ಮದ್ರಸಗಳಲ್ಲಿ ಕನ್ನಡವನ್ನು ಕಲಿಸಿ ; ಮಸೀದಿಗಳಲ್ಲಿ ಶುಕ್ರವಾರದ ಪ್ರವಚನ ಕನ್ನಡ ಭಾಷೆಯಲ್ಲಿ ಮಾಡಿ..
(www.vknews.in) : ಸರ್ಕಾರಿ ಶಾಲೆ. 4ನೇಯ ತರಗತಿ. ಉಮಾ ಮೇಡಂ ಶಾಲೆಯ ಮೆಟ್ಟಿಲ ಮೇಲೆ ನಿಂತಿದ್ದರು. ಕಂದು ಗೋದಿ ಬಣ್ಣದ, ಉದ್ದನೆಯ ಮೂಗಿನ ಹುಡುಗನನ್ನು ಕರೆದು – ನೀನು ಮುಸ್ಲಿಂ ಆಗಿ ಕನ್ನಡ ಮಾಧ್ಯಮ ಶಾಲೆಗೆ ಏಕೆ ಸೇರಿಕೊಂಡೆ? ಹುಡುಗನಿಗೆ ಏನು ಉತ್ತರ ನೀಡಬೇಕೆಂದು ಅರ್ಥವಾಗಲಿಲ್ಲ, ನಮ್ಮ ತಂದೆಯವರು ಸೇರಿಸಿದ್ದು ಎಂದ. ಉಮಾ ಮೇಡಂ ಮಾತನಾಡುತ್ತಾ ಹೇಳಿದರು – ನೋಡು ಬಾಬು, ಯಾವ ಭಾಷೆ ಕಲಿತರೂ ಮಾತೃ ಭಾಷೆ ಮರೆಯಬಾರದು. ನೀನು ಉರ್ದು ಭಾಷೆ ಸಹ ಕಲಿತುಕೊಳ್ಳಬೇಕು, ಎಷ್ಟಾದರೂ ಅದು ನಿನ್ನ ಮಾತೃ ಭಾಷೆ ಅಲ್ಲವೇ..! ಬಾಬು ಸಾಹೇಬ – ಆಗಲಿ ಮೇಡಂ ಎಂದು ಹೇಳಿ ಅಲ್ಲಿಂದ ಶಾಲೆಯ ಒಳಗೆ ಹೊರಟು ಹೋದ.
4ನೇಯ ತರಗತಿ ಹುಡುಗನಿಗೆ ಭಾಷೆ, ಜಾತಿ, ಧರ್ಮ ಏನೂ ಗೊತ್ತಿರಲಿಲ್ಲ. ಇತರ ಮುಸಲ್ಮಾನರನ್ನು, ಮನೆಯ ವಾತಾವರಣವನ್ನು ನೋಡಿ ಆತ ಬೆಳೆಯ ತೊಡಗಿದ್ದ. ಆತನ ಸಹಪಾಠಿ ಬಾಬು ಸಾಹೇಬನನ್ನು ಲೇ ಸಾಬಿ ಎಂದು ಹೀಯ್ಯಾಳಿಸುವ ಹಾಗೆ ಚುಚ್ಚಿ ಕರೆಯುತ್ತಿದ್ದಳು. ಸಹಪಾಠಿಗಳು ಕೆಲವೊಮ್ಮೆ ಲೇ ತುರ್ಕ ಎಂದು ಕರೆಯುತ್ತಿದ್ದರು. ಇಡೀ ತರಗತಿಗೆ ಬಾಬು ಒಬ್ಬನೇ ಮುಸಲ್ಮಾನ. ಟೀಚರ್ಗಳು ಏನೂ ಭೇದಭಾವ ತೋರಿಸುತ್ತಿರಲಿಲ್ಲ. ಹುಡುಗ ಓದುವುದರಲ್ಲಿ ಬಹಳ ಚುರುಕಾಗಿದ್ದ. ಮುಖ್ಯ ಉಪಾಧ್ಯಾಯಿನಿ ಚಂಪಾವತಿಯವರ ಪ್ರಶಂಸೆಗೆ ಪಾತ್ರನಾಗಿದ್ದ. ಹುಡುಗನ ಕ್ಲಾಸ್ ಟೀಚರ್ ಪ್ರಿಯಾಂಕಾ ಶುಕ್ರವಾರ ನಮಾಜ್ ಮಾಡಲು ಆತನಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಜಾತಿಪಾತಿಯ ಅಡಚಣೆಗಳು ಬರುತ್ತಿರಲಿಲ್ಲ.
ಬಹುಶಃ ಹುಡುಗನಿಗೆ ಗೊತ್ತಿರಲಿಲ್ಲ. ಆಗಾಗಲೇ ನಾಡಗೀತೆ ಹಾಡುವುದನ್ನು ಎಲ್ಲಾ ಶಾಲೆಗಳಲ್ಲಿ ಪ್ರಾರಂಭಿಸಿದ್ದರು. ಹಿಂದೂ ಕ್ರಿಸ್ತ ಮುಸಲ್ಮಾನ – ಈ ಸಾಲಿನ ನಂತರ ಪಾರಸಿಕ ಜೈನರುದ್ಯಾನ ಎಂಬ ಸಾಲು ಬರುತ್ತದೆ. ಇದನ್ನು ಪಾರ್ಸಿಯರು ಮತ್ತು ಜೈನರು, ನಾವು ಭಾರತ ತಾಯಿಯ ಮಕ್ಕಳಲ್ಲವೇ, ನಮ್ಮ ಉಲ್ಲೇಖ ನಾಡಗೀತೆಯಲ್ಲಿ ಇರಲೇ ಬೇಕು ಎಂದು ಹೋರಾಡಿ ಸೇರಿಸಿದರಂತೆ. ನಾಡಗೀತೆಯನ್ನು ತಿದ್ದುಪಡಿ ಮಾಡಿದ ನಂತರ ಪುನಃ ಶಾಲೆಗಳಲ್ಲಿ ಪ್ರಾರಂಭಿಸಲಾಯಿತು.
ಶಿವರುದ್ರಪ್ಪ ಮೇಷ್ಟ್ರು ಹಾರ್ಮೋನಿಯಂ ಜೊತೆ ಬಹಳ ಸುಮಧುರ ಧ್ವನಿಯಲ್ಲಿ ಶಾಲೆಯಲ್ಲಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಹಾಡಿಸುತ್ತಿದ್ದರು. ಹಾಡಿನ ಸಂಪೂರ್ಣ ಅರ್ಥ ತಿಳಿಯದೇ ಹೋದರು ಮಕ್ಕಳೆಲ್ಲ ಹಾಡುತ್ತಿದ್ದರು. ಬಾಬು ಸಾಹೇಬನ ಮನಸ್ಸಿನಲ್ಲಿ ಇವರು ಮುಸ್ಲಿಮರು, ಇವರು ಹಿಂದೂಗಳು ಎಂಬ ಕಲ್ಪನೆ ಎಂದೂ ಸಹ ಬರಲಿಲ್ಲ. ದಿನಗಳು ಉರುಳಿದವು. 7ನೇಯ ತರಗತಿ ಉತ್ತೀರ್ಣನಾಗಿ 8ನೇಯ ತರಗತಿಗೆ ಬೇರೆ ಶಾಲೆಗೆ ಹೋಗಬೇಕಾಯಿತು. ಶಾಲೆಯನ್ನು, ಪ್ರೀತಿಯ ಟೀಚರ್ಗಳನ್ನು ಅಗಲುವ ನೋವು ಹೇಳಲಾಗಲಿಲ್ಲ. ಸುಮ್ಮನೆ ಕಣ್ಣೀರಿಟ್ಟ. ಎಲ್ಲರೂ ದೂರವಾಗಿ ಹೋದರು.
ಪ್ರೌಢಶಾಲೆಯಲ್ಲಿ ಸ್ವಲ್ಪಮಟ್ಟಿಗೆ ಬುದ್ಧಿ ಬೆಳೆಯಿತು. ಪ್ರಾಪಂಚಿಕ ಜ್ಞಾನ ಅಷ್ಟೊಇಷ್ಟೊ ಅರ್ಥವಾಗತೊಡಗಿತು. ಆದರೆ ಅಲ್ಲೂ ಜಾತಿಭೇದಭಾವ ಕಾಣಲಿಲ್ಲ. ಎಲ್ಲರೂ ಮಧ್ಯಾಹ್ನದ ಊಟ ಹಂಚಿಕೊಂಡು ತಿನ್ನುತ್ತಿದ್ದರು. ಮೇಲು ಕೀಳು ಎಂಬ ಭಾವನೆ ಇರಲಿಲ್ಲ. ಕನ್ನಡ ಮುಸ್ಲಿಮರ ಭಾಷೆ ಅಲ್ಲ ಎಂದು ಬಾಬು ಸಾಹೇಬನಿಗೆ ಅನ್ನಿಸಲೇ ಇಲ್ಲ. ಸ್ನೇಹಿತರ ಮನೆಗಳಿಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಪೋಷಕರು ಸಹ ಎಂದೂ ಜಾತಿ ಮತ್ತು ಭಾಷೆಯ ಕಂದರ ತೋಡಲಿಲ್ಲ. ಅದೇ ಪ್ರೀತಿ ವಾತ್ಸಲ್ಯ ಇತ್ತು.
ಶಾಲೆಯಲ್ಲಿ ಒಮ್ಮೆ ಸ್ಕೂಲ್ ಡೇ ದಿನ ಹವಾಹವಾ ಅಯ್ ಹವಾ ಎಂಬ ಹಾಡಿಗೆ ಹೆಡ್ ಮೇಷ್ಟ್ರು ಸಹ ನಮ್ಮ ಜೊತೆ ಡಾನ್ಸ್ ಮಾಡಿದರು. ಅದನ್ನು ಹಾಡಿದವನು ಪಾಕಿಸ್ತಾನದ ಗಾಯಕ ಹಸನ್ ಜಹಾಂಗೀರ್. ಸಂಗೀತಕ್ಕೆ ಯಾವುದೇ ಜಾತಿಯ ಬೇಲಿಗಳಿರಲಿಲ್ಲ. ಬಾಬು ಸಾಹೇಬನಿಗೆ ಮತ್ತು ಆತನ ದಲಿತ ಸ್ನೇಹಿತನಿಗೆ ವಿಜ್ಞಾನ ವಿಭಾಗದ ಮೇಷ್ಟ್ರು ಬಹಳ ಇಷ್ಟ ಪಡುತ್ತಿದ್ದರು. ಅವರು ಬ್ರಾಹ್ಮಣರು ಎಂದು ಗೊತ್ತೇ ಇರಲಿಲ್ಲ. ಎಷ್ಟೋ ಸಲ ಅವರ ಮನೆಯಲ್ಲಿ ತಿಂಡಿ ತಿಂದಿರುವುದುಂಟು. ಚೆನ್ನಾಗಿ ಓದಿ ಉದ್ಧಾರವಾಗಿ. ನಿಮ್ಮ ಮನೆಗಳಲ್ಲಿ ಏನಾದರು ತೊಂದರೆ ಇದ್ದರೆ ನಮ್ಮ ಮನೆ ಮಹಡಿಯ ಮೇಲೆ ಒಂದು ರೂಮ್ ಖಾಲಿ ಇದೆ, ಅಲ್ಲಿಗೇ ಬಂದು ಇದ್ದು ಬಿಡಿ ಎಂದು ಸಹ ಹೇಳಿದ್ದರು. ಬಾಬು ಸಾಹೇಬನಂತಹ ಲಕ್ಷಾಂತರ ಮುಸ್ಲಿಂ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದಿ, ಕನ್ನಡ ಸಂಸ್ಕೃತಿಯಲ್ಲಿ ಬೆಳೆದು, ಹೆಮ್ಮೆಯ ಕನ್ನಡಿಗರಾಗಿ ಬಾಳು ಸಾಗಿಸುದ್ದಿದ್ದಾರೆ. ಜಾತಿಯ ವಿಷಬೀಜ ಬಿತ್ತುತ್ತಿರುವ ಸೂತ್ರಧಾರಿಗಳೆಂದರೆ ಕೆಲ ರಾಜಕೀಯ ವ್ಯಕ್ತಿಗಳು ಮತ್ತು ಬಿಕಾವ್ ಮಾಧ್ಯಮಗಳು. ಜನರಿಗೆ ಈ ಸತ್ಯ ಗೊತ್ತು. ಒಂದಲ್ಲ ಒಂದು ದಿನ ಜನರೇ ಮಾಧ್ಯಮದವರಿಗೆ ಮತ್ತು ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ.
ಕರ್ನಾಟಕ ನಮ್ಮ ಹೆಮ್ಮೆಯ ನಾಡು. ಕನ್ನಡ ಭಾಷೆಯನ್ನು ಬೆಳೆಸಲು ಸಾಕಷ್ಟು ಪ್ರಯತ್ನಗಳು ನಡೆಯಬೇಕಾಗಿದೆ. ನವೆಂಬರ್ ತಿಂಗಳು ಬಂದರೆ ಮಾತ್ರ ನಾವು ಕನ್ನಡಿಗರಾಗುತ್ತೇವೆ. ಪರಧರ್ಮೀಯರಿಗೆ ಕನ್ನಡ ಭಾಷೆ ಕಲಿಸಲು ಕನ್ನಡ ಸಂಘಟನೆಗಳು ಮನಃಸಾರೆ ಶ್ರಮವಹಿಸುತ್ತಿಲ್ಲ. ಭಾಷೆ ಎನ್ನುವುದು ಮಾಧ್ಯಮ. ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಬೇಕಾದರೆ ಭಾಷೆ ಬಹಳ ಮುಖ್ಯ. ಸಂಬಂಧಗಳು ಚಿಗುರುತ್ತವೆ. ಸಂಸ್ಕೃತಿ, ಆಚಾರವಿಚಾರಗಳು ಬೆರೆಯುತ್ತವೆ. ಕೇರಳದಲ್ಲಿ ಎಲ್ಲಾ ಧರ್ಮದವರು ಬಳಸುವ ಭಾಷೆ ಒಂದೇ.
ತಮಿಳುನಾಡಿನಲ್ಲೂ ಸಹ ಬಹುಪಾಲು ಒಂದೇ ಭಾಷೆ. ಶುಕ್ರವಾರ ಮಸೀದಿಯಲ್ಲಿ ಧರ್ಮಗುರುಗಳು ಪ್ರವಚನವನ್ನು ಸಹ ಅವರ ನಾಡಭಾಷೆಯಲ್ಲಿ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿ ಏಕೆ ಎಲ್ಲಾ ಮುಸಲ್ಮಾನರು ಕನ್ನಡ ಭಾಷೆ ಬಳಸುತ್ತಿಲ್ಲ. ಇದಕ್ಕೆ ಮೂಲ ಕಾರಣ ಕನ್ನಡ ಬೆಳೆಸಲು ಯಾರೂ ನಿಸ್ವಾರ್ಥವಾಗಿ ಪ್ರಯತ್ನಿಸಿಲ್ಲ. ಕನ್ನಡದ ಮಹತ್ವ ಹೆಚ್ಚಿಸಿಲ್ಲ. ಕನ್ನಡ ಕಲಿಯುವುದು ಕಷ್ಟವೇನಲ್ಲ. ಕರ್ನಾಟಕ ಮೊದಲ ಸೂಫಿ ಕವಿಗಳಲ್ಲಿ ಗುರು ಖಾದರ್ ಪೀರಾ ಕನ್ನಡದಲ್ಲಿ ಜ್ಞಾನಸಮುದ್ರ ಎಂಬ ಪುಸ್ತಕ ಬರೆಯಲಿಲ್ಲವೇ? ಅವರ ತತ್ವಪದಗಳನ್ನು ಓದಿದರೆ ಆಶ್ಚರ್ಯವಾಗುತ್ತದೆ. ಕನ್ನಡ ಕಲಿಯಲು ಜಾತಿ ಅಡ್ಡ ಬರಲ್ಲ.
ಮದ್ರಸಗಳಲ್ಲಿ ಕನ್ನಡವನ್ನು ಕಲಿಸಿ. ಮಸೀದಿಗಳಲ್ಲಿ ಶುಕ್ರವಾರದ ಪ್ರವಚನ ೧೦ ನಿಮಿಷವಾದರೂ ಕನ್ನಡ ಭಾಷೆಯಲ್ಲಿ ಮಾಡಿ. ಪ್ರವಾದಿವರ್ಯರು ಅರಬ್ಬರಿಗೆ ಹೀಬ್ರೂ ಭಾಷೆ ಕಲಿಯಲು ಹೇಳಲಿಲ್ಲವೇ ? ವಿದ್ಯೆ ಕಲಿಯಲು ಚೀನಾ ದೇಶದವರೆಗೂ ಬೇಕಾದರೂ ಹೋಗಿ ಎನ್ನಲಿಲ್ಲವೇ ? ಚೀನಾದಲ್ಲಿ ಅರಬ್ಬೀ ಭಾಷೆ ಇತ್ತೇ ? ಇಲ್ಲ. ಕನ್ನಡ ಕಲಿತು ನಿಸಾರ್ ಅಹ್ಮದ್ ಒಳ್ಳೆಯ ಕವಿ ಎನಿಸಿಕೊಳ್ಳಲಿಲ್ಲವೇ ? ಅವರು ಬರೆದ ತಾಯಿ ನಿತ್ಯೋತ್ಸವ ಎಂಬ ಗೀತೆ ಯಾರು ತಾನೇ ಮರೆಯಲು ಸಾಧ್ಯ.
ರಹ್ಮತ್ ತರೀಕೆರೆ ಕನ್ನಡ ಸಾಹಿತ್ಯಕ್ಕಾಗಿ ೭ ಚಿನ್ನದ ಪದಕಗಳನ್ನು, ಅನೇಕ ಪುರಸ್ಕಾರಗಳನ್ನು ಪಡೆಯಲಿಲ್ಲವೇ ? ಕರ್ನಾಟಕದ ಕಬೀರ ಪದ್ಮಶ್ರೀ ಇಬ್ರಾಹೀಮ್ ಸಾಹೇಬ್ ಸುತಾರ್ ಪ್ರವಚನ ಸಂವಾದಕಗಳ ಮೂಲಕ ಜನರಲ್ಲಿ ಭಾವೈಕ್ಯತೆಯನ್ನು ಮೂಡಲು ಶ್ರಮಿಸಲಿಲ್ಲವೇ ? ಅವರು ಕನ್ನಡ ಮಾತನಾಡುತ್ತಿದ್ದರೆ ನುಡಿಮುತ್ತುಗಳು ಉದುರುತ್ತಿದ್ದವು. ಕನ್ನಡದ ಸೃಜನಶೀಲ ಬರಹಗಾರ ಬೋಳುವಾರು ಮಹಮದ್ ರವರ ಕನ್ನಡ ಶೈಲಿ ನೀವು ಓದಿಲ್ಲವೇ ? ಶಿಶುನಾಳ ಶರೀಫರ ಕನ್ನಡ ಯಾರಿಗೆ ತಾನೇ ಗೊತ್ತಿಲ್ಲ…! ಹುಡುಕಿದರೆ ಕನ್ನಡಕ್ಕಾಗಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಲಕ್ಷಾಂತರ ಕನ್ನಡಿಗ ಮುಸಲ್ಮಾನರು ಸಿಗಬಲ್ಲರು.
ಬಾಬು ಸಾಹೇಬ ತನ್ನ ಮಾತೃ ಭಾಷೆ ಉರ್ದು ಕಲಿತ. ತನ್ನ ತಾಯ್ನಾಡಿನ ಭಾಷೆ ಕನ್ನಡ ಕಲಿತ. ನೆರೆ ರಾಜ್ಯಗಳ ಭಾಷೆ ಕಲಿತ ಮತ್ತು ಅಂತರರಾಷ್ಟ್ರೀಯ ಭಾಷೆ ಇಂಗ್ಲಿಷ್ ಸಹ ಕಲಿತ. ತನ್ನ ಸ್ನೇಹಿತನಿಗೆ ಕನ್ನಡದಲ್ಲಿ ಅಜಾನ್ ತರ್ಜುಮೆ ಹೇಳಿದ – ಅಕ್ಬರ್ ಎಂದರೆ ನೀನು ತಿಳಿದುಕೊಂಡಿರುವ ಹಾಗೆ ಮಹಾರಾಜಾ ಅಕ್ಬರ್ ಅಲ್ಲ. ಅಲ್ಲಾಹು ಎಂದರೆ ದೇವರು ಅಕ್ಬರ್ ಎಂದರೆ ದೊಡ್ಡವನು. ಅಲ್ಲಾಹು ಅಕ್ಬರ್ (ದೇವರು ದೊಡ್ಡವನು).
ಇಡೀ ಕರ್ನಾಟಕ ಕನ್ನಡಮಯವಾಗಬೇಕಾರೆ ಸತತವಾಗಿ 10 ವರ್ಷ ಕನ್ನಡ ಬೆಳೆಸಲು ಪ್ರಯತ್ನಿಸಬೇಕು. ದಬ್ಬಾಳಿಕೆಯಿಂದಲ್ಲ. ಪ್ರೀತಿಯಿಂದ…
ಹೆಮ್ಮೆಯ ಕನ್ನಡಿಗ ಜಬೀವುಲ್ಲಾ ಖಾನ್..
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.