(ವಿಶ್ವ ಕನ್ನಡಿಗ ನ್ಯೂಸ್) : ಕಾರ್ಕಳದ ಶ್ರೀವೆಂಕಟರಮಣ ದೇವರೇ ಬೇರೆ ಪಕ್ಷದ ಅಭ್ಯರ್ಥಿಯಾಗಿ ನಿಂತು ಮತ ಕೇಳಲು ಹೋದರೆ ಮತದಾರರು ಭಕ್ತಿಯಿಂದ ಆರತಿ ಎತ್ತಿ, ಹಣ್ಣು ಕಾಯಿ ಮಾಡುತ್ತಾರೆ, ಆದರೆ ಓಟು ಮಾತ್ರ ಬಿಜೆಪಿ ಅಭ್ಯರ್ಥಿಗೇ ಹಾಕ್ತಾರೆ.. ಆಮೇಲೆ ವೆಂಕಟರಮಣ ದೇವಳಕ್ಕೆ ಬಂದು ತಪ್ಪು ಕಾಣಿಕೆ ಹಾಕ್ತಾರೆ !…
ಇದು ಮೂರು ದಶಕಗಳ ಹಿಂದೆ ಕಾಂಗ್ರೆಸ್ ಮುಖಂಡ ಸದಾನಂದ ಕಾಮತ್. (#ಸದ್ದೆರ್) ಹೇಳಿದ್ದ ಮಾತು.. 3 ವರ್ಷಗಳ ಹಿಂದೆ… ಅದೇ ಕಾರ್ಕಳದ ಅದೇ ವಾರ್ಡಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಅಂತರದಿಂದ ಸೋತು ಮಾನದ ಠೇವಣಿ ಕಳೆದುಕೊಂಡರು ! ಬಹುಷಃ ಸದಾನಂದ ಕಾಮತ್ ಅವರು ಆಡಿದ ಉತ್ಪ್ರೇಕ್ಷೆಯ ಮಾತಿನ ಕಳಂಕ ತಪ್ಪಿಸಲೆಂದೇ ಶ್ರೀವೆಂಕಟರಮಣ ದೇವರೇ ಹೀಗೆ ಮಾಡಿದರೋ ಏನೋ?
ಜತೆಗೆ ಪಕ್ಷೇತರ ಒಬ್ಬರು ಗೆಲ್ಲಲು ಕಾರಣವಾಗಿರುವುದು ಬಿಜೆಪಿ ಮುಖಂಡರ ಮಾತಿಗೆ ಕಟ್ಟು ಬಿದ್ದು ಶಾಸಕ ಸುನಿಲ್ ಕುಮಾರ್ ಅವರು ತೆಗೆದುಕೊಂಡ ಒಂದು ಹಠದ ನಿರ್ಣಯ ! ಬಹುಷಃ ಇದು ದೈವೇಚ್ಛೆಯೇ ಇರಬೇಕು..
ಅದು ಕಾರ್ಕಳ ಶ್ರೀವೆಂಕಟರಮಣ ದೇವಸ್ಥಾನ ಬಳಿಯ 6ನೇ ವಾರ್ಡ್ ! ಭಾರತೀಯ ಜನ ಸಂಘದಿಂದ ಬಿಜೆಪಿ ಆಗಿ ಮೊನ್ನೆ ಮೊನ್ನೆ ವರೆಗೂ ಈ ಕ್ಷೇತ್ರದಲ್ಲಿ ಪ್ರತಿಪಕ್ಷ ಅಭ್ಯರ್ಥಿಗಳಿಗೆ ಠೇವಣಿ ಸಿಕ್ಕಿದ್ದೇ ಇಬ್ಬರಿಗೆ ! (ಅವರಲ್ಲೊಬ್ಬರು ಕಾರ್ಕಳದ ಜನಪ್ರಿಯ ಪೀಚು)! 45 ವರ್ಷ ಇತಿಹಾಸದಲ್ಲಿ ಮೂರಂಕಿ ಮತ ಪಡೆದದ್ದು ಇಬ್ಬರೇ !
ಇಂತಹ ವಾರ್ಡಿನಲ್ಲಿ ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಪುರಸಭೆಯಲ್ಲಿ ಟಿಕೆಟ್ ಕೊಡುವುದೇ ಇಲ್ಲ ಎನ್ನಬಹುದು. ಬಿಜೆಪಿ ಮುಖಂಡರಿಗೆ ಅತ್ಯಂತ ಬೇಕಾದವರು ಬೇರೆ ಕಡೆ ಗೆಲ್ಲುವುದು ಕಷ್ಟ ಅಂಥ ಡೌಟ್ ಇದ್ದವರನ್ನು ಈ ವಾರ್ಡಲ್ಲಿ ತಂದು ನಿಲ್ಲಿಸಿ ಗೆಲ್ಲಿಸಿ ಕೊಡಲಾಗುತ್ತಿತ್ತು.
