(ಶಾಹ್ ಉಸ್ತಾದ್ ವಫಾತ್ ದಿವಸ ಬರೆದ ಲೇಖನ)
(www.vknews.com) : ಇಸ್ಲಾಮೀ ಪಾಂಡಿತ್ಯ ಜಗತ್ತಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಇದೀಗ ನಮ್ಮಿಂದಗಲಿದ ಅರಂತೋಡು ಉಸ್ತಾದರೆಂದೇ ಖ್ಯಾತರಾದ ಉಪ್ಪಿನಂಗಡಿ ಸಮೀಪದ ಆತೂರು ಡಾ|ಶಾಹ್ ಉಸ್ತಾದ್ ನಮ್ಮನ್ನಗಲುವ ಮೂಲಕ ಐಹಿಕ ಜೀವನಕ್ಕೆ ತಿಲಾಂಜಲಿ ಹಾಕಿ ಪಾರತ್ರಿಕ ಯಾತ್ರೆ ಗೆ ಅಣಿಯಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದ ಮದ್ಯೆಯೂ ತನ್ನ ಕ್ರಿಯಾಶೀಲತೆಯನ್ನು ಬಿಟ್ಟು ಕೊಡದ ಉಸ್ತಾದರು ಉಲಮಾ ವರ್ಗಕ್ಕೆ ಅಪ್ರತಿಮ ಮಾದರಿ ವ್ಯಕ್ತಿಯಾಗಿ ಸುನ್ನತ್ ಜಮಾಹತ್ತಿನ ಹರಿಕಾರರಾಗಿ ವಿರಾಜಿಸಿ ಜನಸಾಮಾನ್ಯರ ಹೃದಯ ಸಾಮ್ರಾಟರಾಗಿ ಅಚ್ಚಳಿಯದ ನೆನಪನ್ನು ಉಳಿಸಿ ನಮ್ಮನ್ನಗಲಿದ್ದಾರೆ.
ಹಿಂದಿನ ತೆಲೆಮಾರಿಗೆ ಶಾಹ್ ಉಸ್ತಾದ್ ಬಗ್ಗೆ ವಿವರಿಸುವ ಅಗತ್ಯ ಇಲ್ಲ. ಎಪ್ಪತರಿಂದ ನಾಲ್ಕು ದಶಕಗಳ ಕಾಲ ಧಾರ್ಮಿಕ ,ಸಾಹಿತ್ಯಿಕ, ಭಾಷಣ ರಂಗದಲ್ಲಿ ಪರ್ಯಾಯ ಇಲ್ಲದ ಪ್ರತಿಭೆ ಯಾಗಿ ಮೆರೆದಿದ್ದ ಉಸ್ತಾದರು ಸುನ್ನಿ ವಲಯದಲ್ಲಿ ಉಂಟಾದ ದೌರ್ಭಾಗ್ಯ ಕರ ಭಿನ್ನತೆಯನ್ನು ಕಂಡು ಮರುಗಿ ಹೋಗಿದ್ದರು. ಅದೇ ಕಾರಣಕ್ಕಾಗಿ ಅವರು ಸಕ್ರಿಯವಾಗಿ ಯಾವುದಾದರೂ ಒಂದರಲ್ಲಿ ಗುರುತಿಸಿ ಕೊಳ್ಳಲು ಇಷ್ಟ ಪಡದಿದ್ದರೂ ವೈಕ್ತಿಕವಾಗಿ ಸಮಸ್ತದ ಪರವಾಗಿ ನೆಲೆ ನಿಂತಿದ್ದರು. ಅಂದಿನ ಕಾಲದ ಇತರ ಉಲಮಾಗಳಿಗಿಂತ ಭಿನ್ನವಾಗಿ ತನ್ನನ್ನು ಕೇವಲ ಮಸೀದಿಯೊಳಗಿನ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತ ಗೊಳಿಸದೇ ಇತರ ಕ್ಷೇತ್ರಕ್ಕೂ ತನ್ನ ಕೊಡುಗೆಯನ್ನು ನೀಡಿದ್ದರು.
ಕರ್ನಾಟಕ ಮುಸ್ಲಿಮರಿಗೆ ಕನ್ನಡ ಸಾಹಿತ್ಯ ಕ್ಷೇತ್ರ ಅಪಥ್ಯವಾಗಿದ್ದ ಕಾಲದಲ್ಲಿ ಪ್ರಥಮವಾಗಿ ಕನ್ನಡ ಸಾಹಿತ್ಯ ದಲ್ಲಿ ತನ್ನನ್ನು ತೊಡಗಿಸಿ ಕೊಂಡ ಕೀರ್ತಿ ಶಾಹ್ ಉಸ್ತಾದರಿಗೆ ಸಲ್ಲಬೇಕು. ಸರಳ ಪಥ ಮತ್ತು ಅಲಮುಲ್ ಹುದಾ ಎಂಬೀ ಎರಡು ಮಾಸ ಪತ್ರಿಕೆಗಳನ್ನು ಹಲವು ವರ್ಷಗಳ ಕಾಲ ಪ್ರಕಟಿಸಿ ದೀನೀ ದಹವಾ ರಂಗದಲ್ಲಿ ಕನ್ನಡಕ್ಕೂ ಸ್ಥಾನ ಇದೆ ಎಂದು ತೋರಿಸಿಕೊಟ್ಟರು. ನಾವು ನಡೆಸುತ್ತಿದ್ದ ಅಲ್ ಅಹ್ಸನ್ ಪತ್ರಿಕೆಗಾಗಿ ಕುರ್ಹಾನ್ ವ್ಯಾಖ್ಯಾನ ಬರೆಯ ಬೇಕೆಂದು ಅವರಲ್ಲಿ ಬಿನ್ನವಿಸಿಕೊಂಡಾಗ ಒಂದೆರಡು ಸಂಚಿಕೆಗೆ ಲೇಖನ ಬರೆದು ಕೊಟ್ಟಿದ್ದರೂ ಆ ನಂತರ ಅವರು ಅನಾರೋಗ್ಯ ನಿಮಿತ್ತ ಬರೆಯುವ ಸಾಮರ್ಥ್ಯ ಕಳಕೊಂಡಿದ್ದರು. ಅವರ ಸಾಹಿತ್ಯ ಬರಹ ಮತ್ತು ಏನ್ರೈಟಿಂಗ್ ಎಂತವರನ್ನೂ ಅಚ್ಚರಿಗೊಳಿಸುವಂತದ್ದು.
ಸ್ಪುಟಿಕವಾದ ಕನ್ನಡದಲ್ಲಿ ಭಾಷಣ ಮಾಡುತ್ತಿದ್ದ ಅವರು ಒಂದು ಕಾಲದಲ್ಲಿ ಎಲ್ಲಾ ಧಾರ್ಮಿಕ ಪ್ರವಚನ ವೇದಿಕೆಯಲ್ಲಿ ಜನಜನಿತರಾಗಿದ್ದರು. ವೀರಕಂಬ ಮುಹಮ್ಮದ್ ಮುಸ್ಲಿಯಾರ್, ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿಯಂತವರ ಸಮಕಾಲೀನರಾಗಿದ್ದು ತನ್ನ ಇಂಪಾದ ಶಬ್ದ ಮತ್ತು ಅರ್ಥ ಗರ್ಭಿತ ಪ್ರಭಾಷಣ ಗಳ ಮೂಲಕ ಮನಸೂರೆಗೈದಿದ್ದರು. ಅವರ ಇಂಪಾದ ಶಬ್ದವನ್ನು ಕೊನೆ ತನಕ ಉಳಿಸಿ ಕೊಂಡದ್ದು ಒಂದು ವಿಶೇಷವೇ ಆಗಿತ್ತು.
ಪೈಯ್ಯಕ್ಕಿ ಅಬ್ದುರ್ರಹ್ಮಾನ್ ಉಸ್ತಾದರ ಬಳಿ ಬಹುತೇಕ ಧಾರ್ಮಿಕ ಜ್ಞಾನವನ್ನು ಗಳಿಸಿದ ಉಸ್ತಾದರು ಎಲ್ಲಾ ಧಾರ್ಮಿಕ ಜ್ಞಾನ ಮೀಮಾಂಸೆಯನ್ನು ಕರಗತಮಾಡಿಕೊಂಡಿದ್ದರು. ಯಾವುದೇ ಸಿಕ್ಕುಗಟ್ಡಿದ ಕರ್ಮಶಾಸ್ತೀಯ ತರ್ಕಗಳನ್ನು ಬಗೆಹರಿಸುವಲ್ಲಿ ನಿಪುಣರಾಗಿದ್ದರು. ಉಲಮಾ ಕುಟುಂಬದಲ್ಲಿ ಜನಿಸಿದ ಉಸ್ತಾದರು ಮುವತ್ತೇಳು ವರ್ಷಗಳ ಕಾಲ ಅರಂತೋಡಿನಲ್ಲಿ ದರ್ಸ್ ನಡೆಸಿ ನೂರಾರು ಶಿಷ್ಯಂದಿರನ್ನು ಸಮಾಜಕ್ಕೆ ಅರ್ಪಿಸಿದರು.
ಆತೂರು ಬದ್ರಿಯಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಇವರ ತಂದೆ ಆ ಕಾಲದ ಉನ್ನತ ವಿದ್ವಾಂಸರಾಗಿದ್ದರು. ಶೈಖುನಾ ಶಂಸುಲ್ ಉಲಮಾರವರು ಉಪ್ಪಿನಂಗಡಿ ಯಲ್ಲಿ ನಡೆಸಿದ ಐತಿಹಾಸಿಕ ಭಾಷಣದ ಪ್ರಮುಖ ಕಾರಣ ಕರ್ತರು ಶಾಹ್ ಉಸ್ತಾದರ ತಂದೆಯಾಗಿದ್ದರು. ಜ್ಞಾನ ದಾಹಿಯಾಗಿದ್ದ ಉಸ್ತಾದರ ಗ್ರಂಥಭಂಡಾರದಲ್ಲಿ ಅಮೂಲ್ಯವಾದ ನೂರಾರು ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದರು.
ಉಪ್ಪಿನಂಗಡಿ ಪರಿಸರದ ಹಲವಾರು ಮಸೀದಿ ಮದ್ರಸಗಳ ಗೌರವದ್ಯಕ್ಷರಾಗಿ ಪುತ್ತೂರು ಸಂಯುಕ್ತ ಜಮಾಹತ್ತಿನ ಶರೀಹತ್ ಸಲಹಾಗಾರರಾಗಿ ಜನಪ್ರಿಯತೆಯನ್ನು ಪಡಕೊಂಡಿದ್ದ ಉಸ್ತಾದರು ಸರಳ ಸಜ್ಜನಿಕೆಯ ಗತ್ತು ಗೈರತ್ತಿಲ್ಲದ ಉತ್ತಮ ಗುಣ ಸ್ವಭಾವವನ್ನು ಹೊಂದಿದ್ದರು.
ದೇವಬಂದ್ ಮತ್ತು ಬಾಖಿಯಾತಿನಲ್ಲಿ ಉನ್ನತ ಬಿರುದು ಪಡೆದಿದ್ದು ಅದರಾಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಕೂಡಾ ಯೂನಾನಿ ಬಿರುದು ಗಳಿಸಿ ಚಿಕಿತ್ಸೆ ನೀಡುತ್ತಿದ್ದರು . ಒಟ್ಟಿನಲ್ಲಿ ಅಮೂಲ್ಯ ಜ್ಞಾನ ಭಂಡಾರವೊಂದು ಈ ಪವಿತ್ರ ರಮಳಾನಿನ ಇಪ್ಪತ್ತ ನಾಲ್ಕನೇ ಬೆಳ್ಳಂಬೆಳಗ್ಗೆ ನಮ್ಮಿಂದ ನಷ್ಟ ಹೊಂದಿದ್ದು ಅಲ್ಲಾಹನ ಕರೆಗೆ ಓಗೊಟ್ಟು ನಿಶ್ಚಲವಾದ ಉಸ್ತಾದರ ಬೌತಿಕ ಜನಾಝವನ್ನು ಸಂದರ್ಶಿಸಲು ಸಾವಿರಾರು ಜನರು ಆಗಮಿಸಿದ್ದಾರೆ. ಉಸ್ತಾದರ ಇಂಗಿತದಂತೆ ಇಲ್ಲಿ ಗೆ ಸಮೀಪದ ಗಂಡಿಬಾಗಿಲು ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆದಿದ್ದು ಅವರ ಮಂದಹಾಸ ಬೀರುವ ಮುಖ ಶಾಸ್ವತವಾಗಿ ನಮಗಿನ್ನು ಮರೀಚಿಕೆಯಾಗಿದೆ. ಅಲ್ಲಾಹು ಅವರೊಂದಿಗೆ ನಮ್ಮೆಲ್ಲರನ್ನೂ ಸ್ವರ್ಗೋದ್ಯಾನದಲ್ಲಿ ಒಟ್ಟುಗೂಡಿಸಲಿ
– ಯಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.