(www.vknews.in) : ಇಂದು ವಿಶ್ವ ಕವಿತಾ ದಿನದ ಪ್ರಯುಕ್ತ, ಕನ್ನಡ ಮತ್ತು ಬ್ಯಾರಿ ಲೇಖಕಿಯರ ಸಾಹಿತ್ಯ ಕೂಟ ವಾಟ್ಸಪ್ ಬಳಗದಲ್ಲಿನ ‘ಕವನ ರಚನೆ’ ಚಟುವಟಿಕೆ ಕವಯತ್ರಿಯರು ರಚಿಸಿದ ಕವನಗಳು.
ಆಯೋಜಕರು: ಹಫ್ಸಾ ಬಾನು ಬೆಂಗಳೂರು
ವಿಷಯ: “ಪ್ರಕೃತಿ ಮತ್ತು ಕವಿ” ಶೀರ್ಷಿಕೆ: “ಕವಿಯ ಕಣ್ಣಿನೊಳು ಪ್ರಕೃತಿಯ ಮಡಿಲು”
ಕವಿಯ ಕಣ್ಣಿನೊಳು ಪ್ರಕೃತಿಯ ಮಡಿಲು ಹಸಿರ ಹೊದ್ದ ಸೌಂದರ್ಯದ ಗಣಿ ಮುಂಜಾವಿನರಳಿದ ತರುಲತೆಯ ಚಿಗುರು ಘಮಬೀರುವ ಮಂಜಿನ ಮುತ್ತು ಮಣಿ
ತಿಲಿ ನೀಲ ಬಾನು, ತಣ್ಣನೆ ಗಾಳಿ ಮನಕ್ಕೆ ತಂಪೆರೆಯುವ ಸೊಬಗುದಾಣ ಕಾನನ, ಗಿರಿಶೃಂಗಗಳ ವಿಸ್ಮಯತೆ ಮುಂದೆ ಉಳಿದ ಭಾವಗಳೆಲ್ಲವೂ ಗೌಣ
ಮೇಘದಿಂದ ಜಾರಿದ ತುಂತುರು ಮಳೆ ಹನಿ ಬಿಸಿಲ ಬೇಗುದಿಗೆ ಸಿಹಿಯ ಅಪ್ಪುಗೆ ಅಳಿವಿನಂಚಿನ ಪರಿಸರ ಜೀವಸಂಕುಲತೆಗೆ ನಮ್ಮಯ ಕೊಡುಗೆ ಸಂರಕ್ಷಣೆಯೆಂಬ ಒಪ್ಪಿಗೆ
-ರಮೀಝ ಯಂ.ಬಿ
ಏನೆಂದು ಬಣ್ಣಿಸಲಿ ಪ್ರಕೃತಿಯ ಬೆರಗು
ನೀಲಾಗಾಸದಲ್ಲಿ ಮಿನುಗೋ ತಾರೆಯಂತೆ ಹರಿವ ಝುಳುಝುಳು ನಿನಾದದಂತೆ ಚಿಲಿಪಿಲಿಹಕ್ಕಿಗಳ ಕಲರವದಂತೆ ಮುಂಜಾನೆಯ ನೇಸರನ ಕಿರಣದಂತೆ
ಒಣಭೂಮಿಗೆ ಮರುಜೀವ ತುಂಬುವ ಮಳೆಹನಿಯಂತೆ ಮುಂಜಾನೆಯ ಮಂಜಿಗೆ ಅರಳುವ ಸುಂದರ ಹೂಗಳಂತೆ
ನಾನೂ ಕೂಡ ನಿನ್ನ ಮಡಿಲಲ್ಲಿ ನಲಿದಾಡುವಾಸೆ ಪುಟ್ಟ ಮಗುವಂತೆ ಪ್ರಕೃತಿಯೇ ನಿನ್ನ ನಡುವೆ ಮನತಣಿಯೆ ಕುಳಿತು ಬರಿಯುತ್ತಲೇ ಇರಬೇಕೆನಿಸುತಿದೆ ಕವಿತೆ..
✍️ ರಹ್ಮತ್ ಪುತ್ತೂರು
ಪ್ರಕೃತಿ ಹಾಗೂ ಕವಿ
ಪ್ರಕೃತಿಯು ಕವಿಯ ಸೊತ್ತು, ವರ್ಣನೆಯ ಹೊತ್ತು, ನಡೆದಿಹನು ಕವಿ ಜಗದ ಸುತ್ತು
ಪ್ರಕೃತಿಗೆ ಕವಿಯ ಜೊತೆಗಿನ ನಂಟು ಅದು ಬಿಡಿಸಲಾಗದ ಗಂಟು
ಕಾರಣ ಪ್ರಕೃತಿಯ ಸೊಬಗ ಆಸ್ವಾದನೆಯಲಿ ಮುಳುಗಿ,ತೇಲಿ , ಶೃಂಗರಿಸಿ ಪ್ರಕೃತಿಯ ಮಡಿಲಲ್ಲಿ ಮಗುವಾದವನು ಕವಿ
ದೂರದಿ ಕಾಣುವ ಬೆಟ್ಟದಲಿ ಸಾಗುವ ಶಾಂತ ಮೋಡದಲಿ ಎಲೆ ಮೇಲೆ ಬಿದ್ದ ಹನಿ ಮಂಜಲಿ ಚಿಗುರಿದ ಎಲೆಯಲಿ ಚಿಲಿ ಪಿಲಿ ಸದ್ದಿನಲಿ
ಅರಳಿದ ಹೂವಲಿ ಸುರಿದ ಚಿಟ ಪಟ ಮಳೆ ಹನಿಯಲಿ, ಕವಿಯ ವರ್ಣನೆಯ ಶೃಂಗಾರ ಸಮರ ಯುಗ ಕಾಲಕ್ಕೂ ಅದು ಅಜರಾಮರ
“ರವಿ ಕಾಣದ್ದು ಕವಿ ಕಂಡನೆಂಬ ಮಾತು”, ಜಗವೇ ತಲೆಬಾಗಿತು ಆ ಮಾತು ಮರೆಯಲಾಗದ ಮುತ್ತು
– ನಸೀಬ ಗಡಿಯಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.