ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ, ಹೊಯ್ಗೆ ಬಜಾರ್ ನಲ್ಲಿನ ಧೂಮವತಿ ದೇವಸ್ಥಾನದ ಮುಂಭಾಗದ ಮಂಗಳಾ ದೇವಿಯ ಸುಭಾಷ್ ನಗರಕ್ಕೆ ಹೋಗುವ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು, ಇದರಿಂದ ಇಲ್ಲಿನ ಸ್ಥಳೀಯ ಪ್ರಯಾಣಿಕರ ಪಾಡನ್ನು ಕಂಡ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾಗಿರುವ, ನಗರದ ತಾಜ್ ಸೈಕಲ್ ಕಂಪನಿ (ತಾಜ್ ಸೈಕಲ್ ಸಮೂಹ ಸಂಸ್ಥೆಗಳ) ಮಾಲಕರೂ ಆಗಿರುವ ಶ್ರೀಯುತ ಎಸ್.ಎಂ.ಮುತ್ತಲಿಬ್ ರವರು ತನ್ನ ಸ್ವಂತ ವ್ಯಯ,ಶ್ರಮದ ಮೂಲಕ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡು, ಸುಮಾರು ಇನ್ನೂರು ಚೀಲಗಳಿಗೂ ಮಿಕ್ಕಿದ ಮರಳು ಮತ್ತು ಸಿಮೆಂಟ್ ತ್ಯಾಜ್ಯ ಮಿಶ್ರಿತ ಕಲ್ಲುಗಳನ್ನು ಬಳಸಿ ಹೊಂಡಗಳೆಲ್ಲವನ್ನು ತುಂಬಿ ಸದ್ಯ ಸಂಚಾರ ಯೋಗ್ಯಗೊಳಿಸಿರುವುದಾಗಿ ವೆಲ್ಫೇರ್ ಪಕ್ಷದ ದ. ಕ. ಜಿಲ್ಲಾ ಮಾಧ್ಯಮ ವಕ್ತಾರರಾಗಿರುವ, ಅಬ್ದುಲ್ ಖಾದರ್ ಕುಕ್ಕಾಜೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಪ್ರಸ್ತುತ ಶ್ರಮದಾನದಲ್ಲಿ, ನಿಸಾರ್, ವಿನಿಲ್ ಮತ್ತು ತನ್ವೀರ್ ರವರು ಸಹಕರಿಸಿರುವುದಾಗಿ, ಶ್ರೀ ಎಸ್.ಎಂ. ಮುತ್ತಲಿಬ್ ರವರು ತಿಳಿಸಿದ್ದು, ಶ್ರೀಯುತರು ಇದಕ್ಕಿಂತ ಮುಂಚೆಯೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆ ದುರವಸ್ಥೆ ಹಾಗೂ ಇತರ ಕಳಪೆ ಕಾಮಗಾರಿಗಳ ಬಗ್ಗೆ ಅವುಗಳ ಫೋಟೋಗಳನ್ನೂ ಕ್ಲಿಕ್ಕಿಸಿ ಮಾಧ್ಯಮಗಳ ಮೂಲಕ ಸಾರ್ವಜನಿಕರ ಮತ್ತು ಸಂಬಂಧಪಟ್ಟವರ ಗಮನಕ್ಕೆ ತರುವಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದ್ದು, ಇದೀಗ ಇಲ್ಲಿನ ಕೆಲಸವನ್ನು ತನ್ನ ಉಸ್ತುವಾರಿಯಲ್ಲಿಯೇ ಕೈಗೆತ್ತಿಕೊಳ್ಳುವ ಮೂಲಕ, ಇದು ಸ್ಥಳೀಯ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದ ಜನ ಪ್ರತಿನಿಧಿಗಳಿಗೆದುರಾಗಿ ಸಣ್ಣ ರೀತಿಯಲ್ಲಿ ನನ್ನ ವಿನೂತನ ಪ್ರತಿಭಟನೆಯೂ ಕೂಡಾ ಆಗಿದೆಯೆಂದು ಹೇಳಿದ ಅವರು ಅಲ್ಲವಾದಲ್ಲಿ ಇತ್ತೀಚೆಗೆ ನಮ್ಮ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ರವರು, ಅಧುನೀಕರಿಸಿದ ಹೊಯ್ಗೆ ಬಜಾರ್ ಶಾಲೆಯ ಉದ್ಘಾಟನೆಗೆಂದು ಬಂದಾಗಲಾದರೂ, ಕೊಂಚ ಇತ್ತ ಗಮನಿಸುವಂತೆ ಮಾಡಿದ್ದರೆ ಸಮಸ್ಯೆ ಬಗೆಹರಿಸುತ್ತಿದ್ದರು. ಹೀಗೆ ಇಲ್ಲಿನ ಒಂದು ಕಿರು ಕೆಲಸವನ್ನು, ಮಾಡಲು ಅಥವಾ ಮಾಡಿಸಲು ಯಾರೂ ಮುಂದೆ ಬರದ ಕಾರಣ ಸಾರ್ವಜನಿಕರ ಅನುಕೂಲಕ್ಕಾಗಿ, ಸ್ವತ ಮಾಡಿಸುವುದು ನಮಗೆ ಅನಿವಾರ್ಯವಾಯಿತು ಎಂಬುವುದಾಗಿ ನಮ್ಮ ವೆಲ್ಫೇರ್ ಪಕ್ಷದ ಜಿಲ್ಲಾ ವಕ್ತಾರ ತಿಳಿಸಿದ್ದು, ಇದಕ್ಕಾಗಿ ನಮ್ಮ ಪಕ್ಷದ ದ.ಕ.ಜಿಲ್ಲಾ ಸಮಿತಿಯು ಅವರ ಶ್ಲಾಘನೀಯ ಶ್ರಮಕ್ಕೆ ಅಭಿನಂದನೆ ಸಲ್ಲಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.