ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- ರಸ್ತೆಗಳಲ್ಲಿ ಸಣ್ಣ ಪುಟ್ಟ ಅಪಘಾತಗಳು ಆಗದಂತೆ ಮುಂಜಾಗೃತಾ ಕ್ರಮ ವಹಿಸಿ ಅವಶ್ಯಕತೆ ಇರುವ ಕಡೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಅಪಘಾತಗಳನ್ನು ತಪ್ಪಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ// ಆರ್. ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಬ್ಲಾಕ್ ಸ್ಪಾಟ್ ಸ್ಥಳಗಳಲ್ಲಿ ರಸ್ತೆ ಸುರಕ್ಷತೆಗಳನ್ನು ಅಳವಡಿಸುವುದರಿಂದ ಅಪಘಾತಗಳನ್ನು ತಡೆಯುವುದಾಗಿದೆ . ಅಪಘಾತಗಳು ಆಗದೇ ಇರುವ ಸ್ಥಳಗಳಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿದ್ದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು . ಮಡೆರಹಳ್ಳಿಯ ಬಳಿಯ ರಾಷ್ಟ್ರೀಯ ಹೆದ್ದಾರಿಯು ಅಪಘಾತ ಪ್ರದೇಶವಾಗಿದ್ದು ಅಗತ್ಯ ಸುರಕ್ಷಿತ ಕ್ರಮಗಳನ್ನು ಅಳವಡಿಸಿ , ಅರಬಿಕೊತ್ತನೂರು ಅಂಡರ್ ಪಾಸ್ ನಲ್ಲಿ ನೀರು ನಿಂತುಕೊಳ್ಳುತ್ತಿದ್ದು ಸರಿಪಡಿಸಿ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೊಂಡರಾಜನಹಳ್ಳಿ ಬಳಿಯ ಎಪಿಎಂಸಿ ಸೇತುವೆಯ ಬಳಿ ಅಪಘಾತಗಳಾಗುತ್ತಿವೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಮೇಲುಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ . ಎಲ್ಲಾ ಕಡೆ ರಸ್ತೆ ಕಾಮಗಾರಿಗಳನ್ನು ಶ್ರೀಘ್ರವಾಗಿ ಪೂರ್ಣಗೊಳಿಸಿ , ಅವಶ್ಯಕತೆ ಇರುವ ಕಡೆ ವೈಜ್ಞಾನಿಕವಾಗಿ ಬ್ರಿಡ್ಜ್ , ಸ್ಪೀಡ್ ಹಂಪ್ಸ್ , ಬ್ಯಾರಿಕೇಡ್ಗಳನ್ನು ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ , ಅವಶ್ಯಕತೆ ಇಲ್ಲದ ಕಡೆ ತೆರವುಗೊಳಿಸಿ ಎಂದು ಲ್ಯಾಂಕೋ ಅಧಿಕಾರಿಗೆ ಸೂಚಿಸಿದರು .
ಜಿಲ್ಲಾ ಎಸ್.ಎನ್.ಆರ್ . ಆಸ್ಪತ್ರೆಯಲ್ಲಿ ಅಪಘಾತ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ . ಜಗದೀಶ್ ರವರಿಗೆ ಸೂಚಿಸಿದರು . ಗೂಡ್ಸ್ ವಾಹನಗಳ ಪ್ರಯಾಣಿಕರನ್ನು ಸಾಗಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೊಂಡರಾಜನಹಳ್ಳಿ ಬಳಿ ರಸ್ತೆ ಒತ್ತುವರಿ ನಡೆದಿದೆ , ಅದನ್ನು ತೆರವುಗೊಳಿಸಲು ತ್ರಿಚಕ್ರವಾಹನ ಚಾಲಕರ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಯಾವ ಪ್ರದೇಶದಲ್ಲಿ ರಸ್ತೆ ಒತ್ತುವರಿ ನಡೆದಿದೆ ಅದನ್ನು ಪರಿಶೀಲನೆ ನಡೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಮ್ . ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಸುರೇಶ್ ಬಾಬು , ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವೇಣು ಕೇಶವಪ್ಪ , ಕೆಜಿಎಫ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.