(www.vknews.in) : ಹಿಜಾಬ್ ವಿಷಯ ರಾಜ್ಯದಲ್ಲಿ ತಾರಕಕ್ಕೇರುತ್ತಿದೆ, ಹಿಜಾಬ್ ಎಂಬುವುದು ಆಚರಣೆಯಲ್ಲ, ಬಲವಂತವಲ್ಲ, ಮುಸ್ಲಿಂ ಹೆಣ್ಣುಮಕ್ಕಳ ವಸ್ತ್ರ ಧಾರಣೆಯ ವಿಧಾನ, ಸಂಸ್ಕೃತಿ, ಆ ವಸ್ತ್ರಧಾರಣೆಗೆ ಸಾಂವಿಧಾನಿಕವಾದ ಬೆಂಬಲವಿದೆ, ಅದನ್ನು ಚರ್ಚೆಗೆ ಒಳಪಡಿಸಬೇಕಾದಂತಹ ಅಗತ್ಯವೇ ಇರಲಿಲ್ಲ, ಮತ್ತು ಆ ವಿವಾದವನ್ನು ಆ ಕಾಲೇಜಿನಲ್ಲೇ ಮುಗಿಸಬಹುದಿತ್ತು, ಆದರೆ ಕೆಲವೊಬ್ಬರ ಸ್ವ ಹಿತಾಸಕ್ತಿಗಾಗಿ ಅದು ತಾರ್ಕೀಕ ಅಂತ್ಯ ಕಾಣದೆ ರಾಜ್ಯದೆಲ್ಲೆಡೆಗೆ ಪಸರಿಸಿತು, ಚರ್ಚೆ ಹೈಕೋರ್ಟಿಗೂ ತಲುಪಿದೆ, ಏನೇ ಆಗಲಿ ಆ ವಿಧ್ಯಾರ್ಥಿನಿಗಳಿಗೆ ವಿಜಯ, ನ್ಯಾಯ ಸಿಗಲಿ..
ನಾನು ಬರೆಯಲು ಹೊರಟಿರುವ ವಿಷಯ, ಈ ಹಿಜಾಬ್ ವಿವಾದದ ಭಾಗವಾಗಿ ಮಹಿಳೆಯರ ಪ್ರತಿಭಟನೆ ಪ್ರಚಾರಕ್ಕಾಗಿ ಬೀವಿ ಆಯಿಷಾ ರಳಿಯಲ್ಲಾಹು ಅನ್ಹರವರನ್ನು ಎಳೆದು ತರಲಾಯಿತು, ಮತ್ತು ನಿನ್ನೆಯಲ್ಲ ಮೊನ್ನೆ ಮಂಗಳವಾರ ಕೈಯಲ್ಲಿ ತಲ್ವಾರ್ ಹಿಡಿದಿರುವ ಬುರ್ಖಾ ಧಾರಿಣಿಯ ಫೋಟೋ ಹಾಕಿ ಪೆನ್ ಪೆನ್ಸಿಲ್ ಹಿಡಿಯಲು ಗೊತ್ತಿರುವ ಕೈಗಳಿಗೆ ಅಗತ್ಯ ಬಂದರೆ ತಲ್ವಾರ್ ಹಿಡಿಯಲೂ ಗೊತ್ತು, ನಮ್ದು ಉಮರ್ ರಳಿಯಲ್ಲಾಹು ವಂಶ ಎಂದು ಒಬ್ಬ ಅವಿವೇಕಿ ಬರೆದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು, ಇಲ್ಲಿಯೂ ಅನಗತ್ಯವಾಗಿ ಇಸ್ಲಾಮ್ ರಿಪಬ್ಲಿಕ್ ನ ಎರಡನೇ ಖಲೀಫ ಉಮರ್ ರಳಿಯಲ್ಲಾಹು ಅನ್ಹುರನ್ನು ಎಳೆದು ತರಲಾಗಿದೆ.. ಇದನ್ನು ನೋಡಿ ಮನಸ್ಸಿಗೆ ಬಹಳ ಬೇಸರವಾಯ್ತು.. ಅತಿರೇಕ, ಆವೇಶದಿಂದ ಉಂಟು ಮಾಡಿದ ಈ ಪೋಸ್ಟರ್ ನಿಂದ ಆ ಅವಿವೇಕಿ ಸಮಾಜಕ್ಕೆ ನೀಡಿದ ಸಂದೇಶವಾದರೂ ಏನು?.. ಈ ಪೋಸ್ಟರ್ ನೋಡಿದ ಅಮುಸ್ಲಿಂ ಸಹೋದರರು ಅಪಾರ್ಥ ಮಾಡಿದ ಎರಡು ವಿಷಯಗಳಿವೆ, ಒಂದು 1. ಮುಸ್ಲಿಮರು ವಿಧ್ಯೆ ಕಲಿಯುವ ಪೆನ್, ಪೆನ್ಸಿಲ್ ಹಿಡಿಯುವ ಬದಲು ತಲ್ವಾರ್ ಹಿಡಿಯುವವರು. 