(www.vknews.in) ಧಾರವಾಡ : ಶಿವಸಂಸ್ಕೃತಿಯ ಮೂಲಪುರುಷನಾಗಿರುವ ಮತ್ತು ಅದ್ಭುತ ಕ್ರಿಯಾಶಕ್ತಿಯನ್ನು ಹೊಂದಿರುವ ಶ್ರೀವೀರಭದ್ರದೇವರ ಜಯಂತಿ(ಉದ್ಭವ) ಮಹೋತ್ಸವವನ್ನು ಭಾದ್ರಪದ ಮಾಸದ ಮೊದಲ ಮಂಗಳವಾರ (ಆಗಷ್ಟ-30 ರಂದು) ರಾಷ್ಟ್ರವ್ಯಾಪಿಯಾಗಿ ಏಕಕಾಲಕ್ಕೆ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ಜಂಟಿಯಾಗಿ ತಿಳಿಸಿವೆ.
ಶ್ರೀವೀರಭದ್ರದೇವರ ಪರಂಪರೆ, ಸಂಪ್ರದಾಯ, ಅರ್ಚನೆ, ಆರಾಧನೆ ಬಹಳಷ್ಟು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಶ್ರೀವೀರಭದ್ರದೇವರು ಬಾಳೆಹೊನ್ನೂರಿನ ಶ್ರೀರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನೂ ಆಗಿದ್ದು,ವೀರಶೈವ-ಲಿಂಗಾಯತ ಧರ್ಮದ ಗುರುಪರಂಪರೆಯ ಮೂಲ ಧರ್ಮಪೀಠಗಳಾದ ಶ್ರೀರಂಭಾಪುರಿ,ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀ ಶ್ರೀಶೈಲ ಹಾಗೂ ಶ್ರೀಕಾಶಿ ಜಗದ್ಗುರು ಪೀಠಗಳ ಪರಂಪರೆಯಲ್ಲಿ ಶ್ರೀವೀರಭದ್ರದೇವರ ಉಲ್ಲೇಖಗಳು ವಿಪುಲವಾಗಿ ಕಾಣಸಿಗುತ್ತವೆ.
ಕರ್ನಾಟಕವೂ ಸೇರಿದಂತೆ ಭಾರತದ ಬಹುಪಾಲು ರಾಜ್ಯಗಳಲ್ಲಿ ಶ್ರೀವೀರಭದ್ರದೇವರ ಭಕ್ತರಿದ್ದು, ಅಸಂಖ್ಯಾತ ಭಕ್ತ ಸಂಕುಲದ ಕುಲದೇವರಾಗಿ ಶ್ರೀವೀರಭದ್ರದೇವರು ನಿತ್ಯವೂ ಎಲ್ಲೆಡೆ ಪೂಜೆಗೊಳ್ಳುತ್ತಿರುವುದು ವಿಶೇಷವಾಗಿದೆ. ಆಂಧ್ರಪ್ರದೇಶದ ರಾಯಚೋಟಿ ಕ್ಷೇತ್ರದಲ್ಲಿರುವ ಶ್ರೀವೀರಭದ್ರದೇವರು ವಿಶೇಷವಾದ ಶಕ್ತಿಸಂಪನ್ನತೆಯನ್ನು ಹೊಂದಿದ್ದು, ಭಾರತದ ಶ್ರೀವೀರಭದ್ರದೇವರ ದೇವಾಲಯಗಳಲ್ಲಿ ಇದು ಅಗ್ರಸ್ಥಾನವನ್ನು ಹೊಂದಿದೆ. ಇದರಂತೆ ರಾಜ್ಯದಲ್ಲಿರುವ ಬಹುಪಾಲು ಶ್ರೀವೀರಭದ್ರೇಶ್ವರ ದೇವರ ದೇವಾಲಯಗಳಿಗೆ ತನ್ನದೇ ಆದ ವೈಶಿಷ್ಠ್ಯತೆಯ ಮಹತ್ವವಿದೆ.
ಕಳೆದ ೪ ವರ್ಷಗಳಿಂದಲೂ ಶ್ರೀವೀರಭದ್ರದೇವರ ಉದ್ಭವ ಮಹೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಶೃದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದ್ದು, ಈ ವರ್ಷವೂ ಸಹ ಮನೆ, ಗ್ರಾಮ, ನಗರ, ತಾಲೂಕು, ಜಿಲ್ಲೆ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮುಂತಾದ ರಾಜ್ಯಗಳಲ್ಲಿಯೂ ಶ್ರೀವೀರಭದ್ರೇಶ್ವರ ದೇವರ ಉದ್ಭವ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
*ಪೂರ್ವಭಾವಿ ಸಭೆ* : ರಾಜ್ಯದಲ್ಲಿ ಶ್ರೀವೀರಭದ್ರ ದೇವರ ಜಯಂತಿ(ಉದ್ಭವ) ಮಹೋತ್ಸವದ ಯಶಸ್ವೀ ಆಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಪೂರ್ವಭಾವಿ ಸಭೆ ಜರುಗಿದವು. ಶ್ರೀವೀರಭದ್ರದೇವರ ದೇವಾಲಯಗಳಲ್ಲಿ ಆಗಷ್ಟ-30ರಂದು ಏಕಾದಶ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ, ಗುಗ್ಗಳ ಸೇವೆ ಸೇರಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲು, ಜೊತೆಗೆ ಶ್ರೀವೀರಭದ್ರೇಶ್ವರ ದೇವರ ದೇವಾಲಯಗಳ ಸೇವಾ ಸಮಿತಿಗಳು, ಟ್ರಸ್ಟಗಳು ಪ್ರಾತಃಕಾಲದಲ್ಲಿ ವಿಶೇಷ ಗುಗ್ಗಳ, ಸಂಬಾಳ ವಾದ್ಯ ವೈಭವ ಹಾಗೂ ಮುನ್ನಾದಿನ ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣ ಕಲಬುರ್ಗಿ, ಉಪಾಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ, ಸಂಚಾಲಕರುಗಳಾದ ಗಿರೀಶಕುಮಾರ ಬುಡರಕಟ್ಟಿಮಠ ಹಾಗೂ ಪಿ.ಎಂ. ಚಿಕ್ಕಮಠ, ವಿವಿಧ ಪದಾಧಿಕಾರಿಗಳಾದ ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ, ಜಿಲ್ಲಾಧ್ಯಕ್ಷ ಗದಗಯ್ಯ ಹಿರೇಮಠ(ಜೀವಿ), ರಾಚಯ್ಯ ಮಠಪತಿ, ಅನಿಲ ಉಳ್ಳಾಗಡ್ಡಿ, ಚೆನ್ನಯ್ಯ ಚೌಕಿಮಠ, ಶಂಕರ ಕುರ್ತಕೋಟಿ, ಡಾ.ಎಚ್.ವ್ಹಿ. ಬೆಳಗಲಿ, ಡಾ. ರಾಮು ಮೂಲಗಿ ಹಾಗೂ ರಾಯಚೋಟಿ ಶ್ರೀವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಕಮರಡಗಿ ಇತರರು ಈ ಉದ್ಭವ ಮಹೋತ್ಸವದಲ್ಲಿ ಭಕ್ತಗಣ ಎಲ್ಲೆಡೆ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಭಕ್ತಿಯ ವಾತಾವರಣ :ಆಗಷ್ಟ-30 ರಂದೇ ಏಕಕಾಲಕ್ಕೆ ರಾಷ್ಟ್ರವ್ಯಾಪಿಯಾಗಿ ನಡೆಯುವ ಈ ಉದ್ಭವ ಮಹೋತ್ಸವದಿಂದಾಗಿ ಎಲ್ಲೆಡೆ ವ್ಯಾಪಕ ಭಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಪ್ರತಿ ನಗರ, ಹಳ್ಳಿಗಳ ವ್ಯಾಪ್ತಿಗಳಲ್ಲಿ ನಡೆಯುವ ಈ ಉದ್ಭವ ಮಹೋತ್ಸವದ ಕುರಿತು ಈಗಾಗಲೇ ಕರಪತ್ರಗಳನ್ನು ಹಾಗೂ ಬ್ಯಾನರ್ಗಳನ್ನು ಮುದ್ರಿಸಿ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಸಿದ್ದನ್ನು ಸಭೆಗೆ ತಿಳಿಸಲಾಯಿತು. ಶ್ರೀವೀರಭದ್ರದೇವರ ಜಯಂತಿ ಮಹೋತ್ಸವದ ಕುರಿತು ಮಾಹಿತಿಗೆ ಮೊ. 9741928614, 9880715853 ಅಥವಾ 9448801271 ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. —————————————————————–
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.