ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೇ ಐದರಂದು ರಕ್ತಸಂಬಂಧಿ ಖಾಯಿಲೆಯ ಚಿಕಿತ್ಸೆಗಾಗಿ ದಾಖಲಾಗಿದ್ದ ಬೆಳ್ತಂಗಡಿ ಮೂಲದ ಅನುಶ್ರೀ ಎಂಬ ಬಾಲಕಿಗೆ ಮಧ್ಯಾಹ್ನ ಎ ನೆಗೆಟಿವ್ ಗುಂಪಿನ ಒಂದು ಯುನಿಟ್ ರಕ್ತದ ತುರ್ತು ಅವಶ್ಯಕತೆ ಕಂಡುಬಂದಿತ್ತು. ಆಸ್ಪತ್ರೆಯ ರಕ್ತನಿಧಿಯಲ್ಲಿ ಸೂಕ್ತ ಗುಂಪಿನ ರಕ್ತ ಲಭಿಸದ ಕಾರಣ ಅಲ್ಲಿನ ಸಿಬ್ಬಂದಿ ರಕ್ತದಾನಿಯ ವ್ಯವಸ್ಥೆ ಮಾಡುವಂತೆ ರಕ್ತದಾನಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಗೆ ಮನವಿ ಮಾಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಸಂಸ್ಥೆಯ ನಿರ್ವಾಹಕರ ತಂಡ ನಗರದ ವಿವಿಧ ರಕ್ತನಿಧಿಗಳ ಮೊರೆ ಹೋಗಿತ್ತು ಆದರೆ ಅಲ್ಲೆಲ್ಲೂ ಸೂಕ್ತ ಗುಂಪಿನ ರಕ್ತದ ದಾಸ್ತಾನು ಇಲ್ಲದ್ದರಿಂದ ಎ ನೆಗೆಟಿವ್ ಗುಂಪಿನ ರಕ್ತದಾನಿಗಳ ಹುಡುಕಾಟಕ್ಕೆ ಮುಂದಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ರಕ್ತದಾನಿಗಳು ದೊರೆಯದ ಕಾರಣ ಹಾಗೂ ರಕ್ತದ ತುರ್ತು ಅವಶ್ಯಕತೆಯಿದ್ದುದರಿಂದ ರಂಝಾನ್ ಉಪವಾಸ ನಿರತನಾಗಿದ್ದ ಸಂಸ್ಥೆಯ ಕಾರ್ಯನಿರ್ವಾಹಕರಾದ ಇಮ್ತಿಯಾಝ್ ಬಜ್ಪೆ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ರಕ್ತದಾನ ಮಾಡಿ ಹೃದಯವಂತಿಕೆ ಮೆರೆದಿದ್ದಾರೆ.
ಎ ನೆಗೆಟಿವ್ ರಕ್ತದ ಗುಂಪಿನವರಾದ ಅನುಶ್ರೀಯವರು ಕಳೆದ ಕೆಲವು ಸಮಯಗಳಿಂದ ರಕ್ತಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಅವರ ದೇಹದಲ್ಲಿ ಬಿಳಿ ರಕ್ತಕಣಗಳು ಉತ್ಪತ್ತಿಯಾಗುತ್ತಿರಲಿಲ್ಲ. ಆದ್ದರಿಂದ ಅವರಿಗೆ ಮೂರು ತಿಂಗಳಿಗೊಮ್ಮೆ ರಕ್ತವನ್ನು ನೀಡಬೇಕಾಗಿದ್ದು, ಈ ಹಿಂದೆಯೂ ಇಮ್ತಿಯಾಝ್ ಬಜ್ಪೆ ಎರಡು ಬಾರಿ ಅವರಿಗೆ ರಕ್ತದಾನ ಮಾಡಿದ್ದಾರೆ. ಇಮ್ತಿಯಾಝ್ರ ಈ ಮಾನವೀಯ ಕಳಕಳಿಯ ಕಾರ್ಯದಿಂದ ಕೋಮುಸೂಕ್ಷ್ಮ ಪ್ರದೇಶವೆಂದು ಮುದ್ರೆಯೊತ್ತಲ್ಪಟ್ಟ ಮಂಗಳೂರಿನಲ್ಲಿ ಸಾಮರಸ್ಯದ ಅಲೆಯೊಂದು ಬೀಸಿದಂತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.