2. ಉಮರ್ ಖತ್ತಾಬ್ ರಳಿಯಲ್ಲಾಹು ಅನ್ಹು ಇಸ್ಲಾಂ ಪ್ರಚಾರ ಮಾಡಿದ್ದು ತಲ್ವಾರ್ ಬಲದಿಂದಾಗಿತ್ತು,
ಈ ಪೋಸ್ಟರ್ ನೋಡಿ ಇಸ್ಲಾಮನ್ನು ಅಪಾರ್ಥ ಮಾಡಿಕೊಂಡ ಅಮುಸ್ಲಿಂ ಸಹೋದರರೊಂದಿಗೂ, ಇಸ್ಲಾಂ ಖಡ್ಗದಿಂದ ಬೆಳೆದಿದೆ ಎಂದು ಭಾವಿಸುವ ಕೋಮುವಾದಿಗಳೊಂದಿಗೂ, ಈ ಪೋಸ್ಟರ್ ತಯಾರಿಸಿದ ಅವಿವೇಕಿಯೊಂದಿಗೂ ಹೇಳಲಿಕ್ಕಿರುವುದು, ನೀವು ಭಾವಿಸಿದಂತೆ ಈ ಎರಡೂ ಅಂಶಗಳು ಸತ್ಯಕ್ಕೆ ದೂರವಾದದ್ದು, ಅಂತವರು ಒಮ್ಮೆ ಬಿಡುವು ಮಾಡಿ ನನ್ನ ಈ ಬರಹವನ್ನು ಓದಿರಿ, ಬರಹ ಸ್ವಲ್ಪ ಉದ್ದವಾಗಿದೆ ಕ್ಷಮೆ ಇರಲಿ.. ಒಂದನೆಯದಾಗಿ ಮುಸ್ಲಿಮರಿಗೆ ವಿಧ್ಯೆ ಕಲಿಯಲು ಇಸ್ಲಾಂ ಪ್ರೆರೇಪಿಸುತ್ತದೆ, ಪವಿತ್ರ ಕುರ್’ಆನಿನ ಮೊದಲ ಅಧ್ಯಾಯದ ಪ್ರಥಮ ಸೂಕ್ತವೇ ಓದಿರಿ ನಿಮ್ಮ ಸೃಷ್ಟಿಕರ್ತನಾದ ಅಲ್ಲಾಹನ ನಾಮದಿಂದ, ಮನುಷ್ಯನನ್ನು ಅವನು ರಕ್ತ ಪಿಂಡದಿಂದ ಸೃಷ್ಟಿಸಿರುವನು, ಓದಿರಿ ನಿಮ್ಮ ಅಲ್ಲಾಹು ಅತ್ಯಂತ ಉದಾರಿಯಾಗಿರುವನು, ಲೇಖನಿಯ ಮೂಲಕ ಕಲಿಸಿ ಕೊಟ್ಟವನು ಎಂದಾಗಿರುತ್ತದೆ.. ಕುರ್’ಆನಿನ ಈ ಒಂದು ಸೂಕ್ತ ಸಾಕು ಇಸ್ಲಾಂ ಓದಿಗೆ, ಬರವಣಿಗೆಗೆ ವಿಧ್ಯಾಭ್ಯಾಸಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎಂದು ತಿಳಿಯಲು, ಮದ್ರಸಾದಲ್ಲಿ ಕಲಿಯುವ ಪುಟಾಣಿ ಮಕ್ಕಳಿಗೆ ಉಸ್ತಾದರು ಕಲಿಸಿ ಕೊಡುವುದು ಇದಾಗಿರುತ್ತದೆ, ಹೊರತು ಪೆನ್, ಪೆನ್ಸಿಲ್ ಹಿಡಿಯುವ ಕೈಗಳಿಗೆ ತಲ್ವಾರ್ ಹಿಡಿಯಿರಿ ಎಂದಲ್ಲ..
