(www.vknews.com) : ಜಗತ್ತಿನಲ್ಲಿರುವ ಮಾನವರು ಧಾರ್ಮಿಕ, ಸಾಂಸ್ಕೃತಿಕ, ಸೈದ್ದಾಂತಿಕ, ವೈಚಾರಿಕ ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ವಿವಿಧ ರೀತಿಯ ವೈರುಧ್ಯಾಭಿಪ್ರಾಯ ಗಳನ್ನು ಹೊಂದಿದ್ದು ಈ ಕಾರಣದಿಂದಲೇ ಮಾನವರು ಹಲವು ಜನಾಂಗಗಳಾಗಿ ಹರಿದು ಹಂಚಾಗಿದ್ದಾರೆ. ಎಲ್ಲದರಲ್ಲೂ ಬೇರೆಬೇರೆ ಅಭಿರುಚಿಗಳನ್ನು ಹೊಂದಿರುವ ಮಾನವರನ್ನು ಒಂದೇ ಆಶಯದಲ್ಲಿ ಕೂಡಿ ಹಾಕಲು ಸಾಧ್ಯವಿಲ್ಲದ ಮಾತು.
ಜನ ಸಂಖ್ಯೆ ಮತ್ತು ಸಂಶೋಧನೆಗಳು ಹೆಚ್ಚಾದಂತೆ ಅಭಿಪ್ರಾಯಗಳು, ಅಭಿರುಚಿಗಳು, ಹಿತಾಸಕ್ತಿಗಳು ಬದಲಾಗುತ್ತೆ. ಇದರಿಂದಾಗಿ ಪರಸ್ಪರ ಸಂವಾದಗಳೂ, ಟೀಕೆ ಟಿಪ್ಪಣಿಗಳೂ, ವಾದ ಪ್ರತಿವಾದಗಳೂ ಜಾಸ್ತಿಯಾಗುತ್ತೆ. ಪೂರ್ವ ಕಾಲದಲ್ಲಿ ಇಂತಹ ವಾಗ್ವಾದಗಳು ತಾರಕಕ್ಕೇರಿ ಸಾಮೂಹಿಕ ಯುದ್ದದಲ್ಲಿ ಕೊನೆಗೊಳ್ಳುತ್ತಿತ್ತು. ಜಗತ್ತು ನಾಗರಿಕತೆಗೆ ತೆರೆದು ಕೊಳ್ಳುತ್ತಿದ್ದಂತೆ ಯುದ್ದಗಳು ಕಡಿಮೆಯಾಗಿ ಇನ್ನೊಂದು ಜನಾಂಗದೊಂದಿಗಿನ ತಮ್ಮ ವಿರೋಧಗಳು ವಿವಿಧ ರೀತಿಯ ಮೀಡಿಯಾಗಳಲ್ಲಿ ವಾಕ್ಸಮರ,ಟೀಕಾ ಪ್ರಹಾರಗಳ ಮೂಲಕ ಪ್ರತಿದ್ವನಿಸುತ್ತಿದೆ. ಈ ಸಂಧರ್ಭದಲ್ಲಿ ಉತ್ತಮ ಸಮುದಾಯವೆಂಬ ಬಿರುದಾಂಕಿತ ಮುಸ್ಲಿಮರು ತಮ್ಮ ಮೇಲೆ ಎರಗಿ ಬರುವ ವಿವಿಧ ರೀತಿಯ ಟೀಕಾ ಪ್ರಹಾರಗಳನ್ನು ತಮ್ಮ ನೂನ್ಯತೆಗಳನ್ನು ಪರಿಹರಿಸಿ ಕೊಳ್ಳಲು ಬಳಸಿ ಕೊಳ್ಳಬೇಕು ಮತ್ತು ಅದನ್ನು ಸದುಪಯೋಗ ಪಡಿಸಿ ಕೊಂಡು ಅವುಗಳನ್ನೇ ತಮ್ಮ ಪ್ರಗತಿಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿ ಕೊಳ್ಳ ಬೇಕೆಂದು ಮುಲ್ಕಿ ಶಾಫಿ ಕೇಂದ್ರ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಆದಾಗ್ಯೂ ನ್ಯಾಯಯುತವಾದ ಟೀಕೆಗಳಿಗೆ ಮತ್ತು ಪ್ರಶ್ನೆಗಳಿಗೆ ಮಾನ್ಯವಾಗಿಯೇ ಉತ್ತರಿಸಿ ಮುಸ್ಲಿಮರ ಬಗ್ಗೆ ಅನ್ಯ ಸಮುದಾಯದವರಲ್ಲಿ ನಿರಂತರವಾಗಿ ಬಿತ್ತಲಾದ ತಪ್ಪು ಕಲ್ಪನೆಯನ್ನು ನೀಗಿಸುವುದು ಸಾಮಾಜಿಕ,ಧಾರ್ಮಿಕ ಕಾರ್ಯಕರ್ತರ ಜವಾಬ್ದಾರಿಯೂ ಆಗಿದೆ ಎಂದ ಖತೀಬರು ಎಲ್ಲದಕ್ಕೂ ಮಿಗಿಲಾಗಿ ಮುಸ್ಲಿಂ ಸಮುದಾಯ ತಮ್ಮ ವರ್ತನೆಯನ್ನು ಇತರ ಸಮುದಾಯವೂ ಮೆಚ್ಚುವಂತೆ ಸರಿಯಾದ ದಿಕ್ಕಿನಲ್ಲಿ ಪ್ರಯೋಗಿಸಿ ಒಳಿತುಗಳನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಪ್ರತ್ಯುತ್ತರ ನೀಡಿದರೆ ವಿರೋಧಿಗಳಿಗೆ ಅದುವೇ ಅತೀ ದೊಡ್ಡ ಪ್ರಹಾರವಾಗಿ ಪರಿಣಮಿಸುತ್ತದೆ ಎಂದು ಸಲಹೆ ನೀಡಿದರು. ನಾವು ಏನೇ ಮಾಡಿದರೂ ಟೀಕೆ ಮಾಡುವ ಒಂದು ವರ್ಗ ಇದ್ದೇ ಇರುತ್ತಾರೆ. ಆದರೆ ಅದನ್ನು ಕಿವಿಗೆ ಹಾಕಿಕೊಂಡರೆ ನಮ್ಮಿಂದ ಯಾವುದೇ ಉತ್ತಮ ಕಾರ್ಯ ಮಾಡಲು ಸಾದ್ಯವಿಲ್ಲ ಎಂದು ಹೇಳಿದ ಅವರು ಕತ್ತೆಯ ಮೇಲೆ ಯಾತ್ರೆ ಹೊರಟ ತಂದೆ ಮತ್ತು ಮಗ ಜನರ ಅಭಿಪ್ರಾಯಗಳನ್ನು ಕೇಳಿ ಬೇಸತ್ತು ಅದರ ಮೇಲೆ ಕುಳಿತು ಕೊಳ್ಳಲಾಗದೇ ಇಬ್ಬರೂ ಸೇರಿ ಕೊನೆಗೂ ಕತ್ತೆಯನ್ನು ಹೊತ್ತು ನಡೆದ ಉಧಾಹರಣೆಯನ್ನು ಜನರ ಮುಂದಿಟ್ಟರು.
ಮುಂದುವರೆದು ಮಾತನಾಡಿದ ಅವರು ಭಾರತದಂತಹ ಸರ್ವ ಸ್ವತಂತ್ರ ದೇಶದಲ್ಲಿ ನಾವು ನಮ್ಮ ಕರ್ತವ್ಯ ಗಳನ್ನು ಸಾಮೂಹಿಕವಾಗಿಯೂ ವೈಯುಕ್ತಿಕವಾಗಿಯೂ ನಿಭಾಯಿಸುವುದು ಬಹಳ ಪ್ರಾಮುಖ್ಯತೆ ಪಡೆದಿದೆ. ದೇವನ ಸಹಾಯ ಕುಳಿತಲ್ಲಿಗೆ ಬಂದೆರಗುವುದಿಲ್ಲ. ಕೇವಲ ಮಂತ್ರಕ್ಕೆ ಮಾವಿನ ಕಾಯಿ ಉದುರುವುದೂ ಇಲ್ಲ ಎಂದ ಅವರು ಒಳಿತಿನ ಕಡೆ ಪ್ರಯತ್ನ ಸಾಗಿದರೆ ದೇವನ ಸಹಾಯ ಜೊತೆಗಿರುತ್ತದೆ ಎಂದರು. ಭಕ್ತನೊಬ್ಬ ದಿನ ನಿತ್ಯ ಪ್ರಾರ್ಥನೆ ಮಾಡಿ ನಂತರ ಕಾಡಿನಿಂದ ಕಟ್ಟಿಗೆ ತಂದು ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ. ಒಂದು ದಿನ ಎರಡೂ ಕಾಲು ಕಳೆದು ಕೊಂಡು ನಡೆಯಲಾಗದ ನರಿಯನ್ನು ನೋಡಿ ಇದು ಹೇಗೆ ಹೊಟ್ಟೆ ತುಂಬಿಸಿ ಕೊಳ್ಳುತ್ತದೆ ಎಂದು ಪರೀಕ್ಷಿಸುತ್ತಾನೆ. ಅಷ್ಟರಲ್ಲಿ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿ ಅಲ್ಲಿಯೇ ಹತ್ತಿರ ತಿಂದು ಅರ್ಧ ಬಿಟ್ಟು ಹೋಗುತ್ತದೆ.ಎದ್ದು ಬಿದ್ದು ಹೊರಳಾಡುತ್ತಾ ಬಂದ ನರಿ ಅದನ್ನು ತಿನ್ನುತ್ತದೆ. ಇದನ್ನು ನೋಡಿದ ಭಕ್ತ ಮತ್ತೆ ಕಾಡಿಗೆ ಹೋಗದೇ ನರಿಗೆ ಆಹಾರ ಒದಗಿಸಿದ ದೇವ ನನಗೂ ಕೊಟ್ಟೇ ಕೊಡುತ್ತಾನೆ ಎಂಬ ನಂಬಿಕೆ ಇಟ್ಟು ದಿನಪೂರ್ತಿ ಆರಾಧನೆಯಲ್ಲೇ ತೊಡಗಿಸಿ ಕೊಳ್ಳುತ್ತಾನೆ.ಆದರೆ ಹಸಿವು ಹೆಚ್ಚಾಯಿತಲ್ಲದೇ ಏನೂ ಪ್ರಯೋಜನವಾಗಲಿಲ್ಲ. ಇವನ ಈ ವರ್ತನೆಯ ಬಗ್ಗೆ ವಿಚಾರಿಸಿದ ಸಂತ ಅವನಲ್ಲಿ ಹೀಗೆ ಹೇಳಿದ, ಎಲೈ ಮೂರ್ಖ ನೀನು ಆ ಕಾಲಿಲ್ಲದ ನರಿಯ ಬದಲು ಹುಲಿಯನ್ನು ನೋಡಿ ಕಲಿಯ ಬೇಕಿತ್ತು.ಅದು ತನ್ನ ಜವಾಬ್ದಾರಿ ನಿಭಾಯಿಸಿದ್ದೇ ಅಲ್ಲದೇ ಇನ್ನೊಬ್ಬನಿಗೂ ಸಹಾಯ ಮಾಡಿತು. ಈ ಉದಾಹಣೆ ನೀಡಿದ ಖತೀಬರು ನಾವು, ಯಾರು ಏನೇ ಹೇಳಿದರೂ ಎದೆಗುಂದದೆ ನಮ್ಮಿಂದಾದ ಉಪಕಾರವನ್ನು ಇತರರಿಗೆ ಮಾಡಿದರೆ ಕ್ರಮೇಣ ಜನರು ತಮ್ಮ ತಪ್ಪು ತಿಳುವಳಿಕೆಯನ್ನು ಬದಲಾಯಿಸಿ ಕೊಳ್ಳಲು ನಿರ್ಬಂಧಿತರಾಗುತ್ತಾರೆ ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.