(www.vknews.in) : ಮನುಕುಲದ ಪಿತಾಮಹ ಹಝ್ರತ್ ಆದಮ್ (ಅ) ರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂದು ನಮಗೆಲ್ಲರಿಗೂ ತಿಳಿದ ವಿಷಯ. ಈ ಶರೀರ ರೂಪವನ್ನು ಮಾಡಲು ಅಲ್ಲಾಹನ ಆಜ್ಞೆಯಂತೆ ಹಝ್ರತ್ ಅಝ್ರಾಯೀಲ್ (ಅ) ರವರು ಜಗತ್ತಿನ ಎಲ್ಲಾ ಭೂಖಂಡದಿಂದ ಕಪ್ಪು, ಕೆಂಪು, ಬಿಳಿ, ಕಂದು ಇತ್ಯಾದಿ ಎಲ್ಲಾ ಬಣ್ಣದ ಮಣ್ಣುಗಳನ್ನು ತಂದಿದ್ದರು. ಆ ಕಾರಣದಿಂದ ಇಂದು ಮನುಕುಲದಲ್ಲಿ ಹುಟ್ಟುವ ಮಾನವನ ದೇಹದಲ್ಲಿ ದೇಶ, ಖಂಡಕ್ಕೆ ಅನುಸಾರವಾಗಿ ಬಣ್ಣದಲ್ಲಿ ಬದಲಾವಣೆಯಾಗುತ್ತದೆ.
ಜೀವವಿಲ್ಲದ ಈ ಅರುವತ್ತು ಅಡಿ ಉದ್ದವಿದ್ದ ಮನುಷ್ಯ ದೇಹವನ್ನು ಮಾಡಿ ಅಲ್ಲಾಹನು ಸುಮಾರು ನಲವತ್ತು ವರ್ಷಗಳ ತನಕ ಸ್ವರ್ಗ ಪ್ರವೇಶ ಬಾಗಿಲಿನ ಬಳಿ ಹಾಗೆಯೇ ಇಟ್ಟಿದ್ದನು. ದಿನಾಲೂ ಈ ತನಕ ನೋಡದ ಒಮ್ಮೆಯೂ ಮನಸಲ್ಲಿ ಕೂಡ ಮೂಡಿ ಬಾರದ ಒಂದು ರೂಪವನ್ನು ಕಾಣುವಾಗಲೆಲ್ಲಾ ಮಲಕುಗಳು ಆಶ್ಚರ್ಯಚಕಿತರಾಗುತ್ತಿದ್ದರು. ಇಬ್ಲೀಸನಂತೂ ಕೆಲವೊಮ್ಮೆ ಗಂಟೆಗಟ್ಟಲೆ ದೃಷ್ಟಿ ತಪ್ಪಿಸದೆ ಈ ಅಧ್ಬುತ ರೂಪವನ್ನು ನೋಡುತ್ತಿದ್ದನು. ಮಾತ್ರವಲ್ಲ “ಅಲ್ಲಾಹನು ಹೀಗೆ ಮಾಡಿದ್ದರಲ್ಲಿ ಏನೋ ಒಂದು ಸೀಕ್ರೇಟ್ ಇದೆ. ಸುಮ್ನೆ ಮಾಡಲಿಕ್ಕಿಲ್ಲ” ಎಂದು ಕೂಡ ಹೇಳುತ್ತಿದ್ದನು. ಕೆಲವೊಮ್ಮೆ ಆ ಶರೀರದ ಒಳಹೋಗಿ ಹೊರ ಬರುತ್ತಿದ್ದನು. ಬಂದಮೇಲೆ “ಅದರ ಒಳಗೆ ಟೊಳ್ಳಾಗಿದೆ. ಒಳ ಟೊಳ್ಳಾದ ಒಂದು ಜೀವಿ ಬಹಳ ದುರ್ಬಲ ಆಗಿರಬಹುದು. ಅಲ್ಲದೆ ಅದಕ್ಕೆ ತಿನ್ನುವ ಮತ್ತು ಕುಡಿಯುವ ಅಗತ್ಯ ಕೂಡ ಬರಬಹುದು” ಎಂದೂ ಹೇಳುತ್ತಿದ್ದನು.
ಬಳಿಕ ಅಲ್ಲಾಹನು ಆ ದೇಹಕ್ಕೆ ಜೀವವನ್ನು (ರೂಹ್) ಹಾಕಿದನು. ಆದಮರ ತಲೆಯ ಮೇಲ್ಭಾಗದಿಂದ ಪ್ರವೇಶಿಸಿದ ರೂಹ್ ಕಣ್ಣಿನತ್ತ ತಲುಪಿದಾಗ ಕಣ್ಣು ತೆರೆಯಲ್ಪಟ್ಟು ಕಣ್ಣಿಗೆ ದೃಷ್ಟಿ ಲಭಿಸಿತು. ತೆರೆದ ಕಣ್ಣಿನಿಂದ ತನ್ನ ನಗ್ನ ಮಣ್ಣಿನಲ್ಲಿ ಮಾಡಲ್ಪಟ್ಟ ದೇಹವನ್ನು ಮೊದಲಾಗಿ ನೋಡಿದರು. ಬಳಿಕ ಕಿವಿಗೆ ತಲುಪಿದಾಗ ಶ್ರವಣ ಶಕ್ತಿ ಲಭಿಸಿತು. ಆಗ ಪರಿಸರದಲ್ಲಿ ಮಲಕುಗಳು ಹೇಳುವ ತಸ್ಬೀಹಿನ ಶಬ್ದ ಅವರಿಗೆ ಕೇಳಲು ಆರಂಭಿಸಿತು. ನಂತರ ಮೂಗಿನತ್ತ ಮತ್ತು ಬಾಯಿಯತ್ತ ಬಂದಾಗ ಮೂಗಿನಲ್ಲಿ ಸೀನು ಬಂತು. ಸೀನಿದಾಗ ಬಾಯಿಯಿಂದ ಅಲ್ ಹಮ್ದು ಲಿಲ್ಲಾಹ್ ಎಂಬ ವಾಕ್ಯ ಬಂತು. ಆಗ ಅಲ್ಲಾಹನು ಯರ್ಹಮುಕ ರಬ್ಬುಕ ಯಾ ಆದಮ್ (ಓ ಆದಮ್, ನಿನ್ನ ಒಡೆಯ ನಿನಗೆ ರಹ್ಮತ್ ನೀಡಲಿ) ಎಂಬ ಉತ್ತರ ಕೊಟ್ಟನು. ಇದು ಪದ ಆದಮರ ಬಾಯಿಯಿಂದ ಬಂದ ಮೊದಲ ಪದವಾಗಿತ್ತು.ಬಳಿಕ ರೂಹ್ ಶರೀರದ ಎಲ್ಲಾ ಭಾಗಕ್ಕೂ ಹರಡಿ ಹೋಯಿತು. ಮಣ್ಣಿನಿಂದ ಮಾಡಲ್ಪಟ್ಟ ಜಡ ಶರೀರ ಜೀವ ಸಿಕ್ಕಿದಾಗ ರಕ್ತ ಮಿಶ್ರಣವಾದ ಎಲುಬು, ಮಾಂಸ ಕೂಡಿದ ಒಂದು ದೇಹವಾಯಿತು. ಆದರೆ ರೂಹ್ ಮಾತ್ರ ಮೊಣಕಾಲಿಗಿಂತ ಕೆಳಗಡೆ ತಲುಪಿರಲಿಲ್ಲ. ಆದರೂ ಆದಮರು ಜೀವ ದೊರೆತ ಸಂತೋಷದಲ್ಲಿ ನಡೆದಾಡಲು ಧುಮುಕಿದರು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಅಲ್ಲಾಹನು ಹೇಳಿದನು. “ಆಗಲಿಲ್ಲ, ಅವಸರ ಮಾಡಬೇಡಿ. ಮೊಣಕಾಲಿಗಿಂತ ಕೆಳಗೆ ರೂಹ್ ತಲುಪಬೇಕಾಗಿದೆ.” ಬಳಿಕ ಅಲ್ಲಿಗೂ ತಲುಪಿತು. ಆದಮರು ನಡೆದಾಡಲು ಶುರು ಮಾಡಿದರು. ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಆದಮರ ಶರೀರವಿಡೀ ರೂಹ್ ತಲುಪುವ ಮೊದಲೇ ನಡೆದಾಡಲು ಅವರು ಅವಸರ ಮಾಡಿದರು. ಅದನ್ನು ಅಲ್ಲಾಹನು ಪವಿತ್ರ ಖುರ್ಆನಿನಲ್ಲಿ ಕೂಡ ಉಲ್ಲೇಖಿಸಿದ್ದಾನೆ. ಆ ಕಾರಣದಿಂದ ಮನುಷ್ಯನು ಯಾವಾಗಲೂ ಗಡಿಬಿಡಿಯಲ್ಲೇ ಇರುತ್ತಾನೆ. ಅವನ ಬಿಝಿ ಯಾವತ್ತೂ ಮುಗಿಯುವಂತಿಲ್ಲ ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
ಆದಮರ ಶರೀರಕ್ಕೆ ಪ್ರವೇಶಿಸಿದ ರೂಹ್ ಅದು ಶರೀರವಿಡೀ ಪಸರಿಸಿ ಸರಿಯಾದ ಒಬ್ಬ ಜೀವವಿರುವ ಮನುಷ್ಯನಾಗುವ ಪ್ರಕ್ರಿಯೆ ಪೂರ್ತಿಯಾಗಲು ನೂರಾರು ವರ್ಷಗಳು ಬೇಕಾಯಿತು. ಸುಬ್ಹಾನಲ್ಲಾಹ್…!!! ಅದೊಂದು ಶುಕ್ರವಾರ ದಿನ ಸೂರ್ಯಾಸ್ತದ ಸಮಯದಲ್ಲಾಗಿತ್ತು. ಬಳಿಕ ಅಲ್ಲಾಹನು ಆದಮರಿಗೆ ಜಗತ್ತಿನಲ್ಲಿ ಅಂತ್ಯ ದಿನದ ತನಕ ಬರುವ ಎಷ್ಟರ ತನಕವೆಂದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಕಾಣಲ್ಪಡುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಎಲ್ಲಾ ವಸ್ತುಗಳ ಹೆಸರು ಮತ್ತು ಉಪಯೋಗವನ್ನು ಅಂತೆಯೇ ಜಗತ್ತಿನಲ್ಲಿ ಅಂತ್ಯ ದಿನದ ತನಕ ಬಳಸಲ್ಪಡುವ ಎಲ್ಲಾ ವಿಜ್ಞಾನ ಮತ್ತು ಭಾಷೆಗಳನ್ನು ಕೂಡ ಕಲಿಸಿ ಕೊಡಲಾಯಿತು. ಬಳಿಕ ಅಲ್ಲಾಹನು ಮಲಕುಗಳಲ್ಲಿ ಆದಮರಿಗೆ ಸಾಷ್ಟಾಂಗ ಮಾಡಲು ನಿರ್ದೇಶ ಮಾಡಿದನು. ಅದು ಕೂಡ ಒಂದು ದಿನ ಶುಕ್ರವಾರ ಮಧ್ಯಾಹ್ನದ ಸಮಯದಲ್ಲಾಗಿತ್ತು. ಆ ಸುಜೂದ್ ಅಥವಾ ಸಾಷ್ಟಾಂಗ ಅಸರಿನ ತನಕ ಮುಂದುವರಿದಿತ್ತು. ನಂತರ ಅವರನ್ನು ಅಲಂಕರಿಸಿ ಪೀಠದ ಮೇಲೆ ಕುಳ್ಳಿರಿಸಿ ಏಳು ಆಕಾಶ ಲೋಕ ಮತ್ತು ಭೂಮಿಯಲ್ಲಿ ಸುತ್ತಾಡಿಸಿ ತೋರಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ಪ್ರಪ್ರಥಮವಾಗಿ ತಿನ್ನಲು ಸ್ವರ್ಗದಿಂದ ತಂದ ದ್ರಾಕ್ಷಿ ಹಣ್ಣಿನ ಗೊಂಚಲನ್ನು ಕೊಡಲಾಯಿತು. ದೀರ್ಘ ಯಾತ್ರೆಯ ಆಯಾಸದೊಂದಿಗೆ ಸ್ವರ್ಗದಿಂದ ತಂದ ಹಣ್ಣನ್ನು ತಿಂದಾಗ ಅವರಿಗೆ ನಿದ್ರೆ ಬಂತು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ: ಇಮಾಮ್ ಶಿಹಾಬುದ್ದೀನ್ ಅಹ್ಮದ್ ಬಿನ್ ಅಬ್ದುಲ್ ವಹ್ಹಾಬ್ ರವರ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.