(www.vknewd.in) ; ಹಿಬತುಲ್ಲಾಹ್* ರಿಗೆ ಪ್ರೌಢದೆಸೆ (ಪ್ರಾಯ ಪೂರ್ತಿ) ತಲುಪಿದಾಗ ಅಲ್ಲಾಹನು ಆಕಾಶ ಲೋಕದಲ್ಲಿರುವ *ಸಿದ್ರತುಲ್ ಮುಂತಹಾ* ಎಂಬ ಮರದ ಒಂದು ರೆಂಬೆಯಿಂದ ಒಂದು ಸಣ್ಣಕೋಲನ್ನು ಅವರಿಗೆ ಕಳುಹಿಸಿ ಕೊಟ್ಟಿದ್ದನು. ಅದು ರಾತ್ರಿಯಲ್ಲಿ ರತ್ನ ಕಲ್ಲಿನಂತೆ ಪ್ರಕಾಶಿಸುತ್ತಿತ್ತು. ಅಲ್ಲದೆ ಅದು ಅವರ ಮುಂದಿನ ಬದುಕಿನ ವಿಜಯದ ಒಂದು ವಸ್ತು ಕೂಡ ಆಗಿತ್ತು. ಆದಮರು ವಫಾತಾಗುವ ಮೊದಲೇ ಈ ಮಗನಿಗೆ ಮದುವೆಯಾಗಿ ಮಕ್ಕಳು ಕೂಡ ಆಗಿತ್ತು.
*ಹಝ್ರತ್* ಆದಮರಿಗೆ ತನ್ನ ಬೀಜದಲ್ಲಿ ಅಂತ್ಯ ದಿನದ ತನಕ ಹುಟ್ಟುವ ತನ್ನ ಸಂತಾನದ ಸಂಪೂರ್ಣ ತದ್ರೂಪವನ್ನು ಅಲ್ಲಾಹನು ಒಮ್ಮೆ ತೋರಿಸಿ ಕೊಟ್ಟಿದ್ದನು. ಅದರಲ್ಲಿ ನಾವೆಲ್ಲರೂ ಇದ್ದೆವು. ಅಲ್ಲದೆ ಅದರ ಮಧ್ಯೆ ಬಹಳ ಸುಂದರನಾದ ಒಬ್ಬನನ್ನು ಕಂಡಾಗ ಆದಮರು ಅಲ್ಲಾಹನಲ್ಲಿ ಕೇಳಿದರು. *”ಇದು ಯಾರು ಅಲ್ಲಾಹ್..?”* ಆಗ ಅಲ್ಲಾಹನು *”ನಿಮ್ಮ ಸಂತಾನದಲ್ಲಿ ಪ್ರವಾದಿಯಾಗಿ ಬರಲಿರುವ ಒಬ್ಬರು. ಅವರ ಹೆಸರು ದಾವೂದ್”* ಎಂದುತ್ತರಿಸಿದನು. ಆಗ ಆದಮರು ಕೇಳಿದರು. *”ಅವರ ಆಯುಷ್ಯವೆಷ್ಟು?”* ಅದಕ್ಕೆ ಅಲ್ಲಾಹನು *”ನಲವತ್ತು ವರ್ಷ”* ಎಂದು ಉತ್ತರ ಕೊಟ್ಟನು. ಆದಮರು ಕೇಳಿದರು. *”ಹಾಗಾದರೆ ನನ್ನ ಆಯುಷ್ಯವೆಷ್ಟು?”* ಅಲ್ಲಾಹನು ಹೇಳಿದನು. *”ನಿನ್ನದು ಒಂದು ಸಾವಿರ ವರ್ಷ”* ಬಹಳ ಬೇಸರಗೊಂಡ ಆದಮರು ಹೇಳಿದರು. *”ಇಷ್ಟು ಚಂದದ ಒಬ್ಬರಿಗೆ ನಲವತ್ತು ವರ್ಷದ ಆಯುಷ್ಯವಾ? ನನ್ನ ಆ ಒಂದು ಸಾವಿರ ವರ್ಷಗಳ ಆಯುಷ್ಯದಿಂದ ಅರುವತ್ತು ಕಡಿಮೆ ಮಾಡಿಯಾದರೂ ಪರವಾಗಿಲ್ಲ ಅವರಿಗೆ ಕೊಟ್ಟು ನೂರು ಭರ್ತಿ ಮಾಡಿ”* ಎಂದು.