ಇಂತಿಪ್ಪ 6ನೇ ವಾರ್ಡಿಂದ ಅದೇ ವಾರ್ಡಿನ ನಿವಾಸಿ ಜನಪ್ರಿಯ ಗಿರಿಧರ ನಾಯ್ಕ್ ಕಳೆದ ಬಾರಿ ಟಿಕೆಟ್ ಕೇಳಿದ್ದರು. ಇವರ ಕುರಿತು ಸಣ್ಣ ಇಂಟ್ರಡಕ್ಷನ್ ಬೇಕೇ ಬೇಕು. ರಾಜಕೀಯ ಜಂಜಾಟದಲ್ಲಿ ಸಿಲುಕದೆ ವ್ಯಾಪಾರದ ಜತೆ ಸಂಘಪರಿವಾರದಲ್ಲಿ ಸಕ್ರಿಯರಾಗಿದ್ದ ಗಿರಿಧರ ನಾಯ್ಕ್ ಅವರನ್ನು ಶಾಸಕರಾದ ವಿ. ಸುನಿಲ್ ಕುಮಾರ್ ಅವರೇ ಸತತ 3 ತಿಂಗಳ ಕಾಲ ಕಾಡಿ- ಬೇಡಿ ಪಕ್ಷಕ್ಕೆ ಕರೆತಂದರು. ನೇರವಾಗಿ ಕಾರ್ಕಳ ಬಿಜೆಪಿ ನಗರ ಅಧ್ಯಕ್ಷ ರನ್ನಾಗಿಯೂ ಮಾಡಿದರು. 9ನೇ ವಾರ್ಡಲ್ಲಿ ಸ್ಪರ್ಧೆ ಮಾಡಿ ಅತಿ ಹೆಚ್ಚು ಅಂತರದಿಂದ ಗೆದ್ದು ಕಾರ್ಕಳ ಪುರಸಭೆಯ ಉಪಾಧ್ಯಕ್ಷರು ಆದರು. ಗಿರಿಧರ ನಾಯ್ಕ್ ಅವರ ಈ ಬೆಳವಣಿಗೆ ವೇಗವೇ ಸ್ಥಳೀಯ ಹೈಕಮಾಂಡ್ಗೆ ಸಣ್ಣಗಿನ ನಡುಕ ಹುಟ್ಟಿಸಿರಬಹುದು. ಇದರ ಹಿಂದೆ ಅನಂತ ಕಾರಣಗಳಿರಬಹುದು… ಅಲ್ಲಿಂದ ಗಿರಿಧರ ಅವರು ಮೂಲೆಗೆ ಸರಿಯುತ್ತಲೇ ಹೋದರು.
ಕಳೆದ ಬಾರಿಯ ಪುರಸಭೆ ಚುನಾವಣೆಯ ಗಿರಿಧರ ನಾಯ್ಕ್ ಅವರಿಗೆ 6 ನೇವಾರ್ಡ್ಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಸೇರಿ ಶಾಸಕ ಸುನಿಲ್ ಕುಮಾರ್ ಬಳಿ ಒತ್ತಡ ತಂದರು. ಯಾವುದೇ ಕಾರಣಕ್ಕೂ 6ನೇ ವಾರ್ಡಿಗೆ ಯೋಗೀಶ್ ನಾಯಕ್ (ಪುರಸಭೆ ಸದಸ್ಯರಾಗಿದ್ದ ರಾಮಚಂದ್ರ ನಾಯಕ್ ಅವರ ಮಗ) ಅವರಿಗೆ ಮಾತ್ರ ಟಿಕೆಟ್ ! ಬೇರೆ ಯಾರಿಗೂ ನೀಡಲಾಗುವುದಿಲ್ಲ ಎಂದರು. ಗಿರಿಧರ ನಾಯಕ್ ನೋವು ನುಂಗಿಕೊಂಡು ಬಿಜೆಪಿಯಲ್ಲಿಯೇ ಉಳಿದರು.
ಆಗ ಹಠಾತ್ ಬೆಳಕಿಗೆ ಬಂದವರೇ ಲಕ್ಷ್ಮೀನಾರಾಯಣ ಮಲ್ಯ. ಇವರು ಗಿರಿಧರ ನಾಯ್ಕ್ ಅವರ ಪರಮಾಪ್ತ, ಮೂರು ದಶಕಗಳ ಗೆಳೆತನ. ಗಿರಿಧರ ನಾಯ್ಕರ ಪರಾಗ್ ಹೋಟೆಲಲ್ಲಿ ಮಲ್ಯ ಹಿಂದೆ ಕ್ಯಾಶಿಯರ್ ಆಗಿದ್ದರು. ಬಳಿಕ ಹೋಟೇಲ್ ಮ್ಯಾನೇಜರ್ ಕೂಡಾ ಆಗಿದ್ದರು. ಗಿರಿಧರ ನಾಯ್ಕರಿಗೆ ಟಿಕೆಟ್ ಕೊಡದಿದ್ದಾಗ ೬ನೇ ವಾರ್ಡಿಗೆ ಪಕ್ಷೇತರ ಅಭ್ಯರ್ಥಿ ನಿಲ್ಲಿಸುವುದು ಅವರನ್ನು ಗೆಲ್ಲಿಸುವುದು ಎಂದು ಗಿರಿಯ ಬೆಂಬಲಿಗರು ನಿರ್ಧಾರ ಮಾಡಿದರು.
ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೇ ಎದುರಾಳಿಯಾದರೂ ಠೇವಣಿ ಸಿಗೋದಿಲ್ಲ ಎನ್ನುವ ಪರಿಸ್ಥಿತಿ ಇರುವಾಗ ಪಕ್ಷೇತರ ಅಭ್ಯರ್ಥಿಗೆ ಜನ ಹೇಗೆ ಸಿಕ್ತಾರೆ ಸ್ವಾಮಿ ! 50 ಜನರ ಬಳಿ ಹೋಗಿ ದಮ್ಮಯ್ಯ, ದಕ್ಕಯ್ಯ ಹಾಕಿದರೂ ಈ ವಾರ್ಡಿಗೆ ಬರಲು ಯಾರೂ ಸಿದ್ದರಲಿಲ್ಲ. ಆಗೊಬ್ಬ ಗಿರಿ ಎಂಬವರು ಒಂದು ದಿನಕ್ಕೆ ಓಕೆ ಅಂದರು ಒಂದು ದಿನದ ಚುನಾವಣೆ ಪ್ರಚಾರವೂ ನಡೆಯಿತು ! ಕೊನೆಗೆ ಅವರೂ ಹಿಂದದೆ ಸರಿದರು.
ಅನಿವಾರ್ಯವಾಗಿ ಮಲ್ಯ ಅವರೇ ನಿಲ್ಲಬೇಕಾಯಿತು. ಪಿಗ್ನಿ ಕಲೆಕ್ಷನ್ ಮಾಡುವ ಮಲ್ಯರು ರಜಾದಿನಗಳಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದರು. ಅವರ ಜತೆ ಇದ್ದವರು ಪ್ರಕಾಶ್ ಕಾಮತ್, ಕಿಶೋರ್ ಕಾಮತ್, ಅಜಿತ್ ಶೆಣೈ, ದೀಪಕ್ ಭಟ್, ಶ್ರೀನಿವಾಸ್ ಅಷ್ಟೇ ಮಂದಿ ! ಅಷ್ಟೇ ಮಂದಿ ಪ್ರಚಾರ ಮಾಡಿದರು. ಇದರಲ್ಲಿ 6ನೇ ವಾರ್ಡಿನವರು ಎಂದು ಇದ್ದದ್ದು ದೀಪಕ್ ಭಟ್ ಮಾತ್ರ !
ಪ್ರಚಾರಕ್ಕೆ ಬರುವವರಿಗೆ ಓಟಿಲ್ಲ … ಇವನಿಗೆ 50 ಓಟು ಸಿಗುವುದಿಲ್ಲ ! ಎಂದು ಬಿಜೆಪಿ ಮುಖಂಡರು ಮುಸಿ ಮುಸಿ ನಗುತ್ತಿದ್ದರು, ಆಡಿಕೊಳ್ಳುತ್ತಿದ್ದರು. ಮಲ್ಯರದ್ದು ಪ್ಲಾನ್ ಇತ್ತು. ಅದೇ ವಾರ್ಡಿನವರು ಪ್ರಚಾರಕ್ಕೆ ಬಂದರೆ ತಕ್ಷಣ ಬಿಜೆಪಿ ಹೈಕಮಾಂಡ್ನಿಂದ ಬುಲಾವ್ ಬರುತ್ತದೆ. ಹೀಗಾಗಿ ಮರುದಿನ ಬೆಳಗ್ಗೆ ಪ್ರಚಾರಕ್ಕೆ ಆ ಜನ ಇರೋದಿಲ್ಲ.
ಅಂಡರ್ ಕರೆಂಟ್ ! ಆದರೆ ಜನಸ್ನೇಹಿ, ದೈವ ಭಕ್ತ, ನಾಯಕನಾಗಿ ಬೆಳೆಯುತ್ತಿದ್ದವ ತಮ್ಮ ಸಮುದಾಯದವನೊಬ್ಬನಿಗೆ ಟಿಕೆಟ್ ನಿರಾಕರಿಸಿದ್ದ ಆ ವಾರ್ಡಿನವರಿಗೆ ಒಂದು ರೀತಿ ಆಕ್ರೋಶ ಹುಟ್ಟಿಸಿತ್ತು. ಒಳಗಿಂದೊಳಗೆ ಸಮುದಾಯದ ಅಂಡರ್ ಕರೆಂಟ್ ಪವರ್ ಹೇಗೆ ವರ್ಕೌಟ್ ಆಯಿತು ಎಂದರೆ…
ಫಲಿತಾಂಶ ಬಂತು… ಮಲ್ಯರಿಗೆ 300 ಮತ, ಜೆಡಿಎಸ್ 5, ಕಾಂಗ್ರೆಸ್ 7, ಬಿಜೆಪಿ 168 ನೋಟಾ 1 ! ಅದಕ್ಕಿಂತ ಹಿಂದೆ ಬಿಜೆಪಿ 303 ಮತ ಕಾಂಗ್ರೆಸಿಗೆ 101ಮತ ಬಂದಿತ್ತು… ಓಟಿನ ದಿನವೂ ಮಲ್ಯರು ಪಿಗ್ನಿ ಕಲೆಕ್ಷನ್ ಮಾಡಿದ್ದರು. ಅಲ್ಲಿಗೆ ಅರ್ಥ ಮಾಡಿಕೊಳ್ಳಿ..
ಬಹುಷಃ ವೆಂಕಟರಮಣ ದೇವರೇ ಗೆಲ್ಲಿಸಿಕೊಟ್ಟಿರಬೇಕು ಎಂದು ಜನ ಹೇಳಿಕೊಂಡರು. ಮೂರು ದಶಕಗಳ ಹಿಂದೆ ಸದ್ದೆರ್ ಹೇಳಿದ ಮಾತು ಸುಳ್ಳಾಯಿತು. ಈ ಸುಳ್ಳು ಮಾಡಲೇ ಇಂಥ ಸನ್ನಿವೇಷ ದೇವರು ಸೃಷ್ಟಿಸಿರಬೇಕು ಅಥವಾ ಬಿಜೆಪಿ ನಾಯಕರ ದುರಹಂಕಾರ, ಹಠಮಾರಿತನಕ್ಕೆ ಈ ರೀತಿ ಆಯಿತೋ ಗೊತ್ತಿಲ್ಲ.
ಮುಂದಿನ ಕಂತಲ್ಲಿ… ಓದಿಕೊಳ್ಳಿ… ಈಗ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೇಜಸ್ವಿ ಸೂರ್ಯ, ಅಣ್ಣಾಮಲೈ ಬರುತ್ತಿರುವಂತೆ ಚುನಾವಣೆ ಪ್ರಚಾರಕ್ಕೆ ಜಿಎಸ್ಬಿ ಸಮುದಾದಯ ವರ್ಚಸ್ವೀ ಶಾಸಕ ವೇದವ್ಯಾಸ ಕಾಮತ್ ಬಂದಿದ್ದರು, ಕಾರ್ಕಳ ಭಾಗದ ಪ್ರಭಾವಿ ಮುಖಂಡ ವಿವೇಕಾನಂದ ಶೆಣೈ ಮನೆಗೂ ಆಗ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿದ್ದರು… .. ಪುರಸಭೆಯ ಫಲಿತಾಂಶ ಬಿಜೆಪಿ- ಕಾಂಗ್ರೆಸ್ ಸಮಾನವಾಗಿತ್ತು ಬಳಿಕ ಏನೆಲ್ಲ ರಾಜಕೀಯ ಸ್ವಾರಸ್ಯ ನಡೆಯಿತು… ಇದು ಮುಂದಿನ ಲೇಖನದ ಎಪಿಸೋಡಲ್ಲಿ ತಿಳಿಸುತ್ತೇನೆ..
– ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.