ಎರಡನೆಯದ್ದಾಗಿ ಉಮರುಬ್ನುಲ್ ಖತ್ತಾಬ್ ರಳಿಯಲ್ಲಾಹು ಅನ್ಹು ಖಡ್ಗ ಹಿಡಿದಿದ್ದರೆಂದು, ಹೌದು ದೀನಿನ ಶತ್ರುಗಳ ಉಪಳಟ ಜಾಸ್ತಿಯಾದಾಗ ಪ್ರತಿರೋಧ ಯುಧ್ಧಗಳಲ್ಲಿ ಖಡ್ಗ ಹಿಡಿದಿದ್ದರು, (ಧರ್ಮ ಯುಧ್ಧಗಳು ಎಲ್ಲಾ ಧರ್ಮಗಳಲ್ಲೂ ನಡೆದಿದೆ, ಆ ಸಂದರ್ಭಗಳಲ್ಲಿ ಎಲ್ಲಾ ಧರ್ಮದ ಧರ್ಮ ಯುದ್ಧದಲ್ಲಿ ಭಾಗವಹಿಸಿದ ನಾಯಕರು ಖಡ್ಗ ಹಿಡಿದಿದ್ದರು) ಆದರೆ, ಈಗ ನಾನು ಅವರ ವಂಶ ಎಂದು ಹೇಳಿ ಖಡ್ಗ ಹಿಡಿಯುವುದು ಅವರನ್ನು ಹಿಯಾಳಿಸಿದಂತೆ ಮತ್ತು ಅಪಾರ್ಥ ಮಾಡಿದಂತೆ…
ಇನ್ನು ಉಮರ್ ರಳಿಯಲ್ಲಾಹು ಅನ್ಹುರವರ ವಿಜಯದ ರಹಸ್ಯ ನೋಡೋಣ, ತಲ್ವಾರಿನಿಂದಲೋ, ಅಥವಾ ಬೇರೆ ಯಾವುದರಿಂದಲೋ ಎಂದು, ನಾನು ಮೊದಲು ಹೇಳಿದಾಗೆ ಅಗತ್ಯ ಸಂದರ್ಭಗಳಲ್ಲಿ ಖಡ್ಗ ಬಳಸಿದ್ದರು, ಆದರೆ ಅದಕ್ಕಿಂತಲೂ ಅಧಿಕವಾಗಿ ಅವರಲ್ಲಿದ್ದ ಆಯುಧ ಬಲ ಅಲ್ಲಾಹನಲ್ಲಿದ್ದ ಅಚಂಚಲವಾದ ಈಮಾನ್ ಎಂಬ ವಜ್ರಾಯುಧವಾಗಿತ್ತು, ಶತ್ರುಗಳನ್ನು ಪ್ರತಿರೋಧಿಸಲು ನಡೆದ ಧರ್ಮ ಯುದ್ಧಗಳ ಮುಂಚಿನ ದಿನ ರಾತ್ರಿ ನಾಯಕ ಉಮರ್ ರಳಿಯಲ್ಲಾಹು ಅನ್ಹುರವರು ನಾಳೆ ಯುದ್ಧ ಮಾಡಲು ಸಜ್ಜಾಗಿರುವ ತನ್ನ ಸೇನೆಯ ಟೆಂಟಿನ ಸುತ್ತಾ ಗಮನಿಸುತ್ತಾ ನಡೆಯುತ್ತಾರೆ, ಯಾಕೆ ಗೊತ್ತಾ ಯಾರೆಲ್ಲಾ ನಾಳೆಯ ಯುದ್ಧಕ್ಕಾಗಿ ಖಡ್ಗ ತಯಾರಿಸುತ್ತಿದ್ದಾರೆ,
ಯಾರೆಲ್ಲಾ ನಾಳೆಯ ತಯಾರಿಗಾಗಿ ಖಡ್ಗ ಝಳಪಿಸುತ್ತಾರೆ, ಯಾರೆಲ್ಲಾ ವ್ಯಾಯಾಮದಲ್ಲಿ ತೊಡಗಿದ್ದಾರೆ ಎಂದು ನೋಡಲಿಕ್ಕಾಗಿರಲಿಲ್ಲ, ಬದಲಾಗಿ ತಾನು ಸೇನೆಯ ಟೆಂಟನ್ನು ಗಮನಿಸುತ್ತಾ ನಡೆಯುವಾಗ, ಸೇನಾನಿಗಳಾದ ಸ್ವಹಾಬತ್ತಿನಲ್ಲಿ ಯಾರಾದರೂ ತಹಜ್ಜುದ್, ಸುನ್ನತ್ ನಮಾಝ್ ಮಾಡುತ್ತಾರೋ, ಅಥವಾ ಯಾರಾದರೂ ಕುರ್’ಆನ್ ಓದುತ್ತಾರೋ, ಅಥವಾ ಯಾರಾದರೂ ಝಿಕ್ರ್, ದುವಾದಲ್ಲಿ ಮುಳುಗಿರುವರೋ ಎಂದು ನೋಡಲಿಕ್ಕಾಗಿತ್ತು, ಆ ರೀತಿ ನೋಡುತ್ತಾ ಹೋಗುವಾಗ ಯಾರಾದರೂ ಸೇನಾನಿಗಳಾದ ಸ್ವಹಾಬಿಗಳಲ್ಲಿ ಕುರ್’ಆನ್ ಓದುವವರನ್ನು, ಝಿಕ್ರ್ ಹೇಳುವವರನ್ನು, ಸುನ್ನತ್ ನಮಾಝ್, ತಹಜ್ಜುದ್ ನಮಾಝ್ ಮಾಡುವವರನ್ನು ಕಂಡರೆ ಉಮರ್ ರಳಿಯಲ್ಲಾಹು ಅನ್ಹು ಅವರನ್ನು ನೋಡಿ ಹೇಳುವ ಮಾತೊಂದಿದೆ ಅದು ಇದಾಗಿದೆ ನಮ್ಮ ವಿಜಯದ ರಹಸ್ಯ, ಇಲ್ಲಿಂದಾಗಿದೆ ನಮ್ಮ ವಿಜಯ, ಇವರಿಂದಾಗಿದೆ ನಮಗೆ ಯುದ್ಧದಲ್ಲಿ ವಿಜಯ ಇದರ ಅರ್ಥ ಉಮರ್ ರಳಿಯಲ್ಲಾಹು ಅನ್ಹುರ ವಿಜಯದ ರಹಸ್ಯ ತಲ್ವಾರಿಗಿಂತಲೂ ಈಮಾನ್ (ಅಲ್ಲಾಹನಲ್ಲಿರುವ ಅಚಂಚಲವಾದ) ಎಂಬ ವಜ್ರಾಯುಧದಿಂದಾಗಿತ್ತು ಎಂದಾಗಿದೆ….
ಇನ್ನು ಆ ಪೋಸ್ಟರ್ ತಯಾರಿಸಿದ ಆ ಅವಿವೇಕಿ ಸಹೋದರನೊಂದಿಗೆ ಹೇಳಲಿಕ್ಕಿರುವುದು, ಮುಸ್ಲಿಮರಿಗೆ ಯಾವುದೇ ಸಮಸ್ಯೆಗಳು ಬಂದರೂ ಸಹೋದರ ಅತಿರೇಕ, ಆವೇಶದಿಂದ ವರ್ತಿಸದೆ ಹಿಕ್ಮತ್ತಿನಿಂದ ಆ ಸಮಸ್ಯೆಯನ್ನು ಪರಿಹರಿಸಬೇಕು, ತಲ್ವಾರ್ ಹಿಡಿದ ಉಮರ್ ರಳಿಯಲ್ಲಾಹು ಅನ್ಹುರ ವಂಶ ಎಂದು ಪೋಸ್ಟರ್ ರೆಡಿ ಮಾಡಿ ಅಮುಸ್ಲಿಂ, ಮುಸ್ಲಿಮರಲ್ಲಿ ಅವರ ಬಗ್ಗೆ ತಪ್ಪು ಭಾವನೆ ಉಂಟು ಮಾಡಿದ ನಿನಗೆ ತಲ್ವಾರ್ ಗಿಂತ ಬಲವಾದ ಈಮಾನ್ ಎಂಬ ಅಚಂಚಲವಾದ ವಜ್ರಾಯುಧದಿಂದ ಜಯಿಸಿದ ಉಮರ್ ರಳಿಯಲ್ಲಾಹು ಅನ್ಹು, ಎಂತಹ ದೃತಿಗೆಡುವ ಸಮಸ್ಯೆ ಬಂದರೂ ಈಮಾನ್ ಗಟ್ಟಿಯಾಗಿ ಹಿಡಿದು ಸಮಸ್ಯೆಯನ್ನು ಪರಿಹರಿಸಿದ ಧೈರ್ಯವಂತ ಉಮರ್ ರಳಿಯಲ್ಲಾಹು ಅನ್ಹುರ ವಂಶ ನಮ್ದು ಎಂದು ಪೋಸ್ಟರ್ ಮಾಡಲು ಯಾಕೆ ಸಾಧ್ಯವಾಗಿಲ್ಲ?..
ಅ ತಲ್ವಾರಿನ ಪೋಸ್ಟರ್ ಬದಲಾಗಿ ಆ ಮಹತ್ಮರ ಮೇಲೆ ಒಂದು ಫಾತಿಹಾ ಓದಿ ನಿಮ್ಮ ಹೋರಾಟ ಆರಂಭಿಸಿ ಎಂದು ಪೋಸ್ಟರ್ ಮಾಡಿ ರವಾನಿಸಿದ್ದರೆ, ಆ ಹೋರಾಟದಲ್ಲಿ ಬರ್ಕತ್ ಉಂಟಾಗಲೂ, ನಿನಗೆ ಪ್ರತಿಫಲ ಲಭಿಸಲೂ ಕಾರಣವಾಗುತಿತ್ತು, ಆದರೆ, ಅದನ್ನು ನೀನು ಮಾಡಲಿಲ್ಲ, ಯಾಕೆ ನಿನ್ನ ಆವೇಶ ಬರೀ ತಲ್ವಾರಿಗೆ ಮಾತ್ರ ಸೀಮಿತವಾಯಿತೇ? ಇಲ್ಲಿಯಾಗಿದೆ ಸಹೋದರರೇ, ಮುಸ್ಲಿಂ ಸಮುದಾಯ ಎಡವುತ್ತಿರುವುದು. ಅಲ್ಲಾಹನೊಂದಿಗಿರುವ ಅಚಂಚಲವಾದ ವಿಶ್ವಾಸವನ್ನು ಗಟ್ಟಿಯಾಗಿ ಹೃದದಲ್ಲಿರಿಸಿದರೆ ಯಾರೂ ನಮ್ಮನ್ನು ಮುಟ್ಟಲೂ ಸಾಧ್ಯವಾಗುವುದಿಲ್ಲ, ಆದರೆ, ಈಗ ನಮ್ಮಲ್ಲಿ ಜನಬಲಕ್ಕೆ ಏನೂ ಕಮ್ಮಿ ಇಲ್ಲ, ಆಯುಧ ಬಲಕ್ಕೂ ಕಮ್ಮಿ ಇಲ್ಲ, ಕಮ್ಮಿ ಇರುವುದು ಈಮಾನ್ (ಅಲ್ಲಾಹನಲ್ಲಿರುವ ಅಚಂಚಲವಾದ ವಿಶ್ವಾಸ) ಎಂಬ ಆಯುಧ ಬಲಕ್ಕೆ ಮಾತ್ರ, ಆ ಕಾರಣಕ್ಕಾಗಿ ಈ ಸಮುದಾಯ ತಲೆತಗ್ಗಿಸುತ್ತಿದೆ.
ಅಲ್ಪರ ಮಾತು ಕೇಳಿ, ಯಾರದ್ದೋ ಹಿತಾಸಕ್ತಿಗಾಗಿ ನಮ್ಮ ಈಮಾನನ್ನು ಅಡವಿಟ್ಟು ಅತಿರೇಕ, ಆವೇಶಕ್ಕೆ ಬಲಿಯಾದರೆ, ನಮ್ಮನ್ನು ಎಲ್ಲರೂ ಸೇರಿ ಹದ್ದು ಕುಕ್ಕಿ ತಿನ್ನುವಂತೆ ತಿಂದುಬಿಡುತ್ತಾರೆ, ಆದ್ದರಿಂದ, ಯಾರದ್ದೋ ಮಾತಿಗೆ ಒಳಗಾಗಿ ಆವೇಶ, ಅತಿರೇಕಕ್ಕೆ ಬಲಿಯಾಗದೆ ಕುರ್’ಆನ್ ಹೇಳಿದಂತೆ ಮಧ್ಯಮ ಸಮೂಹವಾಗಿ, ಕುರ್’ಆನ್ ಹೇಳಿದಂತೆ “ನೀವು ಉತ್ತಮ ಸಮುದಾಯ” ಎಂಬ ವಿಶ್ಲೇಷಣೆಯಂತೆ ನಾವು ಉತ್ತಮ ಸಮುದಾಯವಾಗಿ ಜೀವಿಸೋಣ, ಈಗೆ ಜೀವಿಸಿದರೆ ಕರ್’ಆನ್ ಹೇಳಿದಂತೆ ಅಂತಿಮ ವಿಜಯ ಹೊಂದುವ ಮುತ್ತಕೀನ್ (ಅಲ್ಲಾಹನಲ್ಲಿ ಭಯ, ಶೃದ್ಧೆ ಯುಳ್ಳ) ಗಳಂತೆ ನಾವೂ ವಿಜಯಿಗಳಾಗಬಹುದು, ಅಲ್ಲಾಹನು ತೌಫೀಖ್ ನೀಡಲಿ ಆಮೀನ್, ಯಾವುದೇ ಸಮಸ್ಯೆ ಬಂದರೂ ಹಿಕ್ಮತ್ತಿನಿಂದ ನಮ್ಮ ಉಲಮಾ, ಉಮರಾ ನಾಯಕತ್ವದೊಂದಿಗೆ ಕೈ ಜೋಡಿಸಿ ಪರಿಹರಿಸೋಣ, ಸಮಸ್ಯೆ ಎದುರಿಸುವ ಸಂದರ್ಭಗಳಲ್ಲಿ ನಮ್ಮ ಮಾತು, ಬರಹಗಳೆಲ್ಲವೂ ಸೂಕ್ಷ್ಮವಾಗಿರಲಿ, ನಮ್ಮ ಮಾತು, ಬರಹದಿಂದ ಹೊರಗಿನವರು ನಮ್ಮನ್ನೂ, ಇಸ್ಲಾಮನ್ನು ಅಪಾರ್ಥ ಮಾಡದಂತಹ ರೀತಿಯಲ್ಲಾಗಿರಲಿ.. ಚಿಂತಿಸುವವರಿಗೆ ಈ ಬರಹದಲ್ಲಿ ದೃಷ್ಟಾಂತವಿದೆ…
– ಕೆ.ಎಂ ಇರ್ಶಾದ್ ಪಕ್ಷಿಕೆರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.