ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕೊರೋನಾ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೇರಿಕಾದಂತಹಾ ಅಮೇರಿಕಾವೇ ತತ್ತರಿಸಿ ಹೋಗಿದೆ. ಭಾರತದಲ್ಲಿ ಪ್ರಧಾನಿಗಳು ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ಪಕ್ಷ, ಧರ್ಮ ಜಾತಿ ವ್ಯತ್ಯಾಸವಿಲ್ಲದೆ ಎಲ್ಲರೂ ಸುಮಾರು ನಲವತ್ತಕ್ಕೂ ಹೆಚ್ಚು ದಿನಗಳಿಂದ ಮನೆಯಲ್ಲೇ ಕೂತು ಸಹಕರಿಸಿದ್ದಾರೆ. ವೈದ್ಯರು, ಪೊಲೀಸರು ಇನ್ನೂ ಹಲವು ಸ್ವಯಂ ಸೇವಕರು ರಾತ್ರಿ ಹಗಲೆನ್ನದೆ ನಿದ್ದೆ ಬಿಟ್ಟು ನಾಡಿನ ರಕ್ಷಣೆಗಾಗಿ ಶ್ರಮಿಸಿದ್ದಾರೆ. ಆದ್ದರಿಂದಲೇ ಇಲ್ಲಿ ಕೆಲವು ಪೊಸೆಟಿವ್ ಕೇಸುಗಳು ದಾಖಲಾಗಿದ್ದರೂ ಕೂಡ ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ತಲುಪಿಲ್ಲ. ಆದರೆ ಯಾವ ಕ್ಷಣದಲ್ಲೂ ಏನೂ ಸಂಭವಿಸಬಹುದು ಎಂಬುವುದು ಮೊನ್ನೆ ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ 21ಮಂದಿಗೆ ಪೊಸೆಟಿವ್ ಬಂದಾಗ ಗೊತ್ತಾಗಿದೆ! ಆದ್ದರಿಂದಲೇ ಆರ್ಥಿಕ ಸಬಲೀಕರಣಕ್ಕಾಗಿ ಸರಕಾರ ಕೆಲವೊಂದು ಉದ್ಯಮಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ ಕೂಡ ನಮ್ಮ ಎಚ್ಚರಿಕೆ ನಾವು ಮಾಡಲೇ ಬೇಕಾಗಿದೆ.
ಇಂಥಹಾ ಸಾಂಕ್ರಾಮಿಕ ರೋಗಗಳ ಸಂದರ್ಭ ಪರ್ವತಗಳತ್ತ ಹೋಗಿರಿ ಎಂದೂ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದೂ, ಮಸೀದಿಗಳಿಗೆ ಹೋಗ ಬೇಕಾಗಿಲ್ಲವೆಂದೂ ಸಾಕಷ್ಟು ಮುಂಜಾಗೃತೆಗಳನ್ನು ಪಾಲಿಸಬೇಕೆಂದು ಇಸ್ಲಾಂ ಸಹಸ್ರಮಾನಗಳ ಹಿಂದೆ ಸ್ಪಷ್ಟವಾಗಿ ನಮಗೆ ಆದೇಶ ಕೊಟ್ಟಿದೆ. ಆದ್ದರಿಂದಲೇ ಪವಿತ್ರವಾದ ರಂಝಾನ್ ತಿಂಗಳಲ್ಲಿ ಕೂಡ ಮಸೀದಿಗಳಿಗೆ ಬೀಗ ಜಡಿದು ಮನೆಯಲ್ಲೆ ನಮಾಝ್ ನಿರ್ವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದೂ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದೂ ಖಾಝಿಗಳು, ಉಲಮಾಗಳು ಕರೆಕೊಟ್ಟಿದ್ದು. ಅದನ್ನು ಸಮುದಾಯದ ಜನರು ಸ್ಪಷ್ಟವಾಗಿ ಪಾಲಿಸಿದ್ದಾರೆ. ಇನ್ನು ಯಾವ ಬಟ್ಟೆ ಅಂಗಡಿಗಳು ತೆರೆಯಲ್ಪಟ್ಟರೂ ಕೂಡ ನಮ್ಮ ಉಲಮಾಗಳ ಮಾರ್ಗದರ್ಶನಗಳ ಮೂಲಕ ಮುಂದುವರಿಯುವುದೇ ನಮಗೆ ಒಳಿತು.
