(www.vknews.com) : ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಸಮೀಪಿಸುತ್ತಿದೆ. ಇದು ಯಾವದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ಹಬ್ಬವಲ್ಲ. ಈ ಪವಿತ್ರ ಹಬ್ಬಕ್ಕೆ 4000 ವರ್ಷಗಳ ಇತಿಹಾಸವಿದೆ.
ಪ್ರತಿ ವರ್ಷ ಹಬ್ಬ ಬರುವಾಗ ಮುಸ್ಲಿಮರು ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಗೆ ಮನವಿ ಸಲ್ಲಿಸುತ್ತಿದ್ದು ಅದರಂತೆ ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ, ಯಾವುದೇ ಅಡೆತಡೆ ಇಲ್ಲದೆ ಬಕ್ರೀದ್ ಹಬ್ಬ ಆಚರಿಸಲು ಸೂಕ್ತ ಭದ್ರತೆ ಹಾಗು ಅವಕಾಶ ಮಾಡಿಕೊಡುತ್ತಿದ್ದು ಈ ಬಾರಿಯೂ ಅದನ್ನು ಮುಂದುವರಿಸಬೇಕು.
ಗೋರಕ್ಷಣೆಯ ನೆಪದಲ್ಲಿ ಕೆಲವು ಸಮಾಜಘಾತಕ ಶಕ್ತಿಗಳು ಅಲ್ಲಲ್ಲಿ ಗೋಸಾಗಾಟಕ್ಕೆ ಅಡ್ಡಿ ಪಡಿಸುವುದನ್ನು ಮತ್ತು ಬೆದರಿಸುವ ಘಟನೆಯ ಬಗ್ಗೆ ಈಮೊದಲೇ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದು , ಹಬ್ಬದ ಸಮಯದಲ್ಲಿ ಈ ಶಕ್ತಿಗಳು ಪುನಃ ತಲೆಯೆತ್ತುವ ಹಾಗೂ ಶಾಂತಿ ಕದಡುವ ಪ್ರಯತ್ನವನ್ನು ಮಾಡುವ ಆತಂಕವಿದೆ. ಇಂತಹ ದುಷ್ಕರ್ಮಿಗಳ ಷಡ್ಯಂತ್ರದ ಬಗ್ಗೆ ಜಾಗರೂಕರಾಗಿ ಇವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಆ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಇಂತಹ ಪ್ರಯತ್ನಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಿ ಮುಸ್ಲಿಮರು ಯಾವುದೇ ಅಡಚಣೆ ಇಲ್ಲದೆ ಹಬ್ಬ ಮತ್ತು ಬಲಿದಾನ ಆಚರಿಸಲು ಅನುಕೂಲಮಾಡಿ ಕೊಡಬೇಕು.
ಕೋವಿಡ್ 19 ರ ಏರಿಕೆಯ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಿಸಿದ ಜಿಲ್ಲಾಡಳಿತದ ಕ್ರಮವನ್ನು ಯುನಿವೆಫ್ ಕರ್ನಾಟಕ ಸ್ವಾಗತಿಸುತ್ತದೆ. ಆದರೆ ಬಕ್ರೀದ್ ಸಂದರ್ಭದಲ್ಲಿ ಈ ಲಾಕ್’ಡೌನ್ ಯಾವುದೇ ಕಾರಣಕ್ಕೂ ಮುಂದುವರಿಸದೆ ನಿರಾತಂಕವಾಗಿ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಜಿಲ್ಲಾಡಳಿತ ಪ್ರಕಟಿಸ ಬೇಕೆಂಬ ಬೇಡಿಕೆಗಳೊಂದಿಗೆ ಯುನಿವೆಫ್ ಕರ್ನಾಟಕದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀ ನಿವಾಸ ಪೂಜಾರಿ, ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೋಲಿಸ್ ಆಯುಕ್ತರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿತು ಹಾಗು ಮನವಿ ಸಲ್ಲಿಸಿತು.
ತಾವು ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಹಾಗು ಲಾಕ್ಡೌನ್ ನ ಯೋಚನೆ ಇಲ್ಲವೆಂದು ಜಿಲ್ಲಾಡಳಿತ ಯುನಿವೆಫ್ ನಿಯೋಗಕ್ಕೆ ಭರವಸೆ ನೀಡಿತು.
ನಿಯೋಗ ದಲ್ಲಿ ಯುನಿವೆಫ್ ಕರ್ನಾಟಕದ ಅಧ್ಯಕ್ಷರಾದ ರಫೀಉದ್ದೀನ್ ಕುದ್ರೋಳಿ, ಕಾರ್ಯದರ್ಶಿಗಳಾದ ಖಾಲಿದ್ ಯು.ಕೆ ಮತ್ತು ಸೈಫುದ್ದೀನ್, ಜಿಲ್ಲಾಧ್ಯಕ್ಷರಾದ ನೌಫಲ್ ಹಸನ್ , ಕುದ್ರೋಳಿ ಶಾಖಾಧ್ಯಕ್ಷರಾದ ಅರ್ಸಲನ್ , ಕ್ರಷ್ಣಾಪುರ ಸಂಚಾಲಕರಾದ ಹುದೈಫ್ ಮತ್ತು ಸದಸ್ಯರಾದ ಇದ್ದಿನ್ ಕುಂಞ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.