ಕೋಲಾರ (ವಿಶ್ವಕನ್ನಡಿಗ ನ್ಯೂಸ್) : ಕೋವಿಡ್ ಮಹಾಮಾರಿಯ ಆತಂಕ ದೂರವಾಗುತ್ತಿದ್ದು , ಶಾಲೆಗಳು ಆರಂಭಗೊಂಡಿವೆ , ಇದೀಗ ಮಕ್ಕಳನ್ನು ಕಲಿಕೆಯ ಹಾದಿಗೆ ತರುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು . ಜಿಲ್ಲೆಯ ತೊರಲಕ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡುತ್ತಿದ್ದರು. ಕೋವಿಡ್ನಿಂದಾಗಿ ೧೮ ತಿಂಗಳಿಂದ ಕಲಿಕೆಯಲ್ಲಿ ಭಾರಿ ಹಿನ್ನಡೆಯಾಗಿದೆ , ಅನೇಕ ಮಕ್ಕಳು ಅಕ್ಷರ ಮರೆತಿರುವ ಸಾಧ್ಯತೆಯೂ ಇದ್ದು , ಅವರನ್ನು ಕಲಿಕೆಗೆ ಗಮನಹರಿಸುವಂತೆ ಮಾಡುವಲ್ಲಿ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದರು .
ಸರ್ಕಾರಿ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲು ಅನುಮತಿ ನೀಡಿದೆ , ಬಿಸಿಯೂಟವೂ ಆರಂಭವಾಗಿದೆ , ಆದರು ಕೋವಿಡ್ ಆತಂಕ ಪೂರ್ಣಪ್ರಮಾಣದಲ್ಲಿ ದೂರವಾಗಿಲ್ಲ ಎಂದ ಅವರು , ಶಾಲೆಗಳಲ್ಲಿ ಸ್ವಚ್ಚತೆಗೆ ಒತ್ತು ನೀಡಿ , ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದು ಕಿವಿಮಾತು ಹೇಳಿದರು . ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಳೆದ ಬಾರಿಯಂತೆ ಬಹುಆಯ್ಕೆ ಪ್ರಶ್ನೆ ಪತ್ರಿಕೆ ಬರುವುದೆಂದು ಕಾಯಬೇಡಿ , ಖಂಡಿತ ಈ ಬಾರಿ ೨೦೧೯ ರಂತೆಯೇ ಪ್ರಶ್ನೆಪತ್ರಿಕೆ ಬರಲಿದೆ , ನೀವು ಕಷ್ಟಪಟ್ಟು ಓದಬೇಕು ಎಂದರು.
ಶೇ .೧೦೦ ಅಂಕ ಗಳಿಕೆ ನಿಮ್ಮ ಗುರಿಯಾಗಿರಬೇಕು ಎಂದ ಅವರು , ಶಿಕ್ಷಕರ ಬೋಧನೆಯ ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ ಆಗ ಮಾತ್ರ ಸಾಧನೆ ಸಾಧ್ಯ ಎಂದರು . ಜಿಲ್ಲೆಯಲ್ಲಿ ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡಲಾಗಿದೆ , ಆದ್ದರಿಂದಲೇ ಶೇ .೬೦ ಕ್ಕಿಂತ ಹೆಚ್ಚು ಅಂಕ ಶೇ .೮೫ ವಿದ್ಯಾರ್ಥಿಗಳಿಗೆ ಬಂದಿದೆ , ಗುಣಮಟ್ಟ ಮತ್ತಷ್ಟು ಹೆಚ್ಚಬೇಕು ಎಂದರು .
ಶಿಕ್ಷಣ ಇಲಾಖೆ ಈಗಾಗಲೇ ನಿಮಗೆ ಅಧ್ಯಾಯವಾರು ಪ್ರಶೋತ್ತರ ಸಿದ್ಧಪಡಿಸಿ ನೀಡಿದೆ . ಇದನ್ನು ಮಕ್ಕಳು ಅಭ್ಯಾಸ ಮಾಡಬೇಕು , ರೂಪಣಾತ್ಮಕ ಚಟುವಟಿಕೆಗಳನ್ನು ಏಕರೂಪದಲ್ಲಿ ಎಲ್ಲಾ ಶಾಲೆಗಳಲ್ಲಿ ಮಾಡುವಂತಾಗಲು ಅಗತ್ಯ ಚಟುವಟಿಕೆ ವಿವರವನ್ನು ಒದಗಿಸಲಾಗಿದೆ ಎಂದು • ತಿಳಿಸಿದರು . ಕೋಡ್ನಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿದೆ , ಇದನ್ನು ಉಳಿಸಿಕೊಂಡು ಹೋಗಬೇಕು , ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಶಾಲೆಗಳಲ್ಲಿ ನಿರ್ಮಿಸುವ ಹೊಣೆ ಶಿಕ್ಷಕರದ್ದು ಎಂದರು . ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಲಕ್ಷ್ಮೀಬಾಯಿ , ಬಾಯಿ , ಶಿಕ್ಷಕರಾದ ವೇಣುಗೋಪಾಲ್ , ರವಿಶಂಕರ್ , ಚಂದ್ರಮೌಳಿ , ಅಮರಾವತಿ ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.