ಪೆರ್ನಾಲಿಗೆ ಹೊಸ ಬಟ್ಟೆ ಧರಿಸುವುದು ಸುನ್ನತ್. ಅದರಲ್ಲಿ ಯಾರಿಗೂ ಎರಡಭಿಪ್ರಾಯವಿಲ್ಲ. ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿ ಮೂರಕ್ಕೂ ಹೆಚ್ಚು ಜುಮಾವನ್ನೆ ತ್ಯಜಿಸಬಹುದು ಎಂದು ಕಲಿಸುವ ಧರ್ಮ ರೋಗ ಹರಡಲು ಸಾಧ್ಯವಿರುವ ಬಟ್ಟೆ ಅಂಗಡಿಗೆ ಹೋಗಿ ಖರೀದಿಸಿ ಹಾಕಿಕೊಳ್ಳಲು ಪ್ರೋತ್ಸಾಹ ಕೊಡಬಹುದೇ?? ಖಂಡಿತಾ ಸಾಧ್ಯವಿಲ್ಲ. ಆರೋಗ್ಯಕ್ಕಾಗಿ ಫರ್ಳ್ ಆಗಿರುವ ಜುಮಾ ತ್ಯಜಿಸಿದವರಿಗೆ ಸುನ್ನತ್ತಾದ ಹೊಸ ಬಟ್ಟೆ ಖರೀದಿಸಲು ಬಟ್ಟೆಅಂಗಡಿಗಳಿಗೆ ದುಂಬಾಲು ಬೀಳಲು ಇಸ್ಲಾಂ ಹೇಳಬಹುದೇ? ಮನೆಯಲ್ಲಿ ಹೊಸ ಬಟ್ಟೆಗಳು ಇದ್ದರೆ ಹಾಕಿಕೊಳ್ಳಿ, ಇಲ್ಲದಿದ್ದರೆ ಇದ್ದುದರಲ್ಲಿ ಹೊಸತನ್ನು ನೀಟಾಗಿ ಧರಿಸಿ ಪೆರ್ನಾಲ್ ಆಚರಿಸೋಣ! ಅದು ಬಿಟ್ಟು ಅವರು ಅಂಗಡಿ ಓಪನ್ ಮಾಡಿದ್ದಾರೆ ಎಂಬ ಕಾರಣಕ್ಕೆ ನಾವೆಲ್ಲಾ ಹೋಗಿ ಅಲ್ಲಿ ದುಂಬಾಲು ಬಿದ್ದು ವೈರಸನ್ನು ಅಂಟಿಸಿಕೊಂಡು ಹಬ್ಬವೇ ಇಲ್ಲದ ರೀತಿಯಲ್ಲಿ ಮಾಡಿಕೊಳ್ಳುವುದು ಮೂರ್ಖತನವಲ್ಲವೇ??
ಬಟ್ಟೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಎಂಬುವುದು ಕನಸಿನ ಮಾತು, ಕನಿಷ್ಠ ಅಲ್ಲಿ ಕೆಲಸಕ್ಕಿರುವವನಾದರೂ ಎಲ್ಲರೊಂದಿಗೂ ಹತ್ತಿರ ನಿಂತು ವ್ಯವಹರಿಸಬೇಕಾಗುತ್ತದೆ! ಒಬ್ಬರು ಕನಿಷ್ಠ ಹತ್ತು ವಸ್ತ್ರಗಳನ್ನು ಸ್ಪರ್ಶಿಸಿ ನೋಡಿದರೆ ಬಳಿಕ ಬರುವ ನೂರು ಮಂದಿ ಅದನ್ನೇ ಸ್ಪರ್ಶಿಸಿ ನೋಡುತ್ತಾರೆ!! ಒಬ್ಬ ಪೊಸೆಟಿವ್ ವ್ಯಕ್ತಿ ಬಂದು ಹೋದರೆ ನೂರಾರು ಮಂದಿಗೆ ತಗುಲಲು ಸಾಧ್ಯವುಳ್ಳ ತುಂಬಾ ಡೇಂಜರ್ ಪ್ಲೇಸ್ ಈ ಜವಳಿ ಅಂಗಡಿ!!! ಮಹಿಳೆಯರೇ ಜಾಗೃತರಾಗಿರಿ… ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇದರ ಸ್ಥಿತಿ ನಾಳೆ ಹೇಗೆ ಎಂದು ಯಾರಿಗೂ ಗೊತ್ತಿಲ್ಲ. ಇಂದು ದುಂಬಾಲು ಬಿದ್ದು ಬಟ್ಟೆ ಖರೀದಿಸಿ ನಾಳೆ ಪೆರ್ನಾಲ್ ದಿನ ಇದಕ್ಕಿಂತಲೂ ಕಟ್ಟುನಿಟ್ಟಿನ ಲಾಕ್ಡೌನಿಗೆ ಒಳಗಾದರೆ!!? ಯಾವುದೂ ಅಲ್ಲ ಗೆಳೆಯುವಂತಿಲ್ಲ.
