ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ಸಾಮಾಜಿಕ ಪರಿವರ್ತನೆಗಾಗಿ ತಮ್ಮ ಕೀರ್ತನೆಗಳ ಮೂಲಕ ಪ್ರತಿಪಾದಿಸಿದ ಕನಕದಾಸರ ಮೌಲ್ಯಾಧಾರಿತ ಚಿಂತನೆಗಳು ಬದುಕಿನ ಭಾಗವಾಗಲಿ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ವೈ.ಬಿ. ಬಾದವಾಡಗಿ ಹೇಳಿದರು.
ಅವರು ಗುರುವಾರ ಇಲ್ಲಿಯ ಡಯಟ್ ವತಿಯಿಂದ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ೫೧೧ನೇ ಜಯಂತಿ ಮಹೋತ್ಸವ ಆಚರಣೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಜನಪರ ಆಶಯಗಳನ್ನೇ ಕೇಂದ್ರೀಕರಿಸಿದ್ದ ಕನಕದಾಸರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದೂ ಅವರು ಹೇಳಿದರು.
‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾದಕ ರಾಜು ಭೂಶೆಟ್ಟಿ ಲಘು ಉಪನ್ಯಾಸ ನೀಡಿ, ಕನಕದಾಸರ ಚಿಂತನೆಗಳು ವಿಶ್ವಮಾನವತೆಯ ಪ್ರತೀಕವಾಗಿವೆ. ಅಖಂಡ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿ ಜಾತ್ಯಾತೀತ ತತ್ವದ ಆಧಾರದ ಮೇಲೆ ಪರಸ್ಪರ ಪ್ರೀತಿ, ವಿಶ್ವಾಸ, ಭ್ರಾತೃತ್ವದಿಂದ ಕೂಡಿಬಾಳುವ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದ ಕನಕದಾಸರ ಸಂದೇಶಗಳನ್ನು ನಾವು ಇಂದು ನಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳೋಣ ಎಂದರು.
ಕನಕದಾಸರ ಕೀರ್ತನೆಗಳನ್ನು ಕರೋಕೆ ಕಲಾವಿದ ಆನಂದ ಪವಾರ ಹೃದ್ಯವಾಗಿ ಪ್ರಸ್ತುತಪಡಿಸಿದರು. ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ವಂದಿಸಿದರು. ಡಯಟ್ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಸಮಸ್ತ ಲಿಪಿಕ ನೌಕರರು, ಡಿ-ದರ್ಜೆ ನೌಕರರು ಪಾಲ್ಗೊಂಡು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.