ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ
(www.vknews.com) ಶಿವಮೊಗ್ಗ : ಡಾ.ಬಿ.ಆರ್. ಅಂಬೇಡ್ಕರ್ ನಗರಕ್ಕೆ ದಾನಿಗಳು ಕೊರಸಿ ಕೊಟ್ಟಿರುವ ಕೊಳವೆ ಬಾವಿಗೆ ಮಹಾನಗರ ಪಾಲಿಕೆ ವತಿಯಿಂದ ಮೋಟರ್ ಅಳವಡಿಸಿ ಬೀದಿಯಲ್ಲಿ ಪೈಪ್ ಲೈನ್ ಮಾಡಿ ಕೊಡುವಂತೆ ಕೋರಿ ಪಾಲಿಕೆ ಆಯುಕ್ತರಿಗೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ ಮನವಿ.
ಶಿವಮೊಗ್ಗ, ಜೂನ್,05 : ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ವಾರ್ಡ್ ನಂಬರ್ 6 ದಿಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ನಗರ ಬಡಾವಣೆಯಲ್ಲಿ ಹಕ್ಕಿಪಿಕ್ಕಿ ಸಮುದಾಯ ಇತರೆ ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ 350 ಹೆಚ್ಚು ಕುಟುಂಬಗಳು ವಾಸವಾಗಿರುವುದು ಸರಿಯಷ್ಟೆ. ಆದರೆ ಇಲ್ಲಿ ವಾಸಿಸುವ ಕುಟುಂಬಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ವಿಷಾದಿಸಿದರು.
ಸುಮಾರು ಆರೇಳು ವರ್ಷಗಳ ಹಿಂದೆಯಿಂದಲೂ ಅಲ್ಲಿ ವಾಸವಾಗಿರುವ ಕುಟುಂಬದವರು ಸಂಬಂಧ ಪಟ್ಟ ಮಹಾನಗರಪಾಲಿಕೆ, ಜಿಲ್ಲಾಡಳಿತ, ಹಾಗೂ ಯಾವುದೇ ಆಡಳಿತ ಪಕ್ಷದ ಪ್ರತಿನಿಧಿಗಳಿಗೆ ಮನವಿಯನ್ನು ಮಾಡಿಕೊಂಡರೂ, ಯಾರು ಸ್ಥಳಕ್ಕೆ ಭೇಟಿ ನೀಡದೆ, ಬರಿ ಕಾನೂನಿನ ನೆಪವೊಡ್ಡಿ ಸಮಸ್ಯೆ ಗಳನ್ನು ಮುಂದೂಡಲಾಗುತ್ತಿದೆ.
ಒಂದು ಹಂತದಲ್ಲಿ ಜಿಲ್ಲಾಡಳಿತ ಮುಂದೆ ಮೂಲ ಸೌಲಭ್ಯ ಬಗ್ಗೆ ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿ ಗಳು ಪಾಲಿಕೆ ವತಿಯಿಂದ ಪ್ರತಿದಿನ ಮೂರು ಟ್ಯಾಂಕರ್ ನೀರು ಸರಬರಾಜು ಮಾಡಲು ಆದೇಶ ಹೊರಡಿಸಿದ್ದರು. ಈ ಬಡಾವಣೆಯಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಮೂರು ಟ್ಯಾಂಕರ್ ನೀರು ಕುಡಿಯುವುದಕ್ಕೆ ಸಾಕಾಗುತ್ತಿಲ್ಲ. ಇನ್ನೂ ಸ್ನಾನ, ಬಟ್ಟೆ, ಪಾತ್ರೆ, ಶೌಚಾಲಯಕ್ಕೆ ಬಳಸಲು ನೀರಿನ ತೊಂದರೆಯಾಗುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಸಾಮಾಜಿಕ ಕಾಳಜಿಯುಳ್ಳ ದಾನಿಗಳನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವು ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಅನೇಕ ಬಾರಿ ಮನವಿ ಮಾಡಲಾಗಿತ್ತು.
ಮನವಿಯನ್ನು ಆಲಿಸಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ. ಶ್ರೀಕಾಂತ್ ಅವರು ಡಾ. ಅಂಬೇಡ್ಕರ್ ನಗರದಲ್ಲಿ ನೀರಿನ ಪೂರೈಕೆಗಾಗಿ ಒಂದು ಕೊಳವೆ ಬಾವಿಯನ್ನು ಉಚಿತವಾಗಿ ಕೊರೆಸಿ ಕೊಟ್ಟಿರುತ್ತಾರೆ. ಇದರಲ್ಲಿ 3 ಇಂಚಿಗೂ ಅಧಿಕ ನೀರು ಬರುತ್ತಿದೆ. ಆದ್ದರಿಂದ ಮಹಾನಗರ ಪಾಲಿಕೆಯು ಈ ಕೊಳವೆಬಾವಿಗೆ ಮೋಟರ್ ಅಳವಡಿಸಿ ಬೀದಿಯಲ್ಲಿ ಪೈಪ್ ಲೈನ್ ಮಾಡಿ ಕೊಡುವಂತೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪನವರು ಮಾನ್ಯ ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ. ದಾನಿಗಳಾದ ಎಂ.ಶ್ರೀಕಾಂತ್ ಅವರನ್ನು ಅಂಬೇಡ್ಕರ್ ನಗರ ನಿವಾಸಿಗಳ ಪರವಾಗಿ ಮತ್ತು ದಸಂಸ ಅಂಬೇಡ್ಕರ್ ವಾದ ದ ವತಿಯಿಂದ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.
ಮನವಿಯನ್ನು ಸಲ್ಲಿಸುವ ಸಂದರ್ಭದಲ್ಲಿ ದಸಂಸ ಪ್ರಮುಖರಾದ ಸ್ಪಂದನ ಚಂದ್ರು, ಎ.ಡಿ.ಆನಂದ್, ಎಂ.ಆರ್. ಶಿವಕುಮಾರ್ ಆಸ್ತಿ, ಜಗ್ಗು, ರಂಗಸ್ವಾಮಿ, ಇನ್ನಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.