(www.vknews.com) : ಕರ್ನಾಟಕದಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಲಾಕ್ಡೌನ್ನ ನಂತರ ಜನರು ಸಹಜ ಸ್ಥಿತಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರವು ಕೂಡಾ ಜನರಿಗೆ ಸ್ಪಷ್ಟ ನಿರ್ದೇಶನವನ್ನು ನೀಡುತ್ತಿಲ್ಲ. ಇನ್ನೊಂದೆಡೆ ಜನರು ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಅಲ್ಲದೇ ಈ ಕೋವಿಡ್ ಮಧ್ಯೆ ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಲ್ಲಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಒಟ್ಟು ೮.೪೮ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಎಲ್ಲರೂ ಕೊರೋನಾ ಭೀತಿಯನ್ನು ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಿ ಹಬ್ಬುತ್ತಿದ್ದು, ದೇಶದಲ್ಲಿ ಇಂದು ಸುಮಾರು ನಾಲ್ಕು ಲಕ್ಷದ ಹತ್ತಿರ ಸೋಂಕಿತರ ಸಂಖ್ಯೆ ತಲುಪುತ್ತಿದೆ.ರಾಜ್ಯದಲ್ಲಿಯೂ ಕೂಡಾ ನಾಲ್ಕು ಲಕ್ಷ ಕ್ಕೂ ಅಧಿಕ ದೃಢೀಕೃತ ಪ್ರಕರಣಗಳು ಕಂಡುಬಂದಿದ್ದು ಇದರಲ್ಲಿ 125 ಮಂದಿ ಬಲಿಯಾಗಿದ್ದಾರೆ.ಕೊರೋನಾ ಮುಂಜಾಗೃತ ಕ್ರಮವಾಗಿ ಕೇಂದ್ರ ಸರಕಾರವು ಆರಂಭದಿಂದಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಮುಂದಿನ ಆದೇಶದವರೆಗೆ ತರಗತಿ ಆರಂಭಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸೂಚಿಸಿದೆ. ಇಂತಹ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿರುವುದನ್ನು ಸರಕಾರ ಮರು ಪರಿಶೀಲಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಆಗ್ರಹಿಸಿದ್ದಾರೆ.
ವಿದ್ಯಾಥಿಗಳಿಗೆ ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಇಲ್ಲಿಯವರೆಗೆ ಪೋಷಕರು ಕೈಗೊಂಡಿದ್ದು, ಅಲ್ಲದೇ ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಮನೆಯಲ್ಲೇ ಇರಿಸುವ ಬಗ್ಗೆ ಹಲವು ಪೋಷಕರು ಈಗಾಗಲೇ ನಿರ್ಧಾರ ತೆಗೆದಿದ್ದಾರೆ. ಇಂತಹ ಗೊಂದಲಮಯ ವಾತಾವರಣದಲ್ಲಿ ಸರಕಾರ ವಿದ್ಯಾರ್ಥಿಗಳ ಪೋಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ವಿವಿದ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರಲಿದ್ದು, ಗಡಿ ಪ್ರದೇಶಗಳಲ್ಲಿ ಅಂತರಾಜ್ಯದ ಅಭ್ಯರ್ಥಿಗಳು ಕೂಡಾ ಪರೀಕ್ಷೆ ಬರೆಯಲು ಬರಲಿರುವ ಕಾರಣ ಸಾಮಾನ್ಯವಾಗಿ ದೈಹಿಕ ಅಂತರ ಮತ್ತು ಸುರಕ್ಷತೆಯ ಕಡೆಗೆ ಗಮನಹರಿಸುವುದು ಬಿಟ್ಟು ವಿದ್ಯಾರ್ಥಿಗಳು ಪರೀಕ್ಷೆಯ ಗೊಂದಲದಲ್ಲಿರುತ್ತಾರೆ. ಅಲ್ಲದೇ ಇತ್ತೀಚೆಗೆ ದ್ವಿತೀಯ ಪಿ ಯು ವಿಭಾಗದಲ್ಲಿ ಬಾಕಿಯಾಗಿದ್ದ ಇಂಗ್ಲಿಷ್ ಪರೀಕ್ಷೆಗೆ ರಾಜ್ಯದಲ್ಲಿ ಸುಮಾರು 27000 ವಿದ್ಯಾರ್ಥಿಗಳು ಗೈರುಹಾಜರಿಯಾಗಿದ್ದರು. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಕೊವಿಡ್ ಗೆ ಹೆದರಿ ಗೈರಾಗಿದ್ದಾರೆ ಎಂದು ಮಾಧ್ಯಮ ವರದಿ ಮಾಡಿತ್ತು. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಜೂನ್ 25 ಕ್ಕೆ ನಿಗದಿಯಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಶೀಘ್ರ ಮುಂದೂಡಿಸಿ ಆದೇಶ ಹೊರಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತಿದೆ ಎಂದು ಫಯಾಝ್ ದೊಡ್ಡಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
1 ಜೂನ್ 25 ಕ್ಕೆ ನಿಗದಿಯಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೊರೋನಾ ಹಾವಳಿಯ ಪಾಸಿಟಿವ್ ಪ್ರಕರಣ ಸಂಖ್ಯಾ ಅನುಪಾತ ಇಳಿಮುಖವಾಗುವವರೆಗೂ ಮುಂದೂಡಬೇಕು.
2 ಪರೀಕ್ಷಾ ಸಂಬಧಿ ವಿಚಾರಗಳಲ್ಲಿ ವಿವಿಧ ರಾಜ್ಯಗಳು ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಮಧ್ಯಪ್ರವೇಶಿಸಿ, ಏಕರೂಪ ತೀರ್ಮಾನ ಕೈಗೊಳ್ಳಬೇಕು.
3 ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾವಣೆ ಮಾಡಿದಂತಹ 8.48 ಲಕ್ಷ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಪರೀಕ್ಷೆ ಆರಂಭವಾಗುವವರೆಗೂ ಪರೀಕ್ಷಾರ್ಥಿಗಳ ಮೇಲೆ ವಿಶೇಷ ಕಾಳಜಿ ವಹಿಸಬೇಕು.
4 ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿಕೆಯಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದ್ದು, ಅವರಿಗೆ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಶೀಘ್ರದಲ್ಲಿಯೇ ವೈಯಕ್ತಿಕ ಕೌನ್ಸಿಲಿಂಗ್ಗಳನ್ನು ನಡೆಸಲು ವ್ಯವಸ್ಥೆ ಮಾಡಬೇಕು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.