ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ನಾಡಿನ ಪ್ರಸಿದ್ದ ದಸರಾ ಹಬ್ಬ ಮತ್ತು ವಿಜಯ ದಶಮಿಯನ್ನು ನಾಡಿನ ಉದ್ದಗಲಕ್ಕೂ ನಾಡಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜನ ಸಾಮಾನ್ಯರಿಂದ ಈ ನಾಡಿನ ದೊರೆಯತನಕ ಎಲ್ಲರೂ ಶ್ರದ್ಧೆ ನಿಷ್ಠೆ ಭಕ್ತಿಭಾವದಿಂದ ನಾಡದೇವಿಯನ್ನು ಪೂಜಿಸಿ ಆರಾಧಿಸಿ ನಮಿಸಿದರು.
ಉದ್ಯಮಿಯಾಗಿ, ರಾಜಕಾರಣಿಯಾಗಿ ಗುರ್ತಿಸಿಕೊಂಡರೂ ಮೂಲತಃ ರೈತ ಕುಟುಂಬದ ಸೀಕಲ್ ರಾಮಚಂದ್ರಗೌಡ ಅವರ ಕುಟುಂಬದಲ್ಲಿ ತಾತ ಮುತ್ತಾತರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ದಸರಾ ಪೂಜೆಯನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.
ಸಾಮಾನ್ಯವಾಗಿ ಎಲ್ಲರೂ ತಾವು ಬಳಸುವ ಕಾರು ಬೈಕ್ಗಳಿಗೆ, ಬದುಕನ್ನು ಕಟ್ಟಿಕೊಂಡ ಅಂಗಡಿ ಕಚೇರಿ ಹೋಟೆಲ್ಗಳಿಗೆ ಪೂಜಿಸಿದರೆ ಸೀಕಲ್ ರಾಮಚಂದ್ರಗೌಡ ಅವರು ಹೊಲ ಗದ್ದೆ ತೋಟಕ್ಕೆ, ಹಾಲು ನೀಡುವ ನಾಟಿ ಹಸುಗಳಿಗೆ, ಕುದುರೆ, ಕುರಿ ಮೇಕೆ ಎಮ್ಮೆ,ರಾಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ತಾವು ಮತ್ತು ತಮ್ಮ ಕುಟುಂಬದವರು ಬಳಸುವ ಕಾರುಗಳಿಗಷ್ಟೆ ಅಲ್ಲ ಟ್ರ್ಯಾಕ್ಟರ್ನಿಂದ ಹಿಡಿದು ಕೃಷಿಗೆ ಬಳಸುವ ಎಲ್ಲ ವಸ್ತು ಪರಿಕರಳಿಗೆ ಹಾಗೂ ಹೊಲ ಗದ್ದೆ ತೋಟದಲ್ಲಿ ಫಸಲಿಗೆ ಪೂಜೆ ಸಲ್ಲಿಸುವಂತ ಪದ್ದತಿಯನ್ನು ಅವರ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ.
ಜತೆಗೆ ಮನೆಯಂಗಳದಲ್ಲಿ ಸ್ಥಾಪಿಸಿರುವ ಆದಿ ಪೂಜಿತ ವಿನಾಯಕನಿಗೆ ಮೊದಲು ಪೂಜೆ ಸಲ್ಲಿಸಿ ನಂತರ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಎಲ್ಲರೂ ಸುಖ ಸಂತೋಷ ನೆಮ್ಮದಿಯಿಂದ ಆರೋಗ್ಯದ ಬದುಕನ್ನು ನಡೆಸಲೆಂದು ಲೋಕ ಕಲ್ಯಾಣ ಬಯಸಿ ವಿಶೇಷ ಹೋಮ ಹವನವನ್ನು ದಂಪತಿ ಸಮೇತ ನೆರವೇರಿಸಿದರು.
ಬಂಧು ಬಳಗ, ಸ್ನೇಹಿತರೊಟ್ಟಿಗೆ ತಮ್ಮ ಮನೆ ಹೊಲ ಗದ್ದೆ ಕಾರ್ಖಾನೆ ಕಚೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವವರನ್ನು ಜತೆಯಲ್ಲಿ ಕೂರಿಸಿಕೊಂಡು ಊಟ ಮಾಡಿ ಅವರೆಲ್ಲರಿಗೂ ಉಡುಗೊರೆಯ ಕಾಣಿಕೆ ನೀಡಿ ವಿಜಯ ದಶಮಿಯನ್ನು ವಿಶೇಷವಾಗಿ ವಿಶಿಷ್ಟವಾಗಿಯೂ ಆಚರಿಸಿದರು.
ವರದಿ: ತಮೀಮ್ ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.