ಮಾಡನ್ನೂರ್(ವಿಶ್ವಕನ್ನಡಿಗ ನ್ಯೂಸ್): ಮಾಡನ್ನೂರಿನ ಒಳಪ್ರದೇಶವಾದ ಕೊಳಂಬೆ, ಕೊಚ್ಚಿಗಿರುವ ದಾರಿಯು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ, ಮಣ್ಣಿನ ಈ ರಸ್ತೆಯು ತೀರಾ ಹದಗೆಟ್ಟಿದೆ. ಈ ಪ್ರದೇಶದಲ್ಲಿ ಸುಮಾರು ಎಂಬತ್ತರಷ್ಟು ಮನೆಗಳಿದ್ದು ಜನರಿಗೆ ಸಂಚರಿಸಲು ಬಹಳ ಕಷ್ಟವಾಗುತ್ತಿದೆ. ಮುಖ್ಯವಾಗಿ ಮಳೆಗಾಲದಲ್ಲಿ ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ದಾರಿಯಲ್ಲಿ ಗುಂಡಿಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಇಲ್ಲಿನ ಪಾದಾಚಾರಿ ಹಾಗೂ ವಾಹನದಲ್ಲಿ ಸಂಚರಿಸುವವರು ಬಹಳ ಪ್ರಯಾಸವನ್ನು ಅನುಭವಿಸಬೇಕಾಗುತ್ತದೆ. ವಾಹನದಲ್ಲಿ ಹೋಗುವಾಗ ಜಾರಿ ಬಿದ್ದು ಗಾಯವಾದ ಹಲವಾರು ಘಟನೆಗಳಿವೆ.
ಶಾಲೆಗೆ ಹೋಗುವ ಸಣ್ಣ ಮಕ್ಕಳಿಗೆ ಈ ದಾರಿಯು ಅಷ್ಟು ಸುಗಮವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಈ ಪರಿಸರದಲ್ಲಿ ನಾಲ್ಕೈದು ಅಂಗವಿಕಲರೂ ಇದ್ದಾರೆ(ಮುಖ್ಯವಾಗಿ ಅಶ್ರಫ್ ಕೊಳಂಬೆ ಅಸ್ರ ಎಂಬವರು ತನ್ನ ಬೈಕಿನಿಂದ ಇಲ್ಲಿ ಹಲವಾರು ಬಾರಿ ಪಲ್ಟಿಯಾಗಿ ಗಾಯವಾಗಿದೆ ಪುಣ್ಯಕ್ಕೆ ದೊಡ್ಡ ಅಪಾಯ ತಪ್ಪಿದೆ)ಅವರ ಅಗತ್ಯತೆಗಳ ಸಂಚಾರ ಬಹಳ ಕಷ್ಟವಾಗುತ್ತದೆ. ಮಾತ್ರವಲ್ಲ ಇಲ್ಲಿನ ಜನರು ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗೆ ತೆರಳುವಾಗ, ವೃದ್ದರು, ಮಹಿಳೆಯರು ಆಸ್ಪತ್ರೆಗಳಿಗೆ ಸಂಚರಿಸುವಾಗ ಮುಖ್ಯವಾಗಿ ಲಾಕ್ ಡೌನ್ ವೇಳೆಯಲ್ಲಿ ಸಿಗುವ ತುಸು ಹೊತ್ತಿನಲ್ಲಿ ಅರ್ಜೆಂಟಾಗಿ ಸಂಚರಿಸುವಾಗ ಉತ್ತಮ ರಸ್ತೆಯಲ್ಲದ ಕಾರಣ ಅಪಘಾತಗಳು ಕಟ್ಟಿಟ್ಟ ಬುತ್ತಿ!.
ಚುನಾವಣೆ ಬರುವಾಗ ಇವರನ್ನೆಲ್ಲಾ ವಾಹನದಲ್ಲಿ ಕೊಂಡೊಯ್ಯಲು ಅಧಿಕಾರಿಗಳು ಪರಸ್ಪರ ಸ್ಪರ್ಧಿಸುತ್ತಾರೆ, ಗೆದ್ದ ನಂತರ ಅವರ ಕಷ್ಟ, ನೋವುಗಳಿಗೆ, ಚಿಕಿತ್ಸೆಗೆ, ಕಡೇಪಕ್ಷ ಅವರು ನಡೆಯುವ ರಸ್ತೆಯ ಸುಗಮಕ್ಕೆ ಸ್ಪಂದಿಸುವ ಅಧಿಕಾರಿಗಳು ಇಲ್ಲವೇ ? ರಸ್ತೆಯ ನವೀಕರಣಕ್ಕೆ ಸರಕಾರ ಹಣ ನೀಡುವುದಿಲ್ಲವೇ? ಬಂದ ಹಣ ಜನರ ಸೌಕರ್ಯಕ್ಕಾಗಿ ಉಪಯೋಗಿಸದೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳು ಜನಸಾಮಾನ್ಯರು ನೋವಿನೊಂದಿಗೆ ಕೇಳುತ್ತಿದ್ದಾರೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ, ಅವರನ್ನು ಇಲ್ಲಿಗೆ ಕರೆತಂದು ತೋರಿಸಿದರೂ ಅದರ ಬಗ್ಗೆ ಚರ್ಚಿಸಿ ಪರಿಹಾರ ನೀಡದಿರುವುದು ವಿಷಾದನೀಯ!
ಐದು ವರ್ಷಕ್ಕೊಮ್ಮೆ ಬರುವ ಚುನಾವಣಾ ಸಂದರ್ಭದಲ್ಲಿ ಮನೆ ಮನೆಗೆ ತೆರಳುವ ಅಧಿಕಾರಿಗಳು ರಸ್ತೆಯ ಬಗ್ಗೆ ಉತ್ತಮ ಭರವಸೆ ನೀಡಿ ಹೋಗುದಲ್ಲದೆ ಮತ್ತೆ ಹಿಂತಿರುಗಿ ನೋಡುವುದು ಐದು ವರ್ಷದ ನಂತರ ಮಾತ್ರ!
ಆದ್ದರಿಂದ ದಯವಿಟ್ಟು ನಮ್ಮ ಈ ಮನವಿಯನ್ನು ಸ್ವೀಕರಿಸಿ ಆದಷ್ಟು ಬೇಗ ನಮ್ಮ ಈ ರಸ್ತೆಯನ್ನು ಡಾಮರೀಕರಣ ಮಾಡಿ ಉತ್ತಮ ವ್ಯವಸ್ಥೆ ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು,ಪಂಚಾಯತ್ ಸದಸ್ಯರು ಸರಕಾರಕ್ಕೆ ಮನವಿ ಮಾಡಿ ನಮ್ಮ ರಸ್ತೆಯನ್ನು ದುರಸ್ತಿಗೊಳಿಸಬೇಕು.
ಇನ್ನೂ ನಿಮ್ಮ ಭರವಸೆ ಪೂರೈಸದೆ ಮುಂದುವರಿಯುವ ಉದ್ದೇಶವಾದರೆ ಪ್ರತಿಭಟಣೆ ಮಾಡಲು ಇಲ್ಲಿನ ನಿವಾಸಿಗಳು ತಯಾರಾಗಿದ್ದಾರೆ. ಲಾಕ್ ಡೌನ್ ಎಂಬ ಕಾರಣ ಹೇಳಿ ಗಮನಿಸದೇ ಹೋದರೂ ಲಾಕ್ ಡೌನ್ ನಂತರವಾದರೂ ಗಮನಿಸಿ ಉತ್ತಮ ಪರಿಹಾರ ನೀಡಲೇಬೇಕು.
ಇತೀ.., ✒ ಊರ ನಾಗರಿಕರು ಮಾಡನ್ನೂರು ಕೊಚ್ಚಿ, ಕೊಳಂಬೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.