(www.vknews.in) : ಜಬಾಬ್ದಾರಿಯಲ್ಲಿ ಎರಡು ವಿಧ. ಒಂದು ವೈಯಕ್ತಿಕ. ಮೊತ್ತೊಂದು ಸಾಮೂಹಿಕ. ತನ್ನ ಸ್ವಂತ ಹಿತದೃಷ್ಟಿ ಬಯಸುವುದು ವೈಯಕ್ತಿಕ ಜವಾಬ್ದಾರಿಯಾದರೆ, ಇತರರ ಹಿತದೃಷ್ಟಿ ಬಯಸುವುದು ಸಾಮೂಹಿಕ ಜವಾಬ್ದಾರಿಯಾಗುತ್ತದೆ. ಕೆಲವು ವಿಷಯಗಳಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಗಳು ಒಂದಕ್ಕೊಂದು ನೇರವಾಗಿ ಸಂಬಂಧ ಹೊಂದಿವೆ. ಮಾನವನನ್ನು ಎಲ್ಲಾ ಪ್ರಾಣಿಗಳ ಕಿರೀಟ ಎನ್ನುತ್ತಾರೆ. ಮನುಷ್ಯ ಸಂಘ ಜೀವಿಯೂ ಹೌದು. ಪ್ರಾಣಿಗಳ ಕಿರೀಟ ಎಂಬ ಅಷ್ಟು ದೊಡ್ಡ ಬಿರುದು ಪಡೆದ ಮೇಲೆ ಅಷ್ಟೇ ದೊಡ್ಡ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಅದು ವೈಯಕ್ತಿಕ ಅಥವಾ ಸಾಮೂಹಿಕ ಜವಾಬ್ದಾರಿಯಾಗಿರಬಹುದು. ಮಾನವ ತನ್ನ ಜವಾಬ್ದಾರಿಯಿಂದ ಯಾವಾಗ ಬೇಜವಾಬ್ದಾರನಾಗುತ್ತಾನೋ, ಆ ಬೇಜವಾಬ್ದಾರಿಯ ಪ್ರಮಾಣ ಎಷ್ಟು ದೊಡ್ಡದಾಗಿರುತ್ತದೋ ಅಷ್ಟೇ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ.
ಬದಲಾವಣೆ ಪ್ರಕೃತಿಯ ನಿಯಮ. ಪ್ರತಿ ಘಳಿಗೆ ಪ್ರಪಂಚದಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ನೂರು ವರ್ಷಗಳ ಹಿಂದಿದ್ದ ಪ್ರಪಂಚ, ಏನೂ ಬದಲಾಗದೆ ಹಾಗೆ ಉಳಿದಿಲ್ಲ. ಮುಂದಿನ ಮೂರು ವರ್ಷಗಳಲ್ಲಿ ಏನೇನು ಬದಲಾವಣೆಗಳು ಆಗಬಹುದು ಎಂಬುದನ್ನು ಊಹಿಸಬಹುದು.
ಎಲ್ಲರಿಗೂ ಒಂದೇ ಜಲ, ಒಂದೇ ನೆಲ, ಒಂದೇ ಆಕಾಶ. ಪ್ರಕೃತಿಯು ತನ್ನ ಜವಾಬ್ದಾರಿಯನ್ನು ನಿಷ್ಕಲ್ಮಷವಾಗಿ, ಬೇಷರತ್ತಾಗಿ ನಿಭಾಯಿಸುತ್ತಿದೆ. ಆದರೆ ಪ್ರಾಣಿಗಳ ಕಿರೀಟವಾಗಿರುವ ಮನುಷ್ಯ ತನ್ನ ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಮರೆತು ಜಲ ಮಾಲಿನ್ಯ ಮಾಡುತ್ತಾನೆ, ನೆಲ ಮಾಲಿನ್ಯ ಮಾಡುತ್ತಾನೆ. ಆಕಾಶವನ್ನು ಸಹ ಬಿಟ್ಟಿಲ್ಲ. ಕೆರೆಗಳು, ನದಿಗಳು,ಸಮುದ್ರಗಳು ಮಾನವನ ಕಿರುಕುಳಕ್ಕೆ ಗುರಿಯಾಗಿವೆ. ಸುತ್ತಮುತ್ತಲ ಕಾಡುಮೇಡು, ಪ್ರಾಣಿಪಕ್ಷಿಗಳು ದಿಕ್ಕು ತೋಚದೆ ಕಂಗಾಲಾಗುತ್ತಿವೆ. ಆಕಾಶದ ಶ್ವಾಸಕೋಶಗಳು ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿರಬಹುದೇನೋ. ನೆಲಕ್ಕಾಗಿ, ಜಲಕ್ಕಾಗಿ ನಡೆದ ಯುದ್ಧಗಳೆಷ್ಟೋ…! ನಡೆಯಬೇಕಾದ ಯುದ್ಧಗಳೆಷ್ಟೋ. ಮಾನವನ ದುರಾಸೆಗೆ, ಬೇಜವಾಬ್ದಾರಿತನಕ್ಕೆ ಬಲಿಯಾಗುತ್ತಿರುಗ ಪ್ರಾಕೃತಿಕ ಸಂಪನ್ಮೂಲಗಳೆಷ್ಟೋ. ಯಾಂತ್ರಿಕ ತಾಂತ್ರಿಕ ಬೆಳವಣಿಗೆಗಳ ಪ್ರವಾಹದಲ್ಲಿ, ಮಾನವನ ಬೇಜವಾಬ್ದಾರಿತನ ಮುಳುಗಿಸುತ್ತಿರುವ ಯುವ ಪೀಳಿಗೆಗಳೆಷ್ಟೋ…!
ಮಾನವನ ಬೇಜವಾಬ್ದಾರಿತನದ ಹಠದಲ್ಲಿ ಇನ್ನೂ ಅನೇಕ ಯುದ್ಧಗಳು ನಡೆಯಲಿವೆ. ಕೋಮು ಗಲಭೆಗಳಲ್ಲಿ ಲಕ್ಷಾಂತರ ಚಂಡರುಂಡಮುಂಡಗಳು ಬೀಳಲಿವೆ. ಅನ್ನದ ಕಾಳುಕಾಳಿಗೆ ಹರಸಾಹಸ ಪಡಬೇಕಾಗಿದೆ. ಅಷ್ಟದಿಕ್ಕುಗಳಲ್ಲಿ ಅಶಾಂತಿಯ ಹಾಹಾಕಾರ ಮೊಳಗಬೇಕಾಗಿದೆ. ಇನ್ನೇನಾಗಬಹುದು…! ಪ್ರತಿ ಹೆಜ್ಜೆ ಹೆಜ್ಜೆಗೂ ಮಾನವ, ಗುಲಾಮನಿಂದ ಮಹಾರಾಜನವರೆಗೂ, ಪರರಿಗೆ ಮೋಸ ಮಾಡುವ ಗುಂಗಿನಲ್ಲಿದ್ದಾನೆ. ಸಂಸಾರದಲ್ಲಿ ಮೋಸ, ಶಾಲಾಕಾಲೇಜುಗಳಲ್ಲಿ ಮೋಸ, ಆಸ್ಪತ್ರೆಗಳಲ್ಲಿ ಮೋಸ, ಆಶ್ರಮಗಲ್ಲಿ ಮೋಸ, ಕಚೇರಿಗಲ್ಲಿ ಮೋಸ, ವ್ಯಾಪಾರಗಳಲ್ಲಿ ಮೋಸ, ರಾಜಕೀಯದಲ್ಲಿ ಮೋಸ, ಧರ್ಮಗುರುಗಳಲ್ಲಿ ಮೋಸ. ಸುತ್ತಮುತ್ತ ಪರಿಸರದಲ್ಲಿ ಕಾಮ ಕ್ರೋಧ ಲೋಭ ಮದ ಮೋಹ ಮಾತ್ಸರ್ಯ ಎದ್ದು ತಾಂಡವಾಡುತ್ತಿವೆ.
ಮಾನವ ಟೀಕೆಗಳನ್ನು ಮಾಡುವುದರಲ್ಲಿ ನಿಸ್ಸೀಮ. ಇನ್ನು ಏನು ತಾನೇ ಮಾಡಿಯಾನು. ಮಾಡಿದ್ದನು ಉಣ್ಣೋ ಮಾರಾಯ. ನಮ್ಮ ಮಾನಸಿಕ ಪರಿಸರವೇ ಹಾಳಾದ ಮೇಲೆ ಪ್ರಾಪಂಚಿಕ ಪರಿಸರ ಉಳಿಸಲು ಸಾಧ್ಯವೇ ?
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.