೆ ಕಾಪಾಡಿಕೊಳ್ಳುವ ಅಗತ್ಯವಿದೆ , ದಂಧೆ ಮಾಡುವಂತಿದ್ದರೆ ಬೇರೆ ಕ್ಷೇತ್ರ ಆರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಸಂಸದ ಮುನಿಸ್ವಾಮಿ , ಶಾಸಕರಾದ ಕೆ.ಶ್ರೀನಿವಾಸಗೌಡ , ಎಸ್.ಎನ್.ನಾರಾಯಣಸ್ವಾಮಿ , ಕೆ.ವೈ.ನಂಜೇಗೌಡ , ಸಿ.ಆರ್.ಮನೋಹರ್ , ಇಂಚರ ಗೋವಿಂದರಾಜು , ಜಿಲ್ಲಾಧಿಕಾರಿ ಆರ್.ಸೆಲ್ವಮಣಿ , ಎಸ್ಪಿ ಡೆಕ್ಕಾಕಿಶೋರ್ಬಾಬು , ಸಮಾಜಸೇವಕ ಸಿಎಂಆರ್.ಶ್ರೀನಾಥ್ , ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ ಮುನಿರಾಜು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ,ಸಂಘದ ರಾಜ್ಯ ಕಾರ್ಯಕಾರಿ ಸದಸ್ಯರಾದ ಬಿ.ಎ.ಗೋಪಿನಾಥ್. ಮಹಮದ್ ಯೂನಸ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ , ನಗರಸಭಾ ಸದಸ್ಯ ಬಿ.ಎಂ.ಮುಬಾರಕ್, ಹಿರಿಯ ಪತ್ರಕರ್ತರಾದ ಎಂ.ಜಿ.ಪಭಾಕರ್ , ಅನಂತರಾಮ್ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ , ಖಜಾಂಚಿ ಎ. ಜಿ. ಸುರೇಶ್ಕುಮಾರ್ ಮತ್ತಿತರರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.