(www.vknews.com) : ಡಿಸೆಂಬರ್ -2019 ರಲ್ಲಿ ಚೀನಾ ದೇಶದ ವುಹಾನ್ ನಗರದಲ್ಲಿ ಆರಂಭವಾದ SARS CoV-2 ಎಂಬ ವೈರಾಣು ಸಾಂಕ್ರಾಮಿಕ ರೋಗ ಮನುಕುಲಕ್ಕೆ ತಗಲಿಕೊಂಡು ಸುಮಾರು 7 ತಿಂಗಳುಗಳು ಕಳೆದಿದೆ. ಜಗತ್ತಿನ ಮೂಲೆಮೂಲೆಗೂ ಈ ರೋಗ ವ್ಯಾಪಿಸಿದೆ. ಈ ರೋಗವನ್ನು ನಿಯಂತ್ರಿಸಲು ವೈದ್ಯರು, ದಾದಿಯರು, ವಿಜ್ಞಾನಿಗಳು, ಪೊಲೀಸರು, ರಾಜಕೀಯ ವ್ಯಕ್ತಿಗಳು ಎಲ್ಲರೂ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ( ಜುಲೈ 20 ರ ವರದಿ) ಸುಮಾರು 1.5 ಕೋಟಿ ಮಂದಿ ವಿಶ್ವದಾದ್ಯಂತ ಈ ರೋಗಕ್ಕೆ ತುತ್ತಾಗಿ 6.2 ಲಕ್ಷ ಮಂದಿ ಜೀವಕಳೆದುಕೊಂಡಿದ್ದಾರೆ.
ಧನಾತ್ಮಕವಾಗಿ ಆಲೋಚಿಸುವುದಾದರೆ 91 ಲಕ್ಷ ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ನಮ್ಮ ಭಾರತ ದೇಶದಲ್ಲಿ 11.8 ಲಕ್ಷ ಮಂದಿ ಈ ಕೋವಿಡ್-19 ರೋಗದಿಂದ ಪೀಡಿತರಾಗಿ 28,750 ಲಕ್ಷ ಮಂದಿ ಜೀವಕಳೆದುಕೊಂಡಿದ್ದಾರೆ ಮತ್ತು 7.5 ಲಕ್ಷ ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಒಂದು ಸಂತಸದ ವಿಚಾರವೆಂದರೆ ಈ ರೋಗದಿಂದ ಮೃತಪಟ್ಟವರ ಸಂಖ್ಯೆ ಬಹಳ ಕನಿಷ್ಟ ಪ್ರಮಾಣದಲ್ಲಿ ಇದ್ದು, ಸುಮಾರು 95 ಶೇಕಡಾ ಮಂದಿ ಗುಣಮುಖರಾಗಿದ್ದಾರೆ.
ಯಾವುದೇ ನಿರ್ದಿಷ್ಟ ಚಿಕಿತ್ಸೆ ಮತ್ತು ಲಸಿಕೆ ಇಲ್ಲದ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ ಸಾವಿನ ಪ್ರಮಾಣವನ್ನು ನಿಯಂತ್ರಿಸುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಇಂತಹಾ ವಿಶ್ವ ವ್ಯಾಪಿ ಸಾಂಕ್ರಾಮಿಕ ರೋಗಗಳು ಬಂದಾಗ ಬರೀ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ರೋಗ ನಿಯಂತ್ರಿಸಬೇಕು ಎಂದು ಜನರು ತಿಳಿದರೆ ಅದು ಮೂರ್ಖತನವಾದೀತು. ರೋಗವನ್ನು ನಿಯಂತ್ರಿಸುವಲ್ಲಿ ಪ್ರತಿಯೊಬ್ಬ ಪ್ರಜೆಯ ಪಾಲುದಾರಿಕೆ ಇದೆ. ಪ್ರತಿಯೊಬ್ಬ ಪ್ರಜೆಯ ಪಾಲುದಾರಿಕೆ ಇದೆ. ಒಬ್ಬ ರೋಗಿಯ ಆರೋಗ್ಯವನ್ನು ವೈದ್ಯ ಕಾಪಾಡಿದರೆ, ಸಮಾಜದ ಆರೋಗ್ಯವನ್ನು ಪೊಲೀಸರು, ಮಾದ್ಯಮ ಬಂಧುಗಳು, ಆಡಳಿತಾಧಿಕಾರಿಗಳು ಕಾಪಾಡಬೇಕು, ಜನರು ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಬೇಕು ಮತ್ತು ಪೂರಕವಾಗಿ ಕೈಜೋಡಿಸಬೇಕು. ಹಾಗಾದರೆ ಮಾತ್ರ ಇಂತಹಾ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ವೈದ್ಯರು ಮತ್ತು ಸರಕಾರಕ್ಕೆ ಸಾಧ್ಯವಿದೆ.
ಏನು ಮಾಡಬೇಕು?
1) ಸರಕಾರದ ಹೊಣೆಗಾರಿಕೆ: ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಅತೀ ಹೆಚ್ಚು ಹೊಣೆಗಾರಿಕೆ ಸರ್ಕಾರಕ್ಕೆ ಇರುತ್ತದೆ. ರೋಗ ನಿಯಂತ್ರಿಸುವಲ್ಲಿ, ರೋಗ ಹರಡದಂತೆ ತಡೆಯುವಲ್ಲಿ ಸರಕಾರ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಸಾಕಷ್ಟು ಮೂಲಭೂತ ಸೌಕರ್ಯವುಳ್ಳ ಆಸ್ಪತ್ರೆಯನ್ನು ಸಜ್ಜುಗೊಳಿಸುವುದು. ಸಾಕಷ್ಟು ವೈದ್ಯರು ಮತ್ತು ದಾದಿಯರ ನೇಮಕ ಮಾಡುವುದು. ರೋಗ ನಿಯಂತ್ರಣಕ್ಕೆ ಬೇಕಾದ ಸೌಲಭ್ಯ ನೀಡುವುದು. ಔಷಧಗಳ ಪೂರೈಕೆ ಮಾಡುವುದು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಆತ್ಮಸ್ಥೈರ್ಯ ನೀಡುವುದು ಇವೆಲ್ಲವನ್ನು ಸರಕಾರ ಮಾಡಬೇಕಾಗುತ್ತದೆ. ಇದರ ಜೊತೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಸರಕಾರದ ಹೊಣೆಗಾರಿಕೆಯಾಗಿರುತ್ತದೆ. ಜನರು, ವೈದ್ಯರು, ಪೊಲೀಸರು ಮತ್ತು ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಮಾತ್ರ ಸಾಂಕ್ರಾಮಿಕ ರೋಗ ನಿಯಂತ್ರಣ ಸಾಧ್ಯವಾಗಬಹುದು. ಜನರು ಕೂಡಾ ಎಲ್ಲವೂ ಸರ್ಕಾರವೇ ಮಾಡಬೇಕು ಎಂಬ ಉಡಾಫೆ ಧೋರಣೆ ತಾಳಬಾರದು. ಸರಕಾರದ ಜೊತೆ ಕೈಜೋಡಿಸಿದಲ್ಲಿ ಮಾತ್ರ ರೋಗ ನಿಯಂತ್ರಣ ಸಾಧ್ಯ.
2) ಮಾಧ್ಯಮಗಳ ಹೊಣೆಗಾರಿಕೆ: ಮಾದ್ಯಮಗಳು ಸಮಾಜದ ಮೂರನೇ ಕಣ್ಣು ಇದ್ದಂತೆ. ಸರಕಾರದ ತಪ್ಪುಗಳನ್ನು ಗುರುತಿಸಿ ಸರಿದಾರಿಗೆ ತರುವ ಕೆಲಸ ಮಾಡಬೇಕು. ಜನರಲ್ಲಿ ಆತ್ಮವಿಶ್ವಾಸ ತುಂಬಿ ಈ ರೋಗದ ವಿರುದ್ಧ ಹೋರಾಡುವ ಧನಾತ್ಮಕ ಚಿಂತನೆ ಬರುವಂತೆ ಮಾಡುವ ಕೆಲಸ ಮಾದ್ಯಮಗಳು ಮಾಡಬೇಕು. ಆದರೆ ವಿಪರ್ಯಾಸವೆಂದರೆ ಈಗೀಗ ದೃಶ್ಯ ಮಾದ್ಯಮಗಳು ಪ್ರಚಾರದ ತೆವಲಿನಿಂದಾಗಿ ರೋಗವನ್ನು ವೈಭವೀಕರಿಸಿ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ಕೋವಿಡ್-19 ರೋಗವನ್ನು ಅತಿಯಾಗಿ ವರ್ಣಿಸಿ ವರ್ಣರಂಜಿತ ಸುದ್ಧಿಯಾಗಿ ಸತ್ಯವನ್ನು ಮರೆಮಾಚುವ ಕೆಲಸ ಮಾಡುತ್ತಿರುವುದು ದೌರ್ಭಾಗ್ಯದ ವಿಚಾರ. ದಿನಬೆಳಗಾದರೆ ಕೋವಿಡ್-19 ರೋಗದ ರುದ್ರನರ್ತನ. ಕೋವಿಡ್ -19 ರೋಗದ ಆರ್ಭಟ, ಕೋವಿಡ್-19 ಅಟ್ಟಹಾಸ ಹೀಗೆ ವರ್ಣರಂಜಿತ ಸುದ್ದಿಗಳನ್ನು ನಿರಂತರವಾಗಿ ಪ್ರಚಾರ ಮಾಡಿ ಜನರಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿರುವುದು ಬಹಳ ಶೋಚನೀಯ ವಿಚಾರವಾಗಿದೆ. ರೋಗಿಗಳ ಸಾವನ್ನೇ ವೈಭವೀಕರಿಸಿ ಸತ್ಯವನ್ನೇ ಮರೆ ಮಾಚಿ ಕೋವಿಡ್-19 ರೋಗವನ್ನು ಒಂದು ಬಹುದೊಡ್ಡ ಚಿಕಿತ್ಸೆ ಇಲ್ಲದ ಮಹಾಮಾರಿ ಎಂದು ಬಿಂಬಿಸಿರುವುದು ಮಹಳ ವಿಪರ್ಯಾಸ.
ನಿರಂತರವಾಗಿ ಕರೋನಾ ವೈರಾಣುವನ್ನು ಅತ್ಯಂತ ಭೀಕರವಾಗಿ ತೋರಿಸಿ ಜನರಲ್ಲಿ ಭೀತಿ ಹುಟ್ಟಿಸಿ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡುತ್ತಾರೆ. ಈ ಕೋವಿಡ್-19 ರೋಗವನ್ನು ವೈಭವೀಕರಿಸದೆ ಸಾಮಾನ್ಯ ಸುದ್ದಿಯಂತೆ ಬಿತ್ತರಿಸಿ ಗುಣಮುಖಗೊಂಡ ರೋಗಿಗಳಿಂದ ಧನಾತ್ಮಕ ಚಿಂತೆಯುಳ್ಳ ವಿಚಾರ ತೋರಿಸಿ ಜನರಲ್ಲಿ ಧೈರ್ಯತುಂಬಿಸುವ ಕೆಲಸ ಮಾಡಬೇಕಾಗಿದೆ. ಮಾದ್ಯಮ ಸರಕಾರ ಮತ್ತು ವೈದ್ಯರ ಜೊತೆ ಜೊತೆಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಸರಕಾರದ ಪ್ರತಿ ನಡೆಯನ್ನು ದೂಷಿಸಿ, ವೈದ್ಯರನ್ನು ಆರೋಪಿಯಂತೆ ಬಿಂಬಿಸಿ, ರೋಗವನ್ನು ವೈಭವೀಕರಿಸಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ದೃಶ್ಯ ಮಾದ್ಯಮಗಳು ಮಾಡುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಮತ್ತಷ್ಟು ಹದಗೆಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಸರಕಾರ ಮಾದ್ಯಮವನ್ನು ನಿಯಂತ್ರಿಸದಿದ್ದಲ್ಲಿ ಜನರು ಕೋವಿಡ್-19 ರೋಗದ ಭಯದಿಂದಲೇ ಸಾಯುವುದು ನಿಶ್ಚಿತ. ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ನಮ್ಮ ಮುಂದೆ ಇದೆ. ಇನ್ನಾದರೂ ಮಾದ್ಯಮಗಳು ಖಿಖP ಹುಚ್ಚು ಬಿಟ್ಟು, ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡದೆ ಸತ್ಯವನ್ನು ಜನರಿಗೆ ಬಿಚ್ಚಿ ತೋರಿಸುವ ಕಾರ್ಯ ಮಾಡಬೇಕಾಗಿದೆ. ಹಾಗಾದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಬಹುದು ಮತ್ತು ಕೋವಿಡ್-29 ರೋಗದ ನಿಯಂತ್ರಣ ಸಾಧ್ಯವಾಗಬಹುದು.
3) ವೈದ್ಯರ ಹೊಣೆಗಾರಿಕೆ: ಕೋವಿಡ್-19 ರೋಗದ ನಿಯಂತ್ರಣದಲ್ಲಿ ವೈದ್ಯರ ಪಾತ್ರ ನಿರ್ಣಾಯಕ ಕೋವಿಡ್-19 ಎಂಬುದು ಒಂದು ಸಾಮಾನ್ಯ ವೈರಾಣು ಸೋಂಕು. ಜನರು ಈ ರೋಗಕ್ಕೆ ಭಯಭೀತರಾಗಬೇಕಿಲ್ಲ. ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮಾರಣಾಂತಿಕವಾಗುವುದಿಲ್ಲ ಎಂದು ಜನರಿಗೆ ಧೈರ್ಯ ತುಂಬುವ ಕೆಲಸ ವೈದ್ಯರು ಮಾಡಬೇಕಾಗಿದೆ. ಕೋವಿಡ್-19 ರೋಗ ಬಂದವರೆಲ್ಲ ಸಾಯುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಹೊಡೆದೋಡಿಸಬೇಕಾಗಿದೆ. ಸೂಕ್ತ ಔಷಧಿ ಮತ್ತು ಲಸಿಕೆ ಇಲ್ಲದಿದ್ದರೂ ಸಾವಿನ ಪ್ರಮಾಣ ಕೇವಲ 3 ರಿಂದ 4 ಶೇಕಡಾ ಅಷ್ಟೇ ಎಂದು ಜನರಿಗೆ ಆತ್ಮಸ್ಥೈರ್ಯ ನೀಡುವ ಕೆಲಸ ವೈದ್ಯರು ಮಾಡಬೇಕು. ರೋಗಿಗಳಿಗೆ ಮತ್ತು ಜನರಿಗೆ ರೋಗದ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಿ ಜನರಲ್ಲಿ ಧನಾತ್ಮಕ ಚಿಂತನೆ ಬರುವಂತೆ ವೈದ್ಯರು ಮಾಡಬೇಕಾದ ಅನಿವಾರ್ಯತೆ ಇದೆ. ಹೆಪಟೈಟಿಸ್, ಏಡ್ಸ್ ಅಂತಹಾ ಮಹಾಮಾರಿಗಳನ್ನು ಎದುರಿಸಿದ ಮನುಕುಲಕ್ಕೆ, ಈ ಕೋವಿಡ್-19 ರೋಗ ನಿಯಂತ್ರಣ ಮಾಡುವುದು ಕಷ್ಟಸಾಧ್ಯವಲ್ಲ.
ಜನರು ಸಾಕಷ್ಟು ಮುಂಜಾಗ್ರತೆ ವಹಿಸಿ ವೈದ್ಯರ ಜೊತೆ ಸಹಕರಿಸಿದಲ್ಲಿ ಆದಷ್ಟು ಬೇಗ ಈ ಭೂಮಿಯಿಂದಲೇ ಕೋವಿಡ್-19 ಮುಕ್ತವಾಗುವುದರಲ್ಲಿ ಸಂಶಯವೇ ಇಲ್ಲ ಎಂಬ ವಿಚಾರವನ್ನು ಜನರಿಗೆ ವೈದ್ಯರು ಮನದಟ್ಟು ಮಾಡಿ ಆತ್ಮ ಧೈರ್ಯ ತುಂಬಿಸುವ ಕೆಲಸ ತುರ್ತಾಗಿ ಮಾಡಬೇಕಾಗಿದೆ. ಇನ್ನು ಒಂದಿಷ್ಟು ಮಧುಮೇಹ, ರಕ್ತದೊತ್ತಡ ಕಾಯಿಲೆ ಇರುವವರಲ್ಲಿ ಕೋವಿಡ್-19 ರೋಗ ಬಾಧಿಸಿ ಮರಣದಲ್ಲಿ ಅಂತ್ಯವಾದರೆ ವೈದ್ಯರನ್ನು ದೂಷಿಸಿ ಹೊಣೆಗಾರರನ್ನಾಗಿ ಮಾಡಿ ವೈದ್ಯರ ಮೇಲೆ, ದಾದಿಯರ ಮೇಲೆ ಹಲ್ಲೆ ಮಾಡಿದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತದೆಯೇ ಹೊರತು ಯಾವುದೇ ಪ್ರಯೋಜನ ಉಂಟಾಗದು ಎಂಬುದನ್ನು ಜನರು ಆದಷ್ಟು ಬೇಗ ಅರಿತುಕೊಳ್ಳಬೇಕು. ಅದೇ ರೀತಿ ಪ್ರತಿಯೊಬ್ಬ ವೈದ್ಯರು ಮತ್ತಷ್ಟು ಹೆಚ್ಚು ಕಾಳಜಿಯಿಂದ ರೋಗಿಗಳ ಸೇವೆ ಮಾಡಿ, ರೋಗ ಮುಕ್ತ ಮಾಡಲು ಶ್ರಮ ವಹಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ಒಂದು ನೆನಪಿರಲಿ, ಯಾವ ವೈದ್ಯರಿಗೂ ತಮ್ಮ ರೋಗಿ ಮರಣ ಹೊಂದಲಿ ಕಲ್ಪನೆ ಕನಸಲ್ಲೂ ಬರಲಿಕ್ಕಿಲ್ಲ. ತಮ್ಮ ಎಲ್ಲಾ ರೋಗಿಗಳು ಆದಷ್ಟು ಬೇಗ ಗುಣಮುಖರಾಗಲಿ ಎಂಬುದೇ ಎಲ್ಲಾ ವೈದ್ಯರ ಆದ್ಯತೆ ಆಗಿರುತ್ತದೆ ಮತ್ತು ಆಗಿರಲಿ.
4) ಜನರ ಹೊಣೆಗಾರಿಕೆ: ಕೋವಿಡ್-19 ರೋಗದ ನಿಯಂತ್ರಣದಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಹೊಣೆಗಾರಿಕೆ ಅತೀ ಮುಖ್ಯವಾಗಿರುತ್ತದೆ. ಸರಕಾರ ಹೇಳಿದ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಲೇಬೇಕು. ಮುಖಕವಚ ಬಳಕೆ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮುಂತಾದ ಮುಂಜಾಗರೂಕತೆಗಳನ್ನು ಜನರೇ ಅರಿತು ನಿಭಾಯಿಸಬೇಕು. ಈ ಎಲ್ಲಾ ವಿಚಾರಗಳನ್ನು ಜನರು ಸರಕಾರಕ್ಕೆ ಬೇಕಾಗಿ ಮಾಡುವುದಲ್ಲ. ತಮ್ಮ ಸುರಕ್ಷತೆ ಮತ್ತು ಸಮಾಜದ ಹಿತದೃಷ್ಟಿಯಿಂದ ಸಾಂಕ್ರಾಮಿಕ ರೋಗದ ಹರಡುವಿಕೆಯ ಸಂಕೋಲೆಯನ್ನು ತುಂಡರಿಸಲು ಮಾಡಲೇ ಬೇಕಾಗುತ್ತದೆ. ಮುಖಕವಚವನ್ನು ಕುತ್ತಿಗೆಗೆ ಹಾಕುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಪೊಲೀಸರು ಬಂದಾಗ ಮಾತ್ರ ಮುಖಕವಚ ಧರಿಸುವುದು ಮುಂತಾದ ತಪ್ಪುಗಳನ್ನು ಪದೇ ಪದೇ ಮಾಡಿದಲ್ಲಿ ರೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಯಾರೂ ನಮ್ಮನ್ನು ಗಮನಿಸದೇ ಇರುವಾಗ ನಮ್ಮ ವರ್ತನೆ ಹೇಗಿರುತ್ತದೆ ಅದುವೇ ನಮ್ಮ ಸಂಸ್ಕøತಿ ಆಗಿರುತ್ತದೆ. ನಾವು ಮಾಡುವ ಪ್ರತಿ ಕೆಲಸ ಮತ್ತು ನಮ್ಮ ವರ್ತನೆಗಳು, ಸಮಾಜದ ಆರೋಗ್ಯಕ್ಕೆ ಪೂರಕವಾಗಿರಬೇಕು, ಮಾರಕವಾಗಿರಬಾರದು ಎಂಬುದರ ಅರಿವು ಜನರಿಗೆ ಇರಬೇಕು.
ಎಲ್ಲವೂ ಸರಕಾರವೇ ಮಾಡಬೇಕು. ರೋಗದ ನಿಯಂತ್ರಣ ಸರಕಾರ ಮತ್ತು ವೈದ್ಯರ ಕೆಲಸ ಎಂಬ ಉಡಾಫೆಯ ಧೋರಣೆ ಒಳ್ಳೆಯದಲ್ಲ. ಸರಕಾರ ಇರುವುದೇ ಜನರಿಂದ ಎಂಬ ಸತ್ಯದ ಅರಿವು ಜನರಿಗೆ ಇರಬೇಕು. ಸರಕಾರ ನಿರ್ಭಂಧಿಸಿದ ಕೆಲಸಗಳನ್ನು ಮಾಡಲೇಬಾರದು. ಜನರು, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಜೊತೆ ಸಹಕರಿಸಬೇಕು. ಜನರು ಸರಕಾರದ ಕೆಲಸ ಮಾಡುವ ಪೊಲೀಸರು ಮತ್ತು ಇತರ ಸಿಬ್ಬಂದಿಗಳಿಗೆ ಸಂಪೂರ್ಣ ಸಹಕಾರ ನೀಡಲೇ ಬೇಕು. ಸರಕಾರ, ವೈದ್ಯರು ಮತ್ತು ಪೊಲೀಸರಿಂದ ಮಾತ್ರ ರೋಗದ ನಿಯಂತ್ರಣ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಬಹುದು.
ಕೊನೆಮಾತು: ಕೋವಿಡ್-19 ಎನ್ನುವುದು ಒಂದು ಸಾಮಾನ್ಯ ವೈರಾಣು ಸೋಂಕು ಆಗಿದ್ದು ಜನರು ಭಯಭೀತರಾಗಬೇಕಿಲ್ಲ. ಈಗ ತುರ್ತಾಗಿ ಬೇಕಿರುವುದು ಲಸಿಕೆ ಕೋವಿಡ್-19 ರೋಗಕ್ಕೆ ಅಲ್ಲವೇ ಅಲ್ಲ. ನಮ್ಮ ಸಮಾಜಕ್ಕೆ ಈಗ ತುರ್ತು ಲಸಿಕೆ ಬೇಕಾಗಿರುತ್ತದೆ ಎಂಬುದಂತೂ ನಿಜವಾದ ಮಾತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಬಳಕೆ, ಮುಖಕವಚ ಧರಿಸುವುದು, ಸೋಪಿನಿಂದ ಪದೇ ಪದೇ ಕೈ ಶುಚಿಗೊಳಿಸುವುದು ಮುಂತಾದ ಪ್ರಕ್ರಿಯೆಗಳಿಗೆ ‘ಸೋಷಿಯಲ್ ವ್ಯಾಕ್ಸಿನೇಷನ್’ ಎಂದು ವ್ಯಾಖ್ಯಾನಿಸಲಾಗಿದೆ. ಈಗ ತುರ್ತಾಗಿ ಆಗಬೇಕಾಗಿರುವುದು ಈ ‘ಸೋಷಿಯಲ್ ವ್ಯಾಕ್ಸಿನೇಷನ್’. ನಮ್ಮ ಸಮಾಜದ ಜನರನ್ನು ಎಚ್ಚರಿಸಿ, ಸರಕಾರದ ಆಡೆಳಿತ ಯಂತ್ರವನ್ನು ಚುರುಕುಗೊಳಿಸಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತಷ್ಟು ಹುರುಪಿನಿಂದ ತಮ್ಮನ್ನು ತೊಡಗಿಸಿಕೊಂಡು, ಈ ಕೋವಿಡ್-19 ರೋಗದ ಹರಡುವಿಕೆ ಸಂಕೋಲೆಯನ್ನು ತುಂಡರಿಸಿ ರೋಗವನ್ನು ನಿಯಂತ್ರಿಸಬೇಕಾದ ತುರ್ತು ಕಾಲಘಟ್ಟದ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿಂದು ನಿಂತಿದ್ದೇವೆ. ಸಾಂಕ್ರಾಮಿಕ ರೋಗ ಸಮುದಾಯದಲ್ಲಿ ತೀವ್ರವಾಗಿ ಕಾಡ್ಗಿಚ್ಚಿನಂತೆ ಹರಡುತ್ತದೆ.
– ಡಾ|| ಮುರಲೀ ಮೋಹನ್ ಚೂಂತಾರು
ಇದೀಗ ಒಬ್ಬರನ್ನು ಒಬ್ಬ ದೂರುವ ಕೆಲಸ ಮಾಡುವ ಸಮಯವಲ್ಲ. ಜನರು, ವೈದ್ಯರು, ಸರಕಾರ, ಮಾದ್ಯಮ ಎಲ್ಲರೂ ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿ, ಸಿಂಹಾವಲೋಕನ ಮಾಡಿಕೊಂಡು ತಮ್ಮ ಹೊಣೆಗಾರಿಕೆಯನ್ನು ಮತ್ತಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸಲೇ ಬೇಕಾದ ಅನಿವಾರ್ಯ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ. ನಾವೆಲ್ಲಾ ಒಟ್ಟು ಸೇರಿ ಮತ್ತಷ್ಟು ಬದ್ಧತೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ ಖಂಡಿತ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಧನಾತ್ಮಕ ಧೋರಣೆಯಿಂದ ಈ ರೋಗದ ವಿರುದ್ಧ ಹೋರಾಡಲು ಇಂದೇ ಸಂಕಲ್ಪ ಮಾಡೋಣ. ಅದರಲ್ಲಿಯೇ ಮನುಕುಲದ ಒಳಿತು ಅಡಗಿದೆ.
– ಡಾ|| ಮುರಲೀಮೋಹನ್ ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.