(www.vknews.in) : ಈ ಆರು ತಿಂಗಳ ಯಾತ್ರೆಯಲ್ಲಿ ರಾತ್ರಿ ಹಗಲು ತಿಳಿಯಲು ಹಝ್ರತ್ ನೂಹ್ರವರು ಹಡಗಿನ ಮುಂಭಾಗದ ಕ್ಯಾಬಿನ್ನಲ್ಲಿ ಒಂದು ಬಿಳುಪಾದ ಮಣಿಯನ್ನು ಇಟ್ಟಿದ್ದರು. ಅದು ರಾತ್ರಿಯಾಗುವಾಗ ಪ್ರಕಾಶಿಸುತ್ತಿತ್ತು. ಹಗಲಿನ ಹೊತ್ತು ಅದರ ಪ್ರಕಾಶ ಕಡಿಮೆಯಾಗಿ ಕಾಣುತ್ತಿತ್ತು. ಇದರಿಂದ ಅವರು ರಾತ್ರಿ ಹಗಲನ್ನು ತಿಳಿಯುತ್ತಿದ್ದರು. ಅಂತೆಯೇ ನಮಾಝಿನ ಸಮಯವಾಗುವಾಗ ಅದರಲ್ಲಿದ್ದ ಎರಡು ಕೋಳಿಗಳು ಕೂಗುತ್ತಿದ್ದವು. ಅದರಿಂದ ನಮಾಝಿನ ಸಮಯ ತಿಳಿಯುತ್ತಿತ್ತು.
ಹಝ್ರತ್ ನೂಹ್ರವರು ಮನುಷ್ಯ, ಪ್ರಾಣಿ, ಪಕ್ಷಿ ಮತ್ತು ಇತರ ಎಲ್ಲಾ ಜೀವರಾಶಿಗಳೊಂದಿಗೆ ಹಡಗಿನಲ್ಲಿ ಇರುವ ವೇಳೆ ಪರಸ್ಪರ ಲೈಂಗಿಕ ಸಂಪರ್ಕದಲ್ಲಿ ತೊಡಗಬಾರದೆಂದು ತಾಕೀತು ಮಾಡಿದ್ದರು. ಆದರೆ ಎರಡು ನಾಯಿಗಳು ಮಾತ್ರ ಅವರ ಆಜ್ಞೆಯನ್ನು ಉಲ್ಲಂಗಿಸಿ ಲೈಂಗಿಕ ಸಂಪರ್ಕದಲ್ಲಿ ತೊಡಗುತ್ತಿದ್ದವು. ಇದನ್ನು ಕಂಡ ಬೆಕ್ಕು ಅವುಗಳಲ್ಲಿ ಹೇಳಿತು. “ನೀವು ಹೀಗೆ ಮಾಡುವುದು ತಪ್ಪು. ಪ್ರವಾದಿ ನೂಹ್ ರವರ ಆಜ್ಞೆಯನ್ನು ನೀವು ಉಲ್ಲಂಘನೆ ಮಾಡುತ್ತಿದ್ದೀರಿ” ಎಂದು. ಬಳಿಕ ಎರಡನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದಾಗ ಬೆಕ್ಕು ಹಝ್ರತ್ ನೂಹ್ರವರಲ್ಲಿ ದೂರು ಕೊಟ್ಟಿತು. ಆದರೆ ನೂಹ್ರವರು ಬರುವಾಗ ನಾಯಿಯು ಏನೂ ತಿಳಿಯದವನಂತೆ ಬಹಳ ಸೊಬಗನಾಗಿ ಇರುತ್ತಿತ್ತು. ಈ ಕೆಟ್ಟ ಕೆಲಸ ಮಾಡಿ ಬಳಿಕ ನಿಷೇಧಿಸಿದ್ದಕ್ಕೆ ಹಝ್ರತ್ ನೂಹ್ರವರು “ಮುಂದಕ್ಕೆ ನಿನ್ನ ಲೈಂಗಿಕ ಸಂಪರ್ಕ ಬಹಿರಂಗವಾಗಿ ಆಗಲಿ. ಬೆಕ್ಕಿನದ್ದು ಮಾನ್ಯವಾಗಿ ರಹಸ್ಯವಾಗಿರಲಿ” ಎಂದು ದುಆ ಮಾಡಿದರು. ಆ ಕಾರಣದಿಂದ ಇಂದು ಈ ನಾಯಿಯ ಸಂಪರ್ಕ ಬಹಿರಂಗವಾಗಿಯೂ ಬೆಕ್ಕಿನದ್ದು ರಹಸ್ಯವಾಗಿಯೂ ನಡೆಯುತ್ತದೆ. ಅಲ್ಲದೆ ಬೆಕ್ಕು ದೂರುಕೊಟ್ಟ ಕಾರಣದಿಂದ ಅಂದಿನಿಂದ ಬೆಕ್ಕು ಮತ್ತು ನಾಯಿಯ ಮಧ್ಯೆ ಹಗೆತನ ಉಂಟಾಯಿತು ಎಂದು ಕೂಡ ಹೇಳಲಾಗುತ್ತದೆ.
ಇಂದಿನ ಇರಾಕಿನಿಂದ ಹೊರಟ ಹಡಗು ಮಳೆ ನಿಂತು ನೀರು ಕಡಿಮೆಯಾಗುತ್ತಾ ಬಂದಂತೆ ಅದೇ ಇರಾಕಿನ ಜೂದಿ ಪರ್ವತದಲ್ಲಿ ಲ್ಯಾಂಡ್ ಆದ ಬಳಿಕ ಹಝ್ರತ್ ನೂಹ್ರವರು ಹಡಗಿನ ಬಾಗಿಲನ್ನು ತೆರೆದರು. ಹೊರನೋಡುವಾಗ ನೀರೆಲ್ಲಾ ಬತ್ತಿ ಲಕ್ಷೋಪಲಕ್ಷ ಸತ್ತ ಜನರ ಎಲುಬುಗಳು ಅಲ್ಲಲ್ಲಿ ಚದುರಿ ಬಿದ್ದಿತ್ತು. ಬಳಿಕ ಅವರು ಕಾಗೆಯನ್ನು ಕರೆದು ಹೇಳಿದರು. “ನೀನೊಮ್ಮೆ ಹೋಗಿ ನೋಡು. ಎಲ್ಲಾದರೂ ನೀರು ಕಾಣ್ತದಾ ಅಥವಾ ಸಂಪೂರ್ಣವಾಗಿ ಬತ್ತಿ ಹೋಗಿದೆಯಾ?” ಅಂತ.
ಆದರೆ ಹೋದ ಕಾಗೆ ಮಾತ್ರ ಮರಳಿ ಬರಲಿಲ್ಲ. ಅದು ಎಲ್ಲೋ ಸತ್ತುಬಿದ್ದ ಶವವನ್ನು ತಿನ್ನುವುದರಲ್ಲಿ ತಲ್ಲೀನವಾಗಿತ್ತು. ಬಳಿಕ ಪ್ರವಾದಿ ನೂಹ್ರವರು ಪಾರಿವಾಳವನ್ನು ಕಳುಹಿಸಿದರು. ಪಾರಿವಾಳವು ಕೆಲವೇ ಗಂಟೆಗಳಲ್ಲಿ ಸುತ್ತಾಡಿ ಬಂದು ಹೇಳಿತು. “ಭಾರತದ ಕೆಲವು ಕಡೆಗಳಲ್ಲದೆ ಎಲ್ಲೂ ನೀರು ಕಾಣುವುದಿಲ್ಲ. ಸಂಪೂರ್ಣವಾಗಿ ಬತ್ತಿದೆ” ಎಂದು. ಆಗ ಹಝ್ರತ್ ನೂಹ್ರವರು ಹೇಳಿದ ಕೆಲಸವನ್ನು ಸರಿಯಾದ ರೂಪದಲ್ಲಿ ಮಾಡಿದ ಪಾರಿವಾಳದ ಜೋತೆ ಹೇಳಿದರು. “ಮುಂದಕ್ಕೆ ನಿನ್ನ ಬದುಕು ಅಂಜಿಕೆ ಮತ್ತು ಭಯವಿಲ್ಲದೆ ಮಂದುವರಿಯುವಂತಾಗಲಿ. ಜನರೆಲ್ಲರೂ ನಿನ್ನನ್ನು ಪ್ರೀತಿ ಮಮತೆಯಿಂದ ನೋಡುವಂತಾಗಲಿ.” ಅಂತೆಯೇ ತಡವಾಗಿ ಹೊಟ್ಟೆ ಉಬ್ಬರಿಸಿ ಬಂದ ಕಾಗೆಯಲ್ಲಿ ಹೇಳಿದರು. “ಮುಂದಕ್ಕೆ ನಿನ್ನ ಬದುಕು ಹೆದರಿಕೆ ಮತ್ತು ಭಯದಿಂದ ಕೂಡಿದ್ದಾಗಲಿ. ಯಾರೂ ನಿನ್ನನ್ನು ಮೆಚ್ಚದಂತೆ ಆಗಲಿ.” ಎಂದು. ಆ ಕಾರಣದಿಂದ ಇಂದು ಪಾರಿವಾಳದ ಬದುಕು ಬಹಳ ಅಭಿಮಾನದಿಂದ ಕೂಡಿದ್ದಾಗಿದೆ. ಮಾನವನಾಗಿ ಬೆರೆಯುತ್ತದೆ. ಆಹಾರವಾದರೂ ಯಥೇಚ್ಛವಾಗಿ ಸಿಗುತ್ತದೆ. ಆದರೆ ಕಾಗೆಯ ಬದುಕು ಬಹಳ ಅಂಜಿಕೆ ಮತ್ತು ಭಯದಿಂದ ಕೂಡಿದೆ. ಒಂದು ಎಲುಬನ್ನು ತಿನ್ನುವಾಗ ನಾಲ್ಕು ಬದಿಗೆ ಹಲವಾರು ಬಾರಿ ನೋಡುತ್ತದೆ. ಅಲ್ಲದೆ ಯಾವಾಗಲೂ ಕೊಳೆತ ವಸ್ತುಗಳನ್ನು ಇಷ್ಟಪಡುತ್ತದೆ. ಯಾವತ್ತೂ ಮನುಷ್ಯನಾಗಿ ಬೆರೆಯದು. ಮಾತ್ರವಲ್ಲ ಇತಿಹಾಸದಲ್ಲಿ ಯಾವೊಬ್ಬನೂ ಕಾಗೆಯನ್ನು ಹಿಡಿದು ಸಾಕಿದ ಬಗ್ಗೆ ಚರಿತ್ರೆ ಇಲ್ಲ.
ಲ್ಯಾಂಡ್ ಆದ ಹಡಗಿನಿಂದ ಹಝ್ರತ್ ನೂಹ್ರವರ ಸಮೇತ ಎಂಬತ್ತು ಮಂದಿ ಹೊರಬಂದರು. ಅಂತೆಯೇ ಹಡಗಿನಲ್ಲಿದ್ದ ಎಲ್ಲಾ ಜೀವರಾಶಿಗಳನ್ನು ಹೊರತರಲಾಯಿತು. ಇಷ್ಟರ ತನಕ ಸೂರ್ಯ, ಚಂದ್ರ, ನಕ್ಷತ್ರ ಏನೂ ಇಲ್ಲದೇ ಕತ್ತಲೆಯಾಗಿದ್ದ ಜಗತ್ತು ಪುನಃ ಅವುಗಳ ಮರುಸ್ಥಾಪನೆಯೊಂದಿಗೆ ಸಕ್ರೀಯವಾಯಿತು. ಗಿಡಗಳು ಮತ್ತು ಮರಗಳು ಮೊದಲಿನಂತೆಯೇ ಬೆಳೆದು ನಿಂತಿತು. ಪ್ರಾಣಿ ಪಕ್ಷಿಗಳು ಮತ್ತು ಇತರ ಜೀವಿಗಳು ನೆಲಕ್ಕಿಳಿದು ತನ್ನ ಹೊಟ್ಟೆಪಾಡಿಗಾಗಿ ಹೊರಟಿತು. ಬಳಿಕ ಅಲ್ಲೇ ಜೂದಿ ಪರ್ವತದ ಕೆಳಭಾಗದಲ್ಲಿ ತೂಫಾನಿನ (ಪ್ರವಾಹ) ನಂತರದ ಜಗತ್ತಿನ ಮೊದಲಿನ ಪಟ್ಟಣವಾಗಿ ಉದಯವಾಯಿತು.
ಹಡಗು ನಿಂತ ಬಳಿಕ ಹಝ್ರತ್ ನೂಹ್ರವರು ಕಅಬಾದ ಬಲಭಾಗದಿಂದ ತೆಗೆದು ಹಡಗಿನಲ್ಲಿಟ್ಟಿದ್ದ ಹಝ್ರತ್ ಆದಮರ ಪೆಟ್ಟಿಗೆಯನ್ನು ಅಲ್ಲೇ ಇಡಲು ಅಲ್ಲಾಹನು ಆಜ್ಞಾಪಿಸಿದನು. ನಂತರ ಹಾಗೆ ಇಡಲಾಯಿತು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
✍🏻ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಮತ್ತು ಇಮಾಮ್ ಮುಹಮ್ಮದ್ ಇಯಾಸ್ ಹನಫಿಯ ಬದಾಇಯಿ ಅಲ್ ಝುಹೂರ್ ಫೀ ವಖಾಇಯಿ ಅದ್ದುಹೂರ್ ಎಂಬ ಗ್ರಂಥಗಳಿಂದ.
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.