ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :– ಕೋವಿಡ್ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 50 ಸಾವಿರ ನೆರವು ಹಾಗೂ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಆರೋಗ್ಯ ವಿಮೆ ಒದಗಿಸುವ ವಿಮಾ ಕಂತಿನ 7 ಲಕ್ಷ ರೂಗಳನ್ನು ತಾವೇ ಭರಿಸುವುದಾಗಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ , ನವೀಕೃತ ಸಭಾಂಗಣದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಂಕಷ್ಟದಲ್ಲಿ ಸಾವನ್ನಪ್ಪಿದ ಮಾಲೂರಿನ ಇಬ್ಬರು ಪತ್ರಕರ್ತರ ಕುಟುಂಬಕ್ಕೆ ತಲಾ 50 ಸಾವಿರ ನೆರವು ನೀಡಿದ್ದು , ಉಳಿದ ಪತ್ರಕರ್ತರ ಕುಟುಂಬಕ್ಕೂ ಈ ನೆರವು ನೀಡುವುದಾಗಿ ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ದುಡಿದ ಪತ್ರಕರ್ತರಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಮಾಲೂರು , ಮುಳಬಾಗಿಲು ,ಬಂಗಾರಪೇಟೆ ರಸ್ತೆಯಲ್ಲಿ ಎಲ್ಲಿಯಾದರೂ ಸರ್ಕಾರಿ ಜಮೀನು ಗುರುತಿಸಿ ಡಿಸಿಯವರು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದು ,ಸರ್ಕಾರದ ಹಂತದಲ್ಲಿ ಅದನ್ನು ಮಂಜೂರು ಮಾಡಿಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರನ್ನು ಪುರಸ್ಕರಿಸಿದ ಶಾಸಕ ಕೆ.ಶ್ರೀನಿವಾಸಗೌಡ , ಪತ್ರಿಕಾರಂಗ ಬದಲಾವಣೆಯಾಗಿದೆ . ಹಿಂದಿನ ಪತ್ರಕರ್ತರಿಗೂ , ಈಗಿನ ಪತ್ರಕರ್ತರಿಗೂ ವ್ಯತ್ಯಾಸವಿದೆ , ಸಮಾಜ ಮೆಚ್ಚುವಂತಹ ಕೆಲಸ ಮಾಡಬೇಕು, ಪತ್ರಿಕೆಗಳು ಮೌಲ್ಯ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪರಕರ್ತರಿಗೆ ನೆರವಿನ ಹಸ್ತ
ವಿಧಾನಪರಿಷತ್ ಶಾಸಕ ಮನೋಹರ್ , ಸಂಕಷ್ಟದಲ್ಲಿರುವ ಸಮಾಜದ ನೋವನ್ನು ಸರ್ಕಾರಕ್ಕೆ ತಲುಪಿಸಿ , ನೆರವಾಗುವ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಈಗಾಗಲೇ 10 ಲಕ್ಷ ನೀಡಿದ್ದು , ಮುಂದೆಯೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ , ಪತ್ರಿಕಾ ವೃತ್ತಿಯ ಮೌಲ್ಯಗಳನ್ನು ಉಳಿಸುವ ಕಾರ್ಯ ಅಗತ್ಯವಾಗಿದೆ. ಪತ್ರಿಕೆ ಸಮಾಜಕ್ಕಾಗಿಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂಬುದನ್ನು ಮನಗಂಡು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿ , ಪತ್ರಕರ್ತರು , ರಾಜಕಾರಣಿಗಳು , ಅಧಿಕಾರಿಗಳು ಸಮಾಜಮುಖಿ ಕೆಲಸ ಮಾಡಿದರೆ ದೇಶದ ಉದ್ದಾರಸಾಧ್ಯ ಎಂದರು.
ಬಂಗಾರಪೇಟೆ ಶಾಸಕ ಎಸ್.ಎನ್ . ನಾರಾಯಣಸ್ವಾಮಿ , ಸಮಾಜವನ್ನು ತಿದ್ದಿ ಸರಿದಾರಿಯಲ್ಲಿ ಮುನ್ನಡೆಸುವ ಪತ್ರಿಕಾರಂಗದ ಜವಾಬ್ದಾರಿ ಹೆಚ್ಚಿನದು ಎಂದ ಅವರು , ಬಂಗಾರಪೇಟೆ ಪತ್ರಕರ್ತರ ಸಂಘಕ್ಕೆ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಒದಗಿಸಿಕೊಡುವುದಾಗಿಯೂ ಮತ್ತು ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ನೆರವು ಒದಗಿಸುವುದಾಗಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜು , ಜಿಲ್ಲೆಯ ಪತ್ರಿಕಾರಂಗದ ಜಿ.ನಾರಾಯಣಸ್ವಾಮಿ , ಕೃಷ್ಣಸ್ವಾಮಿ , ನರಸಿಂಹಮೂರ್ತಿ ಮತ್ತಿತರರನ್ನು ಸ್ಮರಿಸಿ , ಭ್ರಷ್ಟತೆ ವಿರುದ್ದ ಹೋರಾಟದಲ್ಲಿ ಪತ್ರಿಕಾರಂಗ ಮುಂಚೂಣಿಯಲ್ಲಿರಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ , ಪತ್ರಕರ್ತರಿಗೆ ನಿವೇಶನಕ್ಕಾಗಿ ಜಮೀನು ಗುರುತಿಸುತ್ತಿದ್ದು , ಶೀಘ್ರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿ , ಪತ್ರಿಕಾ ದಿನಾಚರಣೆಯ ಶುಭಾಷಯ ತಿಳಿಸಿದರು.
ನೆರವು ನೀಡಿದ್ದಕ್ಕಾಗಿ ಗಣ್ಯರಿಗೆ ಧನ್ಯವಾದ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು , ಕೋವಿಡ್ ಮತ್ತಿತರ ಅನಾರೋಗ್ಯಕ್ಕೆ ತುತ್ತಾದ ಪತ್ರಕರ್ತರ ಕುಟುಂಬಗಳಿಗೆ , ಚಿಕಿತ್ಸೆಗೆ ಸಂಘದಿಂದ 7.5 ಲಕ್ಷ ರೂಗಳನ್ನು ಈ ವರ್ಷ ನೆರವಾಗಿ ನೀಡಲಾಗಿದೆ ಎಂದು ತಿಳಿಸಿದರು. ಸಂಘದ ಬೆಳವಣಿಗೆಗೆ ಹಲವಾರು ಮಂದಿ ಸಹಕಾರ ನೀಡಿದ್ದಾರೆ , ಸಂಸದರು 10 ಲಕ್ಷರೂ , ಶಾಸಕರಾದ ಇಂಚರಗೋವಿಂದರಾಜು 10 ಲಕ್ಷನಾಗೇಶ್ ಅವರು 10 ಲಕ್ಷ , ಮನೋಹರ್ ಅವರು 10 ಲಕ್ಷ ರೂ ನೀಡಿದ್ದಾರೆ , ಜತೆಗೆ . ಮಾಜಿ ಶಾಸಕ ಕೊತ್ತೂರುಮಂಜುನಾಥ್ ಅವರು 26 ಲಕ್ಷ ರೂಗಳಲ್ಲಿ ಪತ್ರಕರ್ತರ ಭವನವನ್ನು ನವೀಕರಿಸಿಕೊಟ್ಟಿದ್ದಾರೆ ಎಂದು ತಿಳಿಸಿ , ನೆರವಾದವರಿಗೆ , ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗೆ ದಿನಸಿಕಿಟ್ , ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಹೆಚ್.ನಾಗೇಶ್ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿ.ನಾರಾಯಣಸ್ವಾಮಿ ನೆನಪಿನಲ್ಲಿ ಶ್ರೀನಿವಾಸಪುರದ ಚ.ಶ್ರೀನಿವಾಸಮೂರ್ತಿ , ಕೆ.ಆರ್. ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ಟೇಕಲ್ನ ಲಕ್ಷ್ಮೀಶ , ಬಿ.ವಿ.ನರಸಿಂಹಮೂರ್ತಿ ನೆನಪಿನಲ್ಲಿ ಬಂಗಾರಪೇಟೆಯ ಹೆಚ್.ಎಲ್ . ನಾಗರಾಜ್ , ಎಂ.ಮಲ್ಲೇಶ್ ನೆನಪಿನಲ್ಲಿ ಕೋಲಾರದ ಬಿ.ಎಸ್ ಸ್ಕಂದಕುಮಾರ್ , ಬಿ.ಎನ್ . ಗುರುಪ್ರಸಾದ್ ನೆನಪಿನಲ್ಲಿ ಕೆ.ಜಿ.ಎಫ್ನ ಮಲ್ಲಾರ್ ಶೇಖರ್ , ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ ಅಯೂಬ್ ಖಾನ್ , ಬಿ.ಆರ್ಮುಗಂ ನೆನಪಿನಲ್ಲಿ ಮುಳಬಾಗಿಲಿನ ಶ್ರೀನಿವಾಸಪ್ಪ , ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ ಕೋಲಾರದ ವೆಂಕಟೇಶಪ್ಪ , ವಿ.ಎಂ.ನಾಗಪ್ಪ ನೆನಪಿನಲ್ಲಿ ಮಾಲೂರು ಎಂ.ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ , ಪಿಯುಸಿ , ಪದವಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ನೆನಪಿನ ಕಾಣಿಕೆ , ನಗದು ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು , ರಕ್ಷಣಾಧಿಕಾರಿ ಡೆಕ್ಕಾಕಿಶೋರ್ಬಾಬು , ಸಮಾಜಸೇವಕ ಸಿಎಂಆರ್.ಶ್ರೀನಾಥ್ , ರಾಜ್ಯ ಕಾರ್ಯಕಾರಿ ಸದಸ್ಯರಾದ ಬಿ.ವಿ.ಗೋಪಿನಾಥ್ ,ಮಹಮದ್ ಯೂನುಸ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ , ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ , ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್ , ಅನಂತರಾಮ್ ಮತ್ತಿತರರು ಉಪಸ್ಥಿತರಿದ್ದು , ಸಂಘದ ಪ್ರಧಾನ ಕಾರ್ಯದರ್ಶಿ ಎಸ್ . ಕೆ.ಚಂದ್ರಶೇಖರ್ , ಖಜಾಂಚಿ ಎ.ಜಿ.ಸುರೇಶ್ಕುಮಾರ್ ಸ್ವಾಗತಿಸಿ , ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.