ನಮಗಿನ್ನೂ ತುಂಬಾ ರಂಝಾನ್ ಗಳು ಸ್ವಾಗತಿಸಬೇಕಾಗಿದೆ. ತುಂಬಾ ಪೆರ್ನಾಲ್ಗಳು ಹೊಸ ಬಟ್ಟೆಗಳೊಂದಿಗೆ ಸಂತೋಷದಿಂದ ಆಚರಿಸಬೇಕಾಗಿದೆ. ಗಡಿಬಿಡಿಯಲ್ಲಿ ಉಲಮಾಗಳ, ಖಾಝಿಗಳ, ಸಮುದಾಯದ ಮುಖಂಡರ ಹೇಳಿಕೆಗಳನ್ನು ಗಾಳಿಗೆ ತೂರಿ ಬಟ್ಟೆಅಂಗಡಿಗಳಲ್ಲಿ ಗುಂಪುಗೂಡಿ ರೋಗಗಳನ್ನು ಮೈಗೆಳೆದುಕೊಂಡು ನಾಳೇನಾದರೂ ಹೆಚ್ಚು ಕಡಿಮೆಯಾದರೆ ಏನು ಗತಿ?
ಆದ್ದರಿಂದಲೇ ಖಾಝಿಗಳ, ಉಲಮಾಗಳ, ಸಮುದಾಯದ ಮುಖಂಡರುಗಳ ಮಾತಿಗೆ ಬೆಲೆಕೊಡುವವರಾಗೋಣ, ಯಾವುದೋ ಒತ್ತಡಕ್ಕೆ ಮಣಿದು ಬಟ್ಟೆ ಅಂಗಡಿಗಳು ತೆರೆದ ಕೂಡಲೇ ಈ ನಾಯಕರ ಮಾತನ್ನು ಅವಗಣಿಸಿ ಸಮುದಾಯದ ಮಾನ ಹರಾಜು ಮಾಡದೇ ಇರೋಣ, ಈಗಾಗಲೇ ದಬೈಯಿಂದ ಬಂತು ಮಕ್ಕಾದಿಂದ ಬಂತು ಎಂದು ಒದರುತ್ತಿರುವ ಮಾಧ್ಯಮಗಳಿಗೆ ಎಳೆದಾಡಿ ತಿನ್ನುವ ಆಹಾರವಾಗದೆ ಇರೋಣ, ಸಮುದಾಯದ ಇಝ್ಝತ್ತನ್ನು ಕಾಪಾಡೋಣ. ನಮ್ಮ ಹಲವು ಯುವಕರು ಗಲ್ಫ್ ರಾಷ್ಟ್ರಗಳಲ್ಲಿ ತಂತಮ್ಮ ಕುಟುಂಬಗಳಿಗೆ ಬೇಕಾಗಿ ಮೈಮುರಿದು ದುಡಿಯುತ್ತಿರುವುದರ ಮಧ್ಯೆ ಕೊರೋನ ರೋಗಕ್ಕೆ ತುತ್ತಾಗಿದ್ದಾರೆ, ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ತಿಂಗಳು ಗಟ್ಟಲೆ ಮನೆಯಲ್ಲಿ ಕೂತು ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿರುವ ಹಲವು ಕುಟುಂಬಗಳು ಕಂಗಾಲಾಗಿ ಕುಳಿತಿದೆ, ಪ್ರಪಂಚಕ್ಕೆ ಪ್ರಪಂಚವೇ ಮರಣದ ಮನೆಯಂತಾಗಿದೆ. ಈ ಮರಣದ ಮನೆಯಲ್ಲಿ ಮಿತಿಮೀರಿದ ಸಂಭ್ರಮಾಚರಣೆ ಬೇಕೆ? ಪ್ರಬುದ್ಧವಾಗಿ ಚಿಂತಿಸಿ…
✍️ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.