*ಒಂದು* ದಿನ ಆದಮರು ತನ್ನ ಮನೆಯ ಜಗಲಿಯಲ್ಲಿರುವಾಗ ಮಲಕುಲ್ ಮೌತ್ ಹಝ್ರತ್ ಅಝ್ರಾಯೀಲ್ (ಅ) ರವರು ಬಂದರು. ಅಝ್ರಾಯಿಲರನ್ನು ನೋಡಿದ ಆದಮರು ಕೇಳಿದರು. *”ಯಾಕೆ ಇಷ್ಟು ತರಾತುರಿಯಿಂದ ಬಂದಿದ್ದೀರಿ? ದಿನಾಂಕ ತಪ್ಪಿದೆಯಾ? ನನ್ನ ಆಯುಷ್ಯ ಮೊದಲೇ ಅಲ್ಲಾಹು ತಿಳಿಸಿದಂತೆ ಒಂದು ಸಾವಿರ ಅಲ್ಲವೇ? ಹಾಗಾದರೆ ಇನ್ನು ಅರುವತ್ತು ಬಾಕಿ ಉಂಟಲ್ಲವೇ?”* ಆಗ ಅಝ್ರಾಯೀಲ್ (ಅ) ರವರು ಹೇಳಿದರು. *”ಅವತ್ತು ನಿಮ್ಮ ಮರಿಮಗ ದಾವೂದರಿಗೆ ಅರುವತ್ತು ದಾನವಾಗಿ ಕೊಟ್ಟದ್ದು ನೆನಪಿಲ್ಲವೇ?”* ಆದಮರು *”ಅಂತಹಾ ಸಂಗತಿ ಆದದ್ದು ನನಗೆ ನೆನಪೇ ಇಲ್ಲ. ನಾನು ಹಾಗೆ ಕೊಡಲೇ ಇಲ್ಲ.”* ಎಂದು ಉತ್ತರ ಕೊಟ್ಟರು. ನಿಜವಾಗಿ ಇದು ಆದಮರ ನೆನಪಿನಿಂದ (Memory) ಮರೆತು ಹೋದದ್ದಾಗಿತ್ತು. ಆ ಕಾರಣದಿಂದ ಅಂದಿನಿಂದ ಆದಮರ ಸಂತತಿಗಳಾದ ನಮಗೆ ಮಾಡಿದ್ದನ್ನು ನಿರಾಕರಿಸುವ ಮತ್ತು ಸುಳ್ಳು ಹೇಳುವ ಸ್ವಭಾವ ಬಂತೆಂದು ಹೇಳಲಾಗುತ್ತದೆ. *ಅಲ್ಲಾಹನು* ದಯಾಮಯನಾದ್ದರಿಂದ ಬಳಿಕ ಆದಮರ ಆಯುಷ್ಯವನ್ನು ಸಾವಿರ ಪೂರ್ತಿ ಮಾಡಿದನು. ಅಂತೆಯೇ ದಾವೂದರ ನೂರರಲ್ಲಿ ಕಡಿಮೆ ಮಾಡದೆ ಅವರಿಗೆ ನೂರು ಕೊಟ್ಟನು.
*ಆದಮರಿಗೆ* ಸಾವಿರ ವರ್ಷ ಪೂರ್ತಿಯಾದಾಗ ತನ್ನ ಜವಾಬ್ದಾರಿಯನ್ನು ಮಗನಾದ *ಶೀಶ್* ರವರಿಗೆ ಕೊಟ್ಟರು. ಒಂದು ದಿನ ತನ್ನ ಬಳಿಯಿದ್ದ ಒಂದು ಪೆಟ್ಟಿಗೆಯನ್ನು ತೆರೆದು ಮಗನಲ್ಲಿ *”ನೋಡು.., ಇದರಲ್ಲಿ ನನಗೆ ಅಲ್ಲಾಹನು ಕೊಟ್ಟ ಸ್ವರ್ಗದ ಒಂದು ಬಟ್ಟೆ ಇದೆ. ಇದರೊಂದಿಗೆ ಈಗ ನಾನು ನನ್ನ ಈ ತನಕ ಬಿಳಿಯಾಗದ ಗಡ್ಡದ ಕೆಲವು ಕೂದಲುಗಳನ್ನು ಕೂಡ ಇಡುತ್ತೇನೆ. ನೀನು ಇದನ್ನು ಬಹಳ ಜೋಪಾನವಾಗಿ ಇಡಬೇಕು. ಯಾವಾಗಲಾದರೂ ಈ ಕೂದಲುಗಳನ್ನು ನೀನು ಬಿಳಿಯಾಗಿ ಕಂಡರೆ ನಿನ್ನ ಮರಣದ ಸಮಯ ಹತ್ತಿರವಾಗಿದೆ, ಎಂದು ಭಾವಿಸು. ಅದಕ್ಕೆ ಮೊದಲೇ ನಿನ್ನ ಸಹೋದರ ಖಾಬೀಲನನ್ನು ಹೇಗಾದರೂ ಮಾಡಿ ಕೊಲ್ಲಬೇಕು. ನಿನಗೆ ಇತರ ಸಹೋದರರು ಸಹಾಯ ಮಾಡುವರು.”* ಎಂದು ವಸಿಯ್ಯತ್ ಮಾಡಿದರು. ಬಳಿಕ ಆ ಪೆಟ್ಟಿಗೆಯನ್ನು ಅವರಿಗೆ ಕೊಟ್ಟು ತನ್ನ ಕೈಯಲ್ಲಿರುವ ಉಂಗುರವನ್ನು ಕಳಚಿ ಅವರ ಕೈಗೆ ತೊಡಿಸಿದರು. ಆವೇಳೆ ಶೀಶ್ರವರಿಗೆ ನಾಲ್ಕುನೂರು ವರ್ಷ ವಯಸ್ಸಾಗಿತ್ತು.
*ಕೆಲವೇ* ದಿನಗಳು ಕಳೆದಾಗ ಒಂದು ದಿನ ಶುಕ್ರವಾರದಂದು ಆದಮರು ವಫಾತಾದರು.ಮಯ್ಯಿತಿನ ಕಫನ, ನಮಾಝ್, ದಫನ ಇತ್ಯಾದಿ ಕರ್ಮಗಳಿಗೆ ಅಲ್ಲಾಹನ ಮಲಕುಗಳು ಮತ್ತು ಮಗ ಶೀಶ್ ನಾಯಕತ್ವ ವಹಿಸಿದರು. ಮಲಕುಗಳು ಸಾಲು ಸಾಲಾಗಿ ನಿಂತು ನಮಾಝ್ ಮಾಡಿದರು.
*ಅವರ* ಮಖ್ಬರ ನಮ್ಮ ಭವ್ಯ ಭಾರತದಲ್ಲಾಗಿತ್ತು. ನಂತರ ಪ್ರವಾದಿ ನೂಹ್ರವರ ಕಾಲದಲ್ಲಿ ತೂಫಾನ್ (ನೆರೆ) ಬಂದಾಗ ಅವರ ಜನಾಝವನ್ನು ಅಗೆದು ತೆಗೆದು ಬೈತುಲ್ ಮುಖದ್ದಸಿನ ಸಮೀಪ ದಫನ ಮಾಡಲಾಯಿತು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುವೈರಿಯ *ನಿಹಾಯತುಲ್ ಅರಬ